ನವದೆಹಲಿ: ಕುತಂತ್ರಿ ಪಾಕಿಸ್ತಾನ (Pakistan) ಕದನ ವಿರಾಮ ಉಲ್ಲಂಘಿಸಿ (Ceasefire Violations) ಭಾನುವಾರ ರಾತ್ರಿ ಕೂಡ ಭಾರತದ (India) ಮೇಲೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ರಾಜಸ್ಥಾನದ ಬಾರ್ಮರ್ನಲ್ಲಿ ಭಾನುವಾರ ಮತ್ತೆ ಡ್ರೋನ್ ಚಟುವಟಿಕೆ ಕಂಡುಬಂದಿದ್ದು, ಜಿಲ್ಲಾಡಳಿತವು ಸಂಪೂರ್ಣ ವಿದ್ಯುತ್ ಕಡಿತಗೊಳಿಸಲು ಆದೇಶಿಸಿದೆ. ಪಾಕಿಸ್ತಾನ ಶನಿವಾರ ಕದನ ವಿರಾಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜಸ್ಥಾನದ ಜೈಸಲ್ಮೇರ್, ಬಾರ್ಮರ್ ಮತ್ತು ಇತರ ಗಡಿ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು.
India Pakistan live updates: ಪಾಕ್ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ
Ceasefire Violations: ಕುತಂತ್ರಿ ಪಾಕಿಸ್ತಾನ (Pakistan) ಕದನ ವಿರಾಮ ಉಲ್ಲಂಘಿಸಿ (Ceasefire Violations) ಭಾರತದ (India) ಮೇಲೆ ದಾಳಿ ಮಾಡಿದೆ. ಈ ದಾಳಿಗೆ ಭಾರತೀಯ ಸೇನೆ (Indian Army) ಸರಿಯಾಗಿಯೇ ತಿರುಗೇಟು ನೀಡಿದ್ದು, ಎಲ್ಲ ಡ್ರೋನ್ಗಳನ್ನು ಧ್ವಂಸ ಮಾಡಿದೆ. ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಇನ್ನು ಕದನ ವಿರಾ ಉಲ್ಲಂಘನೆ ನಂತರ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ.
ಐವರು ಭಾರತೀಯ ಸೈನಿಕರು ಹುತಾತ್ಮ
ಆಪರೇಷನ್ ಸಿಂದೂರ್ ವೇಳೆ ಭಾರತದ ಐವರು ಸೈನಿಕರು ಹುತಾತ್ಮರಾಗಿದ್ದು, ಅವರ ತ್ಯಾಗಕ್ಕೆ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.
ಡಿಜಿಎಂಒ ಸುದ್ದಿಗೋಷ್ಠಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನಕ್ಕೆ ಕಳೆದ ರಾತ್ರಿ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ. ಈ ಕುರಿತು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಿದ್ದಾರೆ.
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಿ: ಮೋದಿ
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಜಾರಿಯಾಗಿದ್ದರೂ ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮೂಲಗಳ ಪ್ರಕಾರ ಪಾಕಿಸ್ತಾನದ ಯಾವುದೇ ದುಸ್ಸಾಹಸಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಶಸ್ತ್ರ ಪಡೆಗಳಿಗೆ ನಿರ್ದೇಶನ ನೀಡಿದ್ದಾರೆ. ಆ ಮೂಲಕ ಭಾರತ ಬಹುದೊಡ್ಡ ಹೊಡೆತದ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ರವಾನಿಸಿದೆ. ಉನ್ನತ ಮಟ್ಟದ ಸಭೆ ನಡೆಸಿದ ಮೋದಿ ಸೇನೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿದ್ದಾರೆ.
ಭಯೋತ್ಪಾದನೆ ವಿರುದ್ಧ ಮತ್ತೊಮ್ಮೆ ಗುಡುಗಿದ ರಾಜನಾಥ್ ಸಿಂಗ್
ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ನಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು ವರ್ಚುವಲ್ ಆಗಿ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಶ್ಲಾಘಿಸಿದರು. ʼʼಭಾರತ ಮಾತೆಯ ಹಣೆಯ ಮೇಲೆ ದಾಳಿ ಮಾಡಿದ, ಅನೇಕ ಕುಟುಂಬಗಳ ಸಿಂದೂರವನ್ನು ಅಳಿಸಿದ, ಭಾರತ ವಿರೋಧಿ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ಮೂಲಕ ಪಾಠ ಕಲಿಸಿದೆʼʼ ಎಂದು ತಿಳಿಸಿದರು.
ಪ್ರಧಾನಿ ಮೋದಿ ಮಹತ್ವದ ಸಭೆ
ಕದನ ವಿರಾಮ ಉಲ್ಲಂಘನೆಯಾದ ಬಳಿಕ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಸಭೆ ಆರಂಭಗೊಂಡಿದ್ದು, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮೂರೂ ಸೇನಾ ಮುಖ್ಯಸ್ಥರು ಸಹ ಹಾಜರಿದ್ದರು. ಉನ್ನತ ಮಟ್ಟದ ಚರ್ಚೆಗಳು ಪ್ರಸ್ತುತ ಭದ್ರತಾ ಪರಿಸ್ಥಿತಿ, ಗಡಿಯಾಚೆಗಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಯುತ್ತಿದೆ.
ಕದನ ವಿರಾಮದ ಬಗ್ಗೆ ಟ್ರಂಪ್ ಮಹತ್ವದ ಹೇಳಿಕೆ
ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮ ವಿಚಾರವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೆ ಪ್ರತಿಕ್ರಿತಿಯಿಸಿದ್ದು, ಪರಸ್ಪರ ಆಕ್ರಮಣವು ಲಕ್ಷಾಂತರ ಜನರ ಸಾವಿಗೆ ಕಾರಣವಾಗಬಹುದು. ಕಾಶ್ಮೀರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಅವರೊಂದಿಗೆ ಕೆಲಸ ಮಾಡುವುದಾಗಿ ಅವರು ಹೇಳಿದರು.
ಬ್ರಹ್ಮೋಸ್ ಕ್ಷಿಪಣಿ ದಾಳಿ ನಡೆಸಿದ ಭಾರತ
ಒಂದು ವರದಿಯ ಪ್ರಕಾರ, ಭಾರತವು ಪಾಕಿಸ್ತಾನದ ಒಳಗಿನ ಗುರಿಗಳನ್ನು ನಾಶಮಾಡಲು ದೀರ್ಘ ವ್ಯಾಪ್ತಿಯ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯಾದ ಬ್ರಹ್ಮೋಸ್ ಅನ್ನು ಬಳಸಿಕೊಂಡಿತು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ದೃಢಪಡಿಸಿದೆ.
ಶಾಯರಿ ಮೂಲಕ ಪಾಕಿಸ್ತಾನದ ನೀಚ ಬುದ್ಧಿಯನ್ನು ಹೇಳಿದ ಶಶಿ ತರೂರ್
ಭಾರತದೊಂದಿಗೆ ಒಪ್ಪಂದ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಶನಿವಾರ ಕಾವ್ಯಾತ್ಮಕವಾಗಿ ವಾಗ್ದಾಳಿ ನಡೆಸಿದ್ದಾರೆ. X ನಲ್ಲಿ ತಡರಾತ್ರಿಯ ಪೋಸ್ಟ್ನಲ್ಲಿ, ಶಶಿ ತರೂರ್ ಅವರು ಹಿಂದಿ ದ್ವಿಪದಿಯನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪಾಕಿಸ್ತಾನದ ದುಷ್ಟ ಬುದ್ಧಿಯ ಕುರಿತು ಬರೆದಿದ್ದಾರೆ. ನಂಬಿಕೆ ಮುರಿಯುವುದು ಅವರ ಚಾಳಿ; ಹೀಗಿದ್ದರೂ ನಾವು ಅವರನ್ನು ಹೇಗೆ ನಂಬಿದೆವು ಎಂದು ಹೇಳಿದ್ದಾರೆ.
ಪಾಕ್ ವಿರುದ್ಧ ಅಮಿತ್ ಮಾಳವೀಯ ಕಿಡಿ
ಭಾರತದ ನಿರ್ಣಾಯಕ ಮಿಲಿಟರಿ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ಪಾಕಿಸ್ತಾನದ ವಾಯು ಸಾಮರ್ಥ್ಯಕ್ಕೆ ಭಾರಿ ಹೊಡೆತ ನೀಡಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಭಾನುವಾರ ಹೇಳಿದ್ದಾರೆ. ಪಾಕ್ನ ಕದನ ವಿರಾಮ ಉಲ್ಲಂಘನೆಯನ್ನು ಅವರು ಖಂಡಿಸಿದ್ದಾರೆ.
ಬಿಜೆಪಿಯಿಂದ 'ತಿರಂಗ ಯಾತ್ರೆ'
ಕರ್ನಾಟಕ ಬಿಜೆಪಿ ಆಪರೇಷನ್ ಸಿಂದೂರ್ ನಂತರ ಭಾರತೀಯ ಸಶಸ್ತ್ರ ಪಡೆಗಳಿಗೆ ಬೆಂಬಲವಾಗಿ 'ತಿರಂಗ ಯಾತ್ರೆ' ನಡೆಸುತ್ತಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ವಿಧಾನ ಪರಿಷತ್ತಿನ ಎಲ್ಒಪಿ - ಛಲವಾದಿ ನಾರಾಯಣಸ್ವಾಮಿ ಮತ್ತು ಇತರರು ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.
ರಿಯಾಸಿಯ ಸಲಾಲ್ ಅಣೆಕಟ್ಟಿನ ದ್ವಾರಗಳು ಓಪನ್
ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ರಿಯಾಸಿಯ ಸಲಾಲ್ ಅಣೆಕಟ್ಟಿನ ಹಲವಾರು ದ್ವಾರಗಳು ತೆರೆಯಲಾಗಿದೆ.
ಸದ್ಯ ಪರಿಸ್ಥಿತಿ ಶಾಂತ
ಪೂಂಚ್ನಲ್ಲಿ ರಾತ್ರಿಯಿಡೀ ಪರಿಸ್ಥಿತಿ ಶಾಂತವಾಗಿತ್ತು, ಡ್ರೋನ್ ಚಟುವಟಿಕೆ, ಗುಂಡಿನ ದಾಳಿ ಅಥವಾ ಶೆಲ್ ದಾಳಿಯ ಯಾವುದೇ ವರದಿಗಳಿಲ್ಲ.ಹಾಗೆಯೇ, ರಜೌರಿ, ಪೂಂಚ್ ಮತ್ತು ಪಠಾಣ್ಕೋಟ್ನಲ್ಲೂ ಯಾವುದೇ ಡ್ರೋನ್ ದಾಳಿ ನಡೆದಿಲ್ಲ.