Indore Couple Missing: ಹನಿಮೂನ್ಗೆ ತೆರಳಿದ್ದ ಜೋಡಿ ನಾಪತ್ತೆ ಕೇಸ್; 9 ದಿನಗಳ ನಂತರ ಪತಿ ಶವವಾಗಿ ಪತ್ತೆ- ಪತ್ನಿ ಇನ್ನೂ ಮಿಸ್ಸಿಂಗ್
ಇಂದೋರ್ನಿಂದ ಮೇಘಾಲಯಕ್ಕೆ ಆಗಮಿಸಿದ್ದ ನವದಂಪತಿಗಳು ಕಾಣೆಯಾದ ಒಂಬತ್ತು ದಿನಗಳ ಬಳಿಕ, ಪತಿ ರಾಜಾ ರಘುವಂಶಿ ಮೃತದೇಹ ಜೂನ್ 2 ರಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದ ಜಲಪಾತದ ಬಳಿಯ ಕಂದಕದಲ್ಲಿ ಪತ್ತೆಯಾಗಿದೆ. ಹಾಗಾದ್ರೆ ಹನಿಮೂನ್ ಗೆ ತೆರಳಿದ ನವಜೋಡಿಗೆ ಆಗಿದ್ದೇನು...?


ಶಿಲ್ಲಾಂಗ್: ಇಂದೋರ್ನಿಂದ (Indore) ಮೇಘಾಲಯಕ್ಕೆ (Meghalaya) ಆಗಮಿಸಿದ್ದ ನವದಂಪತಿಗಳು ಕಾಣೆಯಾದ(Indore Couple Missing) ಒಂಬತ್ತು ದಿನಗಳ ಬಳಿಕ, ಪತಿ 30 ವರ್ಷದ ರಾಜಾ ರಘುವಂಶಿ (Raja Raghuvanshi) ಮೃತದೇಹ ಜೂನ್ 2 ರಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದ ಜಲಪಾತದ ಬಳಿಯ ಕಂದಕದಲ್ಲಿ ಪತ್ತೆಯಾಗಿದೆ. ಆದರೆ, ಆತನ ಪತ್ನಿ ಸೋನಂ ರಘುವಂಶಿ (27)ಗಾಗಿ ಶೋಧ ಕಾರ್ಯ ಮುಂದುವರಿದಿದೆ.
ನವದಂಪತಿಗಳಾದ ರಾಜಾ ಮತ್ತು ಸೋನಂ, ಮೇ 23 ರಂದು ನೊಂಗ್ರಿಯಾಟ್ ಗ್ರಾಮದ ಹೋಮ್ಸ್ಟೇಯಿಂದ ಚೆಕ್ಔಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಕಾಣೆಯಾಗಿದ್ದರು. ರಾಜಾನ ಮೃತದೇಹ ಪತ್ತೆಯಾದ ಸ್ಥಳದಿಂದ ಸುಮಾರು 20 ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಅವರು ರಾತ್ರಿ ಉಳಿದುಕೊಂಡಿದ್ದರು. “ಪೊಲೀಸ್ ಡ್ರೋನ್ನಿಂದ ಜಲಪಾತದ ಪಾರ್ಕಿಂಗ್ ಲಾಟ್ಗಿಂತ ಕೆಳಗಿರುವ ಕಂದಕದಲ್ಲಿ ಮೃತದೇಹ ಕಂಡುಬಂದಿತು. ಸಂಜೆಯ ವೇಳೆಗೆ ದೇಹವನ್ನು ಪಾರ್ಕಿಂಗ್ ಲಾಟ್ಗೆ ತಂದು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಾಯಿತು” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸ್ಥಳೀಯ ಸಾಕ್ಷಿಗಳ ಸಮ್ಮುಖದಲ್ಲಿ ನಡೆದ ತನಿಖೆಯಲ್ಲಿ, ರಾಜಾನ ಬಲಗೈಯಲ್ಲಿ “ರಾಜಾ” ಎಂಬ ಗುರುತಿನಿಂದ ಆತನ ಸಂಬಂಧಿಗಳು ದೇಹವನ್ನು ಗುರುತಿಸಿದ್ದಾರೆ. ಸ್ಥಳದಲ್ಲಿ ಮಹಿಳೆಯ ಬಿಳಿ ಶರ್ಟ್, ಔಷಧದ ಸ್ಟ್ರಿಪ್, ಮೊಬೈಲ್ ಫೋನ್ನ ತುಂಡಾದ ಡಿಸ್ಪ್ಲೇ ಮತ್ತು ಸ್ಮಾರ್ಟ್ವಾಚ್ ಪತ್ತೆಯಾಗಿವೆ. ಮೃತದೇಹವನ್ನು ಶವಪರೀಕ್ಷೆಗಾಗಿ ಈಶಾನ್ಯ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕಳುಹಿಸಲಾಗಿದೆ.
ಪೂರ್ವ ಖಾಸಿ ಬೆಟ್ಟಗಳ ಜಿಲ್ಲೆಯ ಪೊಲೀಸ್ ಅಧೀಕ್ಷಕ ವಿವೇಕ್ ಸೈಯಂ, “ಕೊಲೆ ಪ್ರಕರಣ ದಾಖಲಿಸಲಾಗಿದ್ದು, ವಿಶೇಷ ತನಿಖಾ ತಂಡ (SIT) ಈಗ ಈ ಪ್ರಕರಣವನ್ನು ನಿರ್ವಹಿಸುತ್ತಿದೆ,” ಎಂದು ತಿಳಿಸಿದ್ದಾರೆ. ಟ್ರಾವೆಲ್ ಬ್ಯುಸಿನೆಸ್ ಮಾಡಿಕೊಂಡಿದ್ದ ರಾಜಾ ಮತ್ತು ಸೋನಂ, ಹೊಸದಾಗಿ ಮದುವೆಯಾಗಿದ್ದು, ರಜೆಗಾಗಿ ಸೋಹ್ರಾ (ಚಿರಾಪುಂಜಿ)ನ ಮಳೆಯಿಂದ ಕೂಡಿದ ಬೆಟ್ಟಗಳಿಗೆ ತೆರಳಿದ್ದರು. ಮೇ 22ರಂದು ಅವರು ಬಾಡಿಗೆ ಸ್ಕೂಟರ್ನಲ್ಲಿ ಮಾವ್ಲಾಖಿಯಾಟ್ ಗ್ರಾಮಕ್ಕೆ ಆಗಮಿಸಿದ್ದರು. ಸ್ಕೂಟರ್ನನ್ನು ಪಾರ್ಕ್ ಮಾಡಿ, 3,000 ಮೆಟ್ಟಿಲುಗಳನ್ನು ಇಳಿದು ನೊಂಗ್ರಿಯಾಟ್ ಗ್ರಾಮದ ಪ್ರಸಿದ್ಧ ಸೇತುವೆಗಳನ್ನು ವೀಕ್ಷಿಸಲು ತೆರಳಿದ್ದರು. ರಾತ್ರಿ ಅಲ್ಲಿ ಉಳಿದು, ಮರುದಿನ ಬೆಳಗ್ಗೆ ಹೋಮ್ಸ್ಟೇಯಿಂದ ಹೊರಟಿದ್ದರು. ಆದರೆ, ಅನಂತರ ಅವರಿಂದ ನಾಪತ್ತೆಯಾಗಿದ್ದಾರೆ.
ಮೇ 24ರಂದು ಶಿಲ್ಲಾಂಗ್ ಮತ್ತು ಸೋಹ್ರಾ ನಡುವಿನ ಕೆಫೆಯೊಂದರ ಬಳಿ ಅವರು ಬಿಟ್ಟ ಸ್ಕೂಟರ್ ಪತ್ತೆಯಾಯಿತು. ಪೊಲೀಸರಿಗೆ ಎಚ್ಚರಿಕೆ ನೀಡಿದ ಬಳಿಕ, ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಶೋಧ ಕಾರ್ಯ ಆರಂಭವಾಯಿತು. ಆದರೆ, ಮೇ 29, 30, ಮತ್ತು 31ರಂದು ಸೋಹ್ರಾದಲ್ಲಿ ದಾಖಲಾದ 500 ಮಿಮೀ ಮಳೆಯಿಂದ ಕಡಿಮೆ ಗೋಚರತೆ, ಭೂಕುಸಿತ ಮತ್ತು ಪ್ರವಾಹದಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಯಿತು. ಈ ಹವಾಮಾನದಿಂದಾಗಿ ಪೂರ್ವ ಖಾಸಿ ಮತ್ತು ಜೈಂಟಿಯಾ ಬೆಟ್ಟಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.