ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೀರು ಸರಬರಾಜು ಯೋಜನೆಗೆ ಎಡಿಬಿ ನೆರವಿನ 792.42 ಕೋಟಿ ರೂಪಾಯಿ ವೆಚ್ಚದ ‘ಕ್ವಿಮಿಪ್ ಜಲಸಿರಿ’ ಯೋಜನೆಯನ್ನು ಗುರುವಾರ ಉದ್ಘಾಟಿಸಿದರು.
ಮಂಗಳೂರು ಮಾಹಾನಗರದ ಆರು ಲಕ್ಷ ಜನಸಂಖ್ಯೆ ಬಳಕೆಗೆ ಅಗತ್ಯವಾಗುವಂತೆ ಯೋಜನೆ ಸಿದ್ಧವಾಗುತ್ತಿದೆ. 8 ವರ್ಷಗಳ ಅವಧಿಗೆ ನಿರ್ವಹಣೆ ಹಾಗೂ ಕಾರ್ಯಾಚರಣೆ ವೆಚ್ಚ ₹ 204.75 ಕೋಟಿ ಆಗಿದ್ದು, ಮೆ. ಸುಯೇಜ್ ಪ್ರಾಜೆಕ್ಟ್ ಪ್ರೈ.ಲಿ ಹಾಗೂ ಡಿಆರ್ಎಸ್ ಇನ್ಫಾಟೆಕ್ ಪ್ರೈ.ಲಿ. ಕಂಪನಿಗಳು ₹ 587.67 ಕೋಟಿ ವೆಚ್ಚದಲ್ಲಿ ನಿರ್ಮಾಣದ ಹೊಣೆ ನಿರ್ವಹಿಸುತ್ತಿವೆ.
ಯೋಜನೆಯಲ್ಲಿ ಬಂಟ್ವಾಳ ತಾಲ್ಲೂಕಿನ ತುಂಬೆಯಲ್ಲಿ 81.7 ಎಂಎಲ್ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ಉನ್ನತೀಕರಣ, 23 ಮೇಲ್ಮಟ್ಟದ ಜಲಸಂಗ್ರಾಹಕ, 8 ಪಂಪಿಂಗ್ ಘಟಕಗಳು, 5 ನೆಲ ಹಂತದ ಸಂಗ್ರಹಗಾರ, 55 ಕಿ.ಮೀ. ಪಂಪಿಂಗ್ ಮುಖ್ಯ ಕೊಳವೆ ಅಳವಡಿಕೆ ಕಾಮಗಾರಿ, 1,500 ಕಿಮೀ ವಿತರಣಾ ಕೊಳವೆ, 86,300 ಗ್ರಾಹಕರ ಮಾಪಕ ಅಳವಡಿಸಲಾಗುತ್ತಿದೆ.
ನಗರ ವ್ಯಾಪ್ತಿಯನ್ನು 54 ವಲಯಗಳಾಗಿ ವಿಂಗಡಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಗ್ರಾಹಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.