ತುಮಕೂರು : ತುಮಕೂರು ವಿಶ್ವವಿದ್ಯಾಲಯವು 2020ರ ಮೇ ನಲ್ಲಿ ನಡೆಸಬೇಕಾಗಿದ್ದ ಸ್ನಾತಕ ಪದವಿ ಪರೀಕ್ಷೆಗಳನ್ನು ಕೋವಿಡ್ ಕಾರಣದಿಂದ ಮುಂದೂಡಿ, ಲಾಕ್ಡೌನ್ ಮುಗಿದ ನಂತರ 2020ರ ಸೆಪ್ಟಂಬರ್ನಲ್ಲಿ ನಡೆಸಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶುಲ್ಕ ಪಾವತಿಸಲಾಗದೆ, ಶುಲ್ಕ ಪಾವತಿಸಿದ್ದರೂ ಪರೀಕ್ಷೆಗೆ ಹಾಜರಾಗದೆ, ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದರು. ಭೌತಿಕ ತರಗತಿಗೆ ಹಾಜರಾಗದೆ ಆನ್ಲೈನ್ನಲ್ಲಿ ಪಾಠ ಕೇಳಿ ತರಾತುರಿಯಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಹಾಗೂ ಮುಖ್ಯ ಪರೀಕ್ಷೆಗೆ ಹಾಜರಾಗಿ ಸಾವಿರಾರು ವಿದ್ಯಾರ್ಥಿಗಳು ಅನುತೀರ್ಣರಾದರು.
ಯು.ಜಿ.ಸಿ ಹಾಗೂ ಸರಕಾರದ ಆದೇಶದಂತೆ ಶುಲ್ಕ ಪಾವತಿಸಲಾಗದೆ, ಶುಲ್ಕಪಾವತಿಸಿದ್ದರೂ ಪರೀಕ್ಷೆಗೆ ಹಾಜರಾಗದೆ, ಇರುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲು ತುಮಕೂರು ವಿ.ವಿ ಅಧಿಸೂಚನೆ ಹೊರಡಿಸಿರುವುದು, ಸಂತೋಷದ ವಿಷಯ ಆದರೆ ದಾವಣಗೆರೆ ವಿ.ವಿಯು ಶುಲ್ಕಪಾವತಿಸಿ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳ ಜತೆಯಲ್ಲಿಯೇ, ಅದೇ ಸಂದರ್ಭದಲ್ಲಿ ಪರೀಕ್ಷೆ ಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೂ ಪೂರಕ ಪರೀಕ್ಷೆ ನೀಡಿರುವುದು ಸಂತಸದ ಸಂಗತಿ.
ಗ್ರಾಮೀಣ ಪ್ರದೇಶದ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಲಾಕ್ಡೌನ್ ಸಮಯದಲ್ಲಿ ಸರಿಯಾಗಿ ಪಾಠ ಕೇಳದೆ, ಅಧ್ಯಯನ ಮಾಡದೆ ಅನುತೀರ್ಣರಾದ ತುಮಕೂರು ವಿ,ವಿಯ ಸ್ನಾತಕ ಪದವಿಯ ವಿದ್ಯಾರ್ಥಿಗಳಿಗೂ ದಾವಣಗೆರೆ ವಿ.ವಿ ರೀತಿಯಲ್ಲಿ ಪೂರಕ ಪರೀಕ್ಷೆ ಬರೆಯಲು ಅವಕಾಶ ನೀಡಲು ಮಾನ್ಯಕುಲಪತಿಗಳು ಗಂಭೀರವಾಗಿ ಮರುಪರಿಶೀಲನೆ ಮಾಡಬೇಕಾಗಿದೆ. ಅನುತ್ತೀರ್ಣರಿಗೆ ಪೂರಕ ಪರೀಕ್ಷೆ ಮಾಡುವುದರಿಂದ ವಿ.ವಿಗೆ ಹಣಕಾಸಿನ ಹೊರೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರ ಹಾಗೂ ಶಿಕ್ಷಣತಜ್ಞರ ಒತ್ತಡ ಹೆಚ್ಚಾಗಿದ್ದು, ಕೂಡಲೇ ಕುಲಪತಿಗಳು, ಸಿಂಡಿಕೇಟ್ ಈ ಬಗ್ಗೆ ಗಮನಹರಿಸಬೇಕಾಗಿದೆ.
ಕರೋನಾ ಪರೀಕ್ಷೆ: ಹೈರಾಣಾದ ಭದ್ರತಾ ಸಿಬ್ಬಂದಿ
ತುಮಕೂರು ವಿವಿ ಆವರಣವನ್ನು ಪ್ರವೇಶಿಸಿಸಲು ಪ್ರತಿಯೊಬ್ಬರಿಗೂ ಕರೋನಾ ಪರೀಕ್ಷೆ ಪತ್ರವನ್ನು ಕಡ್ಡಾಯ ಮಾಡಿರುವು ದರಿಂದ ಪ್ರತಿದಿನ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿಯ ಕರೋನಾ ಪರೀಕ್ಷೆಯ ವರದಿಯನ್ನು ಪರೀಕ್ಷಿಸುವಲ್ಲಿ ಖಾಸಗಿ ಭದ್ರತಾ ಸಿಬ್ಬಂದಿಗಳು ಹೈರಾಣಾಗಿದ್ದಾರೆ. ಒಮ್ಮೆ ಕರೋನಾ ಪರೀಕ್ಷೆ ಮಾಡಿಸಿದರೆ ಮುಂದಿನ ಪರೀಕ್ಷೆಯವರೆಗೂ ಅದೇ ಅನ್ವಯವಾಗುತ್ತದೆ.
ವಿವಿಗೆ ಪ್ರತಿದಿನ ಆಗಮಿಸುವ ವಿದ್ಯಾರ್ಥಿಗಳು, ಉಪನ್ಯಾಸಕರು, ಸಾರ್ವಜನಿಕರು ಕರೋನಾ ಪರೀಕ್ಷೆ ಮಾಡಿಸಿರುವ ಪತ್ರವನ್ನು, ರಿಪೋರ್ಟ್ನ್ನು ಖಾಸಗಿ ಸಿಬ್ಬಂದಿಗಳ ಬಳಿ ದಾಖಲಿಸಿರುತ್ತಾರೆ. ಆದರೆ ಅದೇ ಪರೀಕ್ಷೆಯ ಪತ್ರವನ್ನು ಪ್ರತಿದಿನ ಪರೀಕ್ಷೆ ಮಾಡು ವುದು ಸಿಬ್ಬಂದಿಗಳಿಗೆ ಒತ್ತಡವಾಗಿದೆ. ಈ ಬಗ್ಗೆ ಕುಲಪತಿಗಳು ಗಮನಹರಿಸಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.