ತುಮಕೂರು: ರೋಗಿಯೊಬ್ಬರಿಗೆ ಎಚ್ಐವಿ ಸೋಂಕಿನ ರಕ್ತ (HIV Positive Blood) ನೀಡಿದ್ದ ಆರೋಪ ಎದುರಿಸುತ್ತಿದ್ದ ನಗರದ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿ, ನೊಂದವರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದೆ. ಆರೋಗ್ಯ ಸೇವೆಯಲ್ಲಿ ನಿರ್ಲಕ್ಷ್ಯ ಹಾಗೂ ಸೇವಾ ಲೋಪವನ್ನು ಪರಿಗಣಿಸಿ 50 ಸಾವಿರ ಪರಿಹಾರ, ನ್ಯಾಯಾಲಯ ವೆಚ್ಚವಾಗಿ 8 ಸಾವಿರ ಪಾವತಿಸುವಂತೆ ಶ್ರೀದೇವಿ ವೈದ್ಯಕೀಯ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ಎಂ.ಆರ್.ಹುಲಿನಾಯ್ಕರ್, ಆಸ್ಪತ್ರೆ ಸೂಪರಿಂಟೆಂಡೆಂಟ್ ಹಾಗೂ ತಜ್ಞ ವೈದ್ಯ ಚೇತನ್ಗೆ ಕೋರ್ಟ್ ಸೂಚಿಸಿದೆ.
ಏನಿದು ಪ್ರಕರಣ?
ತಾಲೂಕಿನ ಹಳ್ಳಿಯೊಂದರ ವೃದ್ಧರೊಬ್ಬರು ರಕ್ತ ಹೀನತೆ ಹಾಗೂ ರಕ್ತ ಸೋರಿಕೆ ತಡೆಗೆ ಚಿಕಿತ್ಸೆ ಪಡೆಯುವ ಸಲುಗಾಗಿ 2023ರ ಜುಲೈ 14ರಂದು ಶ್ರೀದೇವಿ ವೈದ್ಯಕೀಯ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮೂರು ಯೂನಿಟ್ ರಕ್ತವನ್ನು ನೀಡಲಾಗಿತ್ತು. ಚಿಕಿತ್ಸೆಗೆ ಮುನ್ನ ರೋಗಿ ಪರೀಕ್ಷಿಸಿದ್ದು, ಎಚ್ಐವಿ ಸೋಂಕಿನ ಲಕ್ಷಣಗಳು ಕಂಡು ಬಂದಿರಲಿಲ್ಲ.
2023 ನವೆಂಬರ್ನಲ್ಲಿ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಆ ಸಮಯದಲ್ಲಿ ರಕ್ತ ಪರೀಕ್ಷೆ ಮಾಡಿಸಿದ್ದು, ಎಚ್ಐವಿ ಸೋಂಕು ಇರುವುದು ಪತ್ತೆಯಾಗಿತ್ತು. 2023 ಜುಲೈನಲ್ಲಿ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದ ನಂತರ ಈ ಸೋಂಕು ಕಂಡು ಬಂದಿದೆ. ಎಚ್ಐವಿ ಸೋಂಕು ಇರುವ ರಕ್ತ ನೀಡಿದ್ದರಿಂದಲೇ ರೋಗಕ್ಕೆ ಸಿಲುಕಿದಂತಾಗಿದೆ. ಆಸ್ಪತ್ರೆಯಲ್ಲಿ ರಕ್ತವನ್ನು ಸರಿಯಾಗಿ ಪರೀಕ್ಷೆಗೆ ಒಳಪಡಿಸದಿರುವುದು, ಎಚ್ಚರ ವಹಿಸದಿರುವುದು, ಸೇವಾ ನ್ಯೂನತೆಯಿಂದಾಗಿ ಎಚ್ಐವಿ ಪೀಡಿತರಾಗಬೇಕಾಗಿದೆ ಎಂದು ಮನನೊಂದ ರೋಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರು ಸಲ್ಲಿಸಿದ್ದರು.
ರೋಗಿಗೆ ಮೂರು ಯೂನಿಟ್ ರಕ್ತ ನೀಡಿರುವುದನ್ನು ಆಸ್ಪತ್ರೆ ಒಪ್ಪಿಕೊಂಡಿದೆ. ಆದರೆ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿರುವ ಪತ್ರದಲ್ಲಿ ಮೂರನೇ ಯೂನಿಟ್ ರಕ್ತ ನೀಡಿದ ಮಾಹಿತಿ ದಾಖಲಿಸಿಲ್ಲ. ಮೂರನೇ ಯೂನಿಟ್ನ ರಕ್ತದ ಪರೀಕ್ಷೆ ಹಾಗೂ ಮತ್ತಿತರ ವಿವರಗಳನ್ನು ಸಲ್ಲಿಸಿಲ್ಲ. ರೋಗಿಯ ವೈದ್ಯಕೀಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಕಂಡು ಬರುತ್ತದೆ. ಹಾಗಾಗಿ ಈ ಸೇವಾ ಲೋಪಕ್ಕಾಗಿ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯೆ ನಿವೇದಿತಾ ರವೀಶ್ ನೇತೃತ್ವದ ಪೀಠ ಆದೇಶ ನೀಡಿದೆ. ರೋಗಿ ಪರವಾಗಿ ವಕೀಲ ನರಸಿಂಹಯ್ಯ ವಾದ ಮಂಡಿಸಿದ್ದರು.
ದೂರುದಾರರು 20 ಲಕ್ಷ ಪರಿಹಾರ, 2 ಲಕ್ಷ ನಷ್ಟ ಪರಿಹಾರ, ಮಾನಸಿಕ ಹಿಂಸೆ ಅನುಭವಿಸಿದ್ದಕ್ಕಾಗಿ 50 ಸಾವಿರ ಪರಿಹಾರ ಕೋರಿ ಆಯೋಗದ ಮೆಟ್ಟಿಲೇರಿದ್ದರು.
ಈ ಸುದ್ದಿಯನ್ನೂ ಓದಿ | Blood Donation Scheme Awareness: ಯಾತ್ರಿಕರ ಜೀವ ಉಳಿಸಲು ಟಿಟಿಡಿಯಿಂದ ರಕ್ತದಾನದ ಜಾಗೃತಿ
ಆಸ್ಪತ್ರೆ ಸ್ಪಷ್ಟನೆ ಏನು?
ಎಲ್ಲ ರೀತಿಯಲ್ಲೂ ಪರೀಕ್ಷೆ ಮಾಡಿದ ನಂತರವೇ ರೋಗಿಗೆ ರಕ್ತ ನೀಡಲಾಗಿದೆ. ದಾನಿಗಳಿಂದ ರಕ್ತ ಪಡೆದುಕೊಂಡ ಸಮಯದಲ್ಲಿ ಪರೀಕ್ಷೆ ನಡೆಸಿ ರಕ್ತನಿಧಿ ಕೇಂದ್ರದಲ್ಲಿ ಇಡಲಾಗಿತ್ತು. ಅದೇ ರಕ್ತವನ್ನು ರೋಗಿಗೆ ನೀಡಲಾಗಿದೆ. ಚಿಕಿತ್ಸೆ ಪಡೆದುಕೊಂಡ ನಾಲ್ಕು ತಿಂಗಳ ನಂತರ ಎಚ್ಐವಿ ಸೋಂಕು ಇರುವುದು ಪತ್ತೆಯಾಗಿದೆ. ನಮ್ಮ ಸೇವೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಆಸ್ಪತ್ರೆ ಪರ ವಕೀಲರು ವಾದಿಸಿದ್ದರು.