ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೇವಲ 20 ರೂ.ಗಾಗಿ ಹರಿಯಿತು ನೆತ್ತರು; ಹೆತ್ತ ತಾಯಿಯನ್ನೇ ಕೊಡಲಿಯಿಂದ ಹೊಡೆದು ಕೊಂದ ಮಾದಕ ವ್ಯಸನಿ

ಕೇವಲ 20 ರೂ.ಗಾಗಿ ಯುವಕನೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಹರಿಯಾಣದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನುಹ್ ಜಿಲ್ಲೆಯ ಜೈಸಿಂಗ್‌ಪುರ ಗ್ರಾಮದ 56 ವರ್ಷದ ರಾಜಿಯಾ ಎಂದು ಗುರುತಿಸಲಾಗಿದೆ. ಅವರ ಕಿರಿಯ ಮಗ 20 ವರ್ಷದ ಜಮ್ಶೆಡ್‌ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಚಂಡೀಗಢ: ಮಾದಕ ವ್ಯಸನಕ್ಕೆ ಒಳಗಾದ ವ್ಯಕ್ತಿ ಯಾವ ಅಪರಾಧ ಕೃತ್ಯ ಮಾಡಲೂ ಹೇಸುವುದಿಲ್ಲ ಎನ್ನುವುದಕ್ಕೆ ಈ ಘಟನೆ ಜ್ವಲಂತ ಉದಾಹರಣೆ. ಕೇವಲ 20 ರೂ.ಗಾಗಿ ಯುವಕನೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಹರಿಯಾಣದಲ್ಲಿ ನಡೆದಿದೆ (Crime News). ಗುರುಗ್ರಾಮದ 56 ವರ್ಷದ ರಾಜಿಯಾ ಎನ್ನುವ ಮಹಿಳೆ ತನ್ನ ಮಗ 20 ವರ್ಷದ ಜಮ್ಶೆಡ್‌ನಿಂದ ಕೊಲೆಯಾದ ನತದೃಷ್ಟೆ. ʼʼಮಾದಕ ವ್ಯಸನಿಯಾಗಿದ್ದ ತನ್ನ ಮಗನಿಗೆ 20 ರೂ. ನೀಡಲು ನಿರಾಕರಿಸಿದ್ದಕ್ಕಾಗಿ 56 ವರ್ಷದ ರಾಜಿಯಾ ಎಂಬವರನ್ನು ಕೊಲೆ ಮಾಡಲಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ (ಜು. 19) ನುಹ್ ಜಿಲ್ಲೆಯ ಜೈಸಿಂಗ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ತಾಯಿಯನ್ನು ಕೊಂದ ನಂತರ ಜಮ್ಶೆಡ್ ಇಡೀ ರಾತ್ರಿ ಅದೇ ಮನೆಯಲ್ಲಿ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.



ʼʼಶನಿವಾರ ರಾತ್ರಿ ಜಮ್ಶೆಡ್ ತನ್ನ ತಾಯಿ ರಾಜಿಯಾಳ ಬಳಿ 20 ರೂ. ಕೇಳಿದ್ದ. ಆಕೆ ಹಣ ನೀಡಲು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಆತ ತನ್ನ ತಾಯಿಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಮ್ಶೆಡ್ ಮಾದಕ ವ್ಯಸನಿಯಾಗಿದ್ದು, ಬಹಳ ದಿನಗಳಿಂದ ಗಾಂಜಾ ಮತ್ತು ಅಫೀಮು ಸೇವಿಸುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎಫ್‌ಐಆರ್ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ರಜಿಯಾ ಅವರ ಪತಿ ಮುಬಾರಕ್‌ 4 ತಿಂಗಳ ಹಿಂದೆ ಮೃತಪಟ್ಟಿದ್ದರು.

ಈ ಸುದ್ದಿಯನ್ನೂ ಓದಿ: Physical Harassment: ಬಾಲಕಿಯ ಎದೆಗೆ ಕೈ ಹಾಕಿದ ಕಿಡಿಗೇಡಿಯ ಕಾಲಿಗೆ ಗುಂಡೇಟು!

ಗ್ರಾಮಸ್ಥರು ಹೇಳಿದ್ದೇನು?

ಜಮ್ಶೆಡ್ ಮೊದಲು ತಾಯಿಯ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ ಬಳಿಕ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. "ಜಮ್ಶೆಡ್ ಮಾದಕ ವ್ಯಸನಿ ಎಂದು ತಿಳಿದಿದ್ದ ರಜಿಯಾ ಆತನಿಗೆ ಹಣ ಕೊಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಜಮ್ಶೆಡ್ ರಜಿಯಾ ಮಲಗಿದ್ದಾಗ ಹಣವನ್ನು ಕದಿಯಲು ಪ್ರಯತ್ನಿಸಿದ್ದ. ಇದಕ್ಕೆ ರಜಿಯಾ ವಿರೋಧ ವ್ಯಕ್ತಪಡಿಸಿದಾಗ ಹೆತ್ತ ತಾಯಿ ಎಂಬುದನ್ನೂ ನೋಡದೆ ಜಮ್ಶೆಡ್ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದ. ರಜಿಯಾ ಅವರ ಸೊಸೆ ಧಾವಿಸಿ ಬಂದಾಗ ಜಮ್ಶೆಡ್ ಆಕೆಯ ಮೇಲೂ ದಾಳಿ ಮಾಡಿದ್ದ. ನಂತರ ಆತ ರಜಿಯಾಗೆ ಕೊಡಲಿಯಿಂದ ಬಲವಾಗಿ ಹೊಡೆಿದ್ದ. ಇದರಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ನಂತರ ಅವನು ಮೃತದೇಹದ ಪಕ್ಕದಲ್ಲಿ ಬೆಳಗ್ಗೆ ತನಕ ಮಲಗಿದ್ದ" ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

ಅಸ್ಸಾಂ ಮೂಲದ ಕುಟುಂಬ

ಭಾನುವಾರ ಬೆಳಗ್ಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಮ್ಶೆಡ್‌ನನ್ನು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ, ಜಮ್ಶೆಡ್ ಮೂವರು ಸಹೋದರರಲ್ಲಿ ಕಿರಿಯವ. ಅಸ್ಸಾಂ ಮೂಲದ ಈ ಕುಟುಂಬ ಹಲವು ದಶಕಗಳಿಂದ ಜೈಸಿಂಗ್‌ಪುರ ಗ್ರಾಮದಲ್ಲಿ ವಾಸಿಸುತ್ತಿದೆ. ಸದ್ಯ ಈ ಘಟನೆ ತಿಳಿದು ಹರಿಯಾಣ ಮಾತ್ರವಲ್ಲ ಇಡೀ ದೇಶವೇ ಬೆಚ್ಚಿ ಬಿದ್ದಿದೆ.