Tuesday, 23rd April 2024

ಕತ್ರಿಗುಪ್ಪೆ ಜಂಕ್ಷನ್‌ನಲ್ಲಿ ಭೀಕರ ಅಪಘಾತ: ಓರ್ವನ ಸಾವು, ವಾಹನಗಳಿಗೆ ಹಾನಿ

ಬೆಂಗಳೂರು: ನಗರದ ಕತ್ರಿಗುಪ್ಪೆ ಜಂಕ್ಷನ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಓರ್ವ ವ್ಯಕ್ತಿ  ಮೃತಪಟ್ಟಿದ್ದಾನೆ.

ಸಹಾಯಕ ನಿರ್ದೇಶಕ ಮುಕೇಶ್ ಎಂಬ ಚಾಲಕನ ಅಜಾಗರೂಕ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕಿರುತೆರೆಯಲ್ಲಿ ಸಹಾಯಕ ನಿರ್ದೇಶನ ಮಾಡುತ್ತಿದ್ದ ಮುಕೇಶ್ ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದ. ಈ ವೇಳೆ ಕಾರು ವೇಗದಲ್ಲಿ ಕತ್ರಿಗುಪ್ಪೆ ಜಂಕ್ಷನ್ ಗೆ ಬಂದಿದೆ. ಕಾರನ್ನು ಗಮನಿಸದ ಪಾದಚಾರಿಗಳು ರಸ್ತೆಯಲ್ಲಿ ಹೋಗುವಾಗ ಡಿಕ್ಕಿ ಹೊಡೆದಿದೆ. ರಭಸಕ್ಕೆ ನಾಲ್ವರು ದಿಕ್ಕಾಪಾಲಾಗಿ ಬಿದ್ದಿದ್ದಾರೆ. ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಎರಡು ದ್ವಿಚಕ್ರವಾಹನಗಳಿಗೆ ಮತ್ತು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಚಾಲಕ ಮುಕೇಶ್ ಶಿವಮೊಗ್ಗ ಮೂಲದವನಾಗಿದ್ದು ಕನ್ನಡ ಸಿನಿಮಾ ಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ಗಮನಿಸಿದಾಗ ಪಾದಚಾರಿಗಳು ಮಾತ ನಾಡುತ್ತಾ ಸಾಗುತ್ತಿದ್ದು ಕಾರು ಏಕಾಏಕಿ ವೇಗವಾಗಿ ಬಂದ ಕಾರಣ ಅಪಘಾತವಾಗಿದೆ.

ಉದ್ಭವ ಆಸ್ಪತ್ರೆ ಬಳಿ ಇರುವ ಚಂದನ್ ಮೋಟಾರ್ ದ್ವಿಚಕ್ರ ವಾಹನ ಷೋರೂಂ ಬಳಿ ನಡೆದುಕೊಂಡು ಹೋಗುತ್ತಿದ್ದ ಸಚಿನ್, ಶಿವರಾಜು, ಸುರೇಶ್ ಮತ್ತು ಶೈಲೇಂದ್ರ ಎಂಬ ಪಾದಚಾರಿಗಳಿಗೆ ಹಾಗೂ ಫುಟ್‌ಪಾತ್ ಮೇಲೆ ನಿಂತಿದ್ದ ಒಂದು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆೆದಿದೆ. ಅಪಘಾತಕ್ಕೀಡಾದ ಪಾದಚಾರಿ ಗಾಯಾಳು 28 ವರ್ಷದ ಸುರೇಶ್ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಉಳಿದ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುತ್ತಾರೆ.

ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಪಾದಚಾರಿಗಳು ನಡೆದುಕೊಂಡು ಹೋಗುತ್ತಿದ್ದರು. ಅಪಘಾತ ನೋಡಿದ ಸ್ಥಳೀಯರು ಕ್ಷಣಕಾಲ ದಂಗಾಗಿ ಹೋಗಿ ದ್ದಾರೆ. ಕೆಲವು ವಾಹನ ಚಾಲಕರು ಬಿದ್ದಿರುವ ಗಾಯಾಳುಗಳಿಗೆ ಸಹಾಯ ಮಾಡದೇ ಮುಂದೆ ಸಾಗಿದ್ದಾರೆ.

ಪಶ್ಚಿಮ ಸಂಚಾರಿ ವಿಭಾಗದ ಡಿಸಿಪಿ ಕುಲದೀಪ್ ಜೈನ್ ಮಾತನಾಡಿ, ಮುಕೇಶ್ ಎಂಬಾತನ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯ ಕಾರಣವಾಗಿದೆ. ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಚಾಲಕ ಮುಕೇಶನನ್ನ ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದ್ದಾರೆ.

error: Content is protected !!