Thursday, 28th March 2024

ಸಿಂಹಗಳಿಗೆ ಮತ್ತೊಂದು ಅಭಯಾರಣ್ಯ ಅವಶ್ಯಕ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಲಯನ್ಸ್ ಆಫ್ ಗಿರ್ ಸೆಂಚುರಿ ಪ್ರಾಣಿಶಾಸಜ್ಞೆ ಪ್ರೊ.ಶಕುಂತಲಾ ಶ್ರೀಧರ್ ಅಭಿಮತ

ಬೆಂಗಳೂರು: ಗುಜರಾತ್‌ನ ಗಿರ್ ಅಭಯಾರಣ್ಯ ಹೊರತುಪಡಿಸಿ, ಇನ್ನೆಲ್ಲೂ ಸಿಂಹಗಳನ್ನು ಕಾಣಲು ಸಾಧ್ಯವಿಲ್ಲ. ಒಂದೇ ಜಾಗ
ದಲ್ಲಿ ಸಿಂಹಗಳು ಇರುವುದರಿಂದ ಸಾಂಕ್ರಾಮಿಕ ರೋಗ ಬಂದರೆ ಸಿಂಹಗಳ ಸಂತತಿಯೂ ನಾಶವಾಗುವ ಭೀತಿಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಅದ್ದರಿಂದ ಏಷ್ಯಾಟಿಕ್ ಸಿಂಹಗಳಿಗೆ ಮತ್ತೊಂದು ಅಭಯಾರಣ್ಯ ಅವಶ್ಯಕ ಎಂದು ಪ್ರಾಣಿ ಶಾಸ್ತ್ರಜ್ಞೆ ಪ್ರೊ.ಶಕುಂತಲಾ ಶ್ರೀಧರ್ ಹೇಳಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಲಯನ್ಸ್ ಆಫ್ ಗಿರ್ ಸೆಂಚುರಿ’ ಕಾರ್ಯಕ್ರಮದಲ್ಲಿ ಮಾತನಾಡಿ, ಗುಜರಾತ್ ಸರಕಾರ ಮತ್ತು ಸಾರ್ವಜನಿಕರು ಏಷ್ಯಾಟಿಕ್ ಸಿಂಹ ನಮ್ಮ ರಾಜ್ಯದ ಪ್ರಾಣಿ. ಹೀಗಾಗಿ ಸಿಂಹಗಳನ್ನು ಬೇರೆಡೆ ಪೋಷಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಗುಜರಾತ್ ಹೊರತುಪಡಿಸಿದರೆ ಸಿಂಹಗಳು ವಾಸ ಮಾಡಲು ಪ್ರಾಶಸ್ತ್ಯವಾದ ಸ್ಥಳ ಮಧ್ಯಪ್ರದೇಶ. ಕೆಲವು ಸಂಖ್ಯೆಯ ಸಿಂಹಗಳನ್ನು ಅಲ್ಲಿಗೆ ವರ್ಗಾಯಿಸಲು ಪ್ರಯತ್ನ ನಡೆದಿತ್ತು. ಆದರೆ, ಗುಜರಾತ್ ಸರಕಾರ ಪರಿಗಣನೆ ಮಾಡದಿರುವುದು ನೋವಿನ ಸಂಗತಿ ಎಂದರು.

ಪ್ರಸ್ತುತ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ೭೦೦ ಸಿಂಹಗಳಿವೆ. ಒಂದು ಕಾಲದಲ್ಲಿ ಸಿಂಹಗಳ ಬೇಟೆಯಿಂದ ಅದರ ಸಂಖ್ಯೆ ಕೇವಲ ೩೦ಕ್ಕೆ ಇಳಿದಿತ್ತು. ಅದರ ಅವನತಿ ಗಮನಿಸಿದ ಲಾರ್ಡ್ ಕರ್ಜನ್ ಸಿಂಹಗಳನ್ನು ಬೇಟೆಯಾಡದಂತೆ ಮೊಟ್ಟ ಮೊದಲ ಬಾರಿಗೆ ಕಾನೂನು ತಂದರು. ಆದರೂ ಗಿರ್ ಸಮೀಪ ರೆಸಾರ್ಟ್‌ಗಳು, ಗ್ರಾಮಸ್ಥರು ಎಳೆದ ವಿದ್ಯುತ್ ತಂತಿ, ಬಾವಿಗಳು ಬಂದಿರುವು ದರಿಂದ ಸಿಂಹಗಳಿಗೆ ತೊಂದರೆ ಯಾಗುವುದರ ಜತೆಗೆ ಅವು ಸಾವಿಗೀಡಾಗುತ್ತಿವೆ.

ಗಿರ್ ಅರಣ್ಯದ ೨೬೦ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ವಾಸಿಸದೆ ಕೇವಲ ಸಿಂಹಗಳಿಗೆ ಮಾತ್ರ ಮೀಸಲಿಡಲಾಗಿದೆ. ಉಳಿದ
೧೩ಸಾವಿರ ಚದರ ಕಿ.ಮೀ ಉದ್ಯಾನವನದಲ್ಲಿ ಸಿಂಹ ಹಾಗು ಮನುಷ್ಯರು ಸಹಬಾಳ್ವೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

೧೯೭೦ಕ್ಕೆ ಮುನ್ನ ಸಿಂಹಗಳ ಮುಖ್ಯ ಆಹಾರ ಜಿಂಕೆ, ಕಡವೆ, ಕೃಷ್ಣ ಮೃಗ ಮತ್ತು ಮುಳ್ಳು ಹಂದಿ. ಇತ್ತೀಚೆಗೆ ಇವುಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಜಾನವಾರುಗಳನ್ನು ಕೊಂದು ತಿನ್ನುತ್ತಿವೆ. ಪ್ರಸ್ತುತ ವರ್ಷದಲ್ಲಿ ೩ರಿಂದ ೪ ಸಾವಿರ ಜಾನುವಾರು ಸಿಂಹ ಗಳಿಗೆ ಬಲಿಯಾಗಿವೆ. ಈ ಸಿಂಹಗಳ ರಕ್ಷಣೆಗಾಗಿ ಗುಜರಾತ್ ಸರಕಾರದ ಅರಣ್ಯ ಇಲಾಖೆಯು ೮೦೦ ಅರಣ್ಯ ಸಿಬ್ಬಂದಿ ಮತ್ತು ೧೭೫ ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ.

ಅದರಲ್ಲೂ ಹೆಚ್ಚಾಗಿ ಸ್ತ್ರೀ ಅರಣ್ಯ ಸಿಬ್ಬಂದಿಯನ್ನು ನೇಮಿಸಿದೆ. ಇದರ ಜತೆಗೆ ಸಿಂಹಗಳ ಆಹಾರವಾದ ಪ್ರಾಣಿಗಳ ಸಂಖ್ಯೆ ಹೆಚ್ಚಿಸಿ, ಜಾನುವಾರುಗಳು ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದರು.

ಬೆಕ್ಕಿನ ಸಂತತಿಗೆ ಸೇರಿದ ಪ್ರಾಣಿ ಸಿಂಹ

ಸಿಂಹ, ಫೆಲಿಡೆ ಎಂಬ ಬೆಕ್ಕಿನ ಸಂತತಿಗೆ ಸೇರಿದ ಪ್ರಾಣಿ. ಅದೊಂದು ಶಕ್ತಿಯುತ ಬೆಕ್ಕು. ಹುಲಿಯ ನಂತರದ ದೊಡ್ಡ ಮಾಂಸಾ ಹಾರಿ ಪ್ರಾಣಿ ಸಿಂಹ. ಅದೊಂದು ವಿಸ್ಮಯಕಾರಿ ಪ್ರಾಣಿ. ವಿಶೇಷವಾಗಿ ಎರಡು ರೀತಿಯ ಸಿಂಹದ ಸಂತತಿ ಇದೆ. ಪ್ಯಾಂತೆರ ಲಿಯೋ ಲಿಯೋ ಮತ್ತು ಆಫ್ರಿಕನ್ ಸಿಂಹ ಪ್ಯಾಂತರ ಲಿಯೋ ಮೆಲಾನೋಚೈತ. ಬಂಡೆಗಳು, ಮಣ್ಣು, ಕೊಳ, ತೊರೆ, ನದಿಗಳಂತಹ ಜಲ ಮೂಲದ ಪರಿಸರದಲ್ಲಿ ಹೆಚ್ಚು ವಾಸ ಮಾಡುತ್ತವೆ. ಗಂಡು ೬.೮ ಅಡಿ ಎತ್ತರ ಮತ್ತು ೨೧೭ ಕೆ.ಜಿ. ತೂಕವಿದ್ದರೆ ಹೆಣ್ಣು ಇವೆರಡ ರಲ್ಲು ಕೊಂಚ ಕಡಿಮೆ ಶ್ರೇಣಿ ಹೊಂದಿರುತ್ತದೆ. ಅವುಗಳ ಸ್ನಾಯು ಶಕ್ತಿಯುತ. ಅದರ ಹಿಂಗಾಲು ಹೆಚ್ಚು ಬಲಿಷ್ಠವಾಗಿದ್ದು, ೩೬ಅಡಿ ಎತ್ತರಕ್ಕೆ ನೆಗೆಯಲು ಸಹಾಯ ಮಾಡುತ್ತದೆ. ಅವುಗಳ ಘರ್ಜನೆಯ ಶಬ್ಧ ೧೧೪ ಡೆಸಿಬಲ್‌ವರೆಗೆ ತಲುಪುತ್ತದೆ ಎಂದು ಪ್ರಾಣಿಶಾಸಜ್ಞೆ ಪ್ರೊ.ಶಕುಂತಲಾ ಶ್ರೀಧರ್ ಹೇಳಿದರು.

*

ಸಿಂಹಗಳ ಉಳಿವಿಗಾಗ ಗುಜರಾತ್ ಸರಕಾರ ಹೆಚ್ಚು ಒತ್ತು ನೀಡಿದೆ. ಆದರೆ, ಅವುಗಳ ವಾಸಸ್ಥಾನ ವಿಸ್ತರಣೆ ಅನಿವಾರ್ಯವಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬೇಕಾದ ಸಹಕಾರವನ್ನು ಅಲ್ಲಿನ ಸರಕಾರ ಹಾಗೂ ಸಾರ್ವಜನಿಕರು ನೀಡಬೇಕು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಕೂಡ ಗಮನಹರಿಸಬೇಕು.

-ಪ್ರೊ.ಶಕುಂತಲಾ ಶ್ರೀಧರ್ ಪ್ರಾಣಿಶಾಸ್ತ್ರಸಜ್ಞೆ

*

ಮುಖ್ಯಾಂಶಗಳು

ಕಾಡಿನಲ್ಲಿರುವ ದನಗಾಹಿಗಳಾದ ಮಾಲ್ದಾರಿ ಎಂಬ ಬುಡಕಟ್ಟು ಜನಾಂಗ ಸಿಂಹದ ಉಳಿವಿಗಿಗೆ ಶ್ರಮಿಸುತ್ತಿದೆ.

ಸಿಂಹಗಳ ಸಾವಿಗೆ ಕೇವಲ ಮುಳ್ಳು ಹಂದಿ ಮಾತ್ರ ಕಾರಣ.

ಸಿಂಹ ಬಹುಪತ್ನಿತ್ವ ಅನುಸರಿಸುತ್ತವೆ. ಒಂದು ಅಥವಾ ಎರಡು ಗಂಡಿನೊಂದಿಗೆ ಸಂಗಾತಿ ಆಗುತ್ತದೆ.

ಸಿಂಹದ ಒಂದು ಗುಂಪಿನಲ್ಲಿ ಸರಾಸರಿ ೪ರಿಂದ ೩೭ ಸಿಂಹಗಳಿರುತ್ತವೆ. ಸಾಮಾನ್ಯವಾಗಿ ೧೫ ಸಿಂಹಗಳು ಇರುತ್ತವೆ.

ಸಿಂಹ ೮ರಿಂದ ಹತ್ತು ವರ್ಷ ಕಾಡಿನಲ್ಲಿ ಬದುಕಿದರೆ, ಮೃಗಾಲಯಗಳಲ್ಲಿ ೨೫ವರ್ಷದವರೆಗೆ ಬದುಕುತ್ತದೆ.

೧೯೬೦-೨೦೧೮ವರೆಗೆ ಏಷ್ಯಾಟಿಕ್ ಸಿಂಹಗಳ ಮೇಲೆ ದೊಡ್ಡ ಸಂಶೋಧನೆ ನಡೆದಿದೆ.

error: Content is protected !!