ಬಳ್ಳಾರಿ: ಜಿಲ್ಲೆಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿ ಗೆ ಸೇರಿಸಲು ಕೂಗು ಎದ್ದಿದೆ. ಅದಕ್ಕೆ ನನ್ನ ಸಹಮತವೂ ಇದೆ ಎಂದು ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರದಲ್ಲಿ ಸಿಎಂ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ನಾನು ಬದ್ಧ. ವಿರೋಧ ವ್ಯಕ್ತಪಡಿಸುತ್ತಿರುವ ಶಾಸಕ ಸೋಮಶೇಖರ್ ರೆಡ್ಡಿ ಅವರ ಮನವೊಲಿಸ ಲಾಗುತ್ತದೆ. ಅವರು ಯಾವುದೋ ಒತ್ತಡದಲ್ಲಿ ವಿರೋಧಿಸುತ್ತಿರಬಹುದು. ಎಲ್ಲರನ್ನು ವಿಶ್ವಾಸಕ್ಕೆ ತಗೊಂಡು ಜಿಲ್ಲೆ ವಿಭಜನೆ ಮಾಡಲಾಗಿದೆ. ಯಾರಿಗೂ ವಿರೋಧ ಇಲ್ಲ ಎಂದರು.
ವಿಜಯನಗರ ಜಿಲ್ಲೆಗೆ ಆರು ತಾಲೂಕು ಸೇರಿಸಿದ್ದು. ಬಳ್ಳಾರಿ ಜಿಲ್ಲೆಗೆ ಐದು ಉಳಿಯುತ್ತವೆ. ಹಾಗಾಗಿ ಮೊಳಕಾಲ್ಮುರು ಸೇರಿಸಿ ಆರು ಮಾಡುವ ಕೂಗು ಕೇಳಿದೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು 40 ವರ್ಷಗಳ ಕಾಲ ಹೋರಾಟ ಮಾಡಿ ಬಂದ ವರು. ಅವರ ನಾಯಕತ್ವ ಬದಲಾವಣೆ ವಿಚಾರ ಇಲ್ಲ. ಅವರೇ ನಮ್ಮ ನಾಯಕರು ಎಂದರು.
ಮುಖ್ಯ ಮಂತ್ರಿಗಳಾಗಿ ಯಡಿಯೂರಪ್ಪ ಅವರು ಸಮರ್ಥವಾಗಿದ್ದಾರೆ ಅವರ ಮಾತು ದಾಟೋರು ಇಲ್ಲ. ಬಹಳಷ್ಟು ಜನ ಮಂತ್ರಿ ಸ್ಥಾನ ಬೇಡಿಕೆ ಇಟ್ಟಿದ್ದಾರೆ. ಮೊನ್ನೆ ಸಿಎಂ ದೆಹಲಿಗೆ ಹೋದಾಗ ಆ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ. ಮತ್ತೆ ಶೀಘ್ರದಲ್ಲಿ ದೆಹಲಿಗೆ ಹೋಗಿ ಯಾರು ಸಚಿವರಾಗಬೇಕು ಅಂತಾ ಫೈನಲ್ ಮಾಡ್ತಾರೆ ಎಂದರು.
17 ಜನ ಶಾಸಕರ ಗುಂಪು ಒಂದಡೆ ಸೇರಿ ಚರ್ಚಿಸಿದರೆ ಪಕ್ಷ ವಿರೋಧಿ ಚಟುವಟಿಕೆ ಅಲ್ಲ. ನಮ್ಮಲ್ಲಿ ಮೂಲ ವಲಸೆ ಪ್ರಶ್ನೆ ಎನ್ನುವ ಪ್ರಶ್ನೆಯೇ ಇಲ್ಲ. ಎಲ್ಲರು ಬಿಜೆಪಿಯಿಂದಲೇ ಗೆದ್ದಿದ್ದಾರೆ ಎಂದರು.