Saturday, 20th April 2024

ಮಕ್ಕಳ ಕಣ್ಣಿನ ಕಾಯಿಲೆಗಳ ನಿರ್ಲಕ್ಷ್ಯ ಬೇಡ

ವೈದ್ಯ ವೈವಿಧ್ಯ

drhsmohan@gmail.com

ಮಕ್ಕಳೇ ಮನೆಗೆ ಮಾಣಿಕ್ಯ ಎಂಬ ಉಕ್ತಿಯಂತೆ ಮಕ್ಕಳು ಮನೆಗೆ ನಿಜವಾಗಿಯೂ ಶೋಭೆ. ಇಂತಹ ಮುದ್ದು ಮಕ್ಕಳ ಮೃದು ಅಂಗಗಳಿಗೆ ಸ್ವಲ್ಪ ತೊಂದರೆಯಾದರೂ ಹೆತ್ತವರಿಗೆ ಗಾಬರಿ, ಆತಂಕ ಆಗುವುದು ಸಹಜ. ಯಾವುದೇ ವ್ಯಕ್ತಿಯ ಮುಖಕ್ಕೆ ಕನ್ನಡಿಯಂತಿರುವ ಸುಂದರ ಹೊಳಪು ಕಣ್ಣುಗಳಿಗೆ ಗಾಯವಾದರೆ, ಕಾಯಿಲೆ ಬಂದರೆ, ಕಣ್ಣಿನ ಶಕ್ತಿ ಕುಂದಿದರೆ – ಇವೆಲ್ಲ
ತಂದೆ ತಾಯಿಯರ ಸಮಾಧಾನವನ್ನು ದೂರ ಮಾಡುವ ಮಕ್ಕಳ ಕಣ್ಣಿನ ಕಾಯಿಲೆಗಳು.

ಹೆಚ್ಚಾಗಿ ಆಟ ಓಟಗಳಲ್ಲಿ ತೊಡಗಿರುವ ಮಕ್ಕಳ ಕಣ್ಣಿಗೆ ನಾನಾ ರೀತಿಯ ಗಾಯ, ಅಪಘಾತಗಳಾಗುವುದು ಸಹಜ, ಸ್ವಾಭಾವಿಕ. ಇಂತಹ ಗಾಯ ಗಳು ಮರದ ಮೇಲಿನಿಂದ ಬಿದ್ದಿದ್ದರಿಂದ ಆಗಬಹುದು, ಚಿನ್ನಿ ದಾಂಡು ರೀತಿಯ ಆಟ ಆಡುವಾಗ ಚೂಪಾದ ಕೋಲಿನ ತುದಿ ತಾಗಿ ಆಗಬಹುದು, ಸೈಕಲ್ ಅಪಘಾತದಲ್ಲಿ ಆಗಬಹುದು, ಮನೆಯ ಕಿಟಕಿ ಬಾಗಿಲುಗಳು ತಾಗಿ ಆಗಬಹುದು, ಇಲ್ಲವೇ ಸ್ನೇಹಿತರ ಬೆರಳಿನ ಉಗುರ ತುದಿ ತಾಗಿ ಗಾಯವಾಗಬಹುದು. ಈ ಗಾಯ ಅಪಘಾತಗಳಲ್ಲಿ ಪರಿಣಾಮ ಬೀರುವ ಅಂಶಗಳೆಂದರೆ – ಗಾಯ ಉಂಟು ಮಾಡುವ ವಸ್ತುವಿನ ಮೊನೆ ಚೂಪಾದದ್ದೆ, ಮೊಂಡಾದದ್ದೆ ಆಗ ಆ ವಸ್ತು ತಾಗುವಾಗ ಇದ್ದ ವೇಗ, ಅಂತಹ ಸಂದರ್ಭಗಳಲ್ಲಿ ಕಣ್ಣಿನ ಬಾಹ್ಯ ರಕ್ಷಣಾಕ್ರಮಗಳಾದ ಕಣ್ಣಿನ ರೆಪ್ಪೆ, ಕಣ್ಣೆವೆಗಳು ಎಷ್ಟರಮಟ್ಟಿಗೆ ಸಫಲ ಅಥವಾ ವಿಫಲವಾಗಿವೆ – ಎಂಬುದು ಮುಖ್ಯವಾದವುಗಳು.

ಗಾಯದ ಪ್ರಮಾಣ ತೀವ್ರ ರೀತಿಯದ್ದಾದರೆ ಕಣ್ಣುಗುಡ್ಡೆಯ ಹೊರಗಿನ ಕವಚಗಳು ಛಿದ್ರ ವಾಗಿ ಕಣ್ಣಿನಲ್ಲಿ ಹಲವು ರೀತಿಯ ಆಕಾರದ ತೂತು, ರಂಧ್ರ ಆಗಬಹುದು. ಹೀಗಾದಾಗ ಆದಷ್ಟು ಬೇಗ ಈ ರಂಧ್ರವನ್ನು ಶಸ್ತ್ರಕ್ರಿಯೆ ಮಾಡಿ ಹೊಲಿಗೆ ಹಾಕದಿದ್ದರೆ ಕಣ್ಣು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ. ಇಲ್ಲವೇ ಉಪಯೋಗರಹಿತವಾಗುತ್ತದೆ. ಈ ರೀತಿಯ ರಂಧ್ರ ಅಥವಾ ತೂತು ಕಣ್ಣಿನ ಹೊರಭಾಗದ ಪಾರದರ್ಶಕ ಭಾಗವಾದ ಕಾರ್ನಿಯವನ್ನು ಬಿಟ್ಟು ಉಳಿದ ಕಡೆ ಆದಾಗ ಆಗುವ ದೃಷ್ಟಿಯ ನಷ್ಟ
ಕಡಿಮೆ. ಕಾರ್ನಿಯವೇ ಮುಖ್ಯವಾಗಿ ಛಿದ್ರವಾದರೆ ನಂತರ ಹೊಲಿಗೆ ಹಾಕಿದರೂ ದೃಷ್ಟಿಯನ್ನು ಮೊದಲಿನಂತೆ ಮಾಡಲು ಸಾಧ್ಯವಿಲ್ಲ.

ಕೆಲವೊಮ್ಮೆ ಈ ರೀತಿಯ ಗಾಯ ತೀರಾ ಸಣ್ಣ ಪ್ರಮಾಣದ್ದಾದರೆ ಕಾರ್ನಿಯದ ಮೇಲೆ ಹುಣ್ಣಿನ ರೀತಿಯಲ್ಲಿ ಕಾಣಿಸಿಕೊಳ್ಳ ಬಹುದು. ಆಗ ಶಸ್ತ್ರಕ್ರಿಯೆ ಇಲ್ಲದೇ ಸೂಕ್ತ ಆಂಟಿಬಯೋ ಟಿಕ್ ಔಷಧ ಮತ್ತು ಕಣ್ಣಿಗೆ ಪಟ್ಟಿ ಹಾಕುವುದರಿಂದಲೇ ಚಿಕಿತ್ಸೆ ಮಾಡಿ ಗುಣಪಡಿಸಬಹುದು. ಮೇಲೆ ತಿಳಿಸಿದ ಗಾಯ, ಅಪಘಾತಗಳನ್ನು ಬಿಟ್ಟರೆ ಮಕ್ಕಳ ಕಣ್ಣಿನ ಸಾಮಾನ್ಯ ತೊಂದರೆಗಳಿಂದ ನಾನಾ ರೀತಿಯ ದೃಷ್ಟಿದೋಷಗಳು, ಎಲ್ಲಾ ಅನ್ನಾಂಗದ ಕೊರತೆಯಿಂದ ಉಂಟಾಗುವ ಇರುಳುಗುರುಡುತನ, ಕಣ್ಣಿನ ಅಲರ್ಜಿ, ಜನನಾಗತ ಕಣ್ಣಿನ ಕಾಯಿಲೆಗಳಾದ ಜನನಾಗತ ಕಣ್ಣಿನ ಪೊರೆ, ಜನನಾಗತ ಗ್ಲೊಕೊಮ (ಗೂಳಿ ಕಣ್ಣುಗಳು), ಎರಡೂ ಕಣ್ಣುಗಳ ಅಕ್ಷದಲ್ಲಿ ಉಂಟಾಗುವ ವ್ಯತ್ಯಾಸದಿಂದ ಕಾಣಿಸಿಕೊಳ್ಳುವ ಮೆಳ್ಳೆಗಣ್ಣು ಮತ್ತು ಕಣ್ಣಿನ ಕ್ಯಾರ್ನ್ಸ ರೆಟಿನೋ
ಬ್ಲಾಸ್ಟೋಮಾ ಪ್ರಮುಖವಾದವುಗಳು.

ದೃಷ್ಟಿದೋಷಗಳು: ಮಕ್ಕಳು ಶಾಲೆಗೆ ಹೋಗುವಾಗ ಅಥವಾ ಅದಕ್ಕಿಂತ ಮೊದಲು ಮಕ್ಕಳಿಗೆ ದೂರದ ವಸ್ತುಗಳು ಕಾಣುವುದಿಲ್ಲ, ಶಾಲೆಯ ಬೋರ್ಡಿನ ಅಕ್ಷರಗಳು ತೋರುವುದಿಲ್ಲ ಎಂದೋ ಅಥವಾ ಮಗು ಪುಸ್ತಕವನ್ನು ಬಹಳ ಹತ್ತಿರದಿಂದ ಹಿಡಿದು ಓದುತ್ತದೆ ಎಂತಲೋ ಮಕ್ಕಳ ಪಾಲಕರಿಗೆ ಗೊತ್ತಾಗುವ ದೃಷ್ಟಿ ದೋಷ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ದೃಷ್ಟಿ ದೋಷ ಸಮೀಪ ದೃಷ್ಟಿ. ಇನ್ನೂ ಓದುವಾಗ ತಲೆನೋವು ಬರುತ್ತದೆ ಕಣ್ಣಿಗೆ ನೋವಾಗುತ್ತದೆ ಎಂದು ಕಾಣಿಸಿಕೊಳ್ಳುವ ಇತರ ದೃಷ್ಟಿದೋಷಗಳು ಎಂದರೆ ದೂರ ದೃಷ್ಟಿ, ಅಸಮನಿಟ್ಟು ದೋಷಗಳು. ಇವುಗಳಿಗೆ ಸೂಕ್ತ ಕಾಲದಲ್ಲಿ ಪರೀಕ್ಷಿಸಿ ಕನ್ನಡಕ ಕೊಡುವುರಿಂದ ಮಗುವಿನ ತೊಂದರೆಯನ್ನು ನಿವಾರಿಸಬಹುದು.

ಅಧ್ಯಯನದ ಕೊರತೆ: ನಮ್ಮ ದೇಶದ ಗ್ರಾಮೀಣ ಭಾಗದ ಮಕ್ಕಳಲ್ಲಿರುವ ದೃಷ್ಟಿದೋಷಗಳ ಬಗ್ಗೆ ಅಧ್ಯಯನ, ಸಮೀಕ್ಷೆ ಮತ್ತು
ಅವುಗಳನ್ನು ನಿವಾರಿಸುವ ಬಗ್ಗೆ ಸೂಕ್ತ ಮಾರ್ಗೋಪಾಯಗಳು ಬಹಳಷ್ಟು ನಡೆದಿರಲಿಲ್ಲ. ಉತ್ತರ ಭಾರತದ ಒಂದೆರಡು ಕಡೆ,
ತಮಿಳುನಾಡಿನ ಒಂದೆರಡು ಕಡೆ ಬಿಟ್ಟರೆ ಅಂತಾರಾಷ್ಟ್ರೀಯ ಮಟ್ಟದ ಮಾರ್ಗಸೂಚಿಯ ಅನುಸಾರ ಅಧ್ಯಯನ ಮತ್ತು ವರದಿಗಳು ತುಂಬಾ ವಿರಳ ಎಂದೇ ಹೇಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ೫ ರಿಂದ ೧೪ ವರ್ಷದ ಮಕ್ಕಳ ಕಣ್ಣು ಪರೀಕ್ಷೆಗೆ ಯೋಜನೆ ರೂಪಿಸಲಾಯಿತು.

ಹಲವು ಸಮಾನಮನಸ್ಕ ಸೇವಾ ಧುರೀಣರ ಸಹಕಾರದೊಂದಿಗೆ ನಾವು ೧೯೯೪ ರಲ್ಲಿ ವಿಜಯ ಸೇವಾ ಟ್ರಸ್ಟ್ (ರಿ) ಸಾಗರ ಎಂಬ ಸಾಮಾಜಿಕ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿದೆವು. ಇದರಡಿ ಹಲವು ರೀತಿಯ ಸಮಾಜಮುಖಿ ಸೇವಾ ಕಾರ್ಯ ಕ್ರಮಗಳನ್ನು ವೈದ್ಯಕೀಯ ಮತ್ತು ಆರೋಗ್ಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ, ಶಿವಮೊಗ್ಗ ಜಿಲ್ಲೆಯ ಸಾಗರ
ಸೊರಬ ಹೊಸನಗರ ಹಾಗೂ ಉತ್ತರ ಕನ್ನಡ ಜಿಯ ಸಿzಪರ ತಾಲೂಕುಗಳಲ್ಲಿ ಕೈಗೊಳ್ಳುತ್ತಾ ಬಂದಿದ್ದೇವೆ.

ನಾನು ಮ್ಯಾನೇಜಿಂಗ್ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಡಿ ಸಾಗರ ತಾಲೂಕು ಪ್ರಾಥಮಿಕ
ಮಾಧ್ಯಮಿಕ ಶಾಲಾ ಮಕ್ಕಳ ಕಣ್ಣಿನ ಪರೀಕ್ಷೆ ಚಿಕಿತ್ಸೆ ಮತ್ತು ಅದರ ನಂತರದ ಬೆಳವಣಿಗೆಗಳು ಎಂಬ ಯೋಜನೆಯನ್ನು ರೂಪಿಸಿ ೧೯೯೭ರಿಂದ ೨೦೦೨ ರ ವರೆಗೆ ಸಾಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲ ಸರ್ಕಾರಿ ಮತ್ತು ಸರ್ಕಾರೇ ತರ ಶಾಲೆಗಳ ಶಿಕ್ಷಕರ ಸಹಕಾರದೊಂದಿಗೆ ಬೃಹತ್ ಅಂದೋಲನ ರೀತಿಯಲ್ಲಿ ಕಾರ್ಯಗತಗೊಳಿಸಿದೆವು.

ಇದು ಅಂತಾರಾಷ್ಟ್ರೀಯ ಮಟ್ಟದ ತಜ್ಞರು ಸೂಚಿಸಿದ ಮಾರ್ಗಸೂಚಿಯ ರೀತಿಯಲ್ಲಿಯೇ ಇತ್ತು. ಸಾಗರ ತಾಲೂಕಿನ ೧೦ ವಿವಿಧ ಭಾಗಗಳ ಉಪಾಧ್ಯಾಯರುಗಳಿಗೆ ಮಕ್ಕಳ ಕಣ್ಣಿನ ಪೂರ್ವಭಾವಿ ಪ್ರಾಥಮಿಕ ಪರೀಕ್ಷೆಯ ಬಗ್ಗೆ ಇವರವಾದ ತರಬೇತಿ ನೀಡಿ ಅಗತ್ಯ ಸಾಮಗ್ರಿ ಗಳನ್ನು ಒದಗಿಸಲಾಯಿತು. ಅವರು ಗುರುತಿಸಿ ಆಯ್ಕೆ ಮಾಡಿದ ಒಂದರಿಂದ ಏಳನೇ ತರಗ
ತಿಯ ಮಕ್ಕಳನ್ನು ನಾನು ಸಾಗರದಲ್ಲಿ ಖಾಸಗಿಯಾಗಿ ನಡೆಸುತ್ತಿರುವ ವಿಜಯ ಕಣ್ಣಿನ ಚಿಕಿತ್ಸಾಲಯದಲ್ಲಿ ವಿವರವಾದ ನೇತ್ರ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಯಿತು.

ಆಗ ೨೯೫ ಶಾಲೆಗಳ ೮೦೫ ಉಪಾಧ್ಯಾಯರುಗಳಿಗೆ ತರಬೇತಿ ಕೊಟ್ಟು ೩೨,೯೭೪ ಮಕ್ಕಳ ಕಣ್ಣು ಪರೀಕ್ಷೆ ನಡೆಸಲಾಯಿತು. ಕಣ್ಣಿನ ತೊಂದರೆ ಕಂಡು ಬಂದ ೮೦೫೧ ಮಕ್ಕಳಲ್ಲಿ ೬ ಮಕ್ಕಳಲ್ಲಿ ಮೆಳ್ಳೆ ಗಣ್ಣು, ೫ ಮಕ್ಕಳಲ್ಲಿ ಎಲ್ಲಾ ಅನ್ನಾಂಗದ ಕೊರತೆ,
೨೭೩ ಕಣ್ಣಿನ ಅಲರ್ಜಿಯಿಂದ ಬರುವ ಕಂಜಂಕ್ಟವೈಟಿಸ್ ದೋಷ ಗುರುತಿಸಲಾಗಿ ೧೭೬೨ ಮಕ್ಕಳಲ್ಲಿ ದೃಷ್ಟಿ ದೋಷದ ಸಮಸ್ಯೆಯೇ ಪ್ರಧಾನವಾಗಿ ಕಂಡು ಬಂದಿದ್ದರೆ ಈ ಸಮಸ್ಯೆಯ ಅಗಾಧತೆ ಗಮನಿಸಿ.

೫ ರಿಂದ ೧೪ ವರ್ಷದ ಮಕ್ಕಳಲ್ಲಿ ಕಂಡು ಬರುವ ದೃಷ್ಟಿದೋಷದ ತೊಂದರೆಗಳನ್ನು ಈ ಹಂತದಲ್ಲಿ ಗುರುತಿಸದಿದ್ದರೆ ಅವರ ಕಣ್ಣು ದೃಷ್ಟಿಮಾಂಧ್ಯ ಎಂಬ ಹಂತಕ್ಕೆ ಹೋಗಿ ಬಹಳಷ್ಟು ದೃಷ್ಟಿ ನಷ್ಟವಾಗಿ ಕೆಲವು ಮಕ್ಕಳು ಭಾಗಷಃ ಅಂಧರಾದ ಉದಾ ಹರಣೆಗಳು ಬಹಳಷ್ಟಿವೆ. ಅದರಲ್ಲಿಯೂ ಒಂದೇ ಕಣ್ಣಿನಲ್ಲಿ ದೃಷ್ಟಿದೋಷವಿದ್ದು ಮತ್ತೊಂದು ಕಣ್ಣಿನಲ್ಲಿ ದೋಷವಿಲ್ಲದಿದ್ದಾಗ
ಮಕ್ಕಳು ಮತ್ತು ಅವರ ಪಾಲಕರಿಗೆ ಅದರ ಅರಿವು ಇರುವ ಸಾಧ್ಯತೆಯೇ ಇಲ್ಲ.

ಮೇಲಿನ ನಮ್ಮ ಯೋಜನೆಯಡಿ ನನ್ನ ಮಿತ್ರರಾದ ವೈದ್ಯ ದಂಪತಿಯ ಮಗನೂ ಈ ಗುಂಪಿಗೆ ಸೇರಿದ್ದು ಆತನ ಒಂದೇ ಕಣ್ಣಿನ ದೃಷ್ಟಿ ದೋಷವನ್ನು ಇದೇ ಯೋಜನೆಯಡಿ ಕಂಡುಹಿಡಿಯಲಾಯಿತು. ಹಾಗಾಗಿ ಕಳಲಿರುವ ದೃಷ್ಟಿ ದೋಷದ ತೊಂದರೆಯನ್ನು ಎಷ್ಟು ಬೇಗ ಕಂಡುಹಿಡಿದು ಅಂತಹ ಮಕ್ಕಳು ಸೂಕ್ತ ಕನ್ನಡಕ ಕೊಡುವಂತೆ ಮಾಡಿದರೆ ಅವರಿಗೆ ತಗಬಹುದಾದ ಟವನ್ನು
ಪರಿಣಾಮಕಾರಿಯಾಗಿ ತಪ್ಪಿಸಬಹುದು.

ಕಣ್ಣಿನ ಅಲರ್ಜಿ: ಮಕ್ಕಳಲ್ಲಿ ಕಣ್ಣಿನ ಅಲರ್ಜಿ ಮುಖ್ಯವಾಗಿ ಎರಡು ವಿಧಗಳಲ್ಲಿ ಕಾಣಿಸಿಕೊಳ್ಳುತ್ತದೆ. ೧)ದಿಢೀರ್ ಕಾಣಿಸಿ ಕೊಳ್ಳುವ ಅಲರ್ಜಿ ಮತ್ತು ೨) ದೀರ್ಘಕಾಲ ಕಾಣಿಸಿಕೊಳ್ಳುವ ಅಲರ್ಜಿ.

೧) ದಿಢೀರ್ ಕಾಣಿಸಿಕೊಳ್ಳುವ ಅಲರ್ಜಿ: ಹೆಚ್ಚಾಗಿ ಹುಲ್ಲಿನಲ್ಲಿ ಧೂಳಿನಲ್ಲಿ ಆಟವಾಡುವ ಮಕ್ಕಳಲ್ಲಿ ಹೆಚ್ವಾಗಿ ಕಂಡು ಬರುತ್ತದೆ.

ಸಾಕುಪ್ರಾಣಿಗಳ ಸಹವಾಸದಿಂದಲೂ ಬರಬಹುದು. ಕಣ್ಣಿನ ಪದರ ಒಮ್ಮೆಲೆ ಊದಿಕೊಂಡು ಕಣ್ಣು ಒಮ್ಮೆಲೇ ಕೆಂಪಾಗುತ್ತದೆ.
ಕೆಲವೊಮ್ಮೆ ಅಲರ್ಜಿಯ ಪ್ರಮಾಣ ವಿಪರೀತವಿದ್ದಾಗ ಕಣ್ಣಿನ ರೆಪ್ಪೆಗಳೂ ಊದಿ ದಪ್ಪ ಆಗುತ್ತವೆ. ತೀವ್ರತರದ ಚಿಕಿತ್ಸೆ ಅಗತ್ಯವಿಲ್ಲ . ಕಣ್ಣಿನ ಹನಿ ಔಷಧಗಳಿಂದ ಗುಣವಾಗುತ್ತದೆ.

೨. ದೀರ್ಘ ಕಾಲ ಕಾಣಿಸಿಕೊಳ್ಳುವ ಅಲರ್ಜಿ: ಬಹಳಷ್ಟು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಇದು ವರ್ಷದ ನಿರ್ದಿಷ್ಟ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಮಕ್ಕಳಲ್ಲಿ ಚಳಿಗಾಲದ ತಿಂಗಳುಗಳಲ್ಲಿ ಲಕ್ಷಣಗಳು ತೋರಿದರೆ ಮತ್ತೆ ಕೆಲವರಲ್ಲಿ ಬೇಸಿಗೆಯ ದಿನಗಳಲ್ಲಿ ಕಾಡುತ್ತದೆ. ಇದರ ಮುಖ್ಯ ಲಕ್ಷಣ ಎಂದರೆ ತೀವ್ರ ಪ್ರಮಾಣದ ಕಣ್ಣಿನ ಕಡಿತ. ಇಂತಹ ಮಕ್ಕಳು ಪದೇ ಪದೇ ಕಣ್ಣು ಉಜ್ಜಿಕೊಳ್ಳುತ್ತಲೇ ಇರುತ್ತಾರೆ.

ಜೊತೆಯಲ್ಲಿ ಕಣ್ಣಿನ್ನಲ್ಲಿ ನೀರು ಬರುವುದು, ಬೆಳಕನ್ನು ನೋಡಲು ಕಣ್ಣು ಹಿಂಜರಿಯುವುದು, ಕಣ್ಣಿನಲ್ಲಿ ಕಸ ಬಿದ್ದ ಅನುಭವ,
ವಿಪರೀತ ಕಣ್ಣುರಿ – ಈ ರೀತಿಯ ಲಕ್ಷಣಗಳು ಇರುತ್ತವೆ. ಕೆಲವೊಮ್ಮೆ ಕಣ್ಣಿನಿಂದ ಸ್ವಲ್ಪ ದಪ್ಪ ದ್ರವವೂ ಬರಬಹುದು. ಹಲವು ರೀತಿಯ ಕಣ್ಣಿನ ಹನಿ ಔಷಧಗಳು ಉಪಯೋಗಿಸಲ್ಪಟ್ಟರೂ ಮುಖ್ಯವಾಗಿ ಸ್ಟೆರಾಯ್ಡ ಔಷದ ಹೆಚ್ಚಿನ ಸಂದರ್ಭಗಳಲ್ಲಿ ಉಪಯೋಗಿಸಬೇಕಾಗುತ್ತದೆ.

ಎ ಅನ್ನಾಂಗದ ಕೊರತೆ: ಆಹಾರದಲ್ಲಿ ಎ ಅನ್ನಾಂಗವು ಅಥವಾ ಜೀವಸತ್ವವು ಕಡಿಮೆಯಾದರೆ ರಾತ್ರಿ ಕಾಣುವುದಿಲ್ಲ, ಕತ್ತಲಿನಲ್ಲಿ ದೃಷ್ಟಿ ಕಡಿಮೆ ಎಂದು ಶುರುವಾಗುವ ಈ ಕಾಯಿಲೆ ರಾತ್ರಿ ದೃಷ್ಟಿ ಮಾಂದ್ಯ ಅಥವಾ ಇರುಳುಗುರುಡುತನದ ಗುಂಪಿಗೆ ಸೇರುತ್ತದೆ. ಅಲ್ಲದೆ ಈ ಕಾಯಿಲೆಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ತೊಂದರೆ ಎಂದರೆ ರೋಗಿಯ ಕಣ್ಣೀರಿನ ತೊಂದರೆ. ಹೆಚ್ಚಾಗಿ ಎ ಅನ್ನಾಂಗದ ಕೊರತೆಯು ಕಣ್ಣಿನ ಕಪ್ಪು ಗುಡ್ಡೆಯ ಪಕ್ಕದಲ್ಲಿ ಕಂಜಂಕ್ಟೈವ ಭಾಗದಲ್ಲಿ ಸಣ್ಣ ಸಣ್ಣ ತುಣುಕ
ಗಳಾಗಿ (ಬೀಟಾಟ್ ಸ್ಪಾಟ್ಸ್) ಕಾಣಿಸಿಕೊಳ್ಳುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಗುರುತಿಸಲ್ಪಟ್ಟರೆ ಸೂಕ್ತ ಔಷಧಿಗಳಿಂದ ಪರಿಣಾಮಕಾರಿಯಾಗಿ ಚಿಕಿತ್ಸೆ ಮಾಡಬಹುದುದ ಈ ಕಾಯಿಲೆ ನಿವಾರಿಸಬಹುದಾದ ಅಂಧತ್ವದ ಗುಂಪಿಗೆ ಸೇರುತ್ತದೆ.

ಭಾರತದ ಸರ್ಕಾರವು ಈ ಕಾಯಿಲೆಯ ನಿವಾರಣೆಗಾಗಿ ಒಂದು ರಾಷ್ಟ್ರೀಯ ಕಾರ್ಯಕ್ರಮವನ್ನೇ ಹಮ್ಮಿಕೊಂಡಿತ್ತು. ಪ್ರಾಥ
ಮಿಕ ಆರೋಗ್ಯ ಘಟಕ ಅಥವಾ ಕೇಂದ್ರಗಳ ಮೂಲಕ ಆರೋಗ್ಯ ಕಾರ್ಯಕರ್ತರ ಮುಖಾಂತರ ಎ ಅನ್ನಾಂಗದ ಗುಳಿಗೆಗಳು ಕೊಡಲ್ಪಟ್ಟು ಈ ಕಾಯಿಲೆಯ ನಿವಾರಣೆಯಲ್ಲಿ ಈ ಕಾರ್ಯ ಕ್ರಮ ಮಹತ್ವದ ಪಾತ್ರ ವಹಿಸಿತ್ತು. ಹಾಗಾಗಿ ಈಗಿನ ಮಕ್ಕಳಲ್ಲಿ ಈ ಕಾಯಿಲೆಯ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ.

ಮೆಳ್ಳೆಗಣ್ಣು ಅಥವಾ ಕೋಸುಗಣ್ಣು : ಹಲವು ಕಾರಣಗಳಿಂದ ಕಣ್ಣಿನ ಮಾಂಸಗಳಿಗೆ ಸಂಬಂಧ ಪಟ್ಟ ನರಗಳು ದುರ್ಭಲವಾಗಿ ಉಂಟಾಗುವ ಮೆಳ್ಳೆಗಣ್ಣು ಬಿಟ್ಟರೆ ಹೆಚ್ಚಿನ ಮೆಳ್ಳೆಗಣ್ಣಿನ ದೋಷಗಳು ಮಕ್ಕಳಲ್ಲಿಯೇ ಕಾಣಿಸಿಕೊಳ್ಳುತ್ತವೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ದೋಷ ಹೆಚ್ಚಿನ ಸಂದರ್ಭಗಳಲ್ಲಿ ಒಂದು ಕಣ್ಣು ಒಳಗೆ ಬಂದಿರುವ ಹಾಗೆ ಕಾಣುವ ರೀತಿಯ ಮೆಳ್ಳೆಗಣ್ಣು ಆಗಿರುತ್ತದೆ. ಮಗು ಏಳು ಅಥವಾ ಎಂಟು ವರ್ಷ ತಲುಪುವ ಮೊದಲೇ ಈ ದೋಷಕ್ಕೆ ಸೂಕ್ತ ಚಿಕಿತ್ಸೆ ಅತೀ ಅಗತ್ಯ.

ಇಲ್ಲದಿದ್ದರೆ ಮೊದಲು ಸ್ವಲ್ಪ ಇರುವ ದೋಷ ನಿಧಾನವಾಗಿ ಮುಂದುವರಿದು ನಂತರ ಒಂದೇ ಕಣ್ಣು ದೃಷ್ಟಿಗೆ ಉಪಯೋಗಿಸ ಲ್ಪಟ್ಟು ಇನ್ನೊಂ ದು ಕಣ್ಣು ಉಪಯೋಗಿಸಲ್ಪಡದೆ ದೃಷ್ಟಿ ಮಾಂದ್ಯವನ್ನು ಹೊಂದಿ ಸಂಪೂರ್ಣ ಕುರುಡು ತನದಿಂದಾಗಿ ವಿವಿಧ ರೀತಿಯ ತೊಂದರೆ ಯನ್ನು ಕೊಡುತ್ತದೆ. ಅಲ್ಲದೆ ೭-೮ ವರ್ಷಗಳ ಒಳಗೆ ಸೂಕ್ತ ಚಿಕಿತ್ಸೆ ಕೈಗೊಂಡರೆ ಇನ್ನೊಂದು ಕಣ್ಣಿನ ದೃಷ್ಟಿ ಉಳಿಸುವುದಲ್ಲದೆ, ವ್ಯಕ್ತಿಗೆ ಬಹಳ ಉಪಯುಕ್ತವಾದ ಎರಡೂ ಕಣ್ಣಿನಿಂದ ಕಾಣುವ ಏಕ ದೃಷ್ಟಿ ಗುಣವನ್ನು ಉಳಿಸಬಹುದು. ಈ
ಹಂತದಲ್ಲಿ ಮುಖ್ಯವಾದ ಚಿಕಿತ್ಸಾ ಕ್ರಮಗಳಿಂದರೆ – ಸಣ್ಣ ದೋಷಗಳಿಗೆ ಸೂಕ್ತ ಕನ್ನಡಕ ಕೊಡುವುದು, ಒಂದು ಕಣ್ಣನ್ನು ಸ್ವಲ್ಪ
ಸಮಯದವರೆಗೆ ಮುಚ್ಚುವುದು, ಇಲ್ಲವೇ ಶಸ್ತ್ರಚಿಕಿತ್ಸೆಯ ಮೂಲಕ ನೇರಗೊಳಿಸುವುದು.

ಮಕ್ಕಳ ಯಾವುದೇ ಕಣ್ಣಿನ ತೊಂದರೆ, ಕಾಯಿಲೆಗಳು ಆದಷ್ಟು ಬೇಗ ಹಚ್ವಲ್ಪಟ್ಟರೆ ಚಿಕಿತ್ಸೆ ಸುಲಭ ಮತ್ತು ಪರಿಣಾಮಕಾರಿ. ಈ ದಿಸೆಯಲ್ಲಿ ಪಾಲಕರು ಮತ್ತು ಕೆಲವೊಮ್ಮೆ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ.

error: Content is protected !!