ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಅವರ ಜತೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿರುವ ನಿರ್ದೇಶಕ ಮುರಳಿ ಮೋಹನ್ (Director Murali Mohan) ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡುವಂತೆ ದಾನಿಗಳಿಗೆ ಮನವಿ ಮಾಡಿದ್ದಾರೆ. ಮೂತ್ರಪಿಂಡ ಕಸಿ ಚಿಕಿತ್ಸೆಗೆ 25 ಲಕ್ಷ ರೂ. ಅಗತ್ಯವಿದ್ದು, ದಾನಿಗಳು ಹಣಕಾಸಿನ ನೆರವು ನೀಡಿ ಎಂದು ಮನವಿ ಮಾಡಿದ್ದಾರೆ. ಚಿತ್ರರಂಗದ ಆತ್ಮೀಯರ ವಾಟ್ಸಾಪ್ ಗ್ರೂಪ್ಗೆ ಮುರಳಿ ಮೋಹನ್ ಮನವಿ ಪತ್ರ ಹಾಕಿದ್ದಾರೆ.
ಕಿಡ್ನಿ ಸಮಸ್ಯೆ ಜತೆ ಹೃದಯ ಸಂಬಂಧಿ ಕಾಯಿಲೆಯಿಂದಲೂ ಮುರಳಿ ಮೋಹನ್ ಬಳಲುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಸಂತ’, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ನಾಗರಹಾವು’, ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆಯ ‘ಮಲ್ಲಿಕಾರ್ಜುನ’ ಮುಂತಾದ ಸಿನಿಮಾಗಳನ್ನು ಮುರಳಿ ಮೋಹನ್ ನಿರ್ದೇಶಿಸಿದ್ದಾರೆ. ಇದೀಗ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮುರಳಿ ಮೋಹನ್, ಚಿಕಿತ್ಸೆಯ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಅವರ ಗರಡಿಯಲ್ಲಿ ಪಳಗಿದ ಶಿಷ್ಯ ಮುರಳಿ ಮೋಹನ್, ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಪ್ತ ಸ್ನೇಹಿತ. ಕನ್ನಡ ಚಿತ್ರರಂಗದಲ್ಲಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ನಿರ್ದೇಶಕರಾಗಿ, ನಟರಾಗಿ, ಸಂಭಾಷಣೆಕಾರರಾಗಿ ಗುರುತಿಸಿಕೊಂಡಿರುವ ಮುರಳಿ ಮೋಹನ್ ಇದೀಗ ಆರೋಗ್ಯ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಈ ಸುದ್ದಿಯನ್ನೂ ಓದಿ | HIT: The Third Case Movie: ʼಕೆಜಿಎಫ್ʼ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ; ನಾನಿ ಜತೆಗಿನ ʼಹಿಟ್ 3ʼ ರಿಲೀಸ್ಗೆ ಕೌಂಟ್ಡೌನ್
2018 ರಿಂದ ಮುರಳಿ ಮೋಹನ್ ಅವರಿಗೆ ಅನಾರೋಗ್ಯ ಬಾಧಿಸುತ್ತಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮುರಳಿ ಮೋಹನ್, ವಾರಕ್ಕೆ 3 ದಿನಗಳ ಕಾಲ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. 2020 ರಲ್ಲೇ ಕಿಡ್ನಿ ಟ್ರ್ಯಾನ್ಸ್ಪ್ಲಾಂಟ್ಗೆ ಮುರಳಿ ಮೋಹನ್ ಒಳಗಾಗಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಮೂತ್ರಪಿಂಡ ಕಸಿ ಮಾಡಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಾಗಿ 25 ಲಕ್ಷ ರೂಪಾಯಿ ಅವಶ್ಯಕತೆ ಇದೆ. ಹೀಗಾಗಿ, ಸಹಾಯಕ್ಕಾಗಿ ಮುರಳಿ ಮೋಹನ್ ಮನವಿ ಮಾಡುತ್ತಿದ್ದಾರೆ.