ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ, ಕಳೆದ 3 ವರ್ಷಗಳಿಂದ ಸಿನಿಪ್ರಿಯರು ಕುತೂಹಲದಿಂದ ಕಾದು ಕುಳಿತಿದ್ದ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಚಿತ್ರ ನಾಳೆ (ಅಕ್ಟೋಬರ್ 2) ವಿಶ್ಯಾದ್ಯಂತ ತೆರೆಗೆ ಬರಲಿದೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದ ರಿಲೀಸ್ಗೆ ಮುನ್ನ ಪ್ರೀಮಿಯರ್ ಶೋ ನಡೆದಿದ್ದು, ಮೊದಲ ವಿಮರ್ಶೆ ಹೊರಬಿದ್ದಿದೆ (Kantara Chapter 1 First Review Out). ಹಾಗಾದರೆ ಹೇಗಿದೆ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಚಿತ್ರ? ಇಲ್ಲಿದೆ ವಿವರ:
2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಈ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ʼಕಾಂತಾರʼದಲ್ಲಿ ತುಳುನಾಡ ವಿಶಿಷ್ಟ ಭೂತಾರಾಧನೆಯನ್ನು ಪರಿಚಯಿಸಿದ್ದ ರಿಷಬ್ ಪ್ರೀಕ್ವೆಲ್ನಲ್ಲಿ ಜಾನಪದ ಕಥೆಯೊಂದನ್ನು ಹೆಕ್ಕಿ ತಂದಿದ್ದಾರೆ. ಸುಮಾರು 250 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ನೈಜ ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರಕ್ಕಾಗಿ ಅದೆಷ್ಟೋ ಮಂದಿ ಕಾಡು ಕುಳಿತಿದ್ದರು. ಇದೀಗ ಅವರ ಬಹು ದಿನಗಳ ಕಾಯುವಿಕೆ ಅಂತ್ಯವಾಗಿದೆ.
ಈ ಸುದ್ದಿಯನ್ನೂ ಓದಿ: Singer Abby V: ಭಾರಿ ಸದ್ದು ಮಾಡುತ್ತಿದೆ ʼಕಾಂತಾರ: ಚಾಪ್ಟರ್ 1ʼ ಚಿತ್ರದ ʼಬ್ರಹ್ಮಕಲಶʼ ಹಾಡು; ಶಿವ ಸ್ತುತಿಗೆ ಜೀವ ತುಂಬಿದ ಸಿಂಗರ್ ಅಭಿ ಯಾರು?
ಹೇಗಿದೆ ಚಿತ್ರ?
ತೆಲುಗು ವೆಬ್ಸೈಟ್ ಒಂದು ನೋಡಲೇಬೇಕಾದ ಚಿತ್ರ ಎಂದು ಕರೆದಿದೆ. ʼʼಕಾಂತಾರ: ಚಾಪ್ಟರ್ 1' ಹಲವು ರೀತಿಯಲ್ಲಿ ನಿರೀಕ್ಷೆಯನ್ನು ತಲುಪಿದೆʼʼ ಎಂದು ತಿಳಿಸಿದೆ. ಹಲವರು ಚಿತ್ರದ ನಿರೂಪಣೆಯನ್ನು ಮೆಚ್ಚಿಕೊಂಡಿದ್ದು, ʼಕಾಂತಾರʼಕ್ಕಿಂತಲೂ ಉತ್ತಮವಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾಗಿ ವರದಿ ಮಾಡಿದೆ. ʼʼಕಾಂತಾರ: ಚಾಪ್ಟರ್ 1' ಅದ್ಭುತವಾಗಿ ಮೂಡಿ ಬಂದಿದ್ದು, ಮೊದಲ ಭಾಗದಲ್ಲಿ ಮೂಡಿಬಂದ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆʼʼ ತೆಲುಗು ಫಿಲ್ಮಿಫೋಕಸ್ ವೆಬ್ಸೈಟ್ ತಿಳಿಸಿದೆ. ಚಿತ್ರದ ಸಂಗೀತ, ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಗಗನಕ್ಕೇರಿದ ಟಿಕೆಟ್ ದರ
ರಾಜ್ಯ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಬುಧವಾರ ಸಂಜೆ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಪೇಯ್ಡ್ ಪ್ರೀಮಿಯರ್ ಶೋದ ಟಿಕೆಟ್ ಬೆಲೆ ಗಗನಕ್ಕೇರಿದ್ದು, 1 ಸಾವಿರ ರೂ. ತನಕ ಇದೆ. ಸುಮಾರು 4-5 ಕಡೆ ಪ್ರೀಮಿಯರ್ ಶೋ ಆಯೋಜಿಸಲಾಗಿದೆ.
ʼಕಾಂತಾರʼ ಚಿತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೆ ಅವರು ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. 2022ರಲ್ಲಿ ತೆರೆಕಂಡ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಕಾಂತಾರʼ ಸುಮಾರು 16 ಕೋಟಿ ರೂ. ಬಜೆಟ್ನಲ್ಲಿ ತಯಾರಾಗಿ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂ.ಇಂತ ಅದಿಕ ಬಾಚಿಕೊಂಡಿತ್ತು. ಇದೇ ಕಾರಣಕ್ಕೆ ಪ್ರೀಕ್ವೆಲ್ ಘೋಷಣೆಯಾದಾಗಿನಿಂದಲೇ ಕುತೂಹಲ ಕೆರಳಿಸಿತ್ತು. ಪ್ರೀಕ್ವೆಲ್ ಅನ್ನು ಹೊಂಬಾಳೆ ಫಿಲ್ಮ್ಸ್ ಸುಮಾರು 125 ಕೋಟಿ ರೂ. ವೆಚ್ಚದಲ್ಲಿ ತಯಾರಿಸಿದೆ. 4-5ನೇ ಶತಮಾನದಲ್ಲಿ ನಡೆದ ಕಥೆಯನ್ನು ಇದು ಒಳಗೊಂಡಿದ್ದು, ತುಳುನಾಡ ಜಾನಪದ ನಂಬಿಕೆ ಸುತ್ತ ಸುತ್ತುತ್ತದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ.