ಚಿಕ್ಕಬಳ್ಳಾಪುರ: ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆಯನ್ನು ನೀಡುವ ಉದ್ದೇಶದಿಂದ ವಾರದಲ್ಲಿ ಒಂದು ದಿನ ಲಸಿಕಾ ಉತ್ಸವ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ನಾಡಕಛೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ, ಲಸಿಕಾ ಉತ್ಸವದಂದು 15ರಿಂದ 20 ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಪ್ರತಿದಿನ ಐದು ಲಕ್ಷ ಲಸಿಕೆ ನೀಡುವ ಗುರಿ ಹಾಕಿಕೊಳ್ಳುವ ಮೂಲಕ ತಿಂಗಳಿಗೆ ಒಂದೂವರೆ ಕೋಟಿ ಕೋವಿಡ್ ಲಸಿಕೆ ನೀಡುವ ಉದ್ದೇಶವಿದೆ ಎಂದರು.
ಬೆಂಗಳೂರಿನ ಕೊಳಗೇರಿ ನಿವಾಸಿಗಳು, ಗುಡಿಸಲಿನಲ್ಲಿ ಇರುವವರಿಗೆ ಆಂದೋಲನ ರೀತಿಯಲ್ಲಿ ಲಸಿಕೆ ನೀಡಲಾಗು ವುದು. ಬೆಂಗಳೂರಿನಲ್ಲಿ ಒಂದು ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇನ್ನೆರಡು ತಿಂಗಳಲ್ಲಿ ಬೆಂಗಳೂರು ಎರಡು ಡೋಸ್ ಲಸಿಕೆ ಪಡೆದ ಮೊದಲ ಮಹಾನಗರವಾಗಲಿದೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆ ಕುರಿತಂತೆ ಸ್ಪಷ್ಟ ಚಿತ್ರಣ ಕೆಲವೇ ದಿನಗಳಲ್ಲಿ ಗೋಚರವಾಗಲಿದೆ. ರಾಮನಗರ, ಚಿಕ್ಕಬಳ್ಳಾ ಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲಾಗುವುದು.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿರುವುದು ದುರದೃಷ್ಟಕರ. ಇಂಥ ಕೆಟ್ಟ ಘಟನೆಗಳು ಪುನರಾ ವರ್ತನೆಯಾಗಬಾರದು. ಇದಕ್ಕಾಗಿ ಏನು ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಸರ್ಕಾರ ಗಟ್ಟಿಯಾದ ತೀರ್ಮಾನ ಕೈಗೊಳ್ಳಲಿದೆ ಎಂದರು.