ಬೆಂಗಳೂರು: ಡಿಯಾಗೋ ಕಂಪನಿಯು ಐಪಿಎಲ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಫ್ರಾಂಚೈಸಿಯನ್ನು ಮಾರಾಟ ಮಾಡಲು(RCB Sale) ನಿರ್ಧರಿಸಿದೆ. ಜೆರೋದಾ ಸಂಸ್ಥೆಯ ಸಹ ಸ್ಥಾಪಕ ನಿಖಿಲ್ ಕಾಮತ್ ಹಾಗೂ ಮಣಿಪಾಲ್ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್ (ಎಂಇಎಂಜಿ) ಮುಖ್ಯಸ್ಥ ರಂಜನ್ ಪೈ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಆರ್ಸಿಬಿ ಖರೀದಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲೇ ಇದೀಗ ಕೆಜಿಎಫ್, ಕಾಂತಾರ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್(Hombale Films) ಆರ್ಸಿಬಿ ಖರೀದಿಸಲು ಮುಂದಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಲಾರಂಭಿಸಿದೆ.
ಈಗಾಗಲೇ ಆರ್ಸಿಬಿ ಜೊತೆ ಡಿಜಿಟಲ್ ಪಾರ್ಟ್ನರ್ ಆಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಗುರುತಿಸಿಕೊಂಡಿದೆ. ಕಳೆದ 3 ವರ್ಷಗಳಿಂದ ಆರ್ಸಿಬಿ ತಂಡದ ವಿವಿಧ ವೀಡಿಯೋಗಳನ್ನು ಹೊಂಬಾಳೆ ಚಿತ್ರೀಕರಿಸಿ ಪ್ರಚಾರ ಮಾಡುತ್ತಿದೆ. ತಂಡದ ಆಟಗಾರರಿಗೆ 'ಕೆಜಿಎಫ್- 2' ಚಿತ್ರವನ್ನು ತೋರಿಸಿತ್ತು. ಆರ್ಸಿಬಿ(RCB) ಫ್ರಾಂಚೈಸಿ ಕೊಂಡುಕೊಳ್ಳಲು ಹೊಂಬಾಳೆ ಗ್ರೂಪ್ ಮುಂದಾಗಿದೆ ಎನ್ನುವ ವಿಚಾರದ ಬಗ್ಗೆ ಚಿತ್ರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಪೋಸ್ಟ್ ಮಾಡಿದ್ದಾರೆ.
"ಹೊಂಬಾಳೆ ಫಿಲ್ಮ್ಸ್ ಆರ್ಸಿಬಿ ಫ್ರಾಂಚೈಸಿಯನ್ನು ಕೊಂಡುಕೊಳ್ಳಬಹುದು ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡ್ತಿದೆ. ಇದು ನಿಜವಾದರೆ, ಎಲ್ಲಾ ಆರ್ಸಿಬಿ ಅಭಿಮಾನಿಗಳಿಗೆ ಇದು ರೋಮಾಂಚಕಾರಿ ಸುದ್ದಿಯಾಗಲಿದೆ. ಹೊಂಬಾಳೆ ಫಿಲ್ಮ್ಸ್ ಕನ್ನಡ ಸಿನಿಮಾ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟಲ್ಲಿ ಪ್ರೇಕ್ಷಕರಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕನ್ನಡದ ಹೊಂಬಾಳೆ ಆರ್ಸಿಬಿಯನ್ನು ಸ್ವಂತ ಮಾಡಿಕೊಂಡರೆ ಪ್ರತಿಯೊಬ್ಬ ಅಭಿಮಾನಿಗೂ ನಿಜವಾಗಿಯೂ ವಿಶೇಷವಾಗಿರುತ್ತದೆ. ಕನ್ನಡಿಗರಿಂದ ಕನ್ನಡಿಗಾಗಿ ಕನ್ನಡಿಗರಿಗೋಸ್ಕರ.. ಇದು ನಿಜವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಸಂತೋಷ್ ಆನಂದ್ ರಾಮ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ Rcb Sale: ಆರ್ಸಿಬಿ ಖರೀದಿ ರೇಸ್ನಲ್ಲಿ ನಿಖಿಲ್ ಕಾಮತ್, ರಂಜನ್ ಪೈ!
ಆರ್ಸಿಬಿಯನ್ನು ಬರೋಬ್ಬರಿ 2 ಬಿಲಿಯನ್ ಡಾಲರ್(ಅಂದಾಜು 17700 ಕೋಟಿ ರು.ಗೆ) ಗೆ ಮಾರಾಟ ಮಾಡಲು ಡಿಯಾಜಿಯೋ ಮುಂದಾಗಿದೆ. ಫೋರ್ಬ್ಸ್ ವರದಿ ಪ್ರಕಾರ, ಪೂನಾವಾಲಾ ಮತ್ತು ಕುಟುಂಬದ ನಿವ್ವಳ ಮೌಲ್ಯ 1.7 ಲಕ್ಷ ಕೋಟಿ ಇದೆ. ಇನ್ನು ರಂಜನ್ ಪೈ 24000 ಕೋಟಿ, 22000 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ. ಐಪಿಎಲ್ ಫ್ರಾಂಚೈಸಿಗಳ ಪೈಕಿ ಆರ್ಸಿಬಿಯು ಅತಿ ಹೆಚ್ಚು ಬ್ರಾಂಡ್ ಮೌಲ್ಯವನ್ನು ಹೊಂದಿದ್ದು, ಇದರ ಮೌಲ್ಯ 2300 ಕೋಟಿ ರು. ಇದೆ ವರದಿಯಾಗಿದೆ.
ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನಿವೃತ್ತಿ ಅಂಚಿನಲ್ಲಿದ್ದಾರೆ. ಇನ್ನೊಂದೆಡೆ ಇಷ್ಟು ವರ್ಷ ಆರ್ಸಿಬಿ ಕಪ್ ಗೆದ್ದಿಲ್ಲ ಎನ್ನುವ ಕಾರಣಕ್ಕೆ ಭಾರೀ ಕ್ರೇಜ್ ಇತ್ತು. ಈಗ ಕಪ್ ಗೆದ್ದಾಯಿತು. ಹೀಗಾಗಿ ಕ್ರೇಜ್ ಕಡಿಮೆಯಾಗಲಿದೆ ಎನ್ನುವುದು ಕೆಲವರ ವಾದ. ಇನ್ನು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದ ಕಾಲ್ತುಳಿತ ಪ್ರಕರಣದಿಂದಾಗಿ ತಂಡಕ್ಕೆ ಬೆಂಗಳೂರಿನಲ್ಲಿ ಕ್ರೀಡಾಂಗಣ ಸಿಗುವ ಬಗ್ಗೆಯೂ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ.