Friday, 29th March 2024

ಐದು ಲಕ್ಷಕ್ಕೂ ಹೆಚ್ಚು ಮಂದಿಯ ನಿರೀಕ್ಷೆ

ಜನೋತ್ಸವ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪಕ್ಷ ಸಂಘಟನೆ ಮತ್ತು
ಆ ಭಾಗದ ಕಾರ್ಯಕರ್ತರಿಗೆ ಪಕ್ಷದ ಯೋಜನೆಗಳನ್ನು ತಲುಪಿಸುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ
ಸಿದ್ಧತೆಯನ್ನು ಕೋಲಾರ ಉಸ್ತುವಾರಿ ಸಚಿವರೂ ಆದ ತೋಟಗಾರಿಕೆ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ ಅವರು
ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈ ಕುರಿತು ವಿಶ್ವವಾಣಿ ಜತೆಗೆ ಅವರು ಮಾತನಾಡಿದ್ದಾರೆ.

ಜನೋತ್ಸವ ಕಾರ್ಯಕ್ರಮದ ಉದ್ದೇಶವೇನು?
ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗದಲ್ಲಿ ಬಿಜೆಪಿ ಇತ್ತೀಚೆಗೆ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಭಾಗದ ಬಹುತೇಕ ಕಾರ್ಯಕರ್ತರು ಪಕ್ಷಕ್ಕೆ ಹೊಸಬರು. ಹೀಗಾಗಿ, ಅವರಿಗೆ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡುವುದು, ಕಾರ್ಯಕರ್ತರ ಮೂಲಕ ಸರಕಾರದ ಯೋಜನೆ ಗಳನ್ನು ಮನೆಮನೆಗೆ ತಲುಪಿಸುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಬಿಎಸ್‌ವೈ ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ಜನಪರ ಯೋಜನೆ ಗಳನ್ನು ಜನರಿಗೆ ಮನದಟ್ಟು ಮಾಡುವ ಮೂಲಕ ಡಬಲ್ ಎಂಜಿನ್ ಸರಕಾರದ ಸಾಧನೆಗಳನ್ನು ಸಾರುವುದೇ ಕಾರ್ಯಕ್ರಮದ ಉದ್ದೇಶವಾಗಿದೆ.

ಕಾರ್ಯಕ್ರಮದ ಸಿದ್ಧತೆ ಹೇಗೆ ನಡೆದಿದೆ?
ಕಾರ್ಯಕ್ರಮಕ್ಕೆ ಅಗತ್ಯವಾದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಇನ್ನಿತರ ಮುಖಂಡರು ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. 5 ಲಕ್ಷಕ್ಕೂ ಅಧಿಕ ಜನರು ಕುಳಿತುಕೊಳ್ಳುವ ವ್ಯವಸ್ಥೆ ಮಾಡ ಲಾಗಿದೆ. ಮಳೆ ಬಂದರೂ ಕಾರ್ಯಕ್ರಮ ನಡೆಯುವಂತೆ ಶೆಡ್ ನಿರ್ಮಿಸಲಾಗಿದೆ. ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು ೩ ಲಕ್ಷ ಜನರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಆಗಮಿಸುವ ಹಿನ್ನೆಲೆಯಲ್ಲಿ ವಿವಿಐಪಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಬೃಹತ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಷ್ಟೇ ಜನರು ಆಗಮಿಸಿದರೂ ಯಾವುದೇ ಅವ್ಯವಸ್ಥೆಯಾಗದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಎಷ್ಟು ಜನರು ಸೇರುವ ನಿರೀಕ್ಷೆಯಿದೆ?
ಕಾರ್ಯಕ್ರಮಕ್ಕೆ ಕನಿಷ್ಠ ೫ ಲಕ್ಷ ಜನರು ಸೇರುವ ನಿರೀಕ್ಷೆಯನ್ನು ಹೊಂದಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳು ಸೇರಿದಂತೆ ವಿವಿಧ ಭಾಗದಿಂದ ಜನರು ಆಗಮಿಸಲಿದ್ದಾರೆ. ಈ
ಭಾಗದ ಜನರಿಗೆ ಡಬಲ್ ಎಂಜಿನ್ ಸರಕಾರದ ಯೋಜನೆಗಳ ಮೇಲೆ ನಂಬಿಕೆ ಹೆಚ್ಚಾಗುತ್ತಿದ್ದು, ಹೆಚ್ಚಿನ ಪ್ರಮಾಣದ ಜನರು ಸೇರುವ ನಿರೀಕ್ಷೆಯಿದೆ. ಕೋಲಾರದಿಂದ ಸುಮಾರು ೩೦೦ಕ್ಕೂ ಹೆಚ್ಚು ಬಸ್‌ಗಳಲ್ಲಿ ಜನರು ಆಗಮಿಸಲಿದ್ದಾರೆ. ಇದಕ್ಕಾಗಿ
ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲ ಜಿಲ್ಲೆಗಳಿಂದ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಕೆಲವರು ಸ್ವಯಂ ಪ್ರೇರಿತವಾಗಿ ತಮ್ಮ ಖಾಸಗಿ ವಾಹನಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಕಾರ್ಯಕ್ರಮ ಪಕ್ಷ ಸಂಘಟನೆಗೆ ಎಷ್ಟು ಸಹಕಾರಿಯಾಗಲಿದೆ?
ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಕಳೆದ ಎಂಟು ವರ್ಷಗಳಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿದೆ. ಮೋದಿ
ಅವರು ತಮ್ಮ ಕಾರ್ಯವೈಖರಿಯ ಮೂಲಕ ದೇಶವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಕೊಂಡೊಯ್ಯುತ್ತಿದ್ದಾರೆ. ಈ
ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರಕ್ಕೆ ಮೂರು ವರ್ಷದ ಅವಧಿ ತುಂಬಿದೆ. ಇದನ್ನು ಹಳೆ ಮೈಸೂರು ಭಾಗದಿಂದಲೇ ಆರಂಭಿಸಲು ಪಕ್ಷ ತೀರ್ಮಾನಿಸಿದೆ. ಇತ್ತೀಚೆಗೆ ಹೆಚ್ಚುತ್ತಿರುವ ಬಿಜೆಪಿಯ ಪ್ರಾಬಲ್ಯವನ್ನು ಮನೆಮನೆಗೆ ತಲುಪಿಸಲು ಕಾರ್ಯಕ್ರಮ ಸಹಕಾರಿಯಾಗಲಿದೆ.

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಜೆಪಿ ಪರವಾದ ಒಲವಿದೆ. ಇದು ಮುಂದಿನ
ಚುನಾವಣೆಯಲ್ಲಿ ಈ ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಸಹಕಾರಿಯಾಗಲಿದೆ.

ಪ್ರತಿಪಕ್ಷಗಳಿಗೆ ಈ ಮೂಲಕ ನೀಡುವ ಸಂದೇಶವೇನು?
ಪ್ರತಿ ಪಕ್ಷಗಳಿಗೆ ನಾವು ಸಮಾವೇಶದ ಮೂಲಕ ಸಂದೇಶ ನೀಡುವ ಅವಶ್ಯಕತೆ ಇಲ್ಲ. ನಾವು ಕಳೆದ ಮೂರು ವರ್ಷಗಳಿಂದ ನಮ್ಮ ಕೆಲಸಗಳ ಮೂಲಕವೇ ಪ್ರತಿಪಕ್ಷಗಳಿಗೆ ಉತ್ತರ ನೀಡುತ್ತಿದ್ದೇವೆ. ಹೀಗಾಗಿ, ಪ್ರತಿಪಕ್ಷಗಳು ಯಾವುದೇ ವಿಷಯಗಳಿಲ್ಲದೆ ಅಸಂಬದ್ಧ ವಾದ ವಿಚಾರಗಳಲ್ಲಿ ಸರಕಾರದ ವಿರುದ್ಧ ಟೀಕೆ ನಡೆಸಲು ಮುಂದಾಗುತ್ತಿವೆ. ನಮಗೆ ಪ್ರತಿಪಕ್ಷಕ್ಕೆ ಉತ್ತರ ನೀಡುವುದಕ್ಕಿಂತ ಜನರಿಗೆ ನಾವು ಮಾಡಿರುವ ಕೆಲಸಗಳೇನು ಎಂಬುದನ್ನು ತಿಳಿಸುವುದೇ ಮುಖ್ಯವಾಗಿದೆ.

ಹೀಗಾಗಿ, ನಾವು ನಮ್ಮ ಮೂರು ವರ್ಷದ ಅವಧಿಯ ಸಾಧನೆಗಳು ಹಾಗೂ ಕೇಂದ್ರ ಸರಕಾರದ ನಮ್ಮ ಪಕ್ಷದ ಸರಕಾರದ
ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ಪ್ರತಿಪಕ್ಷಗಳಿಗೆ ಜನರೇ ಉತ್ತರ ನೀಡುತ್ತಾರೆ. ಹೀಗಾಗಿ, ನಾವು ಪ್ರತಿ
ಪಕ್ಷಗಳಿಗೆ ಉತ್ತರ ನೀಡುವ ಗೋಜಿಗೆ ಹೋಗುವುದಿಲ್ಲ.

error: Content is protected !!