ಜೈಪುರ: ರಾಜಸ್ಥಾನದ (Rajasthan) ಭಿಲ್ವಾರಾ ಜಿಲ್ಲೆಯ ಕಾಡಿನಲ್ಲಿ 15 ದಿನಗಳ (Viral News) ಶಿಶುವೊಂದು ಪತ್ತೆಯಾಗಿದ್ದು, ಮಗುವಿನ ತುಟಿಗಳನ್ನು ಗಮ್ ಹಾಕಿ ಅಂಟಿಸಿ ವಿಕೃತಿ ಮೆರೆಯಲಾಗಿತ್ತು. ಮಗುವನ್ನು ಕಂಡ ದನಗಾಹಿಯೊಬ್ಬ ರಕ್ಷಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಮಗುವಿನ ಬಾಯಿಗೆ ಹಾಕಿದ್ದ ಗಮ್ ತೆಗೆದು ನೋಡಿದಾಗ ಬಾಯೊಳಗೆ ಕಲ್ಲನ್ನು ಹಾಕಲಾಗಿತ್ತು ಎಂದು ತಿಳಿದು ಬಂದಿದೆ. ಕೂಡಲೇ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವನ್ನು ಕೊಲ್ಲಲು ಈ ರೀತಿ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಭಿಲ್ವಾರದ ಮಂಡಲಗಢ ವಿಧಾನಸಭಾ ಕ್ಷೇತ್ರದ ಬಿಜೋಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ. ಸೀತಾ ಕುಂಡ್ ದೇವಾಲಯದ ಮುಂಭಾಗದ ರಸ್ತೆಯ ಪಕ್ಕದ ಕಾಡಿನಲ್ಲಿ ಮಗು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಮಗುವಿನ ಪೋಷಕರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಹತ್ತಿರದ ಆಸ್ಪತ್ರೆಗಳಿಂದ ಇತ್ತೀಚಿನ ಹೆರಿಗೆ ವರದಿಯನ್ನು ಅವರು ಪರಿಶೀಲಿಸುತ್ತಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಜನರನ್ನು ವಿಚಾರಣೆ ಮಾಡಲಾಗುತ್ತಿದೆ.
ಪ್ರತ್ಯೇಕ ಘಟನೆಯಲ್ಲಿ, ಹೆಣ್ಣು ಮಗು (Girl Child) ಹುಟ್ಟಿದ್ದಕ್ಕೆ ಹೆತ್ತ ತಾಯಿಯೇ ಎರಡು ತಿಂಗಳ ಹಸುಗೂಸು ಕಾಲುವೆಗೆ ಎಸೆದು ಕೊಲೆ ಮಾಡಿರುವ ಘಟನೆ ಬಳ್ಳಾರಿ (Ballari) ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ನಲ್ಲಿ ನಡೆದಿದೆ. ಪ್ರಿಯಾಂಕಾ ದೇವಿ ತನ್ನ ಮಗುವನ್ನ ಕಾಲುವೆಗೆ ಎಸೆದು ಕೊಲೆ ಮಾಡಿದ ಪಾಪಿ. ಪ್ರಿಯಾಂಕಾದೇವಿ ಪತಿ ಸರೋಜ್ ಕುಮಾರ್ ಖಾಸಗಿ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಬಿಹಾರ ಮೂಲದ ದಂಪತಿ ತೋರಣಗಲ್ನಲ್ಲಿ ವಾಸವಾಗಿದ್ದರು. ಪ್ರಿಯಾಂಕಾ ದೇವಿ- ಸರೋಜ್ ಕುಮಾರ್ ದಂಪತಿಗೆ ಮೊದಲು ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಮೂರನೇ ಹೆಣ್ಣು ಮಗು ಜನಿಸಿ ಎರಡು ತಿಂಗಳಾಗಿತ್ತು. ಮೂರನೆಯದ್ದೂ ಹೆಣ್ಣು ಮಗು ಆದ ಕಾರಣ ಪ್ರಿಯಾಂಕಾ ದೇವಿಯೇ ಮಗುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿದ್ದಾಳೆ. ಆ ಬಳಿಕ ಮಗು ಇಲ್ಲ ಎಂದು ಗೋಳಾಡಿದ್ದಳು.
ಈ ಸುದ್ದಿಯನ್ನೂ ಓದಿ: Suhas Shetty Murder: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ; ಕೊಲೆಗಾರರ ಹೆಡೆಮುರಿ ಕಟ್ಟುತ್ತೇವೆ ಎಂದ ಸಿಎಂ
ಅಮಾಯಕಳಂತೆ ಪೊಲೀಸರ ಮುಂದೆ ಮಗು ಇಲ್ಲ ಎಂದು ಕಣ್ಣೀರಾಕಿದ್ದಳು. ಆ ಪತಿ ಸರೋಜ್ ಕುಮಾರ್ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ತಾಯಿಯೇ ಮಗುವನ್ನ ಎತ್ತಿಕೊಂಡು ಹೋಗಿದ್ದು ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ತಾನೇ ಮಗುವನ್ನು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ. ಪ್ರಿಯಾಂಕಾದೇವಿ ತೋರಣಗಲ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.