Tuesday, 16th April 2024

ವಿಪ ಚುನಾವಣೆ; ಸಿಪಿಐ, ಸಿಪಿಐಎಂ ಪಕ್ಷದಿಂದ ಬಸವರಾಜ ಗುರಿಕಾರಗೆ ಬೆಂಬಲ

ಹುಬ್ಬಳ್ಳಿ: ವಿಧಾನ ಪರಿಷತ್ ಪಶ್ಚಿಮ ಪದವೀಧರರ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿರುವ ಬಸವರಾಜ ಗುರಿಕಾರ ಅವರನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಹಾಗೂ ಭಾರತ ಕಮ್ಯೂನಿಸ್ಟ್‌ ಪಕ್ಷ ಬೆಂಬಲಿಸುತ್ತಿವೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಹೇಶ್ ಪತ್ತಾರ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಗುರಿಕಾರ ಅವರು ವಿಧಾನ ಪರಿಷತ್ ನಲ್ಲಿ ಪದವೀಧರರ ಸಮರ್ಥ ಪ್ರತಿನಿಧಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಗೆ ವಿವಿಧ ಕ್ಷೇತ್ರದಿಂದ ಆಯ್ಕೆಯಾದ ಸದಸ್ಯರು ಆ ಕ್ಷೇತ್ರದ ಬಗ್ಗೆ ಇರುವ ಆಳವಾದ ಅನುಭವದ ಆಧಾರದಲ್ಲಿ ಸಮಸ್ಯೆಗಳ ಕುರಿತು ಚರ್ಚಿಸುವುದರೊಂದಿಗೆ ಸುಭದ್ರ ಸಮಾಜ ನಿರ್ಮಾಣದ ದೃಷ್ಠಿಕೋನದಲ್ಲಿ ಕಾನೂನು ರೂಪಿಸುವ ಮಹತ್ವದ ಜವಾಬ್ದಾರಿ ಇದೆ ಎಂದರು.

ಬಸವರಾಜ ಗುರಿಕಾರ ಅವರು ನಾಲ್ಕು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸಂಘಟಕರಾಗಿ ಕೆಲಸ ಮಾಡಿದ್ದಾರೆ. ಸಾಕಷ್ಟು ಹೋರಾಟದ ಅನುಭವ ಹೊಂದಿದ್ದಾರೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ಬಸವರಾಜ ಗುರಿಕಾರ ಅವರನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ. ಅವರ ಗೆಲುವು ನಿಶ್ಚಿತ ಎಂದರು.

ಜಿಲ್ಲಾ ಸಿಪಿಐ ಮುಖಂಡ ದೇವಾನಂದ್ ಜಗಾಪುರ ಮಾತನಾಡಿ, ಪ್ರಜ್ಞಾವಂತ ಪದವೀಧರ ಮತದಾರರು ಬಸವರಾಜ ಗುರಿಕಾರ ಅವರನ್ನು ಬೆಂಬಲಿಸಿ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿ ಎಸ್ ಸೊಪ್ಪಿನ, ಬಸೀರ ಮುದೋಳ, ಅಮೃತ್ ಇಜಾರಿ ಇದ್ದರು.

Leave a Reply

Your email address will not be published. Required fields are marked *

error: Content is protected !!