ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿಂತಿದೆ. ಒಂದು ಕಡೆ ಓಲೈಕೆ ಮತ್ತೊಂದು ಕಡೆ ಅಲ್ಪಸಂಖ್ಯಾತರನ್ನು ಕಂಡರೆ ಭಯ ಹೆಚ್ಚಾಗಿ ರಣಹೇಡಿತನವನ್ನು ಕಾಂಗ್ರೆಸ್ ಸರ್ಕಾರ ಪ್ರದರ್ಶಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಟೀಕಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಲೈಕೆಗಿಂತ ಹೆಚ್ಚು ಇವರಿಗೆ ಭಯ ಪ್ರಾರಂಭವಾಗಿದೆ. ಏಕೆಂದರೆ ಅಲ್ಪಸಂಖ್ಯಾತರನ್ನು ನಿಯಂತ್ರಣ ಮಾಡುವ ಶಕ್ತಿ ಈ ಸರ್ಕಾರಕ್ಕೆ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಗಣೇಶೋತ್ಸವಗಳನ್ನು ಮಾಡುವುದಕ್ಕೆ ಅವಕಾಶ ಕೊಡದೆ ದೊಡ್ಡ ದೊಡ್ಡ ರಾದ್ಧಾಂತಗಳನ್ನು ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿದರು.
ಹಿಂದಿನ ಪದ್ಧತಿಗಳಂತೆ ಗಣೇಶೋತ್ಸವಗಳು ಯಾವಾಗಲೂ ನಡೆದುಕೊಂಡು ಬರುತ್ತಿದೆ. ಎಂದೂ ಗಲಾಟೆಗಳು ಆಗಿರಲಿಲ್ಲ. ಸರ್ಕಾರ ಮತಬ್ಯಾಂಕಿನ ಕಾರಣಕ್ಕೆ ಅವರನ್ನು ಓಲೈಕೆ ಮಾಡುವ ನೆಪದಿಂದ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಕ್ಕಿಕೊಂಡಿರುವ ಅಲ್ಪಸಂಖ್ಯಾತರ ಕೇಸುಗಳನ್ನು ವಾಪಸ್ ಪಡೆದು ಅವರಿಗೆ ಶಾಂತಿದೂತ ಪಟ್ಟಕೊಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದರು. ಆ ತಕ್ಷಣವೇ ಇಡೀ ರಾಜ್ಯದಲ್ಲಿ ನೆಮ್ಮದಿ ಕೆಡಿಸುವ ಕೆಲಸ ಆ ಜನರು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಸರ್ಕಾರ ಹಿಂದುತ್ವ ವಿರೋಧಿ
ಸಂವಿಧಾನ ಇರುವುದು ಯಾರನ್ನೋ ಓಲೈಕೆ ಮಾಡುವುದಕ್ಕೆ ಮತ್ತು ಯಾರನ್ನೋ ತುಳಿಯುವುದಕ್ಕೆ ಅಲ್ಲ. ಸರ್ವರನ್ನೂ ಒಳ್ಳೆಯ ರೀತಿಯ ತೆಗೆದುಕೊಂಡು ಹೋಗುವ ಕೆಲಸವನ್ನು ಸರ್ಕಾರ ಮಾಡಬೇಕು. ಆದರೆ ಈ ಸರ್ಕಾರ ಹಿಂದುತ್ವ ವಿರೋಧಿ ಎಂದು ದೂರಿದರು. ಸರ್ಕಾರ ಅಲಿಖಿತ ಕಾನೂನು ಮಾಡಿದೆ. ಎಲ್ಲ ತಾಲೂಕು ಮತ್ತು ಜಿಲ್ಲೆಗಳಲ್ಲೂ ಗಣೇಶನ ಉತ್ಸವಕ್ಕೆ ಅವಕಾಶ ಕೋಡಬೇಡಿ ಎಂದು ಪೊಲೀಸ್ ಇಲಾಖೆಗೆ ಸುತ್ತೋಲೆ ಹೊರಡಿಸದೆ ಮಾತಿನಲ್ಲಿ ಹೇಳಿದ್ದಾರೆ ಎಂದು ದೂರಿದರು. ಅನುಮತಿ ಕೊಡದಿರುವುದಕ್ಕೆ ನೀವು ಯಾರು?; ನಿಮಗೆ ಏನು ಅಧಿಕಾರವಿದೆ ಎಂದು ಪ್ರಶ್ನಿಸಿದ ಅವರು, ಹತ್ತಿಕ್ಕುವ ಕೆಲಸ ಸರ್ಕಾರ ಮಾಡುವುದು ಸರಿ ಇದೆಯೇ ಎಂದು ಕೇಳಿದರು.
50 ಲಕ್ಷ ರೂ. ಪರಿಹಾರ ಘೋಷಣೆಗೆ ಆಗ್ರಹ
ಹಾಸನ ಜಿಲ್ಲೆಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಟ್ರಕ್ ಹರಿದು 8 ರಿಂದ 9 ಜನ ಸಾವಿಗೀಡಾಗಿರುವುದು ಹಾಗೂ ಸುಮಾರು ಜನರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಇರುವ ವಿಚಾರ ತಿಳಿದು ಬಹಳ ನೋವಾಗಿದೆ. ಈಗಾಗಲೇ ನಮ್ಮ ಪಕ್ಷದ ಮುಖಂಡರಾದ ಆರ್. ಅಶೋಕ್, ಸಿ.ಟಿ. ರವಿ, ಪಕ್ಷದ ನಾಯಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾರಣಾಂತರದಿಂದ ನಾನು ಹೋಗುವುದಕ್ಕೆ ಆಗಲಿಲ್ಲ ಎಂದು ತಿಳಿಸಿದರು.
ದೇಶದ ಪ್ರಧಾನ ಮಂತ್ರಿಗಳು ಕೂಡ ಹಾಸನ ಜಿಲ್ಲೆಯ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ ಮತ್ತು ಅವರ ನಿಧಿಯಿಂದ ಹಣವನ್ನು ಘೋಷಣೆ ಮಾಡಿದ್ದಾರೆ. ಇಂತಹ ಅಚಾತುರ್ಯ ನಡೆಯಬಾರದಿತ್ತು. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ 50 ಲಕ್ಷ ರೂಗಳ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ದಲಿತರ ಬದುಕನ್ನು ಹಸನು ಮಾಡಬೇಕು ಎನ್ನುವ ಭಾವನೆ ಸರ್ಕಾರಕ್ಕೆ ಇಲ್ಲ. ಮತಬ್ಯಾಂಕಿಗಾಗಿ ದಲಿತರ ಪರ ಎನ್ನುತ್ತಾರೆ. ಅಲ್ಪಸಂಖ್ಯಾತರಿಗೆ ಬಹುಮಾನ, ದಲಿತರಿಗೆ ಅವಮಾನ. ಇದು ಕಾಂಗ್ರೆಸ್ಸಿನ ಇಬ್ಬಗೆಯ ನೀತಿಯಾಗಿದೆ ಎಂದು ಆರೋಪಿಸಿದರು. ಇದರ ವಿರುದ್ಧವಾಗಿ ದಲಿತರು ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಸ್ಲಿಂ ಕಾಲೋನಿಗಳನ್ನು ಸುಮಾರು 400 ಕೋಟಿ ರೂಗಳಲ್ಲಿ ಸುಭದ್ರಗೊಳಿಸುವುದು ಹಾಗೂ ಉತ್ತಮಗೊಳಿಸುವುದು; ದಲಿತ ಸಮುದಾಯಗಳು ವಾಸಿಸುವ ಕೊಳಚೆ ಪ್ರದೇಶಗಳ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದ ಅವರು, ಸರ್ಕಾರ ಸಂವಿಧಾನದ ಹೆಸರಲ್ಲಿ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರಿಗೆ, ಸಂವಿಧಾನಕ್ಕೆ ಮತ್ತು ದಲಿತರಿಗೆ ದೋಖಾ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | FHRAI: ಮೂರು ದಿನಗಳ FHRAI 55ನೇ ಸಮಾವೇಶ- ರಾಜನಾಥ ಸಿಂಗ್ ಸೇರಿದಂತೆ ಪ್ರಮುಖ ನಾಯಕರು ಭಾಗಿ
ಈ ಸರ್ಕಾರ ಜನರಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆಯೇ ಹೊರತು. ಸಮಾಜವನ್ನು ಉತ್ತಮಗೊಳಿಸಬೇಕು ಮತ್ತು ಒಳ್ಳೆಯ ರೀತಿಯಲ್ಲಿ ನಡೆಸಬೇಕು ಅನ್ನುವ ಭಾವನೆ ಈ ಸರ್ಕಾರಕ್ಕೆ ಇಲ್ಲ. ಆದ್ದರಿಂದ ಇಂದು ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ಸನ್ನು ಜನ ತಿರಸ್ಕಾರ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಈ ಕಾಂಗ್ರೆಸ್ ಪಕ್ಷವನ್ನು ಅಳಿಸಿ ಹಾಕಬೇಕು ಎಂದು ಜನ ತೀರ್ಮಾನಿಸಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.