ಕಲಬುರಗಿ: ನ.2ರಂದು ಕಲಬುರಗಿ (Kalaburagi) ಜಿಲ್ಲೆ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಪಥಸಂಚಲನ ನಡೆಸಲು ಅನುಮತಿ ವಿಚಾರವಾಗಿ ಕಲಬುರಗಿ ಹೈಕೋರ್ಟ್ (High Court) ವಿಭಾಗೀಯ ಪೀಠದ ಸೂಚನೆಯಂತೆ ಹೊಸ ಅರ್ಜಿಯನ್ನು ಆರೆಸ್ಸೆಸ್ (RSS) ಮುಖಂಡರು ಸಲ್ಲಿಕೆ ಮಾಡಿದ್ದಾರೆ. ಮನವಿ ಪತ್ರ ಖುದ್ದಾಗಿ ನೀಡಲು ಜಿಲ್ಲಾಧಿಕಾರಿ ಕಚೇರಿ ಮತ್ತು ಅವರ ಸರ್ಕಾರಿ ನಿವಾಸಕ್ಕೆ RSS ಮುಖಂಡರು ತೆರಳಿದ್ದರು. ಆದರೆ ಡಿಸಿ ಸಿಗದ ಹಿನ್ನೆಲೆ ಸರ್ಕಾರಿ ನಿವಾಸದ ಸಿಬ್ಬಂದಿಯಿಂದ ಜಿಲ್ಲಾಧಿಕಾರಿ ಆಪ್ತ ಸಹಾಯಕರಿಗೆ ಫೋನ್ ಮಾಡಿಸಲಾಗಿದೆ. ಆಗ ಆಪ್ತ ಸಹಾಯಕ ಫೋನ್ ಕರೆ ಸ್ವಿಕರಿಸದ ಹಿನ್ನಲೆ ಜಿಲ್ಲಾಧಿಕಾರಿಯವರ ಅಧಿಕೃತ ಎರಡು ಇ-ಮೇಲ್ ಗಳಿಗೆ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಕೋರಿ ಅರ್ಜಿ ರವಾನೆ ಮಾಡಲಾಗಿದೆ. ಜೊತೆಗೆ ಡಿಸಿ ಅವರ ಸರ್ಕಾರಿ ದೂರವಾಣಿ ಸಂಖ್ಯೆಗೆಗೂ ವಾಟ್ಸಾಪ್ ಮೂಲಕ ಅರ್ಜಿ ಕಳುಹಿಸಲಾಗಿದೆ.
ಚಿತ್ತಾಪುರದಲ್ಲಿ ನಡೆಯಬೇಕಿದ್ದ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಆದೇಶ ಹೊರಡಿಸಿದ್ದರು. ಇದನ್ನ ಕಾರ್ಯಕರ್ತರು ಕೋರ್ಟ್ ಮೊರೆ ಹೋಗಿದ್ದು, ಕಲಬುರಗಿ ಹೈಕೋರ್ಟ್ ಪೀಠಕ್ಕೆ ಜಿಲ್ಲಾ ಪ್ರಮುಖರಾದ ಅಶೋಕ್ ಪಾಟೀಲ್ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿತ್ತು. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಕೋರ್ಟ್ ನ ಈ ಆದೇಶದ ಅನ್ವಯ ಈಗ ಮತ್ತೆ ಹೊಸ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಕಲಬುರಗಿಯ ಸೇಡಂನಲ್ಲಿ ನಿನ್ನೆ ನಡೆದ ಆರೆಸ್ಸೆಸ್ ಪಥಸಂಚಲನದಲ್ಲಿ ಸರ್ಕಾರಿ ಅಧಿಕಾರಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ನಾಗರಾಜ್ ಮನ್ನೆ ಗಣವೇಶ ಧರಿಸಿ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ. RSSಗೆ ನೂರು ವರ್ಷ ಪೂರೈಸಿದ ಹಿನ್ನಲೆ ನಡೆದಿದ್ದ ಈ ಕಾರ್ಯಕ್ರಮದಲ್ಲಿ, ಹಲವು ಕಾಂಗ್ರೆಸ್ ಕಾರ್ಯಕರ್ತರು ಕೂಡ ಭಾಗಿಯಾಗಿದ್ದರು.