ಬೆಳ್ತಂಗಡಿ: ಧರ್ಮಸ್ಥಳ (Dharmasthala case) ವಿರೋಧಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (mahesh shetty thimarodi) ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲು ಅವರ ಮನೆಗೆ ಬೆಳ್ತಂಗಡಿ ಪೊಲೀಸರು ಆಗಮಿಸಿದ್ದು, ಈ ಸಂದರ್ಭದಲ್ಲಿ ಅವರು ಮನೆಯಲ್ಲಿ ಇಲ್ಲದ ಕಾರಣ ಮನೆಯ ಗೋಡೆಗೆ ನೋಟೀಸ್ ಅಂಟಿಸಿ ತೆರಳಿದ್ದಾರೆ. ಅಕ್ರಮವಾಗಿ ಮನೆಯೊಳಗೆ ಎರಡು ತಲವಾರು ಮತ್ತು ಒಂದು ಬಂದೂಕು ಎಸ್ಐಟಿ ಶೋಧದ ವೇಳೆ ಪತ್ತೆಯಾದ ಬಗ್ಗೆ ಸೆ.16 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಐ.ಟಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.
ಮಾಸ್ಕ್ ಮ್ಯಾನ್ ಬುರುಡೆ ಚಿನ್ನಯ್ಯನ ಹೇಳಿಕೆ ಆಧಾರದಲ್ಲಿ ತಿಮರೋಡಿ ಮನೆಯನ್ನು ಪರಿಶೀಲಿಸಲಾಗಿತ್ತು. ತಾನು ತಿಮರೋಡಿ ಮನೆಯಲ್ಲೇ ಆಶ್ರಯ ಪಡೆದಿದ್ದೆ, ಅಲ್ಲಿಯೇ ಬುರುಡೆ ಪ್ರಕರಣದ ಒಳಸಂಚು ನಡೆದಿತ್ತು ಎಂದು ಚಿನ್ನಯ್ಯ ಹೇಳಿಕೆ ನೀಡಿದ್ದ. ಈ ಸಂದರ್ಭದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಂಡುಬಂದಿದ್ದವು.
ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಸೆ.18 ರಂದು ಬೆಳ್ತಂಗಡಿ ಜಿಲ್ಲೆಯ ಉಜಿರೆಯ ತಿಮರೋಡಿ ಮನೆಗೆ ಮಹಜರು ನಡೆಸಲು ಹೋದಾಗ ಕೂಡ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿರಲಿಲ್ಲ. ಉಜಿರೆ ತಿಮರೋಡಿ ಮನೆಗೆ ಸೆ.19 ರಂದು ಬೆಳಗ್ಗೆ 6 ಗಂಟೆಗೆ ಬೆಳ್ತಂಗಡಿ ಪೊಲೀಸರು ಹೋದಾಗ ಕೂಡ ಮಹೇಶ್ ಶೆಟ್ಟಿ ತಿಮರೋಡಿ ಮನೆಯಿಂದ ಪರಾರಿಯಾಗಿದ್ದಾರೆ. ವಿಚಾರಣೆಗೆ ಸೆ.21 ರಂದು ಹಾಜರಾಗಲು ತಿಮರೋಡಿ ಮನೆಯ ಗೋಡೆಗೆ ನೋಟಿಸ್ ಬೆಳ್ತಂಗಡಿ ಪೊಲೀಸರು ಅಂಟಿಸಿ ಬಂದಿದ್ದಾರೆ.
ಇದನ್ನೂ ಓದಿ: Dharmasthala Case: ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಶಸ್ತ್ರಾಸ್ತ್ರ ಕಾಯಿದೆ ಅಡಿ ಎಫ್ಐಆರ್