Bike wheeling: ವ್ಹೀಲಿಂಗ್ ಪುಂಡರ ಅಟ್ಟಹಾಸಕ್ಕೆ ಹಾಲು ತರಲು ಹೋಗಿದ್ದ ವ್ಯಕ್ತಿ ಬಲಿ
Bike wheeling: ವ್ಹೀಲಿಂಗ್ ಮಾಡಿಕೊಂಡು ಬಂದ ಪುಂಡರ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ವ್ಯಕ್ತಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ತುಮಕೂರು ನಗರದ ಟೂಡಾ ಕಚೇರಿ ಬಳಿ ಶನಿವಾರ ಬೆಳಿಗ್ಗೆ ಜರುಗಿದೆ.


ತುಮಕೂರು: ವ್ಹೀಲಿಂಗ್ ಪುಂಡರ ಅಟ್ಟಹಾಸಕ್ಕೆ (Bike wheeling) ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ತುಮಕೂರು ನಗರದ ಟೂಡಾ ಕಚೇರಿ ಬಳಿ ಶನಿವಾರ ಬೆಳಗ್ಗೆ ಜರುಗಿದೆ. ಹೇಮಾದ್ರಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ಟಿ. ತಿಪ್ಪೇಸ್ವಾಮಿ ಮೃತ ವ್ಯಕ್ತಿ. ಶನಿವಾರ ಬೆಳಗ್ಗೆ ಮನೆಗೆ ಹಾಲು ತರಲೆಂದು ಬಂದಿದ್ದ ವೇಳೆ ವ್ಹೀಲಿಂಗ್ ಮಾಡಿಕೊಂಡು ಬಂದ ಪುಂಡರ ಬೈಕ್, ತಿಪ್ಪೇಸ್ವಾಮಿ ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯಾದ ಪರಿಣಾಮ ತಿಪ್ಪೇಸ್ವಾಮಿ ಅವರ ತಲೆ ಮತ್ತು ಕಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾರೆ. ಈ ಕುರಿತು ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Student Missing case: ನಾಪತ್ತೆಯಾಗಿದ್ದ ಫರಂಗಿಪೇಟೆ ವಿದ್ಯಾರ್ಥಿ ದಿಗಂತ್ ಕೊನೆಗೂ ಪತ್ತೆ
ಮಂಗಳೂರು: ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಸುಮಾರು 10 ದಿನದ ಬಳಿಕ ಉಡುಪಿಯಲ್ಲಿ ಶನಿವಾರ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ವಿದ್ಯಾರ್ತಿಯನ್ನು ಬಂಟ್ವಾಳಕ್ಕೆ ಕರೆ ತರುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿಯ ಪತ್ತೆಗಾಗಿ 40ಕ್ಕೂ ಅಧಿಕ ಪೊಲೀಸರ ತಂಡವನ್ನು ರಚಿಸಲಾಗಿತ್ತು. ಡಿಎಆರ್ ತಂಡದ ಪೊಲೀಸರು, ರೈಲ್ವೆ ಪೊಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್. ಡಾಗ್ ಸ್ಕ್ಯಾಡ್ ಸಿಬ್ಬಂದಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಹುಡುಕಾಟ ನಡೆಸಿದ್ದರು. ಇದೀಗ ಆತ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿ ದಿಗಂತ್ ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಫೆ. 25ರ ಮಂಗಳವಾರ ಸಂಜೆ ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿದ್ದ. ಆದರೆ ದೇವಸ್ಥಾನಕ್ಕೆ ಹೋಗದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದ. ಆತನ ಚಪ್ಪಲಿಗಳು ಹಾಗೂ ಮೊಬೈಲ್ ಫೋನ್ ಮನೆಯ ಸಮೀಪದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. 10 ದಿನ ಕಳೆದರೂ ವಿದ್ಯಾರ್ಥಿಯ ಸುಳಿವು ಸಿಗದ ಹಿನ್ನೆಲೆಯಲ್ಲಿ ಆತ ಮಂಗಳಮುಖಿಯರ ಜತೆ ಹೋಗಿದ್ದಾನೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ದಿಗಂತ್ ಸಹೋದರ ಪವನ್, ಮಂಗಳಮುಖಿಯರ ಜತೆ ಹೋಗಿದ್ದಾನೆ ಎಂಬ ಸುದ್ದಿ ಸ್ನೇಹಿತರ ಮೂಲಕ ಗೊತ್ತಾಯಿತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದ್ದಿ ಹರಡುತ್ತಿದೆ. ಈ ಬಗ್ಗೆ ವಿಶೇಷ ತನಿಖಾ ತಂಡದ ಎಸ್ಐ ಜತೆ ಮಾತನಾಡಿದೆ. ಆದರೆ ನಮಗೆ ಈ ರೀತಿಯ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿರುವುದಾಗಿ ತಿಳಿಸಿದ್ದರು.
ಮಂಗಳಮುಖಿಯರ ಜತೆ ಹೋಗಿರುವುದು ಸುಳ್ಳು ಸುದ್ದಿಯಾಗಿರಬಹುದು. ಈವರೆಗೂ ಆತನ ವರ್ತನೆಯಲ್ಲಿ ಈ ರೀತಿಯ ಬದಲಾವಣೆ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ತನಿಖೆ ಬಗ್ಗೆ ಪೊಲೀಸರು ಸಂಜೆ ಮಾಹಿತಿ ನೀಡಲಿದ್ದಾರೆ ಎಂದು ದಿಗಂತ್ ಸಹೋದರ ತಿಳಿಸಿದ್ದರು. ಇದೀಗ ವಿದ್ಯಾರ್ಥಿ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಈ ಸುದ್ದಿಯನ್ನೂ ಓದಿ | Karnataka weather: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಬೇಸಿಗೆ ಮಳೆ!