ಬೆಂಗಳೂರು: ಸಚಿವ ಸ್ಥಾನಕ್ಕೆ ನನ್ನ ರಾಜೀನಾಮೆ ಅಥವಾ ಸಂಪುಟದಿಂದ ವಜಾ ಮಾಡಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಎಲ್ಲೆಲ್ಲಿ ಏನು ನಡೆದಿದೆ ಎಂಬ ಬಗ್ಗೆ ಸಮಯ ಬಂದಾಗ ತಿಳಿಸುತ್ತೇನೆ. ಮಾಜಿ ಸಚಿವ ಎಂದು ಕರೆಸಿಕೊಳ್ಳಲು ನನಗೆ ಖುಷಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ನನಗೆ ಸಚಿವನಾಗಲು ಅವಕಾಶ ನೀಡಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗಿ ಧನ್ಯವಾದ ಅರ್ಪಸಿದ್ದೇನೆ ಎಂದು ಕೆ.ಎನ್.ರಾಜಣ್ಣ (KN Rajanna Resigns) ಹೇಳಿದರು.
ಸುದ್ದಿಗಾರರೊಂದೊಂದಿಗೆ ಮಾತನಾಡಿರುವ ರಾಜಣ್ಣ ಅವರು, ಸಿಎಂ ಸಿದ್ದರಾಮಯ್ಯ ಮಾತನಾಡಿದ ಬಳಿಕ ನಾನು ಮಾತನಾಡೋ ಎಂದಿದ್ದೆ. ಆದರೆ ಅವರು ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ನಾನು ಮಾತನಾಡುತ್ತಿದ್ದೇನೆ. ರಾಜೀನಾಮೆಯನ್ನು ಸಿಎಂ ಒಪ್ಪಿದ ಬಳಿಕ ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಸಚಿವ ಸಂಪುಟದಿಂದ ಕೈಬಿಡುವುದು ನಮ್ಮ ಹೈಕಮಾಂಡ್, ಪಕ್ಷದ ನಿರ್ಧಾರ. ಹೀಗಾಗಿ ಈಗ ಅವರಿಗೆ ಯಾವುದೇ ಮುಜುಗರ ಆಗವಂತಹ ಯಾವುದೇ ಹೇಳಿಕೆ ನೀಡಲ್ಲ.
ಇಂದು ಪಕ್ಷದ ತೀರ್ಮಾನವಾಗಿದೆ. ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗುತ್ತೇನೆ. ಪಕ್ಷದ ವರಿಷ್ಠರಿಗೆ ತಪ್ಪು ಗ್ರಹಿಕೆ ಆಗಿದೆ ಎಂಬ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಸಚಿವರು, ಶಾಸಕರ ಜತೆಗೆ ದೆಹಲಿಗೆ ಹೋಗುತ್ತೇನೆ. ಪಕ್ಷದ ವರಿಷ್ಠರಿಗೆ ಆಗಿರುವ ತಪ್ಪು ಗ್ರಹಿಕೆಯನ್ನು ಸರಿಪಡಿಸುತ್ತೇನೆ. ವರಿಷ್ಠರ ಮಾರ್ಗದರ್ಶನದಂತೆ ಮುಂದುವರಿಯುತ್ತೇನೆ ಎಂದರು.