ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರರ ಸ್ವಗ್ರಾಮ, ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ಪತಿ ಎದುರೇ ದಲಿತ ಮಹಿಳೆಯನ್ನ ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ, ವಿಕೃತ ಘಟನೆಯನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಘಟನೆ ನಡೆದು 2 ದಿನಗಳಾದರೂ ಪೊಲೀಸರು ಪ್ರಕರಣ ದಾಖಲಿಸಲು ವಿಳಂಬ ಮಾಡಿ ರುವುದು ಯಾಕೆ? ಘಟನೆಯಲ್ಲಿ ಸಂತ್ರಸ್ತೆಯ ಪತಿಯ ಮೇಲೂ ದುಷ್ಕ್ರರ್ಮಿಗಳು ಹಲ್ಲೆ ನಡೆಸಿದ್ದಾರೆ. ಸಂಪತ್, ಆದರ್ಶ ಹಾಗೂ ಇನ್ನಿಬ್ಬರು ಯುವಕರಿಬ್ಬರು ಬೈಕ್ ಮೇಲೆ ಬಂದು ದುಷ್ಕ್ರತ್ಯ ಎಸೆಗಿದ್ದಾರೆಂದು ಸಂತ್ರಸ್ತರೇ ಗುರುತಿಸಿರುವಾಗ ಇಲ್ಲಿವರೆಗೂ ಪೊಲೀಸರು ಬಂಧಿಸದಿರುವುದಕ್ಕೆ ಕಾರಣವೇನು?
ಸ್ವಗ್ರಾಮದಲ್ಲೇ ನಡೆದಿರುವ ಅಮಾನವೀಯ ಘಟನೆ ಇಲ್ಲಿವರೆಗೆ ಗೃಹ ಸಚಿವರ ಗಮನಕ್ಕೇ ಬಂದಿಲ್ಲವೇ? ಅಪಘಾತದಲ್ಲಿ ಗಲಾಟೆ ಯಾಗಿ ಯುವಕನ ಕೊಲೆ ಎರಡೇ ನಿಮಿಷಕ್ಕೆ ಮಾಹಿತಿ ಸಿಗುತ್ತೆ. ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ನಿಮ್ಮ “ಮಾಹಿತಿಯ ಮೂಲ” ಇನ್ನೂ ಮಾಹಿತಿಯೇ ನೀಡಿಲ್ಲವೇ? ಅಥವಾ ಸ್ಥಳೀಯ ದಲಿತ ಸಂಘರ್ಷ ಸಮಿತಿಯ ಮುಖಂಡರ ಆರೋಪದಂತೆ ಪ್ರಕರಣ ಮುಚ್ಚಿ ಹಾಕುವ ಯತ್ನವೇ?
ದುಷ್ಕ್ರರ್ಮಿಗಳ ಅಟ್ಟಹಾಸವನ್ನ ಮಟ್ಟ ಹಾಕಬೇಕಿದೆ. ಸಂತ್ರಸ್ತರ ಶೋಷಿತ ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೂಡಲೇ ಆರೋಪಿಗಳನ್ನ ಬಂಧಿಸಬೇಕು. ಸಂತ್ರಸ್ತೆ ಹಾಗೂ ಕುಟುಂಬ ಸ್ಥರಿಗೆ ರಕ್ಷಣೆ ನೀಡಬೇಕು. ಹಾಗೂ ಮಹಿಳಾ ಆಯೋಗ ಸುಮೋಟೋ ಕೇಸ್ ದಾಖಲಿಸಿಕೊಂಡು ಮಹಿಳೆ ರಕ್ಷಣೆಗೆ ಧಾವಿಸ ಬೇಕೆಂದು ಆಗ್ರಹಿಸುತ್ತೇನೆ.