Tuesday, 16th April 2024

ಶ್ರೀ ಶರಣಬಸವೇಶ್ವರ ಜಾತ್ರಾಮಹೋತ್ಸವ ಮಾರ್ಚ್ 8 ರಿಂದ ಆರಂಭ

ಮಾ.12ಕ್ಕೆ ರಥೋತ್ಸವ, ವಾರಾಣಸಿ ಪುರೋಹಿತರಿಂದ ಶರಣಾರತಿ

ಕಲಬುರಗಿ: ಕಲ್ಯಾಣ ನಾಡಿನ ಆರಾಧ್ಯ ದೈವ, ಮಹಾಮಹಿಮ, ಮಹದಾಸೋಹಿ ಶ್ರೀ ಶರಣಬಸವೇಶ್ವರರ 201ನೇ ಜಾತ್ರಾಮಹೋತ್ಸವವು ಇದೇ ಮಾರ್ಚ್ 8 ರಿಂದ ಆರಂಭಗೊಳ್ಳಲಿದೆ ಎಂದು ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಶ್ರೀ ಡಾ. ಶರಣಬಸವಪ್ಪ ಅಪ್ಪಾಜೀ ಹಾಗೂ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖ್ಯಸ್ಥೆ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜೀ ಅವರು ತಿಳಿಸಿದರು.

ನಗರದ ಶ್ರೀ ಶರಣಬಸವೇಶ್ವರ ದಾಸೋಹ ಮಹಾಮನೆಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶೇಷವಾಗಿ ಜಾತ್ರಾಮಹೋತ್ಸವ ನಡೆಯಲ್ಲಿದ್ದು, ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿ ಭಕ್ತರಿಂದ ಪಾದಪೂಜೆ ಸ್ವೀಕರಿಸಲು ದೇವಾ ಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ಕೈಗೊಂಡು, ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಜಾತ್ರಾಮಹೋತ್ಸವ ಉದ್ಘಾಟನೆ ನೆರವೇರಲಿದೆ ಎಂದು ತಿಳಿಸಿದರು.

ಉದ್ಘಾಟನಾ ದಿನದಂದು ಬೆಳಗುಂಪಿಯ ಸಂಸ್ಥಾನ ಬೃಹನ್ಮಮಠದ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಮಹಾದಾಸೋಹಿ ಶರಣ ಬಸವೇಶ್ವರರ ಲೀಲೆಗಳು ಕುರಿತು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಈ ಹಿಂದಿನಂತೆ ಆಚರಣೆಗಳು ಪ್ರತಿದಿನ ಸಂಜೆ ಧಾರ್ಮಿಕ ಪ್ರವಚನಗಳಿಗೆ ಸೀಮಿತವಾಗದೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯ ಲಿವೆ ಎಂದು ತಿಳಿಸಿದರು.

ಮಾರ್ಚ್ 9ರಂದು ಬಸವಕಲ್ಯಾಣದ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ವಿರಕ್ತಮಠ ಬೀಳಗಿಯ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಶಿವಾನುಭವ ಚಿಂತನೆ ಕುರಿತು ಮಾತನಾಡಲಿದ್ದಾರೆ. ನಂತರ ಮುಕ್ತಾಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದರು.

ಮಾರ್ಚ್ 10ರಂದು ಶರಣಬಸವೇಶ್ವರ ಸಂಸ್ಥಾನಕ್ಕೆ ಮಹಾದಾಸೋಹ ಪೀಠಾಧಿಪತಿಗಳ ಕೊಡುಗೆಗಳ ಕುರಿತು ಕಟ್ಟಿಮನಿ ಸಂಸ್ಥಾನ ಹಿರೇಮಠದ ಮುಗಳನಾಗವಿಯ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಜಗನ್ನಾಥ ಡಿಗ್ಗಿ ದಂಪತಿಗಳಿಗೆ “ದಾಸೋಹ ಜ್ಞಾನರತ್ನ” ಪ್ರಶಸ್ತಿ ಪ್ರದಾನ ಮಾಡುವರು. ನಂತರ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಮಾರ್ಚ್ 11 ಅಫಜಲಪುರ ತಾಲೂಕಿನ ಚಿಣಮಗೇರಾ ಮಹಾಂತಪುರದ ವೀರಮಹಾಂತ ಶಿವಾಚಾರ್ಯರು, ಮಹಾದಾಸೋಹಿ ಶರಣಬಸವೇಶ್ವರ ಮಹಿಮೆಗಳು-ಶಿವಲೀಲೆಗಳು ಕುರಿತು ಮಾತನಾಡುವರು. ನಂತರ ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಮಾರ್ಚ್ 12ರಂದು ಶರಣಬಸವೇಶ್ವರ ದೇವಸ್ಥಾನದಲ್ಲಿ  ಶರಣಬಸವೇಶ್ವರ ರಥೋತ್ಸವ ನಡೆಯಲಿದ್ದು, ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.  ನಂತರ 13ನೇ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಕಲಾ ಬಳಗದ  ಸದಸ್ಯರಿಂದ ಮಹಾದಾಸೋಹಿ ಶರಣಬಸವೇಶ್ವರರ ಕುರಿತು ನಾಟಕ ಪ್ರದರ್ಶನ ನಡೆಯಲಿದೆ. ರಮೇಶ್ ಬಂಧು ಅವರು ನಿರ್ಮಿಸಿರುವ ನಾಟಕವನ್ನು ಬಸವರಾಜ ಕೊಂಚಗಲ್ ಬರೆದು ನಿರ್ದೇಶಿಸಿದ್ದಾರೆ.

ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಮಹಾತ್ಮೆ ನಾಟಕ ಪ್ರದರ್ಶನ ನಡೆಯಲಿದ್ದು, ಆಂಧ್ರಪ್ರದೇಶದ ಶ್ರೀಶೈಲದ ಸಾರಂಗ ಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಲಿದ್ದು, ಚೌಡಾಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪೀಠದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ.ನಿರಂಜನ ನಿಷ್ಠಿ, ಕುಲಸಚಿವ ಅನಿಲ್ ಕುಮಾರ್ ಬಿಡವೆ, ಸಮಕುಲಪತಿ ಬಿ.ಡಿ.ಮೈತ್ರಿ ಇದ್ದರು.
*
ಜಗನ್ನಾಥ ಡಿಗ್ಗಿ ದಂಪತಿಗಳ ಸಾಮಾಜಿಕ-ಧಾರ್ಮಿಕ ಸೇವೆಯನ್ನು ಗುರುತಿಸಿ 50 ಸಾವಿರ ರೂ. ನಗದು, ಪ್ರಶಸ್ತಿಪತ್ರ, ಫಲಕ, ಶಾಲು ಒಳಗೊಂಡ “ದಾಸೋಹ ಜ್ಞಾನರತ್ನ” ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 11ಜನ ಸಾಧಕರಿಗೆ ಶ್ರೀಶರಣ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜೀ
ಮುಖ್ಯಸ್ಥರು, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ 
*
ವಾರಣಾಸಿ ಪುರೋಹಿತರಿಂದ ಶರಣಾರತಿ: 18ನೇ ಶತಮಾನದ ಸಂತ ಶ್ರೀ ಶರಣಬಸವೇಶ್ವರರ ಪುಣ್ಯತಿಥಿ ಅಂಗವಾಗಿ ಮಾರ್ಚ್ 12ರಂದು ರಥೋತ್ಸವ ಜರುಗಲಿದ್ದು, ನಂತರ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ವಾರಣಾಸಿಯ 12 ಪುರೋಹಿತರ ತಂಡವು ಗಂಗಾ ಆರತಿಯ ಮಾದರಿಯಲ್ಲಿ ಶರಣಾರತಿ ನೆರವೇರಿಸಲಿದ್ದಾರೆ. ಶರಣಾರತಿಯು ಕಣ್ಮನ ಸೆಳೆಯುವ ದೃಶ್ಯವಾಗಿದ್ದು, ವಿಶೇಷವಾಗಿ ನಿರ್ಮಿಸಿದ ಪೀಠದ ಮೇಲೆ ವಾರಣಾಸಿಯ ಪುರೋಹಿತರು ಆರತಿ ದೃಶ್ಯ ಜನರಿಗೆ ವೀಕ್ಷಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ. ಇದು 201ನೇ ಶರಣಬಸವೇಶ್ವರ ಜಾತ್ರೆಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ ಎಂದು ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ದಾಕ್ಷಾಯಿಣಿ ಅವ್ವಾಜಿ ಹೇಳಿದರು.

error: Content is protected !!