ಬೆಂಗಳೂರು: ಸೋಲದೇವನಹಳ್ಳಿ ಮಕ್ಕಳ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.
ಸೋಲದೇವನಹಳ್ಳಿ ಅಪಾರ್ಟ್ಮೆಂಟ್ನಿಂದ ನಾಪತ್ತೆಯಾಗಿದ್ದ ಮಕ್ಕಳಲ್ಲಿ ಮೂವರು ಸೋಮವಾರ ಬೆಂಗ ಳೂರಿನಲ್ಲಿ ಹಾಗೂ ಉಳಿದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಈ ಮೂಲಕ ನಾಪತ್ತೆ ಯಾಗಿದ್ದ ಎಲ್ಲಾ ಮಕ್ಕಳ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಪೋಷಕರು ಓದಲು ಹೇಳುತ್ತಾರೆ ಎಂಬ ಕಾರಣಕ್ಕೆ ಈ ಮಕ್ಕಳು ಮನೆಯನ್ನು ಬಿಟ್ಟಿದ್ದರು. ಓದಲು ಇಷ್ಟವಿಲ್ಲ. ಆಟವಾಡುತ್ತಲೇ ಸಾಧನೆ ಮಾಡುತ್ತೇವೆ ಎಂದು ಈ ಮಕ್ಕಳು ಮನೆಯಿಂದ ಕಣ್ಮರೆಯಾಗಿದ್ದರು. ಈ ಮಕ್ಕಳು ಮೊದಲು ಬೆಳಗಾವಿಗೆ ತೆರಳಿ, ಬಳಿಕ ಮೈಸೂರಿಗೆ ಹೋಗಿದ್ದರು. ಅದಾದ ಬಳಿಕ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿ ದ್ದರು.
ನಾಲ್ವರು ಮಕ್ಕಳು ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅತ್ತಾವರ ಕೆಎಂಸಿ ಬಳಿ ಆಟೋವೇರಿದ್ದ ವೇಳೆ ವಿಳಾಸ ಹೇಳಲು ಮಕ್ಕಳು ಗೊಂದಲ ಕ್ಕೀಡಾಗಿದ್ದನ್ನು ಗಮನಿಸಿದ ಆಟೋ ಚಾಲಕ ಮಕ್ಕಳನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇಲ್ಲಿ ಮಕ್ಕಳು ಸೋಲದೇವನಹಳ್ಳಿ ಯವರು ಎಂಬ ವಿಚಾರ ಬೆಳಕಿಗೆ ಬಂದಿದೆ.
ನಾವೆಲ್ಲ ಬೆಸ್ಟ್ಫ್ರೆಂಡ್ಸ್. ಆದರೆ ಪೋಷಕರು ನಮ್ಮನ್ನು ದೂರ ಮಾಡಲು ಯತ್ನಿಸಿದ್ದರು. ಹೀಗಾಗಿ ನಾವು ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದೆವು ಎಂದು ಮಕ್ಕಳು ಹೇಳಿದ್ದಾರೆ.