ಅಭಿಮಾನಿಗಳೊಂದಿಗೆ ಬೌನ್ಸರ್ಗಳು ವಾಗ್ವಾದ
ತುಮಕೂರು: ನೀವೆಲ್ಲಾ ಇಷ್ಟೊಂದು ಪ್ರೀತಿ ತೋರುಸ್ತೀರಾ, ರಾಜಕೀಯ ಯಾಕ್ರಿ ಬೇಕು ಎಂದು ನಟ ಪುನೀತ್ ರಾಜ್ಕುಮಾರ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯದ ಬಗ್ಗೆ ಆಸಕ್ತಿಯಿಲ್ಲ. ಸಿನೆಮಾ ನನ್ನ ಉಸಿರು. ತಂದೆಯವರ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದರು. ಎಸ್ಐಟಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಯುವರತ್ನ ಸಿನೆಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಪುನಿತ್ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ, ಜೆಸಿಬಿಯಲ್ಲಿ ಪುಷ್ಪವೃಷ್ಟಿ ಮಾಡಿ ಅಭಿಮಾನ ಮೆರೆದರು.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ, ಸಿದ್ದಲಿಂಗಸ್ವಾಮೀಜಿಯವರ ಆಶೀರ್ವಾದ ಪಡೆದು, ಮಕ್ಕಳ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಈ ವೇಳೆ ನಿರ್ಮಾಪಕ ಸಂತೋಷ್ ಆನಂದರಾಮ್, ನಟರಾದ ಡಾಲಿ ಧನಂಜಯ್, ರವಿಶಂಕರ್ ಇತರರಿದ್ದರು.
ಪುನೀತ್ ಅವರನ್ನು ನೋಡಲು ಮುಗಿ ಬೀಳುತ್ತಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪರದಾಡುತ್ತಿದ್ದ ಖಾಸಗಿ ಭದ್ರತಾ ಸಿಬ್ಬಂದಿ ಗಳು ಅಭಿಮಾನಿಗಳೊಂದಿಗೆ ವಾಗ್ವಾದ ಮಾಡಿಕೊಳ್ಳುತ್ತಿದ್ದರು. ಹಾರ ಹಾಕಲು ಬಂದವರನ್ನು ತಡೆದು ನಿಲ್ಲಿಸುತ್ತಿದ್ದರು, ಇದರಿಂದ ಅಭಿಮಾನಿಗಳು ಬೇಸರಗೊಂಡರು.
ಪುನೀತ್ ಅವರನ್ನು ನೋಡಲು ಸುಡುಬಿಸಿಲಿನಲ್ಲಿ ಮೂರ್ನಾಲ್ಕು ಗಂಟೆ ನಿಂತುಕೊಂಡಿದ್ದೇವೆ. ಆದರೆ ಬೌನ್ಸರ್ಗಳು ಅವರನ್ನು ನೋಡಲು ಬಿಡುತ್ತಿಲ್ಲ ಎಂದು ಕಿಡಿಕಾರಿದರು.