ಬೆಂಗಳೂರು : ಎರಡು ಬಾರಿ ಖಾತೆ ಅದಲು-ಬದಲು ಮಾಡಿದ್ದ ಸಿಎಂ ಯಡಿಯೂರಪ್ಪ, ಮತ್ತೆ ಖಾತೆ ಅದಲು-ಬದಲು ಮಾಡಿದ್ದಾರೆ.
ಕೋವಿಡ್ ನಿಯಂತ್ರಣದ ಸಲುವಾಗಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು, ಸಚಿವ ಮಾಧುಸ್ವಾಮಿಗೆ ನೀಡಲಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ, ಸುಧಾಕರ್ ಅವರಿಗೆ ನೀಡಿದ್ದಾರೆ. ಜೊತೆಗೆ ಸಚಿವ ಆನಂದ್ ಸಿಂಗ್ ಅವರಿಗೆ ಮೂಲ ಸೌಕರ್ಯ ಖಾತೆಯನ್ನು ಹೆಚ್ಚುವರಿಯಾಗಿ ನೀಡಿದ್ದಾರೆ. ಸಚಿವ ಮಾಧುಸ್ವಾಮಿ ಅವರಿಗೆ ಪ್ರವಾಸೋದ್ಯಮ ಖಾತೆಯ ಜೊತೆಗೆ ಪರಿಸರ ಖಾತೆ ನೀಡಲಾಗಿದೆ.
ಸಚಿವ ಜೆಸಿ ಮಾಧುಸ್ವಾಮಿ ಅವರ ಬಳಿಯಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿ, ಮಾಧುಸ್ವಾಮಿಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿತ್ತು. ನಾನು ಗ್ರಾಮೀಣ ಭಾಗ ದಿಂದ ಬಂದವನು, ವೈದ್ಯಕೀಯ ಶಿಕ್ಷಣ ಖಾತೆಯಿಂದ ಜನರ ಕೆಲಸ ಏನು ಮಾಡಲಿ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದ್ದರು.
ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಒಬ್ಬರಲ್ಲೇ ಇರಲಿ ಎನ್ನುವ ಕಾರಣಕ್ಕಾಗಿ, ಸಚಿವ ಡಾ.ಕೆ.ಸುಧಾಕರ್ ಬಳಿಯಲ್ಲಿಯೇ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ ಅವರಿಗೆ ನೀಡಲಾಗಿದೆ.
ಆನಂದ್ ಸಿಂಗ್ ಅವರಿಗೆ ಸಿಎಂ ಬಳಿಯಲ್ಲಿದ್ದ ಮೂಲ ಸೌಕರ್ಯ ಖಾತೆ ಜೊತೆಗೆ ಸಚಿವ ಮಾಧುಸ್ವಾಮಿ ಬಳಿಯಲ್ಲಿದ್ದ ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ. ಸಚಿವ ಮಾಧುಸ್ವಾಮಿಯವರಿಗೆ ಪ್ರವಾಸೋದ್ಯಮ ಖಾತೆಯ ಜೊತೆಗೆ ಪರಿಸರ ಖಾತೆಯ ಹೊಣೆಗಾರಿಕೆ ನೀಡಲಾಗಿದೆ.