ಬೆಳ್ತಂಗಡಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣಕ್ಕೆ (Dharmasthala case) ಸಂಬಂಧಿಸಿ ಬೆಳ್ತಂಗಡಿ ಠಾಣೆಗೆ ಹಾಜರಾಗಿದ್ದ ಯೂಟ್ಯೂಬರ್ ಎಂ.ಡಿ. ಸಮೀರ್ ಸತತ 5 ಗಂಟೆ ವಿಚಾರಣೆ ಎದುರಿಸಿದ್ದಾನೆ. ಇನ್ನು ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದಿರುವ ಪೊಲೀಸರು, ನಾಳೆಯೂ ವಿಚಾರಣೆಗೆ ಬರುವಂತೆ ಸೂಚಿಸಿ, ಮೊಬೈಲ್ ಹಾಗೂ ಯೂಟ್ಯೂಬ್ಗೆ ವಿಡಿಯೋ ಅಪ್ಲೋಡ್ ಮಾಡಿದ್ದ ಲ್ಯಾಪ್ಟಾಪ್ ತರುವಂತೆ ತಿಳಿಸಿದ್ದಾರೆ.
ಪೊಲೀಸರು ಜುಲೈ 12ರಂದು ಸಮೀರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ನನ್ನು ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದರು. ಇದಕ್ಕೂ ಮೊದಲೇ ಆಗಸ್ಟ್ 19ರಂದೇ ಸಮೀರ್ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಜಿಲ್ಲಾ ನ್ಯಾಯಾಲಯವು ಯೂಟ್ಯೂಬರ್ ಸಮೀರ್ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಸಮೀರ್ ವಿಚಾರಣೆಗೆ ಸಹಕಾರ ನೀಡಬೇಕಾಗುತ್ತದೆ ಎಂದು ಕೋರ್ಟ್ ಕಂಡೀಷನ್ಸ್ ಹಾಕಿತ್ತು.
ಹೀಗಾಗಿ ಇಂದು ಮಧ್ಯಾಹ್ನ ಯೂಟ್ಯೂಬರ್ ಸಮೀರ್ ದಾಖಲೆಗಳು, ಮೂವರು ವಕೀಲರೊಂದಿಗೆ ಬೆಳ್ತಂಗಡಿ ಠಾಣೆಗೆ ಬಂದಿದ್ದ. ಠಾಣೆಗೆ ಬಂದ ಸಮೀರ್ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದುಕೊಂಡಿದ್ದಾರೆ. ಆತನ ವಿಡಿಯೋದ ಸ್ಕ್ರಿಪ್ಟ್ ಅನ್ನು ಕೊಟ್ಟು ಮತ್ತೆ ವಾಯ್ಸ್ ಓವರ್ ಕೊಡಲು ಪೊಲೀಸರು ಹೇಳಿದ್ದಾರಂತೆ. ಅದನ್ನು ಓದಿಸಿ ವಾಯ್ಸ್ ರೆಕಾರ್ಡ್ ಮಾಡಿಕೊಂಡಿದ್ದಾರಂತೆ. ಸಮೀರ್ ವಾಯ್ಸ್ ಅನ್ನು ಪೊಲೀಸರು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ. ಈಗಾಗಲೇ ಪೊಲೀಸರು ಸತತ ಐದು ಗಂಟೆಗಳ ಕಾಲ ಒಟ್ಟು ಮೂರು ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದಾರೆ. ಒಂದು, AI ವಿಡಿಯೋ ಪ್ರಕರಣ, ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ ಪ್ರಕರಣ, ಉಜಿರೆ ಖಾಸಗಿ ಆಸ್ಪತ್ರೆ ಬಳಿ ಗಲಾಟೆ ಸಂಬಂಧ ಸುಮೊಟೊ ಪ್ರಕರಣ ದಾಖಲಾಗಿತ್ತು.