ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Shivraj Singh Chouhan: ಏರ್‌ಇಂಡಿಯಾ ಜನರಿಗೆ ಮೋಸ ಮಾಡುತ್ತಿದೆ- ವಿಮಾನದಲ್ಲಿ ಮುರಿದ ಸೀಟು ನೋಡಿ ಕೇಂದ್ರ ಸಚಿವ ಫುಲ್‌ ಗರಂ!

ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಏರ್ ಇಂಡಿಯಾ ವಿಮಾನದಲ್ಲಿ ಮುರಿದ ಸೀಟು ಕೊಟ್ಟ ಘಟನೆ ನಡೆದಿದೆ. ಈ ಬಗ್ಗೆ ಸಚಿವರು ಅಸಮಧಾನ ವ್ಯಕ್ತಪಡಿಸಿದ್ದು, ಏರ್‌ ಇಂಡಿಯಾ ಜನರಿಗೆ ಮೋಸ ಮಾಡುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಮುರಿದ ಸೀಟು ಕೊಟ್ಟ ಏರ್ ಇಂಡಿಯಾಗೆ ಕೇಂದ್ರ ಸಚಿವರಿಂದ ಫುಲ್‌ ಕ್ಲಾಸ್‌!

ಶಿವರಾಜ್‌ ಸಿಂಗ್‌ ಚೌಹಾಣ್‌

Profile Vishakha Bhat Feb 22, 2025 3:41 PM

ನವದೆಹಲಿ: ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ (Shivraj Singh Chouhan) ಅವರು ಶನಿವಾರ ಏರ್ ಇಂಡಿಯಾ ವಿಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏರ್‌ ಇಂಡಿಯಾ (Air India) ವಿಮಾನ ಸಂಸ್ಥೆ ಜನರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ. ವಿಮಾನದಲ್ಲಿನ ಸೀಟುಗಳು ಸರಿ ಇಲ್ಲದಿರುವುದರ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಭೋಪಾಲ್‌ನಿಂದ ದೆಹಲಿಗೆ ಬರುವಾಗ ಮುರಿದ ಸೀಟನ್ನು ನೀಡಿದ್ದಕ್ಕೆ ಕೃಷಿ ಸಚಿವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸದ್ಯ ಸಚಿವರ ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ ಅವರು ಇಂದು ನಾನು ಭೋಪಾಲ್‌ನಿಂದ ದೆಹಲಿಗೆ ಬರಬೇಕಾಯಿತು ಅದಕ್ಕೆ ಏರ್ ಇಂಡಿಯಾ ವಿಮಾನ ಸಂಖ್ಯೆ AI436 ರಲ್ಲಿ ಟಿಕೆಟ್ ಬುಕ್ ಮಾಡಿದ್ದೆ, ನನಗೆ ಸೀಟ್ ಸಂಖ್ಯೆ 8C ನೀಡಲಾಯಿತು. ನಾನು ಹೋಗಿ ಸೀಟಿನಲ್ಲಿ ಕುಳಿತೆ, ಸೀಟು ಮುರಿದು ಬೀಳುವ ಹಂತದಲ್ಲಿತ್ತು. ಆ ಸೀಟಿನಲ್ಲಿ ಕುಳಿತು ಕೊಳ್ಳಲು ಸಾಧ್ಯವಾಗಿಲ್ಲ. ನಾನು ವಿಮಾನಯಾನ ಸಿಬ್ಬಂದಿಯನ್ನು ಸೀಟು ಸರಿ ಇಲ್ಲದಿದ್ದರೆ ಅದನ್ನು ಏಕೆ ಹಂಚಿಕೆ ಮಾಡಲಾಯಿತು ಎಂದು ಕೇಳಿದೆ. ಆಗ ಅವರು, ಈ ಸೀಟು ಚೆನ್ನಾಗಿಲ್ಲ ಮತ್ತು ಇದರ ಟಿಕೆಟ್ ಮಾರಾಟ ಮಾಡಬಾರದು ಎಂದು ಆಡಳಿತ ಮಂಡಳಿಗೆ ಮೊದಲೇ ತಿಳಿಸಲಾಗಿತ್ತು ಎಂದು ಹೇಳಿದರು. ಅಂತಹ ಒಂದೇ ಒಂದು ಆಸನವಲ್ಲ, ಇನ್ನೂ ಹಲವು ಆಸನಗಳು ಆ ವಿಮಾನದಲ್ಲಿದ್ದವು ಎಂದು ಚೌಹಾಣ್ ತಿಳಿಸಿದ್ದಾರೆ.

ನನ್ನ ಸಹ ಪ್ರಯಾಣಿಕರು ಆಸನವನ್ನು ಬದಲಾಯಿಸಿ ಉತ್ತಮ ಆಸನದಲ್ಲಿ ಕುಳಿತುಕೊಳ್ಳಲು ಒತ್ತಾಯಿಸಿದರು. ಆದರೆ ನನಗಾಗಿ ಇನ್ನೊಬ್ಬರಿಗೆ ಏಕೆ ಕಷ್ಟ ಕೊಡಬೇಕೆಂದು ಎಂದು ಅದೇ ಸೀಟ್‌ನಲ್ಲಿ ಕುಳಿತು ಪ್ರಯಾಣ ಬೆಳೆಸಿದೆ. ಟಾಟಾ ಕಂಪನಿಯು ಏರ್ ಇಂಡಿಯಾದ ಆಡಳಿತವನ್ನು ವಹಿಸಿಕೊಂಡ ನಂತರ ಅದರ ಸೇವೆ ಸುಧಾರಿಸುತ್ತಿತ್ತು ಎಂಬುದು ನನ್ನ ಅನಿಸಿಕೆಯಾಗಿತ್ತು. ಆದರೆ ಅದು ನನ್ನ ತಪ್ಪು ಕಲ್ಪನೆ ಎಂದು ಈಗ ಗೊತ್ತಾಯಿತು ಎಂದು ಸಚಿವರು ಬರೆದುಕೊಂಡಿದ್ದಾರೆ.



ಈ ಸುದ್ದಿಯನ್ನೂ ಓದಿ: Job Guide: ಏರ್‌ ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್‌ ಲಿಮಿಟೆಡ್‌ನಲ್ಲಿದೆ 145 ಹುದ್ದೆ; ನೇರ ಸಂದರ್ಶನಕ್ಕೆ ಹಾಜರಾಗಿ

ಸದ್ಯ ಸಚಿವರಿಂದ ಈ ಪೋಸ್ಟ್‌ ಬಂದ ನಂತರ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ. ನಮ್ಮಿಂದ ಆದ ಅನಾನೂಕೂಲಕ್ಕೆ ಕ್ಷಮೆ ಕೇಳುತ್ತೇವೆ ಎಂದು ಸಂಸ್ಥೆ ತಿಳಿಸಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಈ ವಿಷಯವನ್ನು ನಮ್ಮ ಗಮನಕ್ಕೆ ತಂದಿರುವುದಕ್ಕಾಗಿ ನಿಮಗೆ ಕೃತ್ಞತೆಗಳು ಎಂದು ಏರ್ ಇಂಡಿಯಾ ತಿಳಿಸಿದೆ.