ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ (Dharmasthala Case) ತನಿಖೆ ನಡೆಸುತ್ತಿರುವ ಎಸ್ಐಟಿ ಬುಧವಾರ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡ ಅರಣ್ಯದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಅಸ್ಥಿಪಂಜರಗಳ ಅವಶೇಷಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅರಣ್ಯದಲ್ಲಿ ಭೂಮಿಯ ಮೇಲ್ಮೈನಲ್ಲೇ ಮೂಳೆಗಳು, ಬಟ್ಟೆ ತುಂಡುಗಳು ಪತ್ತೆಯಾಗಿದ್ದು, ಸೋಕೋ ತಂಡ ಮೂಳೆ ಪತ್ತೆಯಾದ ಭಾಗದ ಮಣ್ಣಿನ ಸ್ಯಾಂಪಲ್ ಪಡೆದಿದ್ದು, ಈ ಜಾಗವನ್ನು ಎಸ್ಐಟಿ ಅಧಿಕಾರಿ ಮಹಜರು ಮಾಡುತ್ತಿದ್ದಾರೆ.
ಬಂಗ್ಲೆಗುಡ್ಡ ಅರಣ್ಯಕ್ಕೆ ಹೋದ ಅರ್ಧಗಂಟೆಯಲ್ಲೇ ಮೂಳೆಗಳು ಹಾಗೂ ಪುರುಷನ ಬಟ್ಟೆ ಪತ್ತೆಯಾಗಿದೆ ಎನ್ನಲಾಗಿದೆ. ಧರ್ಮಸ್ಥಳದ ಸುತ್ತ-ಮುತ್ತ ಭಾರಿ ಮಳೆಯಾಗುತ್ತಿದ್ದು, ಮಳೆಯಲ್ಲೇ ನೆನೆದುಕೊಂಡೇ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. 50ಕ್ಕೂ ಹೆಚ್ಚು ಅಧಿಕಾರಿ ಕಾಡಿಗೆ ಪ್ರವೇಶ ಮಾಡಿದ್ದು, ಮೂರು ತಂಡಗಳಾಗಿ ಮೂಳೆಗಳಿಗಾಗಿ ಶೋಧ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಸೌಜನ್ಯ ಅವರ ಚಿಕ್ಕಪ್ಪ ವಿಠ್ಠಲ್ ಗೌಡ ಅವರು ಈ ಹಿಂದೆ ಹೇಳಿಕೆ ನೀಡಿದ್ದನ್ನು ಅನುಸರಿಸಿ ಎಸ್ಐಟಿ ತಂಡ ಇಂದು ಶೋಧ ಕಾರ್ಯ ನಡೆಸಿದೆ. ದಟ್ಟವಾದ ಬಂಗ್ಲೆಗುಡ್ಡ ಅರಣ್ಯ ವಲಯದಲ್ಲಿ ಇನ್ನೂ ಅವಶೇಷಗ ಅಥವಾ ಸಾಕ್ಷ್ಯಗಳು ಪತ್ತೆಯಾಗಬಹುದೇ ಎಂಬುದನ್ನು ನೋಡಲು ಶೋಧ ಕಾರ್ಯಾಚರಣೆ ಮುಂದುವರೆದಿದೆ