ಹಾಸನ: ಭರ್ಜಟಿ ಆಫರ್ ನೀಡಿದ್ದರಿಂದ ಬಟ್ಟೆ ಖರೀದಿಗೆ ಸಾವಿರಾರು ಜನ ಮುಗಿಬಿದ್ದ ಘಟನೆ ಹಾಸನದಲ್ಲಿ ನಡೆದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ನಗರದ ಉದಯಗಿರಿ ಬಡಾವಣೆಯಲ್ಲಿ ಘಟನೆ ನಡೆದಿದೆ. ಲಕ್ಷಿ ಬ್ಯಾಡ್ಮಿಂಟನ್ ಅಕಾಡೆಮಿ ಕಟ್ಟಡದಲ್ಲಿನ ಅರುಣ್ ಅಡ್ಡ ಮೆನ್ಸ್ ವೇರ್ ಅಂಗಡಿಯಲ್ಲಿ ಬಟ್ಟೆ ಖರೀದಿಗೆ ಆಫರ್ ನೀಡಲಾಗಿತ್ತು. ಈ ಹಿನ್ನೆಲೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಖರೀದಿಗೆ ಬಂದಿದ್ದರು. ಬಟ್ಟೆ ಖರೀದಿಸಲು ನೂಕುನುಗ್ಗಲು ಹೆಚ್ಚಾದ ಹಿನ್ನೆಲೆ ಖರೀದಿಗೆ ಬಂದಿದ್ದವರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸಿದ್ದಾರೆ.
ಅರುಣ್ ಅಡ್ಡ ಮೆನ್ಸ್ ವೇರ್ನವರು 1 ಸಾವಿರ ರೂ.ಗೆ 20 ಶರ್ಟ್ ಆಫರ್ ನೀಡಿದ್ದರು. ಹೀಗಾಗಿ ಬಟ್ಟೆ ಖರೀದಿಗೆ ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಲ್ಲದೆ ಯುವಕರಿಗೆ ಲಾಠಿ ರುಚಿ ತೋರಿಸಿದ್ದಾರೆ. ಲಾಠಿ ಚಾರ್ಜ್ ನಡೆಸಿದ ಪರಿಣಾಮ ಯುವಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.