Dr Vijay Darda Column: ದೇವ ಭಾವು ವಿಶ್ವಾಸಾರ್ಹವಾಗಿ ಬಂಡವಾಳ ಬೇಟೆಯ ಗರಿ !
ಇಷ್ಟೊಂದು ದೊಡ್ಡ ಬಂಡವಾಳ ಹೂಡಿಕೆಯ ವಾಗ್ದಾನವನ್ನು ತರವುದು ಸಣ್ಣ ಮಾತಲ್ಲ. ದೇಶ ದಲ್ಲಿ ಈ ಹಿಂದೆ ನಿರ್ಮಾಣವಾಗಿದ್ದ ಎಲ್ಲ ದಾಖಲೆಗಳನ್ನೂ ಇದು ಮುರಿದಿದೆ. ದೊಡ್ಡ ದೊಡ್ಡ ಜಾಗತಿಕ ಉದ್ಯಮಿಗಳು ಮಹಾರಾಷ್ಟ್ರದಲ್ಲಿ ಈ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿ ರು ವುದು ಅವರೆಲ್ಲರೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ರಲ್ಲಿ ಇರಿಸಿರುವ ನಂಬಿಕೆಯನ್ನು ತೋರಿಸುತ್ತದೆ
ಸಂಗತ
ಡಾ.ವಿಜಯ್ ದರಡಾ
ದಾವೋಸ್ನಲ್ಲಿ ಮಹಾರಾಷ್ಟ್ರ ಸರಕಾರ ಭರ್ಜರಿ ಬಂಡವಾಳದ ಬೇಟೆಯಾಡಿದೆ. ಆ ವಿದೇಶಿ ಬಂಡವಾಳವು ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ಹೂಡಿಕೆಯಾಗುವ ಮೂಲಕ ಮಹಾರಾಷ್ಟ್ರದ ಎಲ್ಲೆಡೆ ಉದ್ದಿಮೆಗಳು ಸಮಾನವಾಗಿ ಅಭಿವೃದ್ಧಿ ಹೊಂದುವಂತೆ ಮುಖ್ಯ ಮಂತ್ರಿ ದೇವೇಂದ್ರ ಫಡ್ನವೀಸ್ ನೋಡಿಕೊಳ್ಳಬೇಕಿದೆ.
ಇತ್ತೀಚೆಗೆ ಸ್ವಿಜರ್ಲೆಂಡಿನ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ ಮಹಾರಾಷ್ಟ್ರ ಸರಕಾರ ಭರ್ಜರಿ ವಿದೇಶಿ ಬಂಡವಾಳವನ್ನು ಬೇಟೆಯಾಡಿದ ಬಗ್ಗೆ ಸಾಕಷ್ಟು ಸುದ್ದಿಗಳು ಬಂದವು. ಅವುಗಳನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಎದ್ದವು. ದಾವೋಸ್ನಲ್ಲಿ ಮಹಾ ರಾಷ್ಟ್ರ ಸರಕಾರ 15.75 ಲಕ್ಷ ಕೋಟಿ ರು. ಗಳಷ್ಟು ಬಂಡವಾಳ ಹೂಡಿಕೆಯ ಒಪ್ಪಂದಗಳಿಗೆ ಸಹಿ ಹಾಕಿದೆ.
ಇಷ್ಟೊಂದು ದೊಡ್ಡ ಬಂಡವಾಳ ಹೂಡಿಕೆಯ ವಾಗ್ದಾನವನ್ನು ತರವುದು ಸಣ್ಣ ಮಾತಲ್ಲ. ದೇಶ ದಲ್ಲಿ ಈ ಹಿಂದೆ ನಿರ್ಮಾಣವಾಗಿದ್ದ ಎಲ್ಲ ದಾಖಲೆಗಳನ್ನೂ ಇದು ಮುರಿದಿದೆ. ದೊಡ್ಡ ದೊಡ್ಡ ಜಾಗತಿಕ ಉದ್ಯಮಿಗಳು ಮಹಾರಾಷ್ಟ್ರದಲ್ಲಿ ಈ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿರುವುದು ಅವರೆಲ್ಲರೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ರಲ್ಲಿ ಇರಿಸಿರುವ ನಂಬಿಕೆಯನ್ನು ತೋರಿಸುತ್ತದೆ.
ಇದನ್ನೂ ಓದಿ: Dr Vijay Darda Column: ಡೊನಾಲ್ಡ್ ಟ್ರಂಪ್ ದೌಲತ್ತಿನಿಂದ ಜಗತ್ತಿಗೆ ಆತಂಕ !
ಮರಾಠಿಗರು ಅವರನ್ನು ‘ಭಾವು’ ಎಂದು ಕರೆಯುವಂತೆ ಈಗ ಈ ಮುಖ್ಯಮಂತ್ರಿಗಳು ಉದ್ಯಮಿ ಗಳಿಂದಲೂ ‘ಭಾವು’ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಮಟ್ಟಿಗೆ ಜನಪ್ರಿಯರಾಗಿದ್ದಾರೆ. ಭಾವು ಅಂದರೆ ಸಹೋದರ.ಉದ್ಯಮಿಗಳು ಮಹಾರಾಷ್ಟ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿರುವುದು ಪತ್ರಿಕೆಗಳಲ್ಲಿ ದಪ್ಪ ದಪ್ಪ ಹೆಡ್ಲೈನ್ಗಳಲ್ಲಿ ಪ್ರಕಟವಾಯಿತು.
ಅವುಗಳನ್ನು ನೋಡಿದ ಕೆಲವರು ಈ ಒಪ್ಪಂದಗಳು ನಿಜವಾಗಿಯೂ ಜಾರಿಗೆ ಬರುತ್ತವೆಯೇ ಎಂಬ ಪ್ರಶ್ನೆಯನ್ನೂ ಎತ್ತಿದರು. ಮೂಲತಃ ಅವರ ಕಳಕಳಿ ಏನೆಂದರೆ, ಮಹಾರಾಷ್ಟ್ರದ ಜತೆಗೆ ಬಂಡವಾಳ ಹೂಡಿಕೆಯ ಒಪ್ಪಂದ ಮಾಡಿಕೊಂಡ ಈ ಉದ್ಯಮಿಗಳಲ್ಲಿ ಹೆಚ್ಚಿನವರು ಭಾರತೀಯ ಉದ್ಯಮಿಗಳೇ ಆಗಿದ್ದಾರೆ ಮತ್ತು ಈಗಾಗಲೇ ಅವರು ಮಹಾರಾಷ್ಟ್ರದಲ್ಲಿ ಉದ್ದಿಮೆಗಳನ್ನು ನಡೆಸುತ್ತಿದ್ದಾರೆ.
ಹಾಗಿರುವಾಗ ಇವುಗಳಲ್ಲಿ ನಿಜಕ್ಕೂ ವಿದೇಶಿ ಬಂಡವಾಳದ ಪ್ರಮಾಣ ಎಷ್ಟು? ಮಹಾರಾಷ್ಟ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿರುವವರಲ್ಲಿ ನಿಜವಾಗಿಯೂ ವಿದೇಶಿ ಕಂಪನಿಗಳು ಎಷ್ಟು? ಇದಕ್ಕೆ ಸ್ವತಃ ಫಡ್ನವೀಸ್ ಅವರೇ ಉತ್ತರಿಸಿದ್ದಾರೆ. ದಾವೋಸ್ ಶೃಂಗಕ್ಕೆ ಪ್ರತಿ ಬಾರಿಯೂ ಜಾಗತಿಕ ಮಟ್ಟದ ದೊಡ್ಡ ದೊಡ್ಡ ಉದ್ಯಮಿಗಳು ಬರುತ್ತಾರೆ.
ಅಲ್ಲಿಗೆ ಬರುವ ಹಾಗೂ ಈಗ ಮಹಾರಾಷ್ಟ್ರದ ಜತೆಗೆ ಒಪ್ಪಂದಗಳಿಗೆ ಸಹಿ ಹಾಕಿರುವ ಭಾರತೀಯ ಕಂಪನಿಗಳು ವಿದೇಶಗಳಲ್ಲೂ ಉದ್ದಿಮೆಗಳನ್ನು ನಡೆಸುತ್ತಿವೆ. ಹೀಗಾಗಿ ಅವು ಜಾಗತಿಕ ಕಂಪನಿಗಳೇ ಆಗುತ್ತವೆ. ಉದಾಹರಣೆಗೆ, ಅಮೆಜಾನ್ ವೆಬ್ ಸಿರೀಸ್ನವರು ಮುಂದಿನ ಐದು ವರ್ಷಗಳಲ್ಲಿ ಮಹಾ ರಾಷ್ಟ್ರದಲ್ಲಿ 71800 ಕೋಟಿ ರು. ಬಂಡವಾಳ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿ ದ್ದಾರೆ.
ಅದರಿಂದ 81000 ಉದ್ಯೋಗಗಳು ಸೃಷ್ಟಿಯಾಗುತ್ತವೆಯಂತೆ. ಇಂದು ಜಗತ್ತಿನ ಅನೇಕ ದೈತ್ಯ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವುದಕ್ಕೆ ತುದಿಗಾಲಿನಲ್ಲಿ ನಿಂತಿವೆ. ಆದರೆ ಭಾರತದಲ್ಲಿರುವ ಅನಿಶ್ಚಿತ ಔದ್ಯೋಗಿಕ ವಾತಾವರಣ, ಕಠಿಣ ನಿಯಮಗಳು ಹಾಗೂ ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಸರಕಾರಿ ನೀತಿಗಳ ಬಗ್ಗೆ ಅವುಗಳಿಗೆ ಅಂಜಿಕೆ ಇದೆ.
ಇವುಗಳ ಜತೆಗೆ ಅನೇಕ ವಿದೇಶಿ ಬೆಳವಣಿಗೆಗಳೂ ಬಂಡವಾಳ ಹೂಡಿಕೆಯ ಮೇಲೆ ಪರಿಣಾಮ ಬೀರು ತ್ತವೆ. ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಗಳು ಭಾರತದಲ್ಲಿ ಬಂಡವಾಳ ಹೂಡುವ ಅಮೆರಿಕನ್ ಕಂಪನಿಗಳ ಮೇಲೆ ಸಾಕಷ್ಟು ಪರಿಣಾಮಗಳನ್ನು ಹೊಂದಿರುತ್ತವೆ. ಹೀಗಾಗಿ ಆ ಕಂಪನಿ ಗಳು ಸ್ವಲ್ಪ ಕಾಲ ಕಾದು ನೋಡೋಣ ಎಂದು ಸುಮ್ಮನಾಗುತ್ತಿವೆ.
ಆದರೆ ಮಹಾರಾಷ್ಟ್ರದಲ್ಲಿ ವಿದೇಶಿ ನೇರ ಬಂಡವಾಳ (ಎಫ್ ಡಿಐ) ಹೂಡಿಕೆಗೆ ಸಾಕಷ್ಟು ಅವಕಾಶ ಗಳಿವೆ. ಈಗಾಗಲೇ ಈ ರಾಜ್ಯವು ವಿದೇಶಿ ಕಂಪನಿಗಳಿಗೆ ಆಕರ್ಷಕ ತಾಣವಾಗಿದೆ. ಆದರೆ ಈ ಆಕರ್ಷ ಣೆಯನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಉದ್ಯಮಿಗಳಿಗೆ ಇದನ್ನು ಇನ್ನಷ್ಟು ಲಾಭದಾಯಕ ಮಾಡಬೇಕಿದೆ. ಅದಕ್ಕಾಗಿ ಫಡ್ನವೀಸ್ ಸಾಕಷ್ಟು ಕೆಲಸ ಕೂಡ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವುದಕ್ಕೆ ಇರುವ ನೀತಿ ನಿಯಮಗಳನ್ನು ಇನ್ನಷ್ಟು ಸರಳ ಗೊಳಿಸುತ್ತಿದ್ದಾರೆ. ಆದರೆ ಇನ್ನೂ ಮಾಡಬೇಕಿರುವುದು ಸಾಕಷ್ಟಿದೆ. ಫಡ್ನವೀಸ್ ಮೊದಲ ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ (2014-2019) ದಾವೋಸ್ಗೆ ಮೂರು ಬಾರಿ ಭೇಟಿ ನೀಡಿದ್ದರು.
ಅಲ್ಲಿ ಎರಡು ಬಾರಿ ‘ಮ್ಯಾಗ್ನೆಟಿಕ್’ ಮಹಾರಾಷ್ಟ್ರ ಹೆಸರಿನಲ್ಲಿ ಔದ್ಯೋಗಿಕ ಶೃಂಗ ಆಯೋಜಿಸಿ ದ್ದರು. ಈಗ ಎರಡನೇ ಅವಽಯಲ್ಲೂ ಅವರು ಅಂತಹುದೇ ಪ್ರಯತ್ನಗಳನ್ನು ಮುಂದುವರಿಸಿ ವಿದೇಶಿ ಬಂಡವಾಳವನ್ನು ಮಹಾರಾಷ್ಟ್ರಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ಮಹಾ ರಾಷ್ಟ್ರದಲ್ಲಿ ಪ್ರತ್ಯೇಕ ವಿಭಾಗವನ್ನೇ ತೆರೆದಿದ್ದಾರೆ. ಅದರ ಮೂಲಕ ಮಹಾರಾಷ್ಟ್ರದ ಔದ್ಯೋಗಿಕ ನೀತಿಗಳನ್ನು ಜಾಗತಿಕ ದರ್ಜೆಗೆ ಸಮಾನವಾಗಿ ರೂಪಿಸಲು ಮುಂದಾಗಿದ್ದಾರೆ.
ನಾವು ಜಾಗತಿಕ ಗುಣಮಟ್ಟದ ಉದ್ದಿಮೆಗಳು ನಮ್ಮಲ್ಲಿ ಸ್ಥಾಪನೆಯಾಗಬೇಕು ಎಂದು ಬಯಸಿದರೆ ಉದ್ಯಮಗಳಿಗೆ ಸಂಬಂಧಿಸಿದಂತೆ ಜಾಗತಿಕ ದರ್ಜೆಯ ನಿಯಮಗಳನ್ನೂ ಹೊಂದಿರಬೇಕು ಎಂಬು ದನ್ನು ಫಡ್ನವೀಸ್ ಮನಗಂಡಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಅವರು ಪ್ರಮುಖ ಉದ್ಯಮಪತಿಗಳ ಜತೆಗೆ ಸದಾ ಮಾತುಕತೆ ನಡೆಸುತ್ತಿದ್ದಾರೆ. ವಿದೇಶಗಳ ರಾಯಭಾರ ಕಚೇರಿಗಳ ಜತೆಗೆ ಸಂಪರ್ಕ ದಲ್ಲಿದ್ದುಕೊಂಡು, ಅವುಗಳ ಮೂಲಕ ವಿದೇಶಿ ಉದ್ಯಮಿಗಳ ಜತೆಗೆ ಸಹಭಾಗಿತ್ವ ಸ್ಥಾಪಿಸುವುದಕ್ಕೂ ಪ್ರಯತ್ನಿಸುತ್ತಿದ್ದಾರೆ.
ಇವೆಲ್ಲದರ ಹೊರತಾಗಿಯೂ ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ವರ್ಷ ಸರಾಸರಿ 1.19 ಲಕ್ಷ ಕೋಟಿ ರು. ಗಳಷ್ಟು ವಿದೇಶಿ ಬಂಡವಾಳವನ್ನು ಆಕರ್ಷಿಸುವಲ್ಲಿ ಮಹಾರಾಷ್ಟ್ರ ಯಶಸ್ವಿಯಾಗಿದೆ. ಇದು ಶ್ಲಾಘನೀಯ ಸಂಗತಿ. ಏಕೆಂದರೆ ದೇಶದಲ್ಲಿ ಹೂಡಿಕೆಯಾಗುವ ವಿದೇಶಿ ಬಂಡವಾಳದಲ್ಲಿ ಮಹಾ ರಾಷ್ಟ್ರದ ಪಾಲೇ ಶೇ.31ರಷ್ಟಿದೆ. ಹೀಗಾಗಿ ಔದ್ಯೋಗಿಕವಾಗಿ ಬೆಳೆಯಲು ಮಹಾರಾಷ್ಟ್ರಕ್ಕೆ ಇನ್ನೂ ಬೆಟ್ಟದಷ್ಟು ಅವಕಾಶಗಳಿವೆ.
ಆದರೆ ಮಹಾರಾಷ್ಟ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದ ಅನೇಕ ಕಂಪನಿಗಳು ಇತ್ತೀಚೆಗೆ ಬೇರೆ ಬೇರೆ ಕಾರಣಗಳಿಂದಾಗಿ ಅನ್ಯ ರಾಜ್ಯಗಳಿಗೆ ವಲಸೆ ಹೋಗುತ್ತಿವೆ. ಇದು ತುರ್ತಾಗಿ ಗಮನಿಸಬೇಕಾದ ವಿಚಾರ. ಇದರ ಜತೆಗೆ ಇನ್ನೊಂದು ಪ್ರಮುಖ ಪ್ರಶ್ನೆಯಿದೆ. ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿರುವುದೇನೋ ಸರಿ. ಆದರೆ ಆ ಬಂಡವಾಳ ಮಹಾರಾಷ್ಟ್ರದಲ್ಲಿ ಭೌಗೋಳಿಕವಾಗಿ ಸರಿಯಾಗಿ ಹಂಚಿಕೆಯಾಗುತ್ತಿದೆಯೇ? ಅಂದರೆ ರಾಜ್ಯದ ಎಲ್ಲ ಭಾಗದಲ್ಲೂ ಸಮಾನವಾಗಿ ಬಂಡವಾಳ ಹೂಡಿಕೆ ಆಗುತ್ತಿದೆಯೇ? ಇದು ಏಕೆ ಮುಖ್ಯ ಅಂದರೆ, ಉದ್ದಿಮೆಗಳು ಎಲ್ಲ ಕಡೆ ಸರಿಯಾದ ಪ್ರಮಾಣದಲ್ಲಿ ಹಂಚಿಕೆಯಾದರೆ ಮಾತ್ರ ಎಲ್ಲ ಭಾಗದ ಜನರಿಗೂ ಉದ್ಯೋಗ ಸಿಗುತ್ತದೆ ಮತ್ತು ಪರಿಸರದ ಮೇಲೂ ಅದರ ದುಷ್ಪರಿಣಾಮ ಕಡಿಮೆಯಾಗುತ್ತದೆ.
ಕಳೆದೊಂದು ದಶಕದಿಂದ ನಕ್ಸಲೀಯರ ಚಟುವಟಿಕೆಗಳಿಂದ ಹೆಚ್ಚು ಬಾಽತವಾಗಿರುವ ಗಡ್ಚಿರೋಲಿ ಪ್ರದೇಶದ ಮೇಲೆ ಫಡ್ನವೀಸ್ ಹೆಚ್ಚು ಗಮನ ಹರಿಸಿದ್ದಾರೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿ ಸುತ್ತೇನೆ. ಆ ಪ್ರದೇಶದಲ್ಲಿ ನಾಗರಿಕ ಸೌಕರ್ಯಗಳನ್ನು ಹೆಚ್ಚಿಸಲು ಅವರು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ದಕ್ಷ ಅಧಿಕಾರಿಗಳನ್ನು ಅಲ್ಲಿಗೆ ನಿಯೋಜಿಸಿದ್ದಾರೆ. ಅವರ ಮೂಲಕ ಆಡಳಿತ ವ್ಯವಸ್ಥೆ ಯನ್ನು ಬಿಗಿಗೊಳಿಸಲು ಯತ್ನಿಸಿದ್ದಾರೆ.
ಗಡ್ಚಿರೋಲಿಯ ಈಗಿನ ಉಸ್ತುವಾರಿ ಸಚಿವರು ಆ ಜಿಲ್ಲೆಯನ್ನು ಉಕ್ಕು ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಲು ಪಣ ತೊಟ್ಟಿದ್ದಾರೆ. ಕಂಪನಿಗಳು ಕೂಡ ಅಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ. ಅಲ್ಲಿನ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾದರೆ ಅವರು ಕೆಲಸ ವಿಲ್ಲದೆ ಅಲೆಯುವುದು ಅಥವಾ ನಕ್ಸಲರಾಗುವುದು ತಪ್ಪುತ್ತದೆ.
ಫಡ್ನವೀಸರು ಗಡ್ಚಿರೋಲಿಯ ಮೇಲೆ ಗಮನ ಹರಿಸಿದಂತೆಯೇ ಉದ್ಯೋಗಾವಕಾಶಗಳು ಕಡಿಮೆ ಯಿರುವ ಇನ್ನಿತರ ಜಿಲ್ಲೆಗಳತ್ತಲೂ ಗಮನ ಹರಿಸಬೇಕು. ಎಲ್ಲಿ ಉದ್ಯೋಗಾವಕಾಶಗಳು ಕಡಿಮೆ ಯಿವೆ ಎಂಬುದನ್ನು ತಿಳಿದುಕೊಳ್ಳಲು ವಿಸ್ತೃತವಾದ ಅಧ್ಯಯನವೊಂದನ್ನು ನಡೆಸಬೇಕು. ಎಲ್ಲೆಲ್ಲಿ ಉದ್ದಿಮೆಗಳನ್ನು ಸ್ಥಾಪಿಸಬಹುದು, ಯಾವ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿವೆ ಎಂಬು ದರ ಬಗ್ಗೆ ಅಂಕಿಅಂಶಗಳ ಸಹಿತ ಮಾಹಿತಿ ಸರಕಾರದಲ್ಲಿ ಲಭ್ಯವಿದ್ದರೆ ಮುಂದಿನ ನೀತಿಗಳನ್ನು ರೂಪಿಸಲು ಅನುಕೂಲವಾಗುತ್ತದೆ.
ಉದಾಹರಣೆಗೆ, ಗಡ್ಚಿರೋಲಿಯಂತೆಯೇ ವಿದರ್ಭ, ಮರಾಠವಾಡ, ಉತ್ತರ ಮಹಾರಾಷ್ಟ್ರ ಹಾಗೂ ಕೊಂಕಣ ಭಾಗಗಳು ಕೂಡ ಹಿಂದುಳಿದಿವೆ. ರಾಜ್ಯ ಸರ್ವತೋಮುಖ ಪ್ರಗತಿ ಕಾಣಬೇಕು ಅಂದರೆ ಅವಕಾಶಗಳು ಹಾಗೂ ಬಂಡವಾಳ ಕೂಡ ಸಮಾನವಾಗಿ ಹಂಚಿಕೆಯಾಗಬೇಕು. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಅವುಗಳ ಸಾಮರ್ಥ್ಯ ಮೀರಿ ಉದ್ದಿಮೆಗಳು ಸ್ಥಾಪನೆಯಾಗಿದ್ದರೆ, ಇನ್ನು ಕೆಲವು ಜಿಲ್ಲೆಗಳು ಉದ್ದಿಮೆಗಳಿಗಾಗಿ ಎದುರು ನೋಡುತ್ತಿವೆ.
ಹೊಸತಾಗಿ ನಿರ್ಮಾಣವಾದ ಸಮೃದ್ಧಿ ಮಾಮಾರ್ಗವು ಅನೇಕ ಪ್ರದೇಶಗಳಲ್ಲಿ ಹೊಸ ಅವಕಾಶ ಗಳನ್ನು ಸೃಷ್ಟಿಸಿದೆ. ವಾರ್ಧಾ ಜಿಲ್ಲೆಯ ಕೇಲ್ಜರ್ನಲ್ಲಿ ಆಟೋಮೊಬೈಲ್ ಉದ್ದಿಮೆಗಳನ್ನು ಸ್ಥಾಪಿಸ ಬಹುದು. ಈ ಪ್ರದೇಶದಲ್ಲಿ ವಾಹನೋದ್ದಿಮೆಗಳನ್ನು ಸ್ಥಾಪಿಸಲು ಮುಂದೆ ಬಂದರೆ ಸರಕಾರದಿಂದ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡುವ ಬಗ್ಗೆ ಭರವಸೆಗಳನ್ನು ನೀಡಬಹುದು.
ದೇವೇಂದ್ರ ಫಡ್ನವೀಸ್ ಅವರು ಇನ್ನೂ ಕೆಲ ಪ್ರಮುಖ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ನನ್ನ ತಂದೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್ ದರಡಾ ಅವರು ಮಹಾರಾಷ್ಟ್ರದ ಕೈಗಾರಿಕೆ ಸಚಿವರಾಗಿದ್ದಾಗ ಲೇಲ್ಯಾಂಡ್ ಕಾರ್ಖಾನೆ ಸ್ಥಾಪಿಸಲು ಹಿಂದೂಜಾ ಕಂಪನಿಯವರು ಭೂಸ್ವಾಽನ ಮಾಡಿಕೊಂಡಿದ್ದರು. ಆದರೆ ಆ ಜಾಗವನ್ನು ಅವರು ಇಂದಿಗೂ ಕೇವಲ ಉಗ್ರಾಣದ ರೀತಿಯಲ್ಲಿ ಬಳಸುತ್ತಿದ್ದಾರೆಯೇ ಹೊರತು ಅಲ್ಲಿ ಕಾರ್ಖಾನೆ ಸ್ಥಾಪಿಸಲು ಪ್ರಯತ್ನವನ್ನೇ ಮಾಡಿಲ್ಲ.
ಇದು ಕೇವಲ ಒಂದು ಉದಾಹರಣೆಯಷ್ಟೆ. ರಾಜ್ಯದೆಲ್ಲೆಡೆ ಹುಡುಕಿದರೆ ಇಂತಹ ಅನೇಕ ಉದಾ ಹರಣೆಗಳು ಸಿಗುತ್ತವೆ. ಭೂಸ್ವಾಧೀನ ಮಾಡಿಕೊಂಡ ಬಳಿಕ ಕಂಪನಿಗಳು ತಮ್ಮ ಭರವಸೆಯನ್ನು ಈಡೇರಿಸಲು ವಿಫಲವಾದರೆ ಅಂತಹ ಭೂಮಿಯನ್ನು ಮರಳಿ ಪಡೆಯಲು ಸರಕಾರ ಕ್ರಮ ಕೈಗೊಳ್ಳ ಬೇಕು. ಆ ಜಾಗವನ್ನೇ ಬೇರೆ ಉದ್ದಿಮೆಗಳಿಗೆ ನೀಡಿದರೆ ಅವು ಹೊಸ ಘಟಕಗಳನ್ನು ಸ್ಥಾಪಿಸಿ ಉದ್ಯೋ ಗಾವಕಾಶಗಳನ್ನು ಸೃಷ್ಟಿಸುತ್ತವೆ.
ಉದಾಹರಣೆಗೆ, 50 ವರ್ಷಗಳ ಹಿಂದೆ ಧುಳೆಯಲ್ಲಿ ರೇಮಂಡ್ ಕಾರ್ಖಾನೆ ಸ್ಥಾಪನೆಯಾಗಿತ್ತು. ನಂತರ ಕೆಲ ಅನಿರ್ದಿಷ್ಟ ಕಾರಣಗಳಿಂದಾಗಿ ಆ ಕಾರ್ಖಾನೆ ಮುಚ್ಚಿಹೋಗಿದೆ. ಹೀಗಾಗಿ ದೇವೇಂದ್ರ ಫಡ್ನ ವೀಸ್ ಅವರು ಕಾರ್ಖಾನೆಗಳನ್ನು ಮುಚ್ಚುವ ರೋಗದ ವಿರುದ್ಧವೂ ಹೋರಾಟ ನಡೆಸುವ ಅಗತ್ಯ ವಿದೆ. ಉದ್ದಿಮೆಗಳನ್ನು ಸ್ಥಾಪಿಸುವುದು ಹೇಗೆ ರಾಜ್ಯದ ಸರ್ವತೋಮುಖ ಪ್ರಗತಿಗೆ ಬಹಳ ಮುಖ್ಯ ವೋ ಹಾಗೆಯೇ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅತಿಯಾದ ಔದ್ಯೋಗೀಕರಣದಿಂದ ಪರಿಸರ ನಾಶವಾಗುವುದನ್ನು ತಡೆಯುವುದು ಕೂಡ ಸರಕಾರದ ಬಹುಮುಖ್ಯ ಕರ್ತವ್ಯ ಗಳಲ್ಲಿ ಒಂದು. ದೇಶದಲ್ಲಿ ಇಂದು ಅನೇಕ ಸರಕಾರಿ ಹಾಗೂ ಖಾಸಗಿ ಉದ್ದಿಮೆಗಳು ಪರಿಸರಕ್ಕೆ ಅಗಾಧ ಹಾನಿ ಉಂಟುಮಾಡುತ್ತಿವೆ. ಅಂತಹ ಉದ್ದಿಮೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಇವೆಲ್ಲದರ ಹೊರತಾಗಿಯೂ ರಾಜ್ಯಕ್ಕೆ ಉದ್ದಿಮೆಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಅವರನ್ನು ಅಭಿನಂದಿಸುತ್ತೇನೆ. ಹಾಗೆಯೇ, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿರುವ ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಸಮೂಹ, ಜೆಎಸ್ಡಬ್ಲ್ಯು, ಲಾಯ್ಡ್ಸ್ ಮೆಟಲ್ ಆಂಡ್ ಎನರ್ಜಿ ಸೇರಿದಂತೆ 54 ಕಂಪನಿಗಳಿಗೂ ಅಭಿನಂದನೆಯನ್ನು ಹೇಳುತ್ತೇನೆ.
ಇವು ಸರಕಾರದ ಜತೆಗೆ ಮಾಡಿಕೊಂಡಿರುವ ಒಪ್ಪಂದಗಳು ಕೇವಲ ಕಾಗದದಲ್ಲಿ ಉಳಿಯದೆ ವಾಸ್ತವ ದಲ್ಲೂ ಜಾರಿಗೆ ಬಂದು ಜನರಿಗೆ ಉದ್ಯೋಗ ಸಿಗುವಂತಾಗಲಿ ಮತ್ತು ರಾಜ್ಯ ಇನ್ನಷ್ಟು ಅಭಿವೃದ್ಧಿ ಹೊಂದುವಂತಾಗಲಿ. ಜಾಗತಿಕ ಬಂಡವಾಳ ಹೂಡಿಕೆಯ ಸಮಾವೇಶಗಳಲ್ಲಿ ಸರಕಾರ ಪಾಲ್ಗೊ ಳ್ಳುವ ಉದ್ದೇಶ ಕೂಡ ಇದೇ ಅಲ್ಲವೇ?
(ಲೇಖಕರು ಹಿರಿಯ ಪತ್ರಿಕೋದ್ಯಮಿ)