Murder threat: ತಲೆ ಕಡಿದು ದೆಹಲಿ ಗೇಟ್ನಲ್ಲಿ ನೇತು ಹಾಕುತ್ತೇವೆ: ಹಿಂದೂ ಮುಖಂಡನಿಗೆ ಜೈಷ್ ಉಗ್ರ ಸಂಘಟನೆ ಹೆಸರಿನಲ್ಲಿ ಕೊಲೆ ಬೆದರಿಕೆ
Murder Threat: ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಎಂಬವರಿಗೆ ವಾಟ್ಸ್ಆ್ಯಪ್ ಮೂಲಕ ಉರ್ದು ಬಾಷೆಯಲ್ಲಿ ಆಡಿಯೋ ಮೆಸೇಜ್ ಬಂದಿದೆ. ಹಲವು ಹಿಂದೂ ಮುಖಂಡರ ಪಟ್ಟಿ ಸಿದ್ಧ ಮಾಡಿದ್ದೇವೆ. ಸುಹಾಸ್ ಶೆಟ್ಟಿ ಕೂಡ ಪಟ್ಟಿಯಲ್ಲಿದ್ದ ಎಂದು ಅದರಲ್ಲಿ ತಿಳಿಸಲಾಗಿದೆ.

ಬೆದರಿಕೆ ಸಂದೇಶ

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕೆಲವು ಹಿಂದೂ ಮುಖಂಡರಿಗೆ ಜೈಷ್ ಎ ಮೊಹಮ್ಮದ್ (Jaish-e-Mohammed) ಉಗ್ರ ಸಂಘಟನೆ ಹೆಸರಿನಲ್ಲಿ ಕೊಲೆ ಬೆದರಿಕೆ ಪತ್ರ ರವಾನೆಯಾಗಿದೆ. ‘ನಿನ್ನ ಸ್ನೇಹಿತನ ಕೈ ಕಾಲು ಕಡಿಯುತ್ತೇವೆ. ನಂತರ ತಲೆ ಕಡಿದು ದೆಹಲಿಯ ಮೈನ್ ಗೇಟ್ನಲ್ಲಿ ನೇತು ಹಾಕುತ್ತೇವೆ. ನಾವು ಹಿಂದೂ ಮುಖಂಡರ (Hindu leaders) ಲಿಸ್ಟ್ ರೆಡಿ ಮಾಡಿದ್ದೇವೆ. ನಾವು ಈಗಲೇ ದೆಹಲಿ ತಲುಪಿಯಾಗಿದೆ’ ಎಂದು ಮಂಗಳೂರಿನ ಹಿಂದೂ ಜಾಗರಣ ವೇದಿಕೆ (Hindu Jagarana Vedike) ಮುಖಂಡನಿಗೆ ವಿದೇಶಿ ಸಂಖ್ಯೆಯಿಂದ ಬೆದರಿಕೆ ಸಂದೇಶ (murder Threat) ಬಂದಿದೆ.
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಎಂಬವರಿಗೆ ವಾಟ್ಸ್ಆ್ಯಪ್ ಮೂಲಕ ಉರ್ದು ಬಾಷೆಯಲ್ಲಿ ಆಡಿಯೋ ಮೆಸೇಜ್ ಬಂದಿದೆ. ‘ಹಲವು ಹಿಂದೂ ಮುಖಂಡರ ಪಟ್ಟಿ ಸಿದ್ಧ ಮಾಡಿದ್ದೇವೆ. ನಿನ್ನ (ನರಸಿಂಹ ಮಾಣಿ) ಹೆಸರು ಲಿಸ್ಟ್ ನಲ್ಲಿ ಮೊದಲಿಗಿದೆ. ನಿನ್ನ ಎಲ್ಲಾ ಚಲನವಲನಗಳನ್ನು ಗಮನಿಸುತ್ತಿದ್ದೇವೆ. ಕೊಲೆಯಾದ ಸುಹಾಸ್ ಶೆಟ್ಟಿ ಕೂಡಾ ನಮ್ಮ ಪಟ್ಟಿಯಲ್ಲಿದ್ದ. ಆದರೆ, ಯಾರೋ ಒಳ್ಳೆಯ ಜನ ಅವನನ್ನು ಕೊಂದುಹಾಕಿದ್ದಾರೆ. ನಿನ್ನ ಸ್ನೇಹಿತ ರಂಜಿತ್ ಎಂಬವನನ್ನು ಕೊಲ್ಲುತ್ತೇವೆ. ತಲೆ ಕಡಿದು ಸುಲಭವಾಗಿ ಕೊಲ್ಲುವುದಿಲ್ಲ. ಮೊದಲು ಆತನ ಕೈ ಕಾಲು ಕಡಿಯುತ್ತೇವೆ. ನಂತರ ತಲೆ ಕಡಿದು ದೆಹಲಿಯ ಮೈನ್ ಗೇಟ್ನಲ್ಲಿ ನೇತು ಹಾಕುತ್ತೇವೆ. ನಾವು ದೆಹಲಿಗೆ ಬಂದು ತಲುಪಿಯಾಗಿದೆ. ನಿಮ್ಮ ಉಲ್ಟಾ ಲೆಕ್ಕಾಚಾರ ಸ್ಟಾರ್ಟ್ ಆಗಿದೆ’ ಎಂದು ಉಗ್ರರ ಹೆಸರಿನಲ್ಲಿ ಬಂದ ಸಂದೇಶದಲ್ಲಿದೆ.
‘ನಿನ್ನನ್ನು (ನರಸಿಂಹ ಮಾಣಿ) ಹೇಗೆ ಕೊಲ್ಲುತ್ತೇವೆ ಎಂದು ಅಲ್ಲಾನಿಗೆ ಕೂಡ ಗೊತ್ತಿಲ್ಲ. ನಿನ್ನನ್ನು ಕೊಲೆ ಮಾಡಿದ ರೀತಿಯನ್ನು ನೋಡಿ ಜನ ಕೊಲ್ಲುವ ವಿಧಾನವನ್ನೇ ಮರೆಯಲಿದ್ದಾರೆ. ಮುಸ್ಲಿಮರಿಗೆ ತೊಂದರೆ ಕೊಡುವುದನ್ನು ಬಿಟ್ಟು ನಿನ್ನ ಬಗ್ಗೆ ಯೋಚಿಸು. ನಿಮ್ಮ ಪಾರ್ಟಿ ಅಥವಾ ಯಾವುದೇ ಮುಖಂಡರು ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ. ನಿಮ್ಮ ಜೊತೆಗೆ ನಿಮ್ಮ ಮುಖಂಡರನ್ನು ಮುಗಿಸಲಾಗುವುದು. ಇದು ಮುಜಾಹಿದೀನ್ ಸಂದೇಶ’ ಎಂದು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೆಸರಿನಲ್ಲಿ ಬಂದ ಸಂದೇಶದಲ್ಲಿ ಹೇಳಲಾಗಿದೆ.
ವಿದೇಶಿ ಸಂಖ್ಯಗಳಿಂದ ಸಂದೇಶ, ಪೊಲೀಸರಿಗೆ ದೂರು
ಬೆದರಿಕೆ ಸಂದೇಶ ಪಾಕಿಸ್ತಾನ, ಅಫ್ಘಾನಿಸ್ತಾನ, ಸೌದಿ ಅರೇಬಿಯಾ ಮೊಬೈಲ್ ಸಂಖ್ಯೆಯಿಂದ ಬಂದಿದೆ. ಬೆದರಿಕೆ ಸಂದೇಶದ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಿಗೆ ದೂರು ದಾಖಲಿಸಲಾಗಿದೆ. ‘ಮುಸ್ಲಿಮ್ ಸಹೋದರನ ಕೊಲೆಯಲ್ಲಿ ಶಾಮೀಲಾಗಿರುವ ರಾಕೇಶ್ ಬುಡೋಳಿ, ನಿಮ್ಮ ಸಹಚರ ನರಸಿಂಹ ಮಾಣಿ ಹಾಗೂ ಇತರ ಎಲ್ಲ ಹೆಸರುಗಳು ನಮ್ಮ ಪಟ್ಟಿಗೆ ಸೇರಿಸಲಾಗಿದೆ. ನಾವು ದೂರವಿಲ್ಲ ನಾವು ನಿಮ್ಮ ಮನೆ ತಲುಪಿದ್ದೇವೆ. ಈಗ ನರಸಿಂಹನ ಕ್ಷಣಗಣನೆ ಆರಂಭವಾಗಿದೆ. ಸತ್ತ ಸುಹಾಸ್ ಶೆಟ್ಟಿ ಅವನಂತೆ ನಿಮ್ಮಿಬ್ಬರನ್ನು ನಾವು ಕೊಲ್ಲುತ್ತೇವೆ. ಜೈಶ್-ಎ-ಮೊಹಮ್ಮದ್ನ ಮುಜಾಹಿದ್ದೀನ್ಗಳಾದ ನಾವು ನವದೆಹಲಿಯನ್ನು ತಲುಪಿದ್ದೇವೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಒಂದು ತಿಂಗಳ ಹಿಂದೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಮಂಗಳೂರಿನ ಬಜ್ಪೆ ಸಮೀಪ ಕೊಲೆ ಮಾಡಲಾಗಿತ್ತು. ಅದಕ್ಕೂ ಕೆಲ ದಿನಗಳ ಮೊದಲು ಕೇರಳ ಮೂಲದ ಮುಸ್ಲಿಂ ವ್ಯಕ್ತಿಯ ಹತ್ಯೆಯಾಗಿತ್ತು. ಇದೀಗ ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಎಂಬಾತನ ಹತ್ಯೆ ನಂತರ ಕರಾವಳಿ ಜಿಲ್ಲೆ ಮತ್ತೆ ಉದ್ವಿಗ್ನಗೊಂಡಿದೆ. ಅಂಥ ಸಂದರ್ಭದಲ್ಲೇ ಈ ಸಂದೇಶ ಬಂದಿದೆ.
ಇದನ್ನೂ ಓದಿ: Abdul Rahiman murder case: ಅಬ್ದುಲ್ ರಹಿಮಾನ್ ಹತ್ಯೆ: ಫೋನ್ ಮಾಡಿ ಕರೆಸಿ ಕತ್ತಿಯಿಂದ ಕೊಚ್ಚಿದರು!