Tuesday, 16th April 2024

ಈ ಕ್ಷಣದಲ್ಲಿ ಬದುಕುವುದೇ ನಿಜವಾದ ಆರ್ಟ್‌ ಆಫ್ ಲೈಫ್

ಶ್ವೇತಪತ್ರ

shwethabc@gmail.com

ಈ ಕ್ಷಣದಲ್ಲಿ ಬದುಕುವುದು ಇದು ನಾವು ಅರಿಯಬೇಕಾದ ಮುಖ್ಯ ಸಂಗತಿ ಆದರೆನಾವೆ ನಿನ್ನೆಯ ನೆನಪುಗಳಲ್ಲಿ, ನಾಳಿನ
ಆಲೋಚನೆಗಳಲ್ಲಿ ಕಳೆದುಹೋಗಿದ್ದೇವೆ. ಬದುಕಿನ ಈ ಕ್ಷಣಗಳನ್ನು ನಿಮ್ಮವಾಗಿಸಿಕೊಳ್ಳಿ ಅವುಗಳನ್ನು ಜಾರಗೊಡಬೇಡಿ ಹೀಗೆ ಹೇಳುವುದು ಸುಲಭ ಬದುಕುವುದು ಕಷ್ಟ. ಜೀವನ ಪಯಣದಲ್ಲಿ ಏನಾದರೊಂದು ಧುತ್ತೆಂದು ಎದುರಿಗೆ ಬಂದು ನಿಂತಿರುತ್ತದೆ ನಿರೀಕ್ಷಿತವಾಗೋ, ಅನಿರೀಕ್ಷಿತವಾಗೋ ಎದುರಿಸಲು ನಾವು ತಯಾರಾಗಿರಬೇಕಾಗುತ್ತದೆ.

ನೆನಪಿನ ಪುಟಗಳ ನಡುವಿನಿಂದ ಹೊರಬರುವುದು ಅಷ್ಟು ಸುಲಭಕ್ಕಿಲ್ಲ. ಅವುಗಳು ನಮ್ಮ ಅರಿವಿಗೆ ಬರದಂತೆ ಸವೆದು ಹೋಗಿದ್ದೇವೆ, ನಮ್ಮದೇ ಜತೆಗಿನ ಸ್ಪರ್ಶದಿಂದ, ಸಂವೇದನೆಯಿಂದ ದೂರಸರಿದು ಒತ್ತಡ, ಆತಂಕ ಅಸಂತೋಷಗಳನ್ನು ಹೊಸ ರೂಢಿ ಗಳನ್ನಾಗಿಸಿಕೊಂಡಿದ್ದೇವೆ. ಹೀಗೆ… ಬದುಕಬೇಕೆಂದು ನಮ್ಮ ಷರತ್ತುಬದ್ಧ ನಿಯಮ ಗಳನ್ನು ಸಡಿಲಿಸಿ ಈ ಕ್ಷಣವನ್ನು ಬದುಕಬೇಕೆಂಬ ಜಾಗೃತ ಅರಿವನ್ನು ನಮ್ಮದಾಗಿಸಿ ಕೊಳ್ಳಬೇಕಿದೆ.

ಪ್ರಸ್ತುತ ಕ್ಷಣದಲ್ಲಿ ಜೀವಿಸಿ ಬಿಡುವುದು ನಮಗೆ ಗೊತ್ತಿಲ್ಲದ ನಮ್ಮ ಎಷ್ಟೋ ಸಮಸ್ಯೆಗಳಿಗೆ ಉತ್ತರವಾಗಿರುತ್ತದೆ. ಇದನ್ನೆಲ್ಲ ಓದು ವಾಗ, ಕೇಳುವಾಗ ಹೌದಲ್ಲವೇ! ಎನಿಸದಿರುವುದಿಲ್ಲ ಆದರೆ ನಿಜ ಅರ್ಥದಲ್ಲಿ ಈ ಕ್ಷಣದಲ್ಲಿ ಬದುಕುವುದು ಹಾಗೆಂದರೇನು? ಈ ಕ್ಷಣದಲ್ಲಿ ಬದುಕು ಈ ಪರಿಕಲ್ಪನೆ ಮನೋವೈಜ್ಞಾನಿಕವಾಗಿ ಗುರುತಿಸಿಕೊಂಡಿರುವ ಬದುಕಿನ ವಿಧಾನವಾಗಿದೆ. ದಿನನಿತ್ಯದ ಜಂಜಾಟಗಳಿಗೆ ಪ್ರಮುಖ ಮಾನಸಿಕ ಮದ್ದು ಲೀವ್ ಇನ್ ದ ಪ್ರೆಸೆಂಟ್, ಇದರರ್ಥ ಈ ಕ್ಷಣದಲ್ಲಿ ನನ್ನ ಹೊರ ಪ್ರಪಂಚದಲ್ಲಿ ಹಾಗೂ ಒಳ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬ ಪ್ರeಪೂರಕ ವಾದ ಎಚ್ಚರಿಕೆಯ ಅರಿವಿನೊಂದಿಗೆ ಬದುಕುವುದೇ ಆಗಿದೆ. ಹೀಗೆ ಬದುಕಿದಾಗ ನಾವು ನಿನ್ನೆಯ ಮತ್ತು ನಾಳಿನ ಚಿಂತೆಗಳಲ್ಲಿ ಗಲಿಬಿಲಿಗೊಳ್ಳದೆ ಇಂದು ಮತ್ತು ಈಗ ಬದುಕುವುದಕ್ಕಷ್ಟೇ ಧ್ಯಾನಸ್ಥರಾಗುತ್ತೇವೆ.

ಆಗ ನಮ್ಮೆಲ್ಲ ಗಮನವು ಈ ಕ್ಷಣದ ಬದುಕಿನ ಬಗ್ಗೆಯಷ್ಟೇ ಕೇಂದ್ರಿತವಾಗಿರುತ್ತದೆ. ಈ ಕ್ಷಣವೆಂದರೆ ಸಮಯವೇ ಇಲ್ಲದ ಹಾಗೆ ಬದುಕಿ ಬಿಡುವುದು. ಈ ಕ್ಷಣವೆಂದರೆ ನಿನ್ನೆಗೂ ನಾಳೆಗೂ ಕೊಂಡಿಯಾಗಿರುವುದು. ಸಮಯದ ಜತೆಗೆ ಕೂಡಿಕೆಯಾಗುವ ಒಂದೇ ಕೊಂಡಿ ಈ ಕ್ಷಣ. ಏನೆಲ್ಲ ಆಗುತ್ತದೆಯೋ ಅದು ಈ ಕ್ಷಣದಲ್ಲಿ ಆಗುತ್ತದೆ. ಹಿಂದೆ ಆಗಿದ್ದು, ನಾಳೆ ಆಗುವುದಕ್ಕೆ ಸಾಕ್ಷಿಯಾಗಿದ್ದು ಕೂಡ ಈ ಕ್ಷಣ.

ಈ ಕ್ಷಣದ ಹೊರತಾಗಿ ಬದುಕುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಈ ಕ್ಷಣದಲ್ಲಿ ಬದುಕುವ ಮನಸ್ಸು ಆರೋಗ್ಯಕರವಾಗಿಯೂ,
ಖುಷಿಯಾಗಿಯೂ ಇರಬಲ್ಲದು. ಈ ಖುಷಿಯ ಮನಸ್ಸು ನಮ್ಮ ಚಿಂತೆ ಆತಂಕಗಳನ್ನು ಕಡಿತಗೊಳಿಸಿ ನಮ್ಮ ಹೊರ ಮತ್ತು ಒಳ ಜಗತ್ತಿಗೆ ಸಂಪರ್ಕ ಸೇತುವೆಯಾಗುತ್ತ ಒಲವಿನ ಜೀವನಶೈಲಿಯಾಗುವುದರಲ್ಲಿಯೂ ಆಶ್ಚರ್ಯವಿಲ್ಲ! ಈ ಜೀವನಶೈಲಿ ಕೇವಲ ಎಚ್ಚರಿಕೆಯ ಪ್ರಜ್ಞೆಯನ್ನಷ್ಟೇ ನಮ್ಮಲ್ಲಿ ಜಾಗೃತಗೊಳಿಸದೆ ಖುಷಿಯಾಗಿರುವುದನ್ನು, ನೋವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದನ್ನು ಕಲಿಸುತ್ತಾ ಒತ್ತಡವನ್ನು ನಿಭಾಯಿಸುವ ಕೌಶಲವನ್ನು, ಋಣಾತ್ಮಕ ಭಾವನೆಗಳಾದ ಭಯ, ಕೋಪ ಇವುಗಳನ್ನು ಸಂಭಾಳಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ.

ಈ ಕ್ಷಣದಲ್ಲಿ ಬದುಕುವುದು ಅಷ್ಟು ಸುಲಭದ್ದಲ್ಲ ಏಕೆಂದರೆ ನಮ್ಮ ಮನಸ್ಸಿಗೆ ಭವಿಷ್ಯದ ಬಗ್ಗೆ ಹೆಚ್ಚೇ ಯೋಚನೆ ಮಾಡಲು ನಾವು ಪ್ರೋತ್ಸಾಹಿಸುತ್ತೇವೆ ಇಲ್ಲವೇ ನಮ್ಮಯ ನಿನ್ನೆಗಳಲ್ಲಿ ಮನಸ್ಸು ಮುಳುಗಿ ಹೋಗಿರುವಂತೆ ಮಾಡಿಬಿಟ್ಟಿರುತ್ತೇವೆ. ಟಿವಿ ಜಾಹಿರಾತುಗಳು, ವಾಟ್ಸ್‌ಅಪ್‌ನ ಸಂದೇಶಗಳು, ಮೊಬೈಲ್‌ನ ನೋಟಿಫಿಕೇಶನ್‌ಗಳು, ರಿಮೈಂಡರ್‌ಗಳು ಎಲ್ಲವುಗಳಲ್ಲಿಯೂ ಇಲ್ಲ ನಿನ್ನೆಗಳಿರುತ್ತವೆ ಇಲ್ಲ ನಾಳೆಗಳಿರುತ್ತವೆ. ಇವುಗಳ ಮಧ್ಯೆ ನಮ್ಮ ಈ ಕ್ಷಣಗಳು ಕಳೆದುಹೋಗುತ್ತಿವೆ. ನಿನ್ನೆಯ ಬಗ್ಗೆ ಮಾತನಾಡು ವಾಗ ಕೆಟ್ಟ ಅನುಭವಗಳನ್ನು ಕಳಚಿ ಅದು ಇದ್ದದ್ದಕ್ಕಿಂತ ಮತ್ತು ಮಜವಾಗಿತ್ತೆಂದು ವೈಭವೀಕರಿಸಿ ಹೇಳುತ್ತೇವೆ.

ಇಂತಹ ಅಂಶಗಳಿಗೆ ಅಂಟಿಕೊಂಡು ಬದುಕಿಬಿಡುವ ಮಿದುಳಿನ ಪ್ರಕ್ರಿಯೆಯ ಜತೆ ಹೊಡೆದಾಡಿ ಬಡಿದಾಡಿ ಅದರ ಪ್ರವೃತ್ತಿ ಯಿಂದ ಹೊರಬಂದರೆ ಅನೇಕ ಅಪಾಯಕಾರಿ ಮಾನಸಿಕ ಅಪೇಕ್ಷೆಗಳಿಂದ ಹೊರಬಂದು ಉತ್ತಮ ಆಯ್ಕೆಗಳನ್ನು ನಮ್ಮದಾಗಿಸಿ ಕೊಳ್ಳ ಬಹುದಾಗಿದೆ. ಬದುಕಿನ ನಿನ್ನೆಗಳ ಬಗ್ಗೆ ನಾಳೆಗಳ ಬಗ್ಗೆ ಯೋಚಿಸುವುದು ಒಳಿತೇ. ನಿನ್ನೆಯ ಅನುಭವ ಗಳಿಂದ, ತಪ್ಪುಗಳಿಂದ, ಯಶಸ್ಸಿ ನಿಂದ ಕಲಿಯಲಾರದಿದ್ದರೆ ನಾವೆಲ್ಲ ಎಲ್ಲಿರಬೇಕಾಗುತ್ತಿತ್ತು? ಅನಿರೀಕ್ಷಿತ ನಾಳೆಗಳಿಗೆ ನಮ್ಮ ತಯಾರಿ ಇಲ್ಲದಿದ್ದರೆ ನಾಳೆಗಳನ್ನು ಎದುರಿಸುವುದಾದರೂ ಹೇಗೆ? ನಮ್ಮ ನಿನ್ನೆಗಳ ನಮ್ಮ ನಾಳೆಗಳ ಬಗ್ಗೆ ಯೋಚಿಸುವುದು ಆರೋಗ್ಯಕರ ವಾಗಿ ಬದುಕನ್ನು ಬ್ಯಾಲೆ ಮಾಡಲು ಬೇಕಿರುವ ಅತ್ಯಗತ್ಯ ಆಲೋಚನೆಗಳು.

ಆದರೆ ಸಮಸ್ಯೆಯೆಂದರೆ ಎಷ್ಟು ಬೇಕೋ ಅಷ್ಟು ಮಾತ್ರ ನಾವು ನಿನ್ನೆ ನಾಳೆಗಳ ಬಗ್ಗೆ ಯೋಚಿಸದೆ ತೀವ್ರವಾಗಿ ಅದರೊಳಗೆ ಮುಳುಗಿಬಿಡುತ್ತೇವೆ, ಬದುಕಿನ ಈ ಕ್ಷಣಗಳನ್ನು ಸದ್ದಿಲ್ಲದೇ ಕೊಲ್ಲತೊಡಗುತ್ತೇವೆ. ನಿನ್ನೆ ನಾಳೆ ಎರಡರಲ್ಲಿ ಯಾವುದರ ಬಗ್ಗೆ ಹೆಚ್ಚೂ ಯೋಚಿಸಿದಷ್ಟು ಅದು ಬದುಕಿನ ಮೇಲೆ ಗಂಭೀರವಾದ ನೆಗೆಟಿವ್ ಪರಿಣಾಮಗಳನ್ನು ಮೂಡಿಸುತ್ತಾ ಹೋಗುತ್ತದೆ. ಅದಕ್ಕೆ ನಿನ್ನೆ, ಈ ಕ್ಷಣ ಮತ್ತು ನಾಳೆಗಳ ನಡುವಿನ ಬ್ಯಾಲೆ ಬಹುಮುಖ್ಯ.

ಹೀಗೆ ಬ್ಯಾಲೆ ಮಾಡಿಕೊಳ್ಳುವುದಕ್ಕೆ ನಮ್ಮ ಮನಸ್ಸಿಗೆ ನಾವು ಕೆಲವೊಂದು ಮಾರ್ಗದರ್ಶಿಗಳನ್ನು ಹಾಕಿಕೊಳ್ಳಬೇಕಿದೆ. (ಉದಾ ಹರಣೆಗೆ- ಯಾವುದೋ ಒಂದು ಘಟನೆಯನ್ನು ಮತ್ತೆ ಬದುಕಬೇಕಾ ದರೆ ನಿನ್ನೆಯ ಅನುಭವಗಳನ್ನು ನೆನಪು ಮಾಡಿ ಕೊಳ್ಳಿ, ಇವತ್ತಿನ ಯಾವುದೋ ಕೆಲಸಕ್ಕೆ ನಿನ್ನೆಯ ತಪ್ಪುಗಳು ಗೈಡ್ ಮಾಡಲಿ) ನಾಳೆಗಳ ಬಗ್ಗೆಯೂ ಕಡಿಮೆ ಪ್ರಮಾಣದಲ್ಲಿ
ಯೋಚಿಸೋಣ.

ನೆನಪಿರಲಿ ನಾಳೆಗಳ ಬಗ್ಗೆ ನಮ್ಮ ಆಲೋಚನೆ ಆರೋಗ್ಯಕರವಾಗಿಯೂ ಕಡಿಮೆ ಆತಂಕದಿಂದಲೂ ಕೂಡಿರಲಿ (ಉದಾಹರಣೆಗೆ – ನಾಳೆಗಳ ಬಗ್ಗೆ ಚಿಂತಿಸುವುದಕ್ಕೆ ಸಮಯವನ್ನು ವ್ಯಯಿಸುವ ಬದಲು ನಾಳೆಗಳನ್ನು ಎದುರಿಸುವುದಕ್ಕೆ ಒಂದು ಸಣ್ಣ ತಯಾರಿ ಯನ್ನು ಮಾಡಿಕೊಂಡು ಅದಾದ ನಂತರ ಸದ್ದಿಲ್ಲದೆ ನಡೆದುಬಿಡೋಣ)ಬದುಕಿನ ತುಂಬ ಹೊತ್ತು ಈ… ಕ್ಷಣಗಳನ್ನು ನಮ್ಮವಾ ಗಿಸಿಕೊಳ್ಳೋಣ. ಮೇಲಿನ ಮಾರ್ಗದರ್ಶಿಗಳು ಓದಿದಷ್ಟೇ ಸುಲಭವಾಗಿ ಅನ್ವಯಿಸಿಕೊಳ್ಳುವಂತಾಗಬೇಕು. ಹಾಗಾದರೆ ಈ ಕ್ಷಣ ದಲ್ಲಿ ಬದುಕುತ್ತ ನಾಳೆಗೆ ತಯಾರಿ ಮಾಡಿಕೊಳ್ಳುವುದು ಹೇಗೆ? ಇದೊಂದು ಸೂಕ್ಷ್ಮತೆ ಬೇಡುವ ಕೆಲಸ.

ನಾವು ಈ ಕ್ಷಣಕ್ಕಷ್ಟೇ ಧ್ಯಾನಸ್ಥರಾದೆವೆಂದರೆ ಅದರ ಅರ್ಥ ನಿನ್ನೆಯ ನಾಳೆಯ ಯೋಚನೆಗಳನ್ನು ಕಡೆಗಣಿಸಬೇಕೆಂದಲ್ಲ. ಅವು ಗಳ ಆಲೋಚನೆಗಳನ್ನು ನಿರಾಕರಿಸುವುದೆಂದರೆ ಅವುಗಳ ಮುಳುಗಿ ಹೋಗದಂತೆ ಎಚ್ಚರ ವಹಿಸುವ ಒಂದು ಪ್ರಯತ್ನ. ನಮ್ಮ ನಿನ್ನೆಗಳನ್ನು ಗುರುತಿಸಿ ಅವುಗಳನ್ನು ಪ್ರಶಂಸಿಸೋಣ, ನಾಳೆಗಳನ್ನು ಗಮನಿಸುತ್ತ ಅವುಗಳ ಪ್ರಾಮುಖ್ಯತೆಯನ್ನು ಅರಿಯೋಣ. ಇಲ್ಲಿ ನಮ್ಮ ಮುಖ್ಯವಾದ ಸಮತೋಲನ ಇರಬೇಕಾದುದು ನಿನ್ನೆ ನಾಳೆಗಳ ಛಾಯೆ ನಮ್ಮ ಇಂದಿನ ಮೇಲೆ ಖಂಡಿತವಾಗಿಯೂ ಪ್ರತಿಬಿಂಬಿತವಾಗುತ್ತಿರುತ್ತದೆ ಅದನ್ನುಜಾಗೃತವಾಗಿ ನಿಭಾಯಿಸುವುದರೆಡೆಗೆ.

ಈ ಪ್ರಜ್ಞಾಪೂರ್ವಕ ಅರಿವು ನಮ್ಮನ್ನು ಈ ಕ್ಷಣದಿಂದ ಕಳೆದುಹೋಗದಂತೆ ನೋಡಿಕೊಳ್ಳುತ್ತದೆ. ಈ ಕ್ಷಣದಲ್ಲಿ  ಹೊಂದಿಕೊಂಡು ಬದುಕುವ ಪ್ರಯತ್ನ ನಮ್ಮದಾಗಬೇಕೆ? ಮೊದಲಿಗೆ ಸ್ವಾರ್ಥಪರವಲ್ಲದ ಅರಿವನ್ನು ಬೆಳೆಸಿಕೊಳ್ಳೋಣ. ನಮ್ಮ ಸಾಮರ್ಥ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದನ್ನು ನಿಲ್ಲಿಸೋಣ. ಎರಡನೆಯದು ಇಂದಿನ ಸವಿಯನ್ನು ಇಂದೇ ಸವಿಯೋಣ ನಾಳೆಗೆ ಮುಂದೂ ಡುವುದು ಬೇಡ. ನಮ್ಮ ಉಸಿರಾಟ ನಿಧಾನವಾಗಿರಲಿ ಇದು ನಮ್ಮನ್ನು ಹೆಚ್ಚು ಜಾಗೃತರನ್ನಾಗಿಸುತ್ತ ಬೇರೆಯವರೊಟ್ಟಿಗೆ ನಮ್ಮ ಕ್ರಿಯೆಗಳನ್ನು ಸುಲಭವಾಗಿಸುತ್ತದೆ.

ಮೂರನೆಯದು, ಒಪ್ಪಿಕೊಳ್ಳುವುದನ್ನು ಸಾಧ್ಯವಾಗಿಸಿಕೊಳ್ಳೋಣ ಯಾರಾದರೂ ನಮ್ಮ ಬಗ್ಗೆ ಏನಾದರೂ ಹೇಳಿದರೆ ಒಳ್ಳೆಯ ದನ್ನು ಒಪ್ಪಿಕೊಂಡ ಹಾಗೆ ಶಾಂತವಾಗಿ ನಮ್ಮ ನೆಗೆಟಿವ್‌ಗಳನ್ನು ಒಪ್ಪಿಕೊಳ್ಳೋಣ ಕೊನೆಯದಾಗಿ ಬೇರೆ ಬೇರೆ ಕೆಲಸಗಳಲ್ಲಿ, ಹವ್ಯಾಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಹೊಸ ಹೊಸ ವಿಚಾರಗಳನ್ನು ಗುರುತಿಸುವ ಸಂಪೂರ್ಣ ವಾದ ಅರಿವಿನ ಮನಸ್ಥಿತಿ ನಮ್ಮದಾಗುತ್ತದೆ. ನೆನಪಿರಲಿ ಈ ಕ್ಷಣದಲ್ಲಿ ಬದುಕುವ ಪ್ರಕ್ರಿಯೆಗೆ ನಾವು ವಿಶೇಷವಾಗಿ ಗಮನಿಸಬೇಕಿರುವುದು ನಮ್ಮ ಉಸಿರಾಟದ ಕ್ರಿಯೆಯ ಮೇಲೆ. ನಮ್ಮ ದೇಹ, ಮನಸ್ಸು, ಆಲೋಚನೆಗಳನ್ನು ಬೆಳೆಸುವುದೇ ನಮ್ಮ ಜೀವಾತ್ಮ ಕ್ರಿಯೆ.

ಈ ಉಸಿರಾಟವೇ ಇಂದು ನಾವು ಈ ಕ್ಷಣದಲ್ಲಿ ಬದುಕುತ್ತಿರುವುದಕ್ಕೆ ಸಾಕ್ಷಿ. ನಮ್ಮ ಇರುವಿಕೆಯ ಮೂಲವೇ ನಮ್ಮ ಉಸಿರಾಟ. ನಮ್ಮ ಸಂಪೂರ್ಣವಾದ ಗಮನ ನಮ್ಮ ಈ ಉಸಿರಾಟದ ಮೇಲೆ ಕೇಂದ್ರಿತವಾದರೆ ಈ ಕ್ಷಣದಲ್ಲಿ ಬದುಕುವುದರ  ಹೊರತಾಗಿ ನಮಗೆ ಬೇರೆ ಆಯ್ಕೆಗಳಿರುವುದಿಲ್ಲ. ನಮ್ಮ ಮನಸ್ಸು ಯಾವುದೋ ಆತಂಕದ ಗುಂಗಿನಲ್ಲಿ ಮುಳುಗಿ ಹೋದಾಗ ಅದಕ್ಕೆ ಕೆಲವು ಸೂಚನೆಗಳನ್ನು ನೀಡಿ ಎಚ್ಚರಿಸಬೇಕು.

ಆ ಸೂಚನೆಗಳು ಹೀಗಿರಲಿ ನಾನು ನಿಧಾನವಾಗಿ ದೀರ್ಘವಾದ ಉಸಿರನ್ನು ಎಳೆದುಕೊಂಡು ನಿಧಾನವಾಗಿ ಉಸಿರನ್ನು ಬಿಟ್ಟೆ ನಾನು ಈ ಕ್ಷಣದಲ್ಲಿ ಬದುಕುತ್ತಿದ್ದೇನೆ ಹೀಗೆ ಈ ಕ್ಷಣದಲ್ಲಿ ಬದುಕುವ ಅರಿವನ್ನು ಗಟ್ಟಿಗೊಳಿಸಬೇಕಾ ನಿಮಗಾಗಿ ಐದು ಆಪ್ತ ಸಲಹೆಗಳು:-
೧) ನಿಮ್ಮ ದೇಹವನ್ನು ನೀವೇ ಅರಿವಿನೊಂದಿಗೆ ಪರೀಕ್ಷಿಸಿ ಬೆಳಗ್ಗೆ ಏಳುವುದಕ್ಕೂ ಮುಂಚೆ ಅಂಗಾತ ಮಲಗಿ ನಿಮ್ಮ ಪಾದ
ದಿಂದ ಶುರುವಿಟ್ಟುಕೊಂಡು ನಿಮ್ಮ ದೇಹದ ಪ್ರತಿಯೊಂದು ಭಾಗಕ್ಕೂ ಸಲಹೆಗಳನ್ನು ಕೊಡುತ್ತಾ ಬಿಗಿಯಾಗಿರುವ ನಿಮ್ಮ
ದೇಹವನ್ನು ಸಡಿಲಗೊಳಿಸುತ್ತ ಕೊನೆಗೆ ನಿಮ್ಮ ಮೆದುಳು, ಮನಸ್ಸನ್ನು ಶಾಂತಗೊಳಿಸಿ ನಂತರ ಏಳಿರಿ.

೨) ಬೆಳಗಿನ ಪುಟಗಳು ಎಂಬ ಪುಟ್ಟ ಡೈರಿ ಬರೆಯಿರಿ ಅದರಲ್ಲಿ ಆ ದಿವಸ ನೀವು ಮಾಡಬೇಕೆಂದುಕೊಂಡಿರುವ ಕೆಲಸಗಳ ಪಟ್ಟಿಯನ್ನು ಮಾಡಿ ನಿಮಗನಿಸಿದ್ದನ್ನು ಬರೆಯಿರಿ. ನೆನಪಿಡಿ ನಿಮ್ಮ ಈ ಬರವಣಿಗೆಯಲ್ಲಿ ಯಾವುದೇ ಸರಿ- ತಪ್ಪುಗಳಿಲ್ಲ. ಜ ಬರೆಯಿರಿ ಅಷ್ಟೆ. ಈ ಡೈರಿ ನಿಮ್ಮ ಮನಸ್ಸಿನ ಖಾಸಾ ಮಾತುಗಳಿಗೆ ವೇದಿಕೆಯಾಗಲಿ ಅದರಲ್ಲಿ ನಿಮ್ಮ ಕನಸುಗಳು ತುಂಬಿರಲಿ.

೩) ಪ್ರತಿದಿನ ನಿಮ್ಮ ಬದುಕಿಗೆ ಒಂದಿಷ್ಟು ಗುರಿಗಳನ್ನು ಗುರುತುಹಾಕಿಕೊಳ್ಳಿ ಅವುಗಳನ್ನು ನಿಮ್ಮ ಕಣ್ಣಮುಂದೆ ಬರಿಸಿಕೊಳ್ಳಿ ಅವುಗಳನ್ನು ಸಾಧಿಸಲು ನಿಮ್ಮ ಪ್ರಯತ್ನಗಳು ಹೇಗಿರಬೇಕು, ನಿಮ್ಮ ತಯಾರಿ ಹೇಗಿರಬೇಕು, ಒತ್ತಡ ಆತಂಕಗಳಾಚೆ ಹೇಗೆ ಕೆಲಸ ಮಾಡಬೇಕು ನಿಮಗೆ ನೀವೇ ಹೇಗೆ ಪ್ರೇರಣೆ, ಸೂರ್ತಿ ಯಾಗಬೇಕೆಂಬುದನ್ನೂ ಪರಿಪಕ್ವಗೊಳಿಸಿಕೊಳ್ಳಿ

೪) ಫಲಿತಾಂಶದ ನಿರೀಕ್ಷೆಗಳನ್ನು ಬದಿಗಿಟ್ಟು ಪ್ರಕೃತಿಗೆ ಹೆಚ್ಚು ಹತ್ತಿರವಾಗುತ್ತಾ ನಡೆಯಿರಿ. ನಿಮ್ಮ ಮನೆಯ ಹತ್ತಿರದ
ಪಾರ್ಕುಗಳು, ಮರಗಳಿಂದ ತುಂಬಿರುವ ರಸ್ತೆಗಳಲ್ಲಿ ಜ ವಾಕ್. ಈ ನಡಿಗೆ ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸುತ್ತ ನಿಮ್ಮನ್ನು ನಿಮಗೆ ಹೆಚ್ಚು ಪರಿಚಯಿಸುತ್ತದೆ.

೫) ನಿಮ್ಮ ದಿನವನ್ನು ನೀವು ಹೇಗೆ ಕಳೆದಿರಿ ಎಂಬ ಪ್ರಜ್ಞಾಪೂರ್ವಕವಾದ ವಿಮರ್ಶೆಯನ್ನು ನೀವೇ ದಿನದ ಕೊನೆಯಲ್ಲಿ
ಮಾಡಿ ಕೊಳ್ಳಿ. ನಿಮ್ಮ ನೆಗೆಟಿವ್‌ಗಳೇನು ಪಾಸಿಟಿವ್‌ಗಳೇನು ಗುರುತು ಹಾಕಿಕೊಳ್ಳಿ ಎಲ್ಲಿ ನೀವು ಬದಲಾಗಬೇಕಿದೆ ಪರಿಶೀಲಿಸಿ ನಾಳೆ ಅವುಗಳನ್ನು ಬದಲಾಯಿಸಿ ಹೊಸ ಕಲಿಕೆ ಅನುಭವದೊಂದಿಗೆ ಈ ಕ್ಷಣದಲ್ಲಿ ಬದುಕುವ ಖುಷಿ ನಿಮ್ಮದಾಗಲಿ..! ಇದೇ ಆರ್ಟ್ ಆ- ಲೈ-.

error: Content is protected !!