ಮುಂಬೈ: ಕೊಚ್ಚಿಯಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಸ್ವಲ್ಪದರಲ್ಲಿಯೇ ಪಾರಾಗಿದೆ. ಮುಂಬೈ ಏರ್ಪೋರ್ಟ್ನಲ್ಲಿ ಇಳಿಯುವಾಗ ವಿಮಾನ ಸ್ಕಿಡ್ ಆಗಿದೆ. ಮುಖ್ಯ ರನ್ ವೇ ಸಂಖ್ಯೆ 27ರಿಂದ ಜಾರಿದ ಎ320 ವಿಮಾನವು ಸ್ಕಿಡ್ ಆಗಿದೆ. ತೀವ್ರ ಮಳೆಯಿಂದಾಗಿ ಜಾರುವ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಸದ್ಯ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ವಿಮಾನಕ್ಕೆ ಕೊಂಚ ಮಟ್ಟಿಗಿನ ಹಾನಿ ಎದುರಾಗಿದೆ ಎಂದು ಹೇಳಲಾಗಿದೆ.
ಕೊಚ್ಚಿಯಿಂದ ಆಗಮಿಸುತ್ತಿರುವ ವಿಮಾನವು ಜುಲೈ 21 ರಂದು ಬೆಳಗ್ಗೆ 9.27 ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CSMIA) ಇಳಿಯಿತು. ನಂತರ ಪರಿಸ್ಥಿತಿಯನ್ನು ನಿರ್ವಹಿಸಲು ತುರ್ತು ಪ್ರತಿಕ್ರಿಯೆ ತಂಡಗಳನ್ನು ತಕ್ಷಣವೇ ಸಕ್ರಿಯಗೊಳಿಸಲಾಯಿತು. ಘಟನೆಯ ನಂತರ ವಿಮಾನವನ್ನು ಸುರಕ್ಷಿತವಾಗಿ ಗೇಟ್ಗೆ ಕರೆದೊಯ್ಯಲಾಯಿತು ಎಂದು ಏರ್ ಇಂಡಿಯಾ ತಿಳಿಸಿದೆ.
ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ವಿಮಾನ ನಿಲ್ದಾಣದ ಪ್ರಾಥಮಿಕ ರನ್ವೇಗೆ ಸಣ್ಣಪುಟ್ಟ ಹಾನಿಗಳು ವರದಿಯಾಗಿವೆ.ಮುಂದಿನ ಎರಡು ದಿನಗಳಲ್ಲಿ ಮುಂಬೈ ನಿವಾಸಿಗಳು ಮತ್ತಷ್ಟು ಮಳೆ ಎದುರಿಸಲು ಸಿದ್ಧರಾಗಬೇಕು. ಮುಂದಿನ 48 ಗಂಟೆಗಳಲ್ಲಿ ಮಳೆ ಇನ್ನಷ್ಟು ತೀವ್ರವಾಗುವ ನಿರೀಕ್ಷೆಯಿದೆ ಮತ್ತು ಬಲವಾದ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಏರ್ ಇಂಡಿಯಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ವಿಮಾನವನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಮುಂಬೈ ವಿಮಾನ ನಿಲ್ದಾಣ ವಕ್ತಾರರು, “ವಿಮಾನ ನಿಲ್ದಾಣದ ಮುಖ್ಯ ರನ್ ವೇ 09/27ಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ವಿಮಾನ ಕಾರ್ಯಾಚರಣೆಗಳಲ್ಲಿ ಅಡಚಣೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Air India: ವಿಮಾನದಲ್ಲೇ ಕುಸಿದು ಬಿದ್ದ ಪೈಲಟ್, ಬೆಂಗಳೂರು- ದಿಲ್ಲಿ ವಿಮಾನ ವಿಳಂಬ
ಮುಂಬೈನಲ್ಲಿ ಭಾರೀ ಮಳೆ
ರಾತ್ರಿಯಿಡೀ ಸುರಿದ ಭಾರೀ ಮಳೆಯ ನಂತರ ಮುಂಬೈನ ಹಲವಾರು ಪ್ರದೇಶಗಳಲ್ಲಿ ನೀರು ನಿಂತಿದೆ. ನಗರದ ಹಲವು ಭಾಗಗಳಲ್ಲಿ ವಾಹನ ಸಂಚಾರವೂ ನಿಧಾನವಾಯಿತು. ಮುಂಬೈನ ಪಶ್ಚಿಮ ಭಾಗದಲ್ಲಿರುವ ಅಂಧೇರಿ ಸಬ್ವೇಯಲ್ಲಿ ನೀರು ಸಂಗ್ರಹವಾದ ಕಾರಣ ಸಂಚಾರ ಬಂದ್ ಮಾಡಲಾಗಿದೆ.