Thursday, 28th March 2024

ಮಾರುವೇಷದಲ್ಲಿ ಸಂಚಾರಿ ಪೊಲೀಸರ ಕಾರ್ಯಾಚರಣೆ: ಆಟೋ ಚಾಲಕರಿಗೆ ಬಿಸಿ

ಧಾರವಾಡ: ನಗರದ ಸಂಚಾರಿ ಪೊಲೀಸರ ಮಾರುವೇಷದ ಕಾರ್ಯಾಚರಣೆಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸಂಚಾರಿ ಪೊಲೀಸರು ಮಾರುವೇಷದಲ್ಲಿ ಕಾರ್ಯಾಚರಣೆ ಮಾಡಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

ನಗರದ ರೈಲ್ವೇ ನಿಲ್ದಾಣದಲ್ಲಿ ಸಾರ್ವಜನಿಕರಿಂದ ಆಟೋ ಚಾಲಕರು ಬಾಡಿಗೆ ದರಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದರು. ಈ ಕುರಿತಂತೆ ಸಾಕಷ್ಟು ಬಾರಿ ಸಾರ್ವಜನಿಕರಿಂದ ಸಂಚಾರಿ ಪೊಲೀಸರಿಗೆ ದೂರುಗಳು ಬಂದಿದ್ದವು.

ಇದೆಲ್ಲವನ್ನೂ ಅರಿತುಕೊಂಡ ಪೊಲೀಸರು ಮಾರುವೇಷದಲ್ಲಿ ರೈಲ್ವೇ ನಿಲ್ದಾಣದ ಒಳಗಡೆಯಿಂದ ಪ್ರಯಾಣಿಕರ ರೀತಿ ಬಂದು ಆಟೋವನ್ನು ಬಾಡಿಗೆಗೆ ಕೇಳಿದ್ದಾರೆ. ನಂತರ ನಿಗದಿತ ದರಕ್ಕಿಂತ ಅಧಿಕ ಹಣ ವಸೂಲಿ ಮಾಡುತ್ತಿದ್ದ 6-7 ಆಟೋಗಳನ್ನು ಸೀಜ್ ಮಾಡಿದ್ದಾರೆ. ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಧಾರವಾಡ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಪೊಲೀಸ್ ಆಯುಕ್ತ ಮತ್ತು ಧಾರವಾಡ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ಮಲ್ಲನಗೌಡ ನಾಯ್ಕರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಎಎಸ್‌ಐ ವಿರೇಶ ಬಳ್ಳಾರಿ ನೇತೃತ್ವದಲ್ಲಿನ ಟೀಂ ಮಾರುವೇಷ ಹಾಕಿಕೊಂಡು ಕಾರ್ಯಾಚರಣೆ ಮಾಡಿದ್ದಾರೆ.

ಮಾರುವೇಷದಲ್ಲಿ ಪೊಲೀಸ್‌ ಸಿಬ್ಬಂದಿಗಳಾದ ಶಂಕರಗೌಡ ಪಾಟೀಲ, ಶಿವಾನಂದ ಸುತಗಟ್ಟಿ, ಬಸವರಾಜ ಉಳ್ಳಿಗೇರಿ, ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಮಾರುವೇಷದ ಕಾರ್ಯಾಚರಣೆ ರಾಜ್ಯಕ್ಕೆ ಮಾದರಿಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

error: Content is protected !!