Tuesday, 23rd April 2024

ಉಂಡೆ ಕೊಬ್ಬರಿ ಬೆಳೆಗಾರರ ನೆರವಿಗೆ ಬರಲು ಟೂಡಾ ಶಶಿಧರ್ ಆಗ್ರಹ

ತಿಪಟೂರು: ಉಂಡೆ ಕೊಬ್ಬರಿಯ ಬೆಲೆ ಕುಸಿಯುತ್ತಿರುವ ಸಂದರ್ಭದಲ್ಲಿ ಹಾಗೂ ಅವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನೆರವಿಗೆ ಬರುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ಆಗ್ರಹಿಸಿ ಇಲ್ಲಿನ ಕಾಂಗ್ರೆಸ್ ಮುಖಂಡ ಸಿ. ಬಿ. ಟೂಡಾ ಶಶಿಧರ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ತುಮಕೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಬೆಂಗಳೂರು, ಶಿವಮೊಗ್ಗ ಜಿಲ್ಲೆಯ ರೈತರು ತೆಂಗನ್ನು ಹೆಚ್ಚು ಬೆಳೆಯುತ್ತಾರೆ. ಇದರಲ್ಲಿ ತುಮಕೂರು ಜಿಲ್ಲೆಯ ರೈತರಿಗೆ ಸಂಪೂರ್ಣವಾಗಿ ತೆಂಗು ಆರ್ಥಿಕ ಬೆಳೆ ಹಾಗೂ ಅದೇ ಜೀವನಾಧಾರವಾಗಿದೆ. ಪ್ರಮುಖವಾಗಿ ತಿಪಟೂರು ರೈತರು ಬಲಿತ ತೆಂಗಿನ ಕಾಯಿಯಿಂದ ವಿಶ್ವದಲ್ಲೇ ಅತೀ ವಿಶಿಷ್ಟವಾದ ಉಂಡೆ ಕೊಬ್ಬರಿ ತಯಾರಿಸುತ್ತಾರೆ.  ಈ ರೀತಿ ತಯಾರಿಸಿದ  ಉಂಡೆ ಕೊಬ್ಬರಿಯನ್ನು ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಉಂಡೆ ಕೊಬ್ಬರಿಗೆ ಸಂಬಂಧಿಸಿದಂತೆ ತಿಪಟೂರಿನಲ್ಲಿ ಘೋಷಣೆಯಾದ ಟೆಂಡರ್ ಧಾರಣೆಯನ್ನೇ ಮೂಲಧಾರಣೆಯನ್ನಾಗಿ ರಾಜ್ಯಾದ್ಯಂತ ಪರಿಗಣಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಅಧಿಕ ಮಳೆಯಾಗಿ ಹಾಗೂ ಪ್ರಸ್ತುತ ಚಳಿಗಾಲ ಪ್ರಾರಂಭವಾಗಿರುವು ದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಿ ನೈಸರ್ಗಿಕವಾಗಿ 9 ತಿಂಗಳಲ್ಲಿ ತಯಾರಾಗುವ ಒಣ ಉಂಡೆ ಕೊಬ್ಬರಿಯು 14-15 ತಿಂಗಳಾದರೂ ತಯಾರಾಗದೆ ಸಾಕಷ್ಟು ಪ್ರಮಾಣದಲ್ಲಿ ತೇವಾಂಶದಿಂದ ಕೂಡಿರುತ್ತದೆ. ತೆಂಗಿನಕಾಯಿಯನ್ನು ಕೊಬ್ಬರಿಯನ್ನಾಗಿಸಲು ಇನ್ನಷ್ಟು ದಿನ ಶೇಖರಣೆ ಮುಂದುವರಿಸಿದರೆ ಪ್ರಸ್ತುತ ಕಟಾವು ಮಾಡಿದ ತೆಂಗಿನಕಾಯಿಯನ್ನು ಶೇಖರಿಸಲು ರೈತರ ಬಳಿ ಸಾಕಷ್ಟು ಅಟ್ಟಗಳ ಲಭ್ಯತೆ ಇಲ್ಲ. ಇದರಿಂದಾಗಿ ರೈತರು ಈ ಹಿಂದೆ ಶೇಖರಿಸಿಟ್ಟ ಕೊಬ್ಬರಿಯ ತೇವಾಂಶ  ಹೆಚ್ಚಿದ್ದರೂ ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಅನಿವಾರ್ಯತೆ ಉಂಟಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.
2021 ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆ ಉಂಡೆ ಕೊಬ್ಬರಿಗೆ  ರೂ.16,730 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಶಿಫಾರಸನ್ನು ಗಣನೆಗೆ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ  ರೂ.11,000 ನಿಗದಿಪಡಿಸಿದೆ. ಈ ನಿಗದಿತ ಅವೈಜ್ಞಾನಿಕ  ಬೆಲೆಗೆ ರೈತರ ಹಿತದೃಷ್ಟಿಯಿಂದ ಆಕ್ಷೇಪಿಸಬೇಕಾದ  ರಾಜ್ಯ ಸರ್ಕಾರ ಆ ಕೆಲಸವನ್ನು ಮಾಡಿಲ್ಲ. ಇದು ರಾಜ್ಯ ಸರ್ಕಾರದ ರೈತ ವಿರೋಧಿ ನಡೆಯಾಗಿದೆ ಎಂದು ಟೂಡಾ ಶಶಿಧರ್ ದೂರಿದ್ದಾರೆ.
ಉಂಡೆ ಕೊಬ್ಬರಿ ಈವರೆಗೂ ಮಾರುಕಟ್ಟೆಯಲ್ಲಿ ರೂ.17 ರಿಂದ 18 ಸಾವಿರ ಬೆಲೆಗೆ ಮಾರಾಟವಾಗುತ್ತಿತ್ತು. ಆದರೆ ಇದೀಗ ಮಾರು ಕಟ್ಟೆಯಲ್ಲಿ ಕೊಬ್ಬರಿ ರೂ.11,500 ಮಾರಾಟವಾಗುತ್ತಿದ್ದು, ಇದರಿಂದ ರೈತರಿಗೆ ನಷ್ಟವಾಗುತ್ತಿದೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅತಿವೃಷ್ಟಿಯಂತಹ ನೈಸರ್ಗಿಕ ವಿಕೋಪದಿಂದ ಗುಣಮಟ್ಟ ಕಳೆದುಕೊಂಡಿರುವ ಉಂಡೆ ಕೊಬ್ಬರಿಗೆ ಸರ್ಕಾರದಿಂದ ಪ್ರತಿ ಕ್ವಿಂಟಾಲ್ಗೆ  ರೂ.3 ಸಾವಿರ ಪರಿಹಾರ ಮೊತ್ತವನ್ನು ಸಹಾಯಧನ ರೂಪದಲ್ಲಿ ಕೊಡಿಸಬೇಕು. ಇದರಿಂದ ಬೆಲೆ ಸಿಗದೆ ಕಂಗಾಲಾಗಿರುವ ರೈತರಿಗೆ ಕೊಂಚ ಮಟ್ಟಿಗಾದರೂ ಆಧಾರ ಸಿಗಲಿದೆ ಎಂದು ಟೂಡಾ ಶಶಿಧರ್ ಅವರು ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದಾರೆ.
2013-14 ರಲ್ಲಿ ಕೊಬ್ಬರಿ ಬೆಲೆ  ಕುಸಿತ ಕಂಡಾಗ ಅಂದಿನ ತಮ್ಮ ನೇತೃತ್ವದ  ಸರ್ಕಾರ ಕೊಬ್ಬರಿ ಬೆಳೆಗಾರರ ಬೆನ್ನಿಗೆ ನಿಂತು  ಒಂದು ಸಾವಿರ ರೂ. ಸಹಾಯಧನ ಘೋಷಿಸಿತ್ತು.
ಕೇಂದ್ರ ಸರ್ಕಾರ ಹೊಸ ಮಾರುಕಟ್ಟೆ ಕಾಯ್ದೆ ಜಾರಿಗೆ ತಂದ ನಂತರ ಮಾರುಕಟ್ಟೆ ಪ್ರಾಂಗಣದಲ್ಲಿ ಉತ್ಪನ್ನ  ಖರೀದಿಸುವ ವ್ಯಾಪಾರಸ್ಥರ ಸಂಖ್ಯೆ ತೀರ ಕ್ಷೀಣಿಸಿ ಮಾರುಕಟ್ಟೆಗೆ ಆವಕ ಕಡಿಮೆಯಾಗಿ ಮಾರುಕಟ್ಟೆಗಳು ನಶಿಸುತ್ತಿವೆ. ದೆಹಲಿಯ ರೈತ ಚಳವಳಿಯ ನಂತರ ಕೇಂದ್ರ ಸರ್ಕಾರ ಹೊಸ ಮಾರುಕಟ್ಟೆ ಕಾಯ್ದೆಯನ್ನು ಹಿಂಪಡೆದರೂ, ರಾಜ್ಯದ ಈಗಿನ ರೈತ ವಿರೋಧಿ ಸರ್ಕಾರ ಹಳೆ ಕಾಯ್ದೆಯನ್ನು ಮತ್ತೆ ಜಾರಿಗೆ ತರುವಲ್ಲಿ ವಿಫಲವಾಗಿದೆ.   ಹೀಗಾಗಿ ರಾಜ್ಯದ ಸುಮಾರು 18 ಜಿಲ್ಲೆಗಳ ತೆಂಗು ಹಾಗೂ ಕೊಬ್ಬರಿ ಬೆಳೆಗಾರರ ಪರವಾಗಿ ಕಾಂಗ್ರೆಸ್ ಪಕ್ಷ ಬೆನ್ನೆಲುಬಾಗಿ ನಿಲ್ಲಬೇಕೆಂದು ಟೂಡಾ ಶಶಿಧರ್ ಅವರು ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಡಿದ್ದಾರೆ.

Read E-Paper click here

error: Content is protected !!