ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru stampede: ಆರ್‌ಸಿಬಿ ವಿಜಯೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿರಲಿಲ್ಲ: ಸಿಎಂ

ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಿದರು.​ ನಾನು ಘಟನೆ ನಡೆದ ದಿನವೇ ತೀವ್ರ ವಿಷಾದ ವ್ಯಕ್ತಪಡಿಸಿದ್ದೇನೆ. ಮಕ್ಕಳನ್ನು ಕಳೆದುಕೊಂಡ ದುಃಖದ ಭಾರ ಏನು ಎಂಬ ಅರಿವು ನನಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣಕ್ಕೆ ನಾನು ಘಟನೆ ನಡೆದ ದಿನವೇ ತೀವ್ರ ವಿಷಾದ ವ್ಯಕ್ತಪಡಿಸಿದ್ದೇನೆ. ಮಕ್ಕಳನ್ನು ಕಳೆದುಕೊಂಡ ದುಃಖ ಹೇಗಿರುತ್ತದೆ ಎಂಬ ಅರಿವು ನನಗಿದೆ. ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಈ ಘಟನೆ ನನ್ನನ್ನು ತೀವ್ರವಾಗಿ ಡಿಸ್ಟರ್ಬ್ ಮಾಡಿದೆ. ಮುಖ್ಯಮಂತ್ರಿಯಾಗದೇ ಇದ್ದಿದ್ದರೂ ಸಹ ಮನುಷ್ಯನಾದ ಕಾರಣಕ್ಕೆ ನನ್ನನ್ನು ದುಃಖಿತನನ್ನಾಗಿ ಮಾಡುತ್ತಿತ್ತು ಎಂಬುದನ್ನು ಅಂತಃಕರಣ ಪೂರ್ವಕವಾಗಿ ತಿಳಿಸಬಯಸುತ್ತೇನೆ. ಆರ್‌ಸಿಬಿ, ಡಿಎನ್ಎ‌ ಮತ್ತು ಕೆಎಸ್‌ಸಿಎ. ಅವರಿಗೆ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ಅನುಮತಿ ಕೊಟ್ಟಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸದಸ್ಯರು ದಿನಾಂಕ 11-8-2025 ರಂದು ನಿಲುವಳಿ ಸೂಚನೆ ನೀಡಿದ್ದಾರೆ. ಈ ನಿಲುವಳಿಯನ್ನು ಸಭಾಧ್ಯಕ್ಷರು ನಿಯಮ 69 ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ನೀಡಿದ್ದಾರೆ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಸದಸ್ಯರಾದ ಸುರೇಶ್ ಕುಮಾರ್, ಜೆಡಿಎಸ್‌ನ ಎಂ.ಟಿ ಕೃಷ್ಣಪ್ಪ ಅವರು ಮಾತನಾಡಿದ್ದಾರೆ.

​ನಾನು ಘಟನೆ ನಡೆದ ದಿನವೇ ತೀವ್ರ ವಿಷಾದ ವ್ಯಕ್ತಪಡಿಸಿದ್ದೇನೆ. ಮಕ್ಕಳನ್ನು ಕಳೆದುಕೊಂಡ ದುಃಖದ ಭಾರ ಏನು ಎಂಬ ಅರಿವು ನನಗಿದೆ. ಈ ಘಟನೆ ನನ್ನನ್ನು ತೀವ್ರವಾಗಿ ಡಿಸ್ಟರ್ಬ್ ಮಾಡಿದೆ ಎಂದ ಅವರು, ​ವ್ಯವಸ್ಥೆಯಲ್ಲಿನ ಲೋಪಗಳಿಂದ ವಿನಾಕಾರಣ ದುರಂತಕ್ಕೀಡಾದ ಮಕ್ಕಳಾಗಲಿ, ಕುಟುಂಬಗಳ ಸದಸ್ಯರಾಗಲಿ ಬದುಕಿರುವವನ್ನು ಶಾಶ್ವತ ದುಃಖದಲ್ಲಿ ಮುಳುಗಿಸುತ್ತವೆ. ಮಕ್ಕಳು ಬದುಕಿದ್ದರೆ ಯಾರ್ಯಾರು ಯಾವ ಯಾವ ಸಾಧನೆ ಮಾಡುತ್ತಿದ್ದರೋ ಯಾರಿಗೆ ಗೊತ್ತು? ಎಂದರು.



​ಸುರೇಶ್‌ಕುಮಾರ್ ಅವರು ಸರ್ಕಾರವನ್ನು ಅಬೆಟರ್ ಎಂದು ಕರೆದರು. ಅವರು ಹಾಗೆ ಕರೆದದ್ದು ತಪ್ಪು ಸರಿಯೋ ಸದಸ್ಯರು ಮತ್ತು ಜನರು ತೀರ್ಮಾನಿಸುತ್ತಾರೆ. ನಾವು ಆಡಳಿತ ಪಕ್ಷದಲ್ಲಿ ಇರುವ ಕಾರಣ ನೀವು ಟೀಕೆ ಮಾಡುವುದು ಸಹಜ.

​ನಾವು ಉತ್ತರ ಕೊಡಬೇಕಾಗಿದೆ. ಈಗಾಗಲೇ ಪರಮೇಶ್ವರ್ ಅವರು ಕೊಡಬೇಕಾದ ಉತ್ತರವನ್ನು ಕೊಟ್ಟಿದ್ದಾರೆ. ತುಂಬ ಟೆಕ್ನಿಕಲ್‌ ವಿವರಗಳನ್ನೂ ವಿವರಿಸಿದ್ದಾರೆ. ಹಾಗಾಗಿ ಆ ಆಯಾಮಗಳನ್ನು ನಾನು ಹೆಚ್ಚು ಟಚ್ ಮಾಡುವುದಿಲ್ಲ.

ಈ ವಿಚಾರವನ್ನು ಆಡಳಿತ ಪಕ್ಷ-ವಿರೋಧ ಪಕ್ಷ, ಮಾಧ್ಯಮ, ಜನರು ಎಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ ವಿಚಾರ ಎಂದು ನಾನು ಭಾವಿಸಿದ್ದೇನೆ. ಭಕ್ತಿ, ವ್ಯಕ್ತಿ ಆರಾಧನೆ ಎಂಬುದು ಈ ದೇಶದಲ್ಲಿ ಬಹಳ ಸುಲಭವಾಗಿ ಸಂಭವಿಸುವ ವಿಷಯ ಎಂದು ಬಾಬಾ ಸಾಹೇಬರು ನಂವೆಂಬರ್ 25, 1949 ರ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ ಘಟನೆಗಳನ್ನು ನೋಡಿದರೆ ಅನೇಕ ಸಾರಿ ಆತಂಕವಾಗುತ್ತದೆ. ಜನರ ಮನಸ್ಸನ್ನು ಉನ್ಮಾದಗ್ರಸ್ತ ಮನಸ್ಥಿತಿಗೆ ಕೊಂಡೊಯ್ಯುವವರೂ ಕೂಡ ಈ ದುರಂತಕ್ಕೆ ಕಾರಣ ಅಲ್ಲವೇ ಎಂದು ನಾನು ಕೇಳಬಯಸುತ್ತೇನೆ.

​ನಾನು ಯಾವ ಯಾವ ಸಂದರ್ಭದಲ್ಲಿ ಕಾಲ್ತುಳಿತ ಪ್ರಕರಣಗಳು ಸಂಭವಿಸಿವೆ ಎಂದು ನೋಡಿದೆ. ಸಾಮಾನ್ಯವಾಗಿ 3 ಸಂದರ್ಭಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಧಾರ್ಮಿಕ ಸ್ಥಳಗಳಲ್ಲಿ ಸೇರುವ ಜನಜಂಗುಳಿ, ಕ್ರೀಡೆ ಅಥವಾ ಇನ್ಯಾವುದೇ ರೀತಿಯ ಸೆಲಬ್ರೇಶನ್‌ಗಳು ಅಥವಾ ಶೋಕಾಚರಣೆಗಳ ಸಂದರ್ಭದಲ್ಲಿ ಮತ್ತು ಭಯದಿಂದ ತಪ್ಪಿಸಿಕೊಂಡು ಓಡುವಾಗ ಕಾಲ್ತುಳಿತಗಳಾಗಿವೆ.

​2022 ಮತ್ತು 2025 ರಲ್ಲಿ ಗುಜರಾತ್ ಮುಂತಾದ ಕಡೆ ಸೇತುವೆಗಳು ಕುಸಿದು ನೂರಾರು ಜನ ಮರಣ ಹೊಂದಿದ್ದಾರೆ.

ಭಾರತದಲ್ಲಿ ಅಷ್ಟೆ ಅಲ್ಲ, ಜಗತ್ತಿನ ಮುಂದುವರಿದ ದೇಶಗಳಲ್ಲೂ ಕ್ರೀಡಾ ಕಾರ್ಯಕ್ರಮಗಳು ಮತ್ತು ವಿಜಯೋತ್ಸವಗಳಲ್ಲಿ ಕಾಲ್ತುಳಿತಗಳಿಗೆ ಮರಣ ಹೊಂದಿದವರ ಪ್ರಮಾಣ ಕಡಿಮೆ ಇಲ್ಲ. 2013 ರಲ್ಲಿ ಅಮೆರಿಕದಲ್ಲಿ 3 ಜನ ಮರಣ ಹೊಂದಿದ್ದರು. 1989 ರಲ್ಲಿ ಇಂಗ್ಲೆ0ಡಿನ ಶೆಫೀಲ್ಡ್ನಲ್ಲಿ 97 ಜನ ಮರಣ ಹೊಂದಿದ್ದರು. 2022 ರಲ್ಲಿ ಇಂಡೋನೇಷಿಯಾದ ಫುಟ್‌ಬಾಲ್ ಸ್ಟೇಡಿಯಂನಲ್ಲಿ 174 ಜನ ಮರಣ ಹೊಂದಿದ್ದಾರೆ. 2025ರ ಜೂನ್ ನಲ್ಲಿ ಪ್ಯಾರಿಸ್‌ನಲ್ಲಿ ಇಬ್ಬರು ಮರಣ ಹೊಂದಿದ್ದಾರೆ.

​ಸುರೇಶ್ ಕುಮಾರ್ ಅವರು ಓದಿಕೊಂಡವರು, ಸೂಕ್ಷ್ಮಜ್ಞರು ಎಂದು ಭಾವಿಸಿದ್ದೆ. ನೀವು ಅದನ್ನು ನಿನ್ನೆ ಸುಳ್ಳು ಮಾಡಿದಿರಿ. ನಮಗೆ ಅಬೆಟರ್ ಎನ್ನುವ ಮೊದಲು ನಾನು ಎಷ್ಟು ಪ್ರಕರಣಗಳಲ್ಲಿ ಅಬೆಟರ್ ಆಗಿದ್ದೆ ಎಂಬುದು ತಮ್ಮ ಮನಸ್ಸಿಗೆ ಬರಬೇಕಿತ್ತು. ನಿಮಗೆ ಅದು ಬರಲಿಲ್ಲ.

​ನಾನು ಮೊದಲೆ ಹೇಳಿದ ಹಾಗೆ, ಕ್ರೀಡೆ ಇನ್ನಿತರ ವಿಜಯೋತ್ಸವ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನ ಮರಣ ಹೊಂದುತ್ತಿದ್ದಾರೆ. ಜೊತೆಯಲ್ಲಿ ಸೇತುವೆ ಕುಸಿತ ಮುಂತಾದ ಪ್ರಕರಣಗಳಲ್ಲಿ ಭಯದಿಂದ ಜೀವ ಉಳಿಸಿಕೊಳ್ಳಲು ಓಡುವಾಗ ಕಾಲ್ತುಳಿತ ಉಂಟಾಗಿ ಮರಣ ಹೊಂದುತ್ತಿದ್ದಾರೆ.

​ಆರ್. ಅಶೋಕ್ ಮತ್ತು ಸುರೇಶ್ ಕುಮಾರ್ ರವರು ಮಾತನಾಡುವಾಗ ಸಮೂಹ ಸನ್ನಿ ಎಂಬ ಪದವನ್ನು ಬಳಸಿದರು. ಅದನ್ನು ಇಂಗ್ಲಿಷ್‌ನಲ್ಲಿ Mass Hysteria ಎನ್ನುತ್ತಾರೆ. ಈ ಸಮೂಹ ಸನ್ನಿ ಯಾಕಾಗುತ್ತದೆ. ಅದು ಬಡ ದೇಶ ಇರಲಿ, ಶ್ರೀಮಂತ ದೇಶ ಇರಲಿ ಎಲ್ಲಾ ಸಮಾಜಗಳಲ್ಲಿಯೂ ಸಂಭವಿಸುವ ಕಾಯಿಲೆ ಯಾಕಾಗಿದೆ? ಮತ್ತು ಅದಕ್ಕೆ ನೀಡಬೇಕಾದ ಚಿಕಿತ್ಸೆಗಳೇನು ಎನ್ನುವ ಬಗ್ಗೆ ನಾವುಗಳೆಲ್ಲರೂ ಗಂಭೀರವಾಗಿ ಯೋಚಿಸಬೇಕಾಗಿದೆ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾದ 18 ವರ್ಷಗಳಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದಿರಲಿಲ್ಲ. 2025 ರಲ್ಲಿ ನಡೆದ ಆವೃತ್ತಿಯಲ್ಲಿ ಮಾತ್ರ ಟ್ರೋಫಿ ಗೆದ್ದಿತ್ತು. ಆರ್.ಸಿ.ಬಿ. ಮಾಲೀರ‍್ಯಾರು ಎಂಬ ಸಂಗತಿ ನಗಣ್ಯವಾಗಿ ಬೆಂಗಳೂರು ಮತ್ತು ಕರ್ನಾಟಕ ವರ್ಸಸ್ ಪಂಜಾಬ್ ಎನ್ನುವ ಮನೋಭಾವನೆ ಉದ್ಭವವಾಗಿದೆ. ಕರ್ನಾಟಕದ ಬೆಂಗಳೂರಿನ ಹೆಸರನ್ನಿಟ್ಟುಕೊಂಡು ಆಟವಾಡುವ ತಂಡ, ಕರ್ನಾಟಕಕ್ಕೇ ಆಟವಾಡುತ್ತಿದೆ ಎಂಬ ಭಾವನಾತ್ಮಕವಾದ ಮನಸ್ಥಿತಿಯನ್ನು ಮಾಧ್ಯಮಗಳು ಹಾಗೂ ಸಮಾಜ ಜನರಲ್ಲಿ ಕಟ್ಟಿ ಬೆಳೆಸಿವೆ.

ಇದಷ್ಟೆ ಅಲ್ಲದೆ, ಐಪಿಎಲ್. ಕ್ರಿಕೆಟ್ ತಂಡಗಳಲ್ಲಿ ಜಗತ್ತಿನಲ್ಲಿಯೆ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಆರ್‌ಸಿಬಿ ಸಹ ಒಂದಾಗಿದೆ. ಹಾಗಾಗಿ ಯುವಜನರಲ್ಲಿ ಈ ಹುಚ್ಚು ಉನ್ಮಾದ ತುಂಬಿ ತುಳುಕುತ್ತಿದೆ.

​ಅನೇಕ ಸಾರಿ ನಾವು ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಬೇಕಾಗುತ್ತದೆ. ನಮ್ಮ ಆತ್ಮಸಾಕ್ಷಿಗಳಿಗೆ ಒಪ್ಪದಿದ್ದರೂ ಕೆಲವೊಮ್ಮೆ ಜನರ ಆಶೋತ್ತರಗಳು ಮುಖ್ಯವಾಗುತ್ತವೆ. ಇದು ಪ್ರಜಾಪ್ರಭುತ್ವದ ಲಕ್ಷಣ ಕೂಡ.

​ಆರ್‌ಸಿಬಿ. ಬೆಂಗಳೂರಿನ ಅಸ್ಮಿತೆ ಅಷ್ಟೆ ಅಲ್ಲ. ಕರ್ನಾಟಕದ ಅಸ್ಮಿತೆ ಎಂಬ0ತೆ ಮಾಡಲಾಯಿತು. ಹಾಗಾಗಿ ಆರ್.ಸಿ.ಬಿ. ಗೆದ್ದಾಗ ಫೆಲಿಸಿಟೇಟ್ ಮಾಡಲಿಲ್ಲ ಎಂದರೆ ಕನ್ನಡಿಗರ ಭಾವನೆಗಳಿಗೆ ಮಾಡಿದ ಅವಮಾನ ಎಂಬಂತೆ ಬಿಂಬಿಸಲು ಪ್ರಯತ್ನಿಸಲಾಯಿತು. ಹಾಗಾಗಿ ಜನರ ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಆದ್ಯತೆ ಕೂಡ.

​ಆರ್. ಅಶೋಕ್ ಅವರು ಸೆಲೆಕ್ಟೆಡ್ ಅಪ್ರೋಚ್ ಮೂಲಕ ತಮ್ಮ ಮಾತುಗಳನ್ನಾಡಿದರು ಎಂದು ನಾನು ಮೊದಲೆ ಹೇಳಿದೆ. 05.06.2025 ರ ಪ್ರಜಾವಾಣಿಯ ಸಂಪಾದಕೀಯದಲ್ಲಿ ಮುಖ್ಯವಾದ ಮಾತೊಂದನ್ನು ಬಿಟ್ಟು ಉಳಿದದ್ದನ್ನು ಉಲ್ಲೇಖ ಮಾಡಿದರು. ಆ ಸಂಪಾದಕೀಯದಲ್ಲಿ “ವಿಧಾನಸೌಧದಿಂದ ಕ್ರೀಡಾಂಗಣದವರೆಗೆ ತೆರೆದ ಬಸ್‌ನಲ್ಲಿ ಆಟಗಾರರ ಮೆರವಣಿಗೆ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಮೂಲಕ ಪೊಲೀಸರು ಒಂದಷ್ಟು ಎಚ್ಚರಿಕೆಯನ್ನು ತೋರಿದ್ದಾರೆ. ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದಕ್ಕಾಗಿ ಸರ್ಕಾರವನ್ನು ಬಿ.ಜೆ.ಪಿ., ಜೆ.ಡಿ.ಎಸ್. ಪಕ್ಷಗಳು ಎಕ್ಸ್ ಮೂಲಕ ಟೀಕಿಸಿದ್ದವು ಎಂಬುದರಿಂದ ಸಮೂಹ ಸನ್ನಿಯ ಲಾಭ ಪಡೆಯುವ ಹವಣಿಕೆಯನ್ನು ಸರ್ಕಾರದ ಜೊತೆಗೆ ವಿರೋಧ ಪಕ್ಷಗಳೂ ಮಾಡಿದ್ದವು ಎಂಬುದು ಮನದಟ್ಟಾಗುತ್ತದೆ.” ಎಂದು ಉಲ್ಲೇಖಿಸಲಾಗಿದೆ. ಈಗ ಸುರೇಶ್ ಕುಮಾರ್ ಅವರು ಹೇಳಬೇಕು. ಬಿಜೆಪಿ, ಜೆಡಿಎಸ್ ಪಕ್ಷಗಳನ್ನೂ ಹಾಗೂ ತಾವೂ ಸೇರಿದಂತೆ ತಮ್ಮ ಮತ್ತು ತಮ್ಮ ಮಿತ್ರ ಪಕ್ಷವಾದ ಜೆಡಿಎಸ್‌ನವರನ್ನೂ ಅಬೇಟರ್ಸ್ ಎಂದು ಕರೆಯುವ ನೈತಿಕ ಧೈರ್ಯ ಮಾಡುತ್ತೀರಾ? ಎಂದು ಪ್ರಶ್ನಿಸಿದರು.

ಹಲವಾರು ವರ್ಷಗಳ ಅಭಿಮಾನಿಗಳ ಕನಸನ್ನು ಆರ್‌ಸಿಬಿ ಈ ವರ್ಷ ನನಸು ಮಾಡಿದೆ! ಆದರೆ, ತೆರೆದ ಬಸ್‌ನಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ ಪರಮೇಶ್ವರ್ ಅವರು ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ನೆಚ್ಚಿನ ಆಟಗಾರರನ್ನು ಅತಿ ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ಅಭಿಮಾನಿಗಳ ಈ ಸಂಭ್ರಮಕ್ಕೆ ಕಲ್ಲು ಹಾಕಿದ ಪರಮೆಶ್ವರ್ ಎಂದು ಬಿಜೆಪಿ ಅಧಿಕೃತವಾದ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ. ​ಜನರ ಉನ್ಮಾದದ ಕಿಚ್ಚಿಗೆ ನೀವುಗಳು ತುಪ್ಪ ಸುರಿದಿದ್ದೀರೋ ಇಲ್ಲವೋ? ಹೇಳಿ ಎಂದು ಕೇಳಿದರು.

​ಸುರೇಶ್ ಕುಮಾರ್ ಮತ್ತು ಆರ್. ಅಶೋಕ್ ಅವರು ಆರ್.ಸಿ.ಬಿ. ತಂಡದ ಮಾಲೀಕರು ವಿಜಯ ಮಲ್ಯ, ಡಿಯಾಜಿಯೋ ಕಂಪನಿ ಇತ್ಯಾದಿ ಮಾತನಾಡಿದರು. ಅವರ ಕೆಲವು ಮಾತುಗಳಿಗೆ ನನ್ನ ಸಹಮತ ಇದೆ. ಆದರೆ, 2022 ರ ಮೇ 29 ರಂದು ಕರೋನಾ ಉತ್ತುಂಗ ಸ್ಥಿತಿಯಲ್ಲಿದ್ದಾಗ, ದೇಶದಲ್ಲಿ ಜನರು ಆಕ್ಸಿಜನ್ ಇಲ್ಲದೆ, ಔಷಧಿಗಳಿಲ್ಲದೆ, ವೆಂಟಿಲೇಟರ್‌ಗಳಿಲ್ಲದೆ ಸಾಯುವಂತಹ ಸ್ಥಿತಿಯಲ್ಲಿದ್ದಾಗ ಗುಜರಾತ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಗೆದ್ದಿತು. ಅಹಮದಾಬಾದ್‌ನ ನರೇಂದ್ರ ಮೋದಿ ಸೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಸದರಿ ಪಂದ್ಯಕ್ಕೆ ಅಮಿತ್ ಶಾ ಅವರು ಹೋಗಬೇಕೋ, ಮೋದಿಯವರು ಹೋಗಬೇಕೋ ಎಂಬ ಚರ್ಚೆ ನಡೆದು ಕೊನೆಗೆ ಅಮಿತ್ ಶಾ ಅವರು ತಮ್ಮ ಪತ್ನಿ ಸೋನಲ್ ಶಾ ಅವರು, ಗುಜರಾತ್‌ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಇತರೆ ನಾಯಕರುಗಳು, ಸಚಿವರುಗಳ ಜತೆ ಮ್ಯಾಚ್ ನೋಡಿದರು. ಮ್ಯಾಚ್ ನೋಡಿದ್ದು ಅಷ್ಟೆ ಅಲ್ಲ, ಗುಜರಾತ್‌ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಆಜಾದಿ ಕಾ ಅಮೃತ್ ಮಹೋತ್ಸವ್ ಮತ್ತು ಭಾರತದ ಹೆಮ್ಮೆಯ ಲಾಂಛನಗಳುಳ್ಳ ವೇದಿಕೆಯಲ್ಲಿ ಟ್ರೋಫಿ ನೀಡಿದರು. ಮತ್ತು ಅಹಮದಾಬಾದ್‌ನ ಬೀದಿಗಳಲ್ಲಿ ಮೆರವಣಿಗೆ ಮಾಡಲು ಅವಕಾಶ ಕೊಟ್ಟರು. ಇದರಿಂದ ಕೊರೋನಾ ಸೋಂಕು ಇನ್ನಷ್ಟು ಹೆಚ್ಚಲು ಕಾರಣವಾಯಿತು. ಮೋದಿಯವರು 2020ರ ಫೆಬ್ರವರಿಯಲ್ಲಿ ದೇಶದಲ್ಲಿ ಕೊರೋನಾ ಹರಡುತ್ತಿದ್ದಾಗ ಟ್ರಂಪ್ ಕರೆದುಕೊಂಡು ‘ಹೌಡಿ ಮೋದಿ’ ಕಾರ್ಯಕ್ರಮ ಮಾಡಿ, ಕೊರೋನಾ ಹರಡಿ ಲಕ್ಷಾಂತರ ಜನರ ಸಾವಿಗೆ ಕಾರಣರಾದರು. ಸುರೇಶ್ ಕುಮಾರ್ ಅವರು ಮೋದಿಯವರನ್ನು, ಟ್ರಂಪ್ ಅವರನ್ನು, ಭೂಪೇಂದ್ರ ಪಟೇಲರನ್ನು ಅಬೇಟರ್ಸ್ ಎಂದು ಕರೆಯುವರೇ?

​ಆರ್.ಸಿ.ಬಿ. ತಂಡದ ಮಾಲೀಕರ ಹಿನ್ನೆಲೆ ಸರಿ ಇಲ್ಲ, ಒಪ್ಪುತ್ತೇನೆ. ಆದರೆ ಗುಜರಾತ್ ಟೈಟನ್ಸ್ ತಂಡದ ಮಾಲೀಕರಾದ ಟೊರೆಂಟ್ ಗ್ರೂಪ್‌ನ ಮೆಹ್ತಾ ಕುಟುಂಬದ ಹಿನ್ನೆಲೆ ಸರಿ ಇದೆಯೇ? ಎಂದು ನೋಡಿದರೆ, ಟೊರೆಂಟ್ ಗ್ರೂಪ್‌ನ ಔಷಧಿ, ವಿದ್ಯುತ್, ಹಣಕಾಸಿಗೆ ಸಂಬಂಧಿಸಿದಂತೆ ನಡೆದ ಫ್ರಾಡ್‌ಗಳಿಗೆ ಸಂಬಂಧಿಸಿದಂತೆ ಸೆಬಿ ಸಂಸ್ಥೆಯು ಕೇಸ್‌ಗಳನ್ನು ಬುಕ್ ಮಾಡಿತ್ತು. ಆನಂತರ ಪ್ರಭಾವ ಬೀರಿ ಕೇಸ್‌ಗಳಿಂದ ಮುಕ್ತ ಮಾಡಲಾಯಿತು. ಗುಜರಾತ್ ಟೈಟನ್ಸ್ ನ ಇನ್ನೊಬ್ಬ ಪಾಲುದಾರರಾದ ಸಿವಿಸಿ ಸಂಸ್ಥೆಯ ಮೇಲೂ ಗಂಭೀರವಾದ ಆರೋಪಗಳಿವೆ ಎಂಬುದು ವಿರೋಧ ಪಕ್ಷಗಳವರಿಗೆ ತಿಳಿದಿರಲಿ ಎಂದು ಹೇಳುತ್ತಿದ್ದೇನೆ.

​ಸನ್ಮಾನ್ಯ ಸುರೇಶ್ ಕುಮಾರ್ ಅವರೆ, ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತೇನೆ. 2006 ರಲ್ಲಿ ರಾಜ್‌ಕುಮಾರ್ ರವರು ಮೃತರಾದಾಗ ಗೋಲಿಬಾರ್‌ನಲ್ಲಿ, ಕಾಲ್ತುಳಿತದಲ್ಲಿ ಜನರು ಮರಣ ಹೊಂದಿದಾಗ ನಿಮ್ಮ ಸರ್ಕಾರ ಜೆಡಿಎಸ್ ಜೊತೆ ಸೇರಿಕೊಂಡಿತ್ತು. ಆಗ ನಿಮ್ಮ ಸರ್ಕಾರವನ್ನು ಹಾಗೂ ಅಂದಿನ ಮುಖ್ಯಮಂತ್ರಿ ಯವರನ್ನು ಅಬೇಟರ್ಸ್ ಎಂದು ಕರೆದ್ರಾ?

ಹಾವೇರಿಯಲ್ಲಿ ಗೊಬ್ಬರ ನೀಡದೆ ರೈತರ ಮೇಲೆ ಗುಂಡು ಹಾರಿಸಿ ಕೊಂದಾಗ ನಿಮ್ಮ ಸರ್ಕಾರವನ್ನು ಹಾಗೂ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರನ್ನು ಅಬೇಟರ್ಸ್ ಎಂದು ಕರೆಯುವ ಧೈರ್ಯ ಮಾಡಿದ್ರಾ?

​2022 ರ ಮೇ, 2 ರಂದು ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 32 ಜನ ಮರಣ ಹೊಂದಿದಾಗ ನೀವು ಬಸವರಾಜ ಬೊಮ್ಮಾಯಿಯವರನ್ನು ಹಾಗೂ ಅಂದಿನ ಆರೋಗ್ಯ ಸಚಿವರನ್ನು ಅಬೇರ್ಸ್ ಎಂದು ಕರೆದ್ರಾ?

​ಉತ್ತರ ಪ್ರದೇಶದಲ್ಲಿ, ದೆಹಲಿಯಲ್ಲಿ, ಗುಜರಾತ್‌ನಲ್ಲಿ, ಮಹಾರಾಷ್ಟ್ರದಲ್ಲಿ, ಗೋವಾದಲ್ಲಿ, ಮಧ್ಯಪ್ರದೇಶದಲ್ಲಿ ಕಾಲ್ತುಳಿತದಲ್ಲಿ, ಸೇತುವೆಗಳ ಕುಸಿತದಲ್ಲಿ ನೂರಾರು ಜನರು ಮರಣ ಹೊಂದಿದಾಗ ಅಲ್ಲಿನ ಬಿಜೆಪಿ ಮುಖ್ಯಮಂತ್ರಿಗಳನ್ನು ಅಬೇಟರ್ಸ್ ಎಂದು ಕರೆದ್ರಾ?

​ಹಾಗೆ ನೀವು ಕರೆಯುವುದಾದರೆ ಇವುಗಳು ಕೊನೆ-ಮೊದಲಿಲ್ಲದ ಪ್ರಶ್ನೆಗಳಾಗುತ್ತವೆ. ಆಕ್ಸಿಜನ್ ದುರಂತಕ್ಕೆ ಕಾರಣರಾದವರಿಗೆ ಯಾವ ಶಿಕ್ಷೆ ಕೊಟ್ಟಿತ್ತು? ಯಾರನ್ನು ಅಮಾನತ್ತು ಮಾಡಿದ್ದಿರಿ? ಗಿಲ್ಟಿ ಯಾರು ಎಂದು ಪತ್ತೆ ಹಚ್ಚಿದಿರಿ? ನಾನು ಬಿಜೆಪಿ ರಾಜ್ಯಗಳಲ್ಲಿ ಕಾಲ್ತುಳಿತಗಳು ಸಂಭವಿಸಿ ಮರಣ ಹೊಂದಿದ ಪ್ರಕರಣಗಳ ಕುರಿತು ಪರಿಶೀಲಿಸಿದಾಗ ಅನೇಕ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಶಿಕ್ಷೆಯನ್ನೂ ಕೊಟ್ಟಿಲ್ಲ, ಬಹುಪಾಲು ಪ್ರಕರಣಗಳಲ್ಲಿ ಸಮರ್ಪಕ ತನಿಖೆಯೂ ಆಗಲಿಲ್ಲ.

2002 ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡಗಳ ಜವಾಬ್ದಾರಿಯನ್ನು ಯಾರ ತಲೆಗೆ ಕಟ್ಟುತ್ತೀರಿ? ಯಾರನ್ನು ಅಬೇಟರ್ಸ್ ಎಂದು ಅಥವಾ ಮರ್ಡರ‍ರ್ಸ್ ಎಂದು ಕರೆಯುತ್ತೀರಿ? ಎಂಬುದನ್ನು ಸ್ಪಷ್ಟಪಡಿಸಬೇಕು.

ನಿಮ್ಮ ಸರ್ಕಾರಗಳ ಹಾಗೆ ದುರಂತ ನಡೆದ ಮೇಲೆ ನಾವು ಕೈಕಟ್ಟಿ ಕೂರಲಿಲ್ಲ. ತಕ್ಷಣವೇ 04.06.2025 ರಂದೇ ಸರ್ಕಾರದ ಆದೇಶ ಸಂಖ್ಯೆ: ಹೆಚ್.ಡಿ./218/ಪಿಸಿಇ/2025, ದಿನಾಂಕ: 04.06.2025 ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಅಧ್ತಕ್ಷತೆಯಲ್ಲಿ ತನಿಖೆ ಮಾಡಲು ಆದೇಶ ಹೊರಡಿಸಲಾಯಿತು ಮತ್ತು ಆದೇಶ ಸಂಖ್ಯೆ ಹೆಚ್‌ಡಿ/220/ಪಿಸಿಇ/2025, ದಿನಾಂಕ: 05.06.2025 ರಂದು ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರ ಏಕಸದಸ್ಯರ ತನಿಖಾ ಆಯೋಗವನ್ನು ನೇಮಿಸಿ ಆದೇಶಿಸಲಾಯಿತು. ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರು ದಿನಾಂಕ: 10.07.2025 ರಂದು ತಮ್ಮ ವರದಿಯನ್ನು ಹಾಗೂ ಬೆಂಗಳೂರು ಜಿಲ್ಲಾಧಿಕಾರಿಗಳು ದಿನಾಂಕ: 11.07.2025 ರಂದು ತಮ್ಮ ಮೆಜೆಸ್ಟೀರಿಯಲ್ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಈ ಎರಡೂ ವರದಿಗಳಲ್ಲೂ ಆರ್.ಸಿ.ಬಿ., ಡಿ.ಎನ್.ಎ., ಕೆ.ಎಸ್.ಸಿ.ಎ. ಮತ್ತು ನಗರ ಪೊಲಿಸರು ಮಾಡಿದ ಎಡವಟ್ಟುಗಳಿಂದ ಈ ದುರಂತ ಸಂಭವಿಸಿತು ಎಂಬುದು ಸ್ಪಷ್ಟವಾಗಿದೆ. ನಾವು ಘಟನೆ ನಡೆದ ಕೂಡಲೇ ಸಂಬ0ಧಪಟ್ಟ ಪೊಲಿಸ್ ಕಮೀಷನರ್ ನಿಂದ ಹಿಡಿದು ಪೊಲೀಸ್ ಇನ್ಸ್ಪೆಕ್ಟರ್ ವರೆಗೆ ಅಮಾನತ್ತು ಮಾಡಿ ಆದೇಶ ಹೊರಡಿಸಿದೆವು ಹಾಗೂ ಆರ್.ಸಿ.ಬಿ., ಡಿ.ಎನ್.ಎ. ಹಾಗೂ ಕೆ.ಎಸ್.ಸಿ.ಎ. ಗಳ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆವು.

ಈ ಸುದ್ದಿಯನ್ನೂ ಓದಿ | DK Shivakumar: ಡಿಕೆಶಿ ಬಾಯಲ್ಲಿ ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆ; ವಿಡಿಯೊ ವೈರಲ್‌

ತನಿಖಾ ವರದಿಗಳ ಪ್ರಕಾರ ಆರ್.ಸಿ.ಬಿ. ಯು 04.06.2025 ರಂದು ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ ವಿಜಯೋತ್ಸವ ಆಚರಣೆ ಮಾಡುವ ಬಗ್ಗೆ ಟ್ವೀಟ್ ಅನ್ನು 16 ಲಕ್ಷ ಜನ ವೀಕ್ಷಿಸಿದ್ದರು. 8 ಗಂಟೆಗೆ ಮಾಡಿದ್ದ ಟ್ವೀಟ್ ಅನ್ನು 4 ಲಕ್ಷದ 35 ಸಾವಿರ ಜನ ನೋಡಿದ್ದರು. ಮೂರನೇ ಟ್ವೀಟ್ 03 ಗಂಟೆ 10 ನಿಮಿಷಕ್ಕೆ ಮಾಡಲಾಯಿತು, ಅದನ್ನು 7.10 ಲಕ್ಷ ಜನರು ನೋಡಿದ್ದರು. ಆರ್.ಸಿ.ಬಿ., ಡಿ.ಎನ್.ಎ. ಮತ್ತು ಕೆ.ಎಸ್.ಸಿ.ಎ. ಅವರಿಗೆ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ಅನುಮತಿ ಕೊಟ್ಟಿರಲಿಲ್ಲ.