Thursday, 18th April 2024

ತಮಿಳುನಾಡು ಲಾರಿಯಿಂದ ನನ್ನ ಕಾರಿಗಾದ ಅಪಘಾತ !

ಸತ್ಯಮೇವ ಜಯತೆ – ಭಾಗ 89 – ಶಂಕರ್‌ ಬಿದರಿ

1996ರ ಜೂನ್ ತಿಂಗಳಲ್ಲಿ ನಾನು, ಕಾರ್ಯಾಚರಣೆ ಪಡೆ ಕಮಾಂಡರ್ ಹುದ್ದೆಯಿಂದ ವರ್ಗಾವಣೆ ಹೊಂದಿ, ಇಂಟೆಲಿಜೆನ್ಸ್ ಡಿಐಜಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ, ವೀರಪ್ಪನ್ ಮತ್ತು ಅವನ ತಂಡದ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣ ಗಳ ಪೈಕಿ, ಸಿಐಡಿ ವಿಭಾಗದ ತನಿಖೆಯಲ್ಲಿದ್ದ ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಅವರ ಹತ್ಯೆ ಪ್ರಕರಣ ಹೊರತುಪಡಿಸಿ, ಎಲ್ಲಾ ಪ್ರಕರಣಗಳಲ್ಲಿಯೂ ಅಂತಿಮ ತನಿಖಾ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ವ್ಯವಸ್ಥೆ ಮಾಡಿ ದ್ದೆನು.

ಇವುಗಳಲ್ಲಿ, ಭಯೋತ್ಪಾದಕ ಮತ್ತು ವಿಧ್ವಂಸಕ ಕೃತ್ಯಗಳ ನಿಗ್ರಹ ಕಾನೂನು (ಟಾಡಾ) ಪ್ರಕಾರ ದಾಖಲಾಗಿದ್ದ ಐದು ಪ್ರಕರಣ ಗಳಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಕಲಮುಗಳ ಪ್ರಕಾರ ದಾಖಲಾಗಿದ್ದ 37 ಪ್ರಕರಣಗಳಲ್ಲಿ ದೋಷಾ ರೋಪಣ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಪ್ರಕರಣಗಳ ವಿಚಾರಣೆ ನ್ಯಾಯಾಲ ಯಗಳಲ್ಲಿ ಪ್ರಾರಂಭ ವಾಗಿತ್ತು.

ಆದರೆ, ಐದು ಟಾಡಾ ಪ್ರಕರಣಗಳಲ್ಲಿ ವಿಚಾರಣೆ ತುಂಬಾ ಮಹತ್ವದ್ದಾಗಿತ್ತು. ಈ ಐದು ಟಾಡಾ ಪ್ರಕಾರ ದಾಖಲಾಗಿದ್ದ ಪ್ರಕರಣಗಳ ವಿಚಾರಣೆಯನ್ನು ಮೈಸೂರಿನಲ್ಲಿ ಸ್ಥಾಪಿಸಲಾಗಿದ್ದ ಒಂದು ವಿಶೇಷ ನ್ಯಾಯಾಲಯಕ್ಕೆ ವಹಿಸಲಾಗಿತ್ತು. ಪ್ರಕರಣಗಳ
ವಿಚಾರಣೆ ಆ ನ್ಯಾಯಾಲಯದಲ್ಲಿ ದಿನವಹಿ ಆಧಾರದ ಮೇಲೆ ಪ್ರಾರಂಭವಾಗಿತ್ತು. ಈ ಪ್ರಕರಣಗಳ ಅಭಿಯೋಗ ಕಾರ್ಯ  ನಿರ್ವಹಿಸಲು ನಾವು ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿ, ಬೇರೊಬ್ಬ ಅಭಿಯೋಗ ಅಧಿಕಾರಿಯನ್ನು ಸರಕಾರವು
ಈ ನ್ಯಾಯಾಲಯಕ್ಕೆ ನೇಮಕ ಮಾಡಿತ್ತು.

ಟಾಡಾ ಕಾನೂನಿನ್ವಯ ದಾಖಲಾಗಿದ್ದ ಪ್ರಕರಣಗಳಲ್ಲಿ, ಆ ಕಾನೂನಿನಲ್ಲಿ ಅವಕಾಶವಿದ್ದ ಪ್ರಕಾರ, ಬಂಧಿತ ಅಪರಾಧಿಗಳ ಹೇಳಿಕೆಯನ್ನು ಎಸ್‌ಪಿ ಅಥವಾ ಅವರಿಗಿಂತ ಮೇಲ್ದರ್ಜೆ ಅಧಿಕಾರಿಗಳು ದಾಖಲಿಸಿದ್ದರೆ, ಆ ಹೇಳಿಕೆಯನ್ನು ಸಾಕ್ಷಿ ಎಂದು
ಪರಿಗಣಿಸಲಾಗುತ್ತಿತ್ತು. ಕಾರ್ಯಾಚರಣೆ ಪಡೆ ಕಮಾಂಡರ್ ಆಗಿ, ಮಲೆ ಮಹದೇಶ್ವರ ಬೆಟ್ಟ ನನ್ನ ಕೇಂದ್ರ ಸ್ಥಾನವಾಗಿತ್ತು. ಅದು
ಮೈಸೂರಿನಿಂದ ೧೪೦ ಕಿ.ಮೀ. ದೂರದಲ್ಲಿತ್ತು.

ಕಾರ್ಯಾಚರಣೆ ಪಡೆಯಲ್ಲಿ ಬಹಳ ಕಾಲದಿಂದಲೂ ಎಸ್‌ಪಿ ದರ್ಜೆಯ ಯಾವುದೇ ಅಧಿಕಾರಿ ಸೇವೆ ಸಲ್ಲಿಸಲು ಮುಂದೆ ಬಂದಿರ ಲಿಲ್ಲ. ಆದ್ದರಿಂದ ಎಲ್ಲಾ ಬಂಧಿತ ಅಪರಾಧಿಗಳು ಸ್ವಯಂಸ್ಫೂರ್ತಿಯಿಂದ ನೀಡಿದ ಹೇಳಿಕೆಗಳನ್ನು ಎಸ್‌ಪಿ ದರ್ಜೆಗಿಂತ ಮೇಲ್ದರ್ಜೆ ಅಧಿಕಾರಿಯಾಗಿದ್ದ ನಾನೇ ದಾಖಲಿಸಿಕೊಂಡಿದ್ದೆನು. ಈ ಹಿನ್ನೆಲೆಯಲ್ಲಿ, ನಾನು ನ್ಯಾಯಾಲಯದಲ್ಲಿ ನೀಡುವ ಸಾಕ್ಷಿ ಬಹಳ ಮಹತ್ವದ್ದಾಗಿತ್ತು.

ಟಾಡಾ ಕಾನೂನನ್ನು ಅನ್ವಯ ಮಾಡಿದ್ದರಿಂದ ಈ ಪ್ರಕರಣಗಳಲ್ಲಿ, ಯಾವ ಅಪರಾಧಿಗಳ ಅಪರಾಧ ರುಜುವಾತಾಗುತ್ತದೆಯೋ
ಅವರಿಗೆ ಗುರುತರ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚು ಇತ್ತು. ಈ ಪ್ರಕರಣದಲ್ಲಿ ಸಾಕ್ಷಿ ಹೇಳಲು ನನಗೆ ಮೈಸೂರು ವಿಶೇಷ
ನ್ಯಾಯಾ ಲಯದಿಂದ ಸಮನ್ಸ್ ಬಂತು. ಸಮನ್ಸ್ ಪ್ರಕಾರ ನಾನು, ೨೦೦೧ರ ಮೇ ೨೧ರಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ
ನುಡಿಯಬೇಕಾಗಿತ್ತು. ಈ ಐದೂ ಪ್ರಕರಣಗಳಲ್ಲಿ ನಾನು ಮಾಡಿದ ಕೆಲಸ ಬಹಳ ಹೆಚ್ಚಿನ ಪ್ರಮಾಣದಲ್ಲಿ ಇದ್ದುದರಿಂದ, ಬಹುಶಃ
ಸಾಕ್ಷಿ ಹೇಳುವ ಕೆಲಸ ಎರಡು ಮೂರು ದಿನಗಳ ಕಾಲ ನಡೆಯುವ ಸಾಧ್ಯತೆ ಇತ್ತು.

ನಾನು ಈ ಉದ್ದೇಶಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೆ ನನ್ನ ಅಽಕೃತ ಕಾರಿನಲ್ಲಿ ಮೇ ೨೧ರಂದು ಬೆಳಿಗ್ಗೆ ಹೊರಟೆನು. ಬೆಳಿಗ್ಗೆ 11.30ರ ಸುಮಾರಿಗೆ ನಮ್ಮ ಕಾರು ಮಂಡ್ಯ-ಮೈಸೂರು ರಸ್ತೆಯ ಶ್ರೀರಂಗಪಟ್ಟಣದ ಹತ್ತಿರ ಸಾಗುತ್ತಿತ್ತು. ಆಗ ಒಮ್ಮೆಲೇ ಹುಲ್ಲು ತುಂಬಿದ ಒಂದು ಲಾರಿ ನೇರವಾಗಿ ಬಂದು ನಮ್ಮ ಕಾರಿಗೆ ಅಪ್ಪಳಿಸಿತು. ಇದರಿಂದ, ನನಗೆ ಹಣೆಗೆ ತೀವ್ರ ಸ್ವರೂಪದ ಗಾಯ ವಾಯಿತು. ಅದೇ ರೀತಿ, ಕಾರಿನ ಮುಂದಿನ ಭಾಗದಲ್ಲಿದ್ದ ನನ್ನ ಚಾಲಕ, ಕೆಎಸ್‌ಆರ್‌ಪಿ ಹೆಡ್‌ಕಾನ್ ಸ್ಟೇಬಲ್ ತಿಮ್ಮಪ್ಪ ಮತ್ತು ವೈಯಕ್ತಿಕ ಭದ್ರತಾ ಅಧಿಕಾರಿ ಸಬ್ ಇನ್ಸ್‌ಪೆಕ್ಟರ್ ಮಾಯಣ್ಣ ಇವರಿಗೂ ಸಹಿತ ನನಗಿಂತ ಹೆಚ್ಚು ತೀವ್ರ ಸ್ವರೂಪದ
ಗಾಯಗಳಾದವು.

ನನಗೆ ಮತ್ತು ಮಾಯಣ್ಣನಿಗೆ ತಲೆ ಮತ್ತು ಮುಖದ ಮೇಲೆ ಗಾಯಗಳಾಗಿದ್ದರೆ, ಚಾಲಕ  ತಿಮ್ಮಪ್ಪ ಅವರಿಗೆ ಕಾಲಿಗೂ ತೀವ್ರ
ಸ್ವರೂಪದ ಗಾಯಗಳಾಗಿದ್ದವು ಕೆಲ ಸಮಯ ನನಗೆ ಏನೂ ತೋಚಲಿಲ್ಲ. ಆಗ ಅದೇ ರಸ್ತೆಯಲ್ಲಿ ತಿಪಟೂರಿನ ಗೃಹಸ್ಥ ರೊಬ್ಬರು ತಮ್ಮ ಕುಟುಂಬದೊಂದಿಗೆ ಮೈಸೂರಿನತ್ತ ಪ್ರಯಾಣಿಸುತ್ತಿದ್ದರು. ನಾನು ಈ ಹಿಂದೆ, 1981-82ರಲ್ಲಿ ತಿಪಟೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದುದರಿಂದ ಅವರು ನನ್ನನ್ನು ಗುರುತು ಹಿಡಿದರು.

ಅವರು ಕೂಡಲೇ ತಮ್ಮ ಕುಟುಂಬದವರನ್ನು ತಮ್ಮ ಕಾರಿನಿಂದ ಇಳಿಸಿ, ಗಾಯಾಳುಗಳಾಗಿದ್ದ ನನ್ನನ್ನು, ಮಾಯಣ್ಣ ಮತ್ತು ತಿಮ್ಮಪ್ಪ ಅವರನ್ನು ಆ ಕಾರಿನಲ್ಲಿ ಕೂರಿಸಿಕೊಂಡು, ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸಲು ಧಾವಿಸಿದರು. ಮೈಸೂರಿನ ಬಿ.ಎಂ. ಆಸ್ಪತ್ರೆಯಲ್ಲಿ ನಾನು ಕಾರ್ಯಾಚರಣೆ ಪಡೆಯ ಮುಖ್ಯಸ್ಥನಾಗಿದ್ದಾಗ ಕಾರ್ಯಾಚರಣೆಯಲ್ಲಿ ಗಾಯಗೊಂಡ ಹಲವಾರು ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದೆನು. ಆಗ ಬಿ.ಎಂ. ಆಸ್ಪತ್ರೆಯ ಮುಖ್ಯಸ್ಥರಾಗಿದ್ದ ಡಾ. ಮೂರ್ತಿಯವರ ಪರಿಚಯ ನನಗೆ ಆಗಿತ್ತು. ನಾವು ಮೈಸೂರು ನಗರವನ್ನು ಪ್ರವೇಶಿಸಿದ ಮೇಲೆ, ನಾನು ತಿಪಟೂರಿನ ಗೃಹಸ್ಥರಿಗೆ, ಮೈಸೂರಿನ ಬಿ.ಎಂ. ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡೆನು.

ಅದರಂತೆ ಅವರು ನಮ್ಮನ್ನು ಬಿಎಂ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಡಾ. ಮೂರ್ತಿಯವರು ನಮಗೆ ತಕ್ಷಣವೇ ಅತ್ಯುತ್ತಮ ಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದರು. ನಮಗೆ ಆದ ಗಾಯಗಳಿಗೆ ಹೊಲಿಗೆ ಹಾಕಿ, ರಕ್ತ ಸ್ರಾವವನ್ನು ತಡೆಗಟ್ಟಿದರು. ಶ್ರೀ ಮಾಯಣ್ಣ ಮತ್ತು ಶ್ರೀ ತಿಮ್ಮಪ್ಪ ಅವರಿಗೂ ಅಗತ್ಯ ಚಿಕಿತ್ಸೆ ನೀಡಿದರು.

ಸುಮಾರು ಗಂಟೆಗಳ ನಂತರ ಗಾಯಾಳು ತಿಮ್ಮಪ್ಪನವರಿಗೆ ಪ್ರಜ್ಞೆ ಮರಳಿದಾಗ, ಅವರ ಹೇಳಿಕೆಯನ್ನು ಶ್ರೀರಂಗಪಟ್ಟಣದ
ಪೊಲೀಸರು ಪಡೆದುಕೊಂಡರು. ಬಳಿಕ, ನಡೆದ ಘಟನೆಯ ಬಗ್ಗೆ ಶ್ರೀರಂಗಪಟ್ಟಣದ ಠಾಣೆಯಲ್ಲಿ ಒಂದು ಅಪಘಾತ ಪ್ರಕರಣ
ದಾಖಲು ಮಾಡಿದರು. ಮಾಧ್ಯಮಗಳ ಮೂಲಕ ಸುದ್ದಿ ತಿಳಿದು, ನನ್ನ ಹೆಂಡತಿ ಡಾ. ಉಮಾದೇವಿ ಮೈಸೂರಿಗೆ ಬಂದು ಬಿಎಂ
ಆಸ್ಪತ್ರೆಯಲ್ಲಿ ನನ್ನ ಮತ್ತು ಇತರ ಇಬ್ಬರು ಗಾಯಾಳುಗಳ ಉಸ್ತುವಾರಿ ವಹಿಸಿಕೊಂಡಳು. ಆಸ್ಪತ್ರೆಯಲ್ಲಿ ನಾಲ್ಕು ದಿನಗಳ
ಚಿಕಿತ್ಸೆ ನಂತರ, ಡಾ.ಮೂರ್ತಿ ಅವರು ನನ್ನನ್ನು ನನ್ನ ಹೆಂಡತಿಯೊಂದಿಗೆ ಬೆಂಗಳೂರಿಗೆ ಕಳುಹಿಸಿದರು.

ಮುಂದಿನ ಚಿಕಿತ್ಸೆ ಮನೆಯಲ್ಲಿಯೇ ಪಡೆಯುವುದಕ್ಕೆ ಅವಶ್ಯ ಸೂಚನೆ ನೀಡಿದರು. ನಾಲ್ಕು ದಿನಗಳ ಚಿಕಿತ್ಸೆ ನಂತರ ಬೆಂಗಳೂರಿನ ನಮ್ಮ ಮನೆಗೆ ನಾನು ಮರಳಿದೆನು. ಮಾಯಣ್ಣ ಮತ್ತು ತಿಮ್ಮಪ್ಪ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಿತು. ಸುಮಾರು 15 ದಿನಗಳ ಕಾಲ ಮನೆಯಲ್ಲಿಯೇ ಇದ್ದು, ನಾನು ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದು, ನಂತರ ಕರ್ತವ್ಯಕ್ಕೆ ಮತ್ತೆ ಹಾಜರಾದೆನು.
ನಾನು ಕರ್ತವ್ಯಕ್ಕೆ ಹಾಜರಾದ ನಂತರ, ಅಪಘಾತದ ವಿವರಗಳ ಬಗ್ಗೆ ಶ್ರೀರಂಗ ಪಟ್ಟಣದ ಪೊಲೀಸ್ ಅಧಿಕಾರಿಗಳನ್ನು ಮತ್ತು
ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳಾಗಿದ್ದ ಪಾಂಡೆ ಅವರನ್ನು ವಿಚಾರಿಸಿದೆನು.

ನಮ್ಮ ಕಾರಿಗೆ ಬಂದು ಗುದ್ದಿ ಅಪಘಾತ ಮಾಡಿದ ಲಾರಿ ತಮಿಳುನಾಡಿನ ಒಂದು ಗ್ರಾಮಕ್ಕೆ ಸೇರಿದ್ದು ಎಂದೂ, ಅದರಲ್ಲಿ ಹುಲ್ಲನ್ನು ಸಾಗಿಸಲಾಗುತ್ತಿತ್ತು ಎಂದೂ ತಿಳಿದುಬಂತು. ಶ್ರೀರಂಗಪಟ್ಟಣ ಬಳಿಯ ಗಣಗೂರು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿತ್ತು. ಆ ಲಾರಿ ಚಾಲಕನನ್ನು ಬಂಧಿಸಿ, ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದರು. ಆದರೆ ಲಾರಿ ಮಾಲೀಕನ ಹೆಸರು, ವಿಳಾಸ ಮತ್ತು ಲಾರಿ ವಿವರಗಳನ್ನು ಪಡೆದಿರಲಿಲ್ಲ. ಮುಂದಿನ ದಿನಗಳಲ್ಲಿ ನಾನು ಸುಮಾರು ಎರಡು ವರ್ಷಗಳ ಕಾಲ, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯವರಿಗೆ ಮತ್ತು ಮಂಡ್ಯ ಜಿಲ್ಲೆಯ ಪೊಲೀಸ್ ಮುಖ್ಯಾಧಿಕಾರಿ ಪಾಂಡೆ ಅವರಿಗೆ ಹಲವಾರು ಸಲ ತಿಳಿಸಿದರೂ, ಸಹಿತ ಅವರು ಲಾರಿ ಮಾಲಕನನ್ನು ಪತ್ತೆ ಹಚ್ಚಿ, ಅವನಿಂದ ಲಾರಿ ಇನ್ಸೂರೆನ್ಸ್ ವಿವರಗಳು ಮತ್ತು ವಿಳಾಸ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಅದೇ ರೀತಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಚಾಲಕನನ್ನೂ ಮತ್ತೆ ಪತ್ತೆ ಹಚ್ಚಲಾಗಲಿಲ್ಲ.

ಅಪಘಾತ ನಡೆದು ಕೆಲವು ತಿಂಗಳ ನಂತರ ನನಗೆ, ಡಾ. ರಾಜ್ ಕುಮಾರ್ ಅಪಹರಣದ ನಂತರ, ಅಪಾರ ಹಣ ಬಲವನ್ನು
ಹೊಂದಿದ್ದ ವೀರಪ್ಪನ್ ತನ್ನ ಸಹಚರರ ಮೂಲಕ ಹಣ ನೀಡಿ, ನಾನು ಟಾಡಾ ಪ್ರಕರಣಗಳಲ್ಲಿ ಸಾಕ್ಷಿ ನುಡಿಯಲು ಸಾಧ್ಯ ವಾಗಬಾರದು ಎಂಬ ಉದ್ದೇಶದಿಂದ, ಈ ಅಪಘಾತದ ಸಂಚು ನಡೆಸಿ, ನನ್ನ ಹತ್ಯೆಗೆ ಯತ್ನಿಸಿದ್ದನೆಂದು ಹಲವು ಮೂಲಗಳಿಂದ ಮಾಹಿತಿ ಬಂತು. ಅದನ್ನು ಪರಿಶೀಲಿಸಲು ನಾನು ಸ್ಥಳೀಯ ಪೊಲೀಸ್ ಅಽಕಾರಿಗಳಿಗೆ ತಿಳಿಸಿದೆನು. ಆದರೆ, ಅವರ ಪರಿಶೀಲನೆ ಯಾವುದೇ ರೀತಿಯಿಂದ ಫಲಪ್ರದವಾಗಲಿಲ್ಲ.

ನಾನು ಆಗ ಕೆಎಸ್‌ಆರ್‌ಪಿಯಲ್ಲಿ ಇದ್ದುದರಿಂದ, ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಮುಂದೆ ನಾನು, ರಾಜ್ಯದ ಒಂದು ಸೂಕ್ತವಾದ ಸ್ಥಳಕ್ಕೆ ವರ್ಗಾವಣೆ ಗೊಂಡಾಗ, ನಾನೇ ಈ ವಿಷಯದ ಬಗ್ಗೆ ಸೂಕ್ತ ತನಿಖೆ ಮಾಡಬೇಕು ಎಂಬ ಉದ್ದೇಶ ವನ್ನು ಹೊಂದಿದ್ದೆನು. ಆದರೆ, ಕೇಂದ್ರ ವಲಯದ ಐಜಿಪಿಯಾಗಿ ನಿಯುಕ್ತಗೊಳ್ಳುವುದಕ್ಕೂ ಮುಂಚೆಯೇ, ಅಂದರೆ, ೨೦೦೪ರ ಅ. ೧೮ರಂದು, ಹೊಗೆನಕಲ್ ಧರ್ಮಪುರಿ ರಸ್ತೆಯ ಪಾಪರ್‌ಕಟ್ಟೆ ಗ್ರಾಮದ ಹತ್ತಿರ ನಡೆದ ಗುಂಡಿನ ಚಕಮಕಿಯಲ್ಲಿ ವೀರಪ್ಪನ್ ಮತ್ತು ಅವನ ತಂಡದಲ್ಲಿ ಉಳಿದಿದ್ದ ಕೇವಲ ಇಬ್ಬರು ಸದಸ್ಯರಾದ ಸೇತುಕುಳಿ ಗೋವಿಂದನ್ ಮತ್ತು ಚಂದ್ರನ್ ಹತ್ಯೆ ನಡೆದು ಹೋಯಿತು. ವೀರಪ್ಪನ್ ಸಾವಿನ ನಂತರ, ನನ್ನ ಅಪಘಾತದ ಬಗ್ಗೆ ಹೆಚ್ಚಿನ ತನಿಖೆ ಮಾಡಿ ಪ್ರಯೋಜನವಿಲ್ಲ ಎಂದು ಭಾವಿಸಿ, ಆ ಪ್ರಕರಣವನ್ನು ಮುಕ್ತಾಯ ಮಾಡಿದೆನು.

ಈ ಅಪಘಾತ ಪ್ರಕರಣದಲ್ಲಿ ಗಾಯಾಳುಗಳಾಗಿದ್ದ ನನಗೆ, ಮಾಯಣ್ಣ ಮತ್ತು ತಿಮ್ಮಪ್ಪ ಅವರಿಗೆ ಮೋಟಾರು ವಾಹನ ಅಪಘಾತಕ್ಕೆ ಸಂಬಂಧಪಟ್ಟ ಪರಿಹಾರ ದೊರೆಯಲಿಲ್ಲ. ಯಾಕೆಂದರೆ, ಶ್ರೀರಂಗಪಟ್ಟಣದ ಪೊಲೀಸರು ನಾಲ್ಕೈದು ವರ್ಷಗಳು ಕಳೆದರೂ, ಅಪಘಾತ ಮಾಡಿದ ಲಾರಿಯ ವಿಮಾ ವಿವರಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಡಾ. ರಾಜ್‌ಕುಮಾರ್ ಅವರ ಬಿಡುಗಡೆಯ ನಂತರ ದಾಖಲಾದ ಪ್ರಕರಣಗಳ ಬಗ್ಗೆ 2000ರ ಜುಲೈ ೩೦ರಂದು, ತಮಿಳುನಾಡಿನ ಪೆರಿಯಾರ್ ಜಿಲ್ಲೆ
ತಾಳವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗಾಜನೂರು ಗ್ರಾಮದಿಂದ, ವೀರಪ್ಪನ್ ಮತ್ತು ಅವನ ತಂಡ ವರನಟ ಡಾ. ರಾಜ್‌ ಕುಮಾರ್ ಅವರನ್ನು ಅಪಹರಿಸಿದ್ದರು.

ಅವರನ್ನು ಉತ್ತರ ತಳಮಲೈ ಮತ್ತು ದಕ್ಷಿಣ ತಳಮಲೈ ಅರಣ್ಯ ಪ್ರದೇಶದಲ್ಲಿ 108 ದಿನಗಳ ಕಾಲ ಅಕ್ರಮ ಬಂಧನ ದಲ್ಲಿಟ್ಟು ಕೊಂಡು, ನಂತರ ಅವರ ಅಭಿಮಾನಿ ಮತ್ತು ಹಿತೈಷಿಗಳಿಂದ ಅಪಾರ ಪ್ರಮಾಣದ ಹಣವನ್ನು ಪಡೆದು ಬಿಡುಗಡೆ ಮಾಡಿದ್ದರು. ವೀರಪ್ಪನ್ ಮತ್ತು ಅವನ ತಂಡ, ಈ ಹಣದ ಒಂದು ಭಾಗವನ್ನು ತಮ್ಮ ಕುಟುಂಬದ ಸದಸ್ಯರಿಗೆ ಮತ್ತು
ತಮ್ಮ ಬೆಂಬಲಿಗರಿಗೆ ನೀಡಿ, ಈ ಹಣದಿಂದ ಬೇರೆ ಬೇರೆ ಚಟುವಟಿಕೆಗಳನ್ನು ಆರಂಭಿಸಿ, ಆರ್ಥಿಕವಾಗಿ ಸ್ಥಿತಿವಂತರಾಗಲು
ಸೂಚಿಸಿದ್ದರು.

ವೀರಪ್ಪನ್ ತನ್ನ ಹೆಂಡತಿ ಮುತ್ತುಲಕ್ಷ್ಮಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ನೀಡಿದ್ದನು. ಅವಳು ಈ ಹಣದಿಂದ ಕೆಲವು ಜೆಸಿಬಿ ಯಂತ್ರಗಳನ್ನು ಖರೀದಿಸಿದ್ದಳು. ಈ ವಿಷಯ ತಮಿಳುನಾಡಿನ ಕಾರ್ಯಾಚರಣೆ ಪಡೆ ಪೊಲೀಸರ ಗಮನಕ್ಕೆ ಬಂತು. ವೀರಪ್ಪನ್
ಮತ್ತು ಅವನ ತಂಡ ವರನಟ ಡಾ. ರಾಜ್‌ಕುಮಾರ್ ಅವರನ್ನು ಅಪಹರಿಸಿ, ಹಣ ವಸೂಲು ಮಾಡಿದ ಬಗ್ಗೆ ತಾಳವಾಡಿ
ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದರು.

ನಂತರ ಈ ಪ್ರಕರಣದ ತನಿಖೆಯನ್ನು ತಮಿಳುನಾಡಿನ ಸಿಐಡಿ ಘಟಕದವರು ಕೈಗೆತ್ತಿಕೊಂಡರು. ಡಾ. ರಾಜ್‌ಕುಮಾರ್ ಅವರ ಅಪಹರಣವಾದಾಗ, ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕರುಣಾನಿಧಿ ಅವರು ಡಾ. ರಾಜ್‌ಕುಮಾರ್ ಅವರ ಬಿಡುಗಡೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದರು. ನಂತರ ಜಯಲಲಿತಾ ಅವರು ಅಧಿಕಾರಕ್ಕೆ ಬಂದರು. ಕುಮಾರಿ ಜಯಲಲಿತಾ ಮತ್ತು ಕರುಣಾನಿಧಿ ಅವರ ಮಧ್ಯೆ ತೀವ್ರ ಸ್ವರೂಪದ ರಾಜಕೀಯ ವೈರತ್ವ ಇತ್ತು.

ಪರಸ್ಪರ ಅವಕಾಶ ಸಿಕ್ಕಾಗಲೆಲ್ಲಾ, ಒಬ್ಬರು ಇನ್ನೊಬ್ಬರಿಗೆ ಸಾಧ್ಯವಿರುವ ಎಲ್ಲಾ ತೊಂದರೆ ನೀಡಲು ಪ್ರಯತ್ನಿಸುತ್ತಿದ್ದರು. ತಾಳವಾಡಿಯಲ್ಲಿ ಪ್ರಕರಣ ದಾಖಲಾದ ವೇಳೆ, ‘ಡಾ. ರಾಜ್‌ಕುಮಾರ್ ಅವರನ್ನು ಬಿಡುಗಡೆ ಮಾಡಲು ಕರುಣಾನಿಧಿ ಅವರು ವೀರಪ್ಪನ್ ತಂಡಕ್ಕೆ ಹಣ ನೀಡುವ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು, ತಮಿಳುನಾಡಿನ ಸಿಐಡಿ ಮತ್ತು ಮುಖ್ಯಮಂತ್ರಿ ಸಂಶಯ ಪಟ್ಟಿದ್ದರು. ಆದರೆ ಕರುಣಾನಿಧಿ ಅವರ ಸಕ್ರಿಯ ಪಾತ್ರದ ಬಗ್ಗೆ ಅವರಿಗೆ ತನಿಖೆ ವೇಳೆ ಯಾವುದೇ ಸಾಕ್ಷ್ಯಾಧಾರಗಳು ಸಿಗಲಿಲ್ಲ.

ಆಗ ಬಹುಶಃ, ಜಯಲಲಿತಾ ಅಥವಾ ತನಿಖೆ ಪ್ರಭಾರದ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ, ತನಿಖೆ ಮೇಲ್ವೆಚಾರಣೆ
ಮಾಡುತ್ತಿದ್ದ ಅಧಿಕಾರಿಯೊಬ್ಬರು ನನ್ನನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಕಳುಹಿಸಿಕೊಟ್ಟರು. ಈ ಅಧಿಕಾರಿ
ಬೆಂಗಳೂರಿಗೆ ಬಂದು ನನ್ನನ್ನು ಐಜಿಪಿ, ಕೆಎಸ್‌ಆರ್‌ಪಿ ಕಚೇರಿಯಲ್ಲಿ ಭೇಟಿಯಾದರು. ಅವರೊಂದಿಗೆ ಆಗ ನಡೆದ  ಮಾತುಕ ತೆಯಲ್ಲಿ ನಾನು, ‘ನನಗೆ ತಿಳಿದ ಪ್ರಕಾರ, ವರನಟ ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮತ್ತು ಅವನ ತಂಡದಿಂದ ಬಿಡಿಸಿ ಕೊಂಡು ಬರಲು ಯಾರಾದರೂ ಹಣ ನೀಡಿದ್ದರೆ, ಅವರು ಡಾ. ರಾಜ್ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಮಾತ್ರ. ನೀಡಿದ ಹಣವನ್ನು ಸಂಗ್ರಹಿಸುವ ಕಾರ್ಯದಲ್ಲಾಗಲಿ, ಆ ಹಣವನ್ನು ವೀರಪ್ಪನ್ ಮತ್ತು ಅವನ ತಂಡಕ್ಕೆ ತಲುಪಿಸುವ ಕಾರ್ಯ ದಲ್ಲಾಗಲಿ ಕರುಣಾನಿಧಿಯವರ ಯಾವುದೇ ಪಾತ್ರವಿಲ್ಲ.

ನೀವು ಅನಗತ್ಯವಾಗಿ ಕರುಣಾನಿಧಿಯವರ ಮೇಲೆ ಸಂಶಯ ಪಡುವುದು ಸರಿಯಲ್ಲ’ ಎಂದು ತಿಳಿಸಿದೆನು. ವೀರಪ್ಪನ್ ನೀಡಿದ ಹಣದಿಂದ ಅವನ ಹಿತೈಷಿಗಳು ಖರೀದಿಸಿದ್ದ ಜೆಸಿಬಿ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದರೂ ಸಹಿತ, ಕರುಣಾನಿಧಿ ಅವರ ಪಾತ್ರವಿದೆಯೇ ಎಂಬುದನ್ನು ಪರಿಶೀಲಿಸುವ ಕಾರಣದಿಂದಷ್ಟೇ, ಬಹುಶಃ ಈ ಪ್ರಕರಣದ ತನಿಖೆ ಮುಂದುವರಿಸಲಾಗಿತ್ತು ಎಂದು ನನಗೆ ಅನಿಸಿತು. ನಾನು ಈ ಪ್ರಕರಣದ ವಿದ್ಯಮಾನಗಳ ಬಗ್ಗೆ ನಾನು ಖಚಿತ ಮಾಹಿತಿ ನೀಡಿದ ಮೇಲೆ, ನನ್ನ ಬಗ್ಗೆ ಬಹಳ ವಿಶ್ವಾಸ ಹೊಂದಿದ್ದ ತಮಿಳು ನಾಡಿನ ಅಧಿಕಾರಿಗಳು, ತಾಳವಾಡಿ ಪ್ರಕರಣದ ತನಿಖೆಯನ್ನು ಅಲ್ಲಿಗೇ ಮುಕ್ತಾಯ ಗೊಳಿಸಿದರು.

error: Content is protected !!