ಬೆಂಗಳೂರು: ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ಸೋಮವಾರ ಮುಕ್ತಾಯ ಕಂಡ ದುಲೀಪ್ ಟ್ರೋಫಿ(Duleep Trophy 2025) ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ(South Zone)ವನ್ನು ಆರು ವಿಕೆಟ್ಗಳಿಂದ ಸೋಲಿಸುವ ಮೂಲಕ ಕೇಂದ್ರ ವಲಯ(Central Zone) ತಂಡ 11 ವರ್ಷಗಳ ನಂತರ ಟ್ರೋಫಿ ಎತ್ತಿ ಹಿಡಿಯಿತು. ಪಂದ್ಯದ ಕೊನೆಯ ದಿನವಾದ ಸೋಮವಾರ 65 ರನ್ಗಳ ಅಲ್ಪಮೊತ್ತದ ಗುರಿಯನ್ನು ಬೆನ್ನಟ್ಟಿದ ಕೇಂದ್ರ ವಲಯ, 4 ವಿಕೆಟ್ ಕಳೆದುಕೊಂಡು 66 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಸಣ್ಣ ಮೊತ್ತವಾದರೂ ಇದನ್ನು ರಕ್ಷಿಸಿಕೊಳ್ಳಲು ದಕ್ಷಿಣ ವಲಯದ ಆಟಗಾರರು ತೀವ್ರ ಪೈಪೋಟಿ ನಡೆಸಿ 4 ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಒಂದೊಮ್ಮೆ 100 ರನ್ಗಳ ಸವಾಲು ಆಗುತ್ತಿದ್ದರೆ ಪಂದ್ಯವನ್ನು ಗೆಲ್ಲುವ ಸಾಧ್ಯತೆಯೂ ಇತ್ತು. ಅಷ್ಟರ ಮಟ್ಟಿಗೆ ತಂಡದ ಬೌಲಿಂಗ್ ಘಾತಕವಾಗಿತ್ತು.
ದಕ್ಷಿಣ ವಲಯ ತಂಡ ಮೊದಲ ಇನಿಂಗ್ಸ್ನಲ್ಲಿ ಕೇವಲ 149 ರನ್ಗೆ ಆಲೌಟ್ ಆಗಿತ್ತು. ಕೇಂದ್ರ ವಯಲ ಬೊಂಬಾಟ್ ಬ್ಯಾಟಿಂಗ್ ಮೂಲಕ 511 ರನ್ ಬಾರಿಸಿ ಭಾರೀ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಲಯ ಕಂಡುಕೊಂಡ ದಕ್ಷಿಣ ವಲಯ 121 ಓವರ್ಗಳಲ್ಲಿ 426 ರನ್ ಗಳಿಸಿತು. 64 ರನ್ಗಳ ಮುನ್ನಡೆ ಗಳಿಸಿ ಇನಿಂಗ್ಸ್ ಸೋಲು ತಪ್ಪಿಸಿಕೊಂಡಿತು.
ತಂಡದ ಪರ 19 ವರ್ಷದ ಆ್ಯಂಡ್ರೆ ಸಿದ್ಧಾರ್ಥ್ ಅಜೇಯ 84, ಎಡಗೈ ಸ್ಪಿನ್–ಆಲ್ರೌಂಡರ್ ಅಂಕಿತ್ 99 ರನ್ ಬಾರಿಸಿ ತಂಡಕ್ಕೆ ನೆರವಾದರು. ಈ ಜೋಡಿ 7ನೇ ವಿಕೆಟ್ ಜೊತೆಯಾಟದಲ್ಲಿ 192 ರನ್ ಕಲೆಹಾಕಿದರು. 65 ರನ್ಗಳ ಗುರಿ ಬೆನ್ನಟ್ಟಿದ ಕೆಂದ್ರ ವಲಯ ಆರಂಭದಿಂದಲೇ ಸತತವಾಗಿ ವಿಕೆಟ್ ಕಳೆದುಕೊಂಡಿತು.
ಅಕ್ಷಯ್ ವಾಡ್ಕರ್ ಅವರ ಅಜೇಯ 19 ರನ್ ತಂಡದ ಪರ ದಾಖಲಾದ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿತು. ನಾಯಕ ಪಾಟೀದಾರ್ ಮತ್ತು ಯಶ್ ರಾಥೋಡ್ ತಲಾ 13 ರನ್ ಗಳಿಸಿದರು. ದಕ್ಷಿಣ ವಲಯ ಪರ ದ್ವಿತೀಯ ಇನಿಂಗ್ಸ್ ಬೌಲಿಂಗ್ನಲ್ಲಿ ಗುರ್ಜಪ್ನೀತ್ ಸಿಂಗ್ ಮತ್ತು ಅಂಕಿತ್ ಶರ್ಮಾ ತಲಾ ಎರಡು ವಿಕೆಟ್ ಕೆಡವಿದರು.
ಇದನ್ನೂ ಓದಿ