ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. 3 ಲಕ್ಷ ರೂ. ನಗದು ಕಳವಾಗಿದ್ದು, ಈ ಬಗ್ಗೆ ದರ್ಶನ್ ಮ್ಯಾನೇಜರ್ ನಾಗರಾಜ್ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ. ವಿಜಯಲಕ್ಷ್ಮಿ (Vijayalakshmi Darshan) ವಾಸವಿರುವ ಹೊಸಕೆರೆಹಳ್ಳಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಫ್ಲ್ಯಾಟ್ನಲ್ಲಿ ಕಳ್ಳತನ ನಡೆದಿದೆ.
ಮನೆಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿದೆ. ದೂರಿನ ಹಿನ್ನೆಯಲ್ಲಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೆಪ್ಟೆಂಬರ್ 4 ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೈಸೂರಿಗೆ ತೆರಳಿದ್ದರು. ಮನೆಯ ವಾರ್ಡ್ ರೋಬ್ನಲ್ಲಿ ಹಣ ತೆಗೆದುಕೊಡಲು ವಿಜಯಲಕ್ಷ್ಮಿ, ತಮ್ಮ ಮ್ಯಾನೇಜರ್ ನಾಗರಾಜ್ಗೆ ಹೇಳಿದ್ದರು. ಸ್ವಲ್ಪ ಹಣ ತೆಗೆದು ಕೊಟ್ಟು ಉಳಿದ ಹಣವನ್ನು ಮ್ಯಾನೇಜರ್ ನಾಗರಾಜ್ ಅಲ್ಲೇ ಇಟ್ಟಿದ್ದರಂತೆ.
ಅದೇ ದಿನ ಮೈಸೂರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ತೆರಳಿದ್ದಾರೆ. ಮನೆಯ ಬೀಗವನ್ನು ತಾಯಿಗೆ ಕೊಟ್ಟು ಕೆಲಸದ ಮೇಲೆ ಮ್ಯಾನೇಜರ್ ನಾಗರಾಜ್ ಕೂಡ ಹೊರಗೆ ತೆರಳಿದ್ದಾರೆ. ಸೆಪ್ಟೆಂಬರ್ 7 ರಂದು ವಿಜಯಲಕ್ಷ್ಮಿ ಬೆಂಗಳೂರಿಗೆ ವಾಪಸ್ ಬಂದಿದ್ದರು .
ಸೆಪ್ಟೆಂಬರ್ 8 ರಂದು ವಾರ್ಡ್ ರೋಬ್ನಲ್ಲಿ ನೋಡಿದಾಗ ಹಣ ನಾಪತ್ತೆಯಾಗಿತ್ತು. ಮನೆಯ ಎಲ್ಲಾ ಕಡೆ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಹುಡುಕಾಟ ನಡೆಸಿದ್ದರು. ಬಳಿಕ ಮನೆಯ ಕೆಲಸದವರನ್ನು ವಿಚಾರಿಸಿದಾಗ ಹಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮನೆಯ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿ, ಮ್ಯಾನೇಜರ್ ನಾಗರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.