ದಕ್ಷಿಣಕನ್ನಡ : ಧರ್ಮಸ್ಥಳ (Dharmasthala case) ವಿರೋಧಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ (Mahesh shetty thimarodi) ಜಿಲ್ಲಾಧಿಕಾರಿ ನೀಡಿರುವ ಗಡೀಪಾರು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ದೊರೆತಿದ್ದರೂ ಬಂಧನ ಭೀತಿಯಿಂದ ತಿಮರೋಡಿ ಹೊರಬರಲು ಆಗಿಲ್ಲ. ಏಕೆಂದರೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ ಮಹೇಶ ಶೆಟ್ಟಿ ತಿಮರೋಡಿ ಬಂಧನದ ಭೀತಿ ಎದುರಿಸುತ್ತಿದ್ದು, ಸದ್ಯ ತಲೆ ಮರೆಸಿಕೊಂಡಿದ್ದಾರೆ.
ಈಗಾಗಲೇ ತಿಮರೋಡಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅಕ್ಟೋಬರ್ 4ಕ್ಕೆ ವಿಚಾರಣೆ ಮುಂದೂಡಿದೆ. ದಕ್ಷಿಣ ಕನ್ನಡ ಜಿಲ್ಲಾ ಸೆಕೆಂಡ್ಸ್ ಕೋರ್ಟ್ ಈ ಅರ್ಜಿಯ ವಿಚಾರಣೆ ಮುಂದೂಡಿತ್ತು. ಈಗಾಗಲೇ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಮಹೇಶ ಶೆಟ್ಟಿ ತಿಮರೋಡಿಗೆ ನೋಟಿಸ್ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆ ಪೋಲಿಸರು ತಿಮರೋಡಿಗೆ ಮೂರು ಬಾರಿ ನೋಟಿಸ್ ನೀಡಿದ್ದಾರೆ. ತಿಮರೋಡಿ ಮನೆಗೆ ಮೂರು ಬಾರಿ ಪೊಲೀಸರು ಆಗಮಿಸಿದಾಗಲೂ ನೋಟೀಸ್ ಪಡೆಯಲು ತಿಮರೋಡಿ ಕಾಣಿಸಿಕೊಂಡಿರಲಿಲ್ಲ. ಮನೆ ಬಾಗಿಲಿಗೆ ನೋಟೀಸ್ ಅಂಟಿಸಲಾಗಿದೆ. ಮನೆಯವರಲ್ಲಿ ವಿಚಾರಿಸಲಾಗಿ, ಅವರು ಮನೆಯಲ್ಲಿ ಇಲ್ಲ ಎಂದು ಹೇಳಿ ಕಳಿಸುತ್ತಿದ್ದಾರೆ. ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ತಿಮರೋಡಿ ನಿರೀಕ್ಷಣಾ ಜಾಮೀನು ಸಿಕ್ಕ ಬಳಿಕವೇ ಬರುವ ಸಾಧ್ಯತೆ ಇದೆ. ಸದ್ಯ ಮಹೇಶ್ ಶೆಟ್ಟಿ ತಿಮರೋಡಿ ಮುಂಬೈನಲ್ಲಿ ಇರುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Mahesh Shetty Thimarodi: ಮಹೇಶ್ ಶೆಟ್ಟಿ ತಿಮರೋಡಿ ನಾಪತ್ತೆ, ʼನಮ್ಮೂರಿಗೆ ಬೇಡʼ ಎಂದು ರಾಯಚೂರಿನಲ್ಲಿ ಪ್ರತಿಭಟನೆ