ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವನ್ನು (Mysuru Dasara) ಈ ಬಾರಿ ಬೂಕರ್ ಪ್ರಶಸ್ತಿ ಪುರಸ್ಕೃತ ಕನ್ನಡದ ಲೇಖಕಿ ಬಾನು ಮುಷ್ತಾಕ್ (Banu Mushtaq) ಅವರು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಅಧಿಕೃತವಾಗಿ ಶುಕ್ರವಾರ ಘೋಷಣೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಅವರು, ಈ ಬಾರಿ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದು, ಜಿಲ್ಲಾಡಳಿತದ ವತಿಯಿಂದ ಬಾನು ಮುಷ್ತಾಕ್ ಅವರನ್ನು ಗೌರವದಿಂದ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಬಾನು ಮುಷ್ತಾಕ್ ಅವರ ಕೃತಿ ಎದೆಯ ಹಣತೆಗೆ ಬುಕರ್ ಪ್ರಶಸ್ತಿ ದೊರೆತಿದ್ದು, ಕರ್ನಾಟಕದ ಲೇಖಕಿಗೆ ಈ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ರೈತ ಸಂಘ, ಕನ್ನಡ ಚಳವಳಿಯ ಜೊತೆಗೆ ಹೋರಾಟದ ಹಿನ್ನೆಲೆಯುಳ್ಳ ಬಾನು ಮುಷ್ತಾಕ್, ಪ್ರಗತಿಪರ ಚಿಂತಕರೂ ಆಗಿದ್ದಾರೆ ಎಂದರು. ಈ ಬಾರಿ ಶಾಸ್ತ್ರದ ಪ್ರಕಾರ ಹನ್ನೊಂದು ದಿನ ದಸರಾ ನಡೆಯಲಿದೆ. ಅಕ್ಟೋಬರ್ 2 ರಂದು ವಿಜಯದಶಮಿ ಎಂದರು.
ರಕ್ಷಣಾ ಸಚಿವರಿಗೆ ಪತ್ರ
ಮೈಸೂರು ದಸರಾ ಸಂದರ್ಭದಲ್ಲಿ ವೈಮಾನಿಕ ಪ್ರದರ್ಶನಕ್ಕೆ ಅನುಮತಿ ದೊರೆತಿದ್ದು, ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ದಸರಾ ವೀಕ್ಷಣಗೆ ಆಗಮಿಸಬೇಕೆಂದು ಪತ್ರ ಬರೆದಿದ್ದೇನೆ ಎಂದರು.
ಆ. 29 ರಂದು ಪಾದಯಾತ್ರೆಯಲ್ಲಿ ಭಾಗಿ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಬಿಹಾರದಲ್ಲಿ ಮತಗಳ್ಳತನ ನಡೆದಿರುವುದನ್ನು ವಿರೋಧಿಸಿ 16 ದಿನಗಳ ಪಾದಯಾತ್ರೆಯನ್ನು ಕೈಗೊಂಡಿದ್ದು, ಈ ತಿಂಗಳ 29 ರಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.
ಲೋಕಸಭೆಯಲ್ಲಿ 30 ದಿನಗಳ ಕಾಲ ಜೈಲು ಶಿಕ್ಷೆಗೊಳಗಾದ ಪ್ರಧಾನ ಮಂತ್ರಿ ಮುಖ್ಯಮಂತ್ರಿಗಳನ್ನು ವಜಾ ಮಾಡುವ ಮಸೂದೆ ಬಗ್ಗೆ ಮಾತನಾಡಿ, ಮಸೂದೆಯನ್ನು ಸದನ ಸಮಿತಿಗೆ ಶಿಫಾರಸು ಮಾಡಲಾಗಿದೆ ಎಂದರು.