ಶ್ರೀನಗರ: ಪಹಲ್ಗಾಮ್ (Pahalgam) ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕ ದಾಳಿಯ (Terror Attack) ಬಳಿಕ ಮುಚ್ಚಲಾಗಿರುವ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಏಳು ಪ್ರಸಿದ್ಧ ಪ್ರವಾಸಿ ತಾಣಗಳು (Tourist Spots) ಸೋಮವಾರದಿಂದ ಮತ್ತೆ ತೆರೆಯಲಿವೆ. ಶ್ರೀನಗರದ (Srinagar) ರಾಜ್ ಭವನದಲ್ಲಿ ನಡೆದ ಸಭೆಯಲ್ಲಿ ಸಂಪೂರ್ಣ ಭದ್ರತಾ ಪರಿಶೀಲನೆ ನಡೆಸಿ ಪ್ರವಾಸಿ ತಾಣಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲು ನಿರ್ಧಾರ ಕೈಗೊಳ್ಳಲಾಯಿತು ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶುಕ್ರವಾರ ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅನಂತರ ಮುನ್ನೆಚ್ಚರಿಕೆ ಕ್ರಮವಾಗಿ ಏಪ್ರಿಲ್ 22ರಂದು ಮುಚ್ಚಲ್ಪಟ್ಟ ಏಳು ಪ್ರವಾಸಿ ತಾಣಗಳು ಸೆಪ್ಟೆಂಬರ್ 29ರಿಂದ ಮತ್ತೆ ತೆರೆಯಲ್ಪಡುತ್ತವೆ ಎಂದು ಸಿನ್ಹಾ ಹೇಳಿದ್ದಾರೆ. ಶ್ರೀನಗರದ ರಾಜ್ ಭವನದಲ್ಲಿ ಶುಕ್ರವಾರ ನಡೆದ ಏಕೀಕೃತ ಪ್ರಧಾನ ಕಚೇರಿ (UHQ) ಸಭೆಯ ಸಮಯದಲ್ಲಿ ನಡೆಸಿದ ಸಂಪೂರ್ಣ ಭದ್ರತಾ ಪರಿಶೀಲನೆಯ ಅನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏಕೀಕೃತ ಪ್ರಧಾನ ಕಚೇರಿ ಸಭೆಯಲ್ಲಿ ಸಂಪೂರ್ಣ ಭದ್ರತಾ ಪರಿಶೀಲನೆ ಮತ್ತು ಚರ್ಚೆಯ ಅನಂತರ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟ ಕಾಶ್ಮೀರ ಮತ್ತು ಜಮ್ಮು ವಿಭಾಗಗಳಲ್ಲಿ ಹೆಚ್ಚಿನ ಪ್ರವಾಸಿ ತಾಣಗಳನ್ನು ಮತ್ತೆ ತೆರೆಯಲು ನಾನು ಆದೇಶಿಸಿದ್ದೇನೆ ಎಂದು ಹೇಳೀರುವ ಅವರು ಕಾಶ್ಮೀರ ವಿಭಾಗದಲ್ಲಿ ಮತ್ತೆ ತೆರೆಯಲಾಗುವ ಏಳು ತಾಣಗಳಲ್ಲಿ ಅರು ಕಣಿವೆ, ರಾಫ್ಟಿಂಗ್ ಪಾಯಿಂಟ್ ಯನ್ನೆರ್, ಅಕ್ಕಡ್ ಪಾರ್ಕ್, ಪದಶಾಹಿ ಪಾರ್ಕ್ ಮತ್ತು ಕಮನ್ ಪೋಸ್ಟ್ ಸೇರಿವೆ ಎಂದು ತಿಳಿಸಿದ್ದಾರೆ.
ಹೆಚ್ಚುವರಿಯಾಗಿ ಜಮ್ಮು ವಿಭಾಗದ ಐದು ಸ್ಥಳಗಳಾದ ದಗನ್ ಟಾಪ್, ರಾಂಬನ್, ಕಥುವಾದಲ್ಲಿನ ಧಾಗ್ಗರ್, ಸಲಾಲ್ನಲ್ಲಿರುವ ಶಿವ ಗುಹೆ ಮತ್ತು ರಿಯಾಸಿ ಕೂಡ ತೆರೆಯಲಾಗುವುದು ಎಂದರು. ಶ್ರೀನಗರದ ರಾಜ್ ಭವನದಲ್ಲಿ ನಡೆದ ಸಭೆಯಲ್ಲಿ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ, ಮುಖ್ಯ ಕಾರ್ಯದರ್ಶಿ ಅಟಲ್ ಡಲ್ಲೂ, ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಮತ್ತು ಬಹು ಸೇನಾ ಪಡೆಗಳ ಕಮಾಂಡರ್ಗಳು ಸೇರಿದಂತೆ ಉನ್ನತ ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಗುಪ್ತಚರ ಸಂಸ್ಥೆಗಳು ಮತ್ತು ನಾಗರಿಕ ಆಡಳಿತದ ಹಿರಿಯ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.
ಕೇಂದ್ರಾಡಳಿತ ಪ್ರದೇಶದಾದ್ಯಂತ ಇತ್ತೀಚೆಗೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಿದ್ದಕ್ಕಾಗಿ ಭದ್ರತಾ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳನ್ನು ಸಿನ್ಹಾ ಶ್ಲಾಘಿಸಿದರು.
ಇದನ್ನೂ ಓದಿ: Operation Sindoor: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮುಖವಾಡ ಕಳಚಿಟ್ಟ ಭಾರತೀಯ ಅಧಿಕಾರಿ
ಭಯೋತ್ಪಾದನೆಯ ವಿರುದ್ಧದ ಯುದ್ಧ ಮುಗಿದಿಲ್ಲ. ಈ ಕಾರ್ಯಾಚರಣೆಗಳು ಮುಂದುವರಿಯಬೇಕು. ಇದರಲ್ಲಿ ವೇಗವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದ ಅವರು, ಸ್ಥಳೀಯರು ಮತ್ತು ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುಧಾರಿತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.