ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಸೌಜನ್ಯಾಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh shetty timarodi) ನಿವಾಸದ ಮೇಲೆ ವಿಶೇಷ ತನಿಖಾ ತಂಡ ಮಂಗಳವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ. ಸಾಕ್ಷಿಯಾಗಿ ಬಂದು, ಈಗ ಆರೋಪಿಯಾಗಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನ ಹೇಳಿಕೆಯಂತೆ ಪೊಲೀಸರು ಕೋರ್ಟ್ ಸರ್ಚ್ ವಾರಂಟ್ ಪಡೆದು ತಿಮರೋಡಿ ನಿವಾಸಕ್ಕೆ ತೆರಳಿದ್ದಾರೆ. ಪರಿಶೀಲನೆ ವೇಳೆ ಚಿನ್ನಯ್ಯನ ಮೊಬೈಲ್ ಸೇರಿ ಇನ್ನಿತರ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ನಾನು ತಿಮರೋಡಿಯ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ ಇಟ್ಟಿದ್ದೇನೆ. ನಾನು ಮೊಬೈಲ್ ಬಳಸುತ್ತಿರಲಿಲ್ಲ. ನನ್ನ ಮೊಬೈಲ್ ತಿಮರೋಡಿ ಕಡೆಯವರ ಜತೆ ಇತ್ತು ಎಂದು ಚಿನ್ನಯ್ಯ ಹೇಳಿದ್ದ. ಈ ಕಾರಣಕ್ಕೆ ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ಮತ್ತು ಮೊಬೈಲ್ ಸಂಗ್ರಹಿಸಲು ಪೊಲೀಸರು ತಿಮರೋಡಿ ನಿವಾಸಕ್ಕೆ ಹೋಗಿದ್ದಾರೆ.
ಪೊಲೀಸ್ ವಾಹನಗಳ ಜತೆ ಮಾಧ್ಯಮಗಳ ವಾಹನಗಳು ತಿಮರೋಡಿ ಮನೆಗೆ ತೆರಳಿತ್ತು. ಆದರೆ ಪೊಲೀಸರು ತಿಮರೋಡಿಗೆ ಹೋಗುವ ಮಾರ್ಗ ಮಧ್ಯೆಯೇ 1 ಕಿ.ಮೀ ದೂರದಲ್ಲಿ ಎಲ್ಲಾ ಮಾಧ್ಯಮಗಳ ವಾಹನಗಳನ್ನು ತಡೆದಿದ್ದಾರೆ.
ಧರ್ಮಸ್ಥಳದಲ್ಲಿ ಉತ್ಖನನ ನಡೆಯುತ್ತಿದ್ದಾಗ ಬುರುಡೆ ಗ್ಯಾಂಗ್ನ ಎಲ್ಲಾ ಸದಸ್ಯರು ತಿಮರೋಡಿ ಮನೆಯಲ್ಲೇ ತಂಗಿದ್ದರು. ಎಲ್ಲಾ ಪ್ಲ್ಯಾನ್ಗಳು ಇಲ್ಲೇ ಸಿದ್ಧವಾಗುತ್ತಿತ್ತು ಎನ್ನಲಾಗಿದೆ.