Roopa Gururaj Column: ಮಹಾನವಮಿಯಂದು ಪೂಜೆಗೊಳ್ಳುವ ಬನ್ನಿ ಮರದ ಮಹತ್ವ
ಬನ್ನಿಯನ್ನು ಬಂಗಾರ ಎಂದು ಕರೆಯಲು ತ್ರೇತಾಯುಗದ ಕಥೆಯೊಂದಿದೆ. ಕೌಸ್ತ ಹೆಸರಿನ ವಿದ್ಯಾರ್ಥಿ ಯು ವಿದ್ಯಾಭ್ಯಾಸದ ನಂತರ ಗುರುವಿಗೆ ಗುರುದಕ್ಷಿಣೆ ಕೊಡಲು ಇಚ್ಛಿಸುತ್ತಾನೆ, ಅದನ್ನು ಗುರುಗಳ ಜತೆಗೆ ಹಂಚಿಕೊಳ್ಳು ತ್ತಾನೆ. ಆಗ ಗುರುವು ಸಹಸ್ರ ಕೋಟಿ ಚಿನ್ನದ ನಾಣ್ಯಗಳನ್ನು ಕೇಳುತ್ತಾರೆ.

-

ಒಂದೊಳ್ಳೆ ಮಾತು
rgururaj628@gmail.com
ಮಹಾ ತಪಸ್ವಿಯಾದ ಜಾರ್ವ ಹಾಗೂ ಆತನ ಪತ್ನಿ ಸಮೇಧರಿಗೆ ಶಮೀಕಾ ಹೆಸರಿನ ಪುತ್ರಿ ಇರುತ್ತಾಳೆ. ಆಕೆಯನ್ನು ಧೌಮ್ಯ ಋಷಿಯ ಪುತ್ರ ಮತ್ತು ಕೌಶಿಕ ಮಹರ್ಷಿಯ ಶಿಷ್ಯನಾಗಿದ್ದ ಮಂದಾರನಿಗೆ ಕೊಟ್ಟು ವಿವಾಹ ಮಾಡುತ್ತಾರೆ. ಕೆಲ ದಿನಗಳ ನಂತರ ನವದಂಪತಿ ವಾಯುವಿಹಾರಕ್ಕೆ ಹೋದಾಗ ವನದಲ್ಲಿ ಭೃಶುಂಡಿ (ಸೊಂಡಿಲು ಹೊಂದಿದ್ದ) ಮುನಿಯನ್ನು ನೋಡುತ್ತಾರೆ.
ಮುನಿಯ ವಿಚಿತ್ರ ರೂಪವನ್ನು ಕಂಡು ಅವರಿಗೆ ಎಲ್ಲಿಲ್ಲದ ನಗು ಬರುತ್ತದೆ. ಇದನ್ನು ನೋಡಿದ ಭೃಶುಂಡಿಮುನಿ, ‘ನನ್ನನ್ನು ನೋಡಿ ನಕ್ಕಿದ್ದು ಏಕೆ?’ ಎಂದು ಪ್ರಶ್ನಿಸುತ್ತಾನೆ. ಮುನಿ ಪ್ರಶ್ನೆ ಕೇಳಿದ್ದರೂ ದಂಪತಿ ಮಾತ್ರ ನಗುತ್ತಲೇ ಇರುತ್ತಾರೆ. ತನ್ನನ್ನು ಅಪಹಾಸ್ಯ ಮಾಡಿದ್ದಕ್ಕೆ ಕೋಪ ಗೊಂಡ ಭೃಶುಂಡಿ ಮುನಿ, ‘ನೀವು ಯಾವುದೇ ಪ್ರಾಣಿಗೂ ಉಪಯೋಗಕ್ಕೆ ಬಾರದ ಮರಗಳಾಗಿ’ ಎಂದು ಶಾಪ ಕೊಡುತ್ತಾನೆ.
ಕೂಡಲೇ ದಂಪತಿಗೆ ತಮ್ಮ ತಪ್ಪಿನ ಅರಿವಾಗಿ ಮುನಿಯ ಪಾದಕ್ಕೆ ಬಿದ್ದು, ಕ್ಷಮೆ ಕೇಳಿ ತಮ್ಮ ಶಾಪ ವಿಮೋಚನೆ ಆಗುವುದು ಹೇಗೆ ಎಂದು ಅಂಗಲಾಚುತ್ತಾರೆ. ಇದಕ್ಕೆ ಭೃಶುಂಡಿ ‘ನಿಮಗೆ ಗಣಪತಿ ಅನುಗ್ರಹವಾದ ಮೇಲೆಯೇ ಶಾಪ ವಿಮೋಚನೆ ಆಗುತ್ತದೆ’ ಎಂದು ಉತ್ತರಿಸುತ್ತಾನೆ.
ಇದನ್ನೂ ಓದಿ: Roopa Gururaj Column: ನವರಾತ್ರಿ ಗೊಂಬೆ ಹಬ್ಬದ ವೈಭವ
ಮುನಿಯ ಶಾಪದಂತೆ ಶಮೀಕಳು ಶಮೀವೃಕ್ಷವಾಗಿ, ಮಂದಾರನು ಮಂದಾರ ವೃಕ್ಷವಾಗಿ ಪರಿವರ್ತನೆ ಆಗುತ್ತಾರೆ. ಬಹಳ ಸಮಯವಾದರೂ ದಂಪತಿ ಮನೆಗೆ ಬಾರದಿದ್ದಾಗ ಶಮೀಕಳ ತಂದೆ-ತಾಯಿ ಕಾಡಿನೊಳಗೆ ಅವರನ್ನು ಅರಸುತ್ತಾ ಬರುತ್ತಾರೆ. ಅಲ್ಲಿ ಅವರು ಎರಡು ವಿಚಿತ್ರವಾದ ಮರಗಳನ್ನು ಕಂಡು, ಭೃಶುಂಡಿ ಮುನಿಯನ್ನು ವಿಚಾರಿಸಿದಾಗ ನಡೆದ ಸಂಗತಿ ತಿಳಿಯುತ್ತದೆ.
ಮಗಳು ಹಾಗೂ ಅಳಿಯನ ಶಾಪವಿಮೋಚನೆಗೆ ದೂರ್ವಾಸ ಮುನಿ ಹೇಳಿಕೊಟ್ಟಿದ್ದ ಗಣೇಶನ ಮಂತ್ರವನ್ನು ಜಾರ್ವ-ಸಮೇಧ ದಂಪತಿ ಪಠಿಸಲು ಆರಂಭಿಸುತ್ತಾರೆ. ಸ್ವಲ್ಪ ಸಮಯದ ಬಳಿಕ ಗಣಪತಿ ಪ್ರತ್ಯಕ್ಷನಾಗಿ, ಶಾಪ ವಿಮೋಚನೆ ಮಾಡುತ್ತಾನೆ. ಮರವಾಗಿದ್ದ ಶಮೀಕಾ ಹಾಗೂ ಮಂದಾರ ಮೊದಲಿನಂತೆ ಆಗುತ್ತಾರೆ.
ವಿಜಯದಶಮಿ ದಿನದಂದು ಸಾಧಾರಣವಾಗಿ ಒಂದು ಶ್ಲೋಕ ಪ್ರಚಲಿತದಲ್ಲಿದೆ. ಈ ಶ್ಲೋಕವನ್ನು ಹೇಳಿಕೊಂಡು ಪರಸ್ಪರ ಶಮೀ ಪತ್ರೆಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ:
ಶಮೀ ಶಮಯತೇ ಪಾಪಂ ಶಮೀ
ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ
ಪ್ರಿಯದರ್ಶನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ
ಸುಖಂ ಮಯಾ |
ತತ್ರ ನಿರ್ವಿಘ್ನಕತ್ರಿತ್ವಂ ಭವ
ಶ್ರೀರಾಮಪೂಜಿತಾ ||
ಶಮೀ (ಬನ್ನಿ) ವೃಕ್ಷವು ಪಾಪವನ್ನು ಹಾಗೂ ಶತ್ರುಗಳನ್ನು ಶಮನ ಮಾಡುತ್ತದೆ, ಸದಾಕಾಲ ಸುಖ ವನ್ನೂ ನೀಡುತ್ತದೆ. ಅರ್ಜುನನ ಬಾಣವನ್ನು ಕಾಪಾಡಿದ್ದು, ರಾಮನಿಗೆ ಅತಿ ಪ್ರಿಯವಾಗಿರುವುದೂ ಇದೇ ವೃಕ್ಷ. ರಾಮನು ವಿಜಯಯಾತ್ರೆಗೆ ಹೊರಟಾಗ ‘ನನ್ನ ಈ ಯಾತ್ರೆಯು ನಿರ್ವಿಘ್ನವಾಗಿ ಮುಗಿದು ಸುಖಕರವಾಗುವಂತೆ ಮಾಡು’ ಎಂದು ಬನ್ನಿ ಮರಕ್ಕೆ ಪ್ರಾರ್ಥಿಸಿ ಹೊರಟಿದ್ದನಂತೆ.
ಮಹಾಭಾರತದಲ್ಲಿ ಪಾಂಡವರು ಒಂದು ವರ್ಷದ ಅಜ್ಞಾತವಾಸಕ್ಕೆ ತೆರಳುವಾಗ ಬನ್ನಿ ಮರದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋಗುತ್ತಾರೆ. ಮರಳಿ ಬಂದಾಗ ಅವರ ಆಯುಧಗಳು ಸುರಕ್ಷಿತ ವಾಗಿ ಅವರಿಗೆ ಸಿಗುತ್ತವೆ. ಕೃತಜ್ಞತೆಯಿಂದ ಅವರು ಬನ್ನಿ ಮರಕ್ಕೆ ನಮಸ್ಕರಿಸುತ್ತಾರೆ. ನಂತರ ಅದೇ ಆಯುಧಗಳನ್ನು ಬಳಸಿ ಕೌರವರ ಜತೆಗಿನ ಯುದ್ಧದಲ್ಲಿ ವಿಜಯ ಸಾಧಿಸುತ್ತಾರೆ. ಹೀಗಾಗಿ ವಿಜಯ ದಶಮಿಯ ದಿನ ಪಾಂಡವರು ಬನ್ನಿ ಪೂಜೆ ಮಾಡುತ್ತಾರೆ. ಬನ್ನಿಯನ್ನು ಬಂಗಾರ ಎಂದು ಕರೆಯಲು ತ್ರೇತಾಯುಗದ ಕಥೆಯೊಂದಿದೆ. ಕೌಸ್ತ ಹೆಸರಿನ ವಿದ್ಯಾರ್ಥಿಯು ವಿದ್ಯಾಭ್ಯಾಸದ ನಂತರ ಗುರುವಿಗೆ ಗುರುದಕ್ಷಿಣೆ ಕೊಡಲು ಇಚ್ಛಿಸುತ್ತಾನೆ, ಅದನ್ನು ಗುರುಗಳ ಜತೆಗೆ ಹಂಚಿಕೊಳ್ಳು ತ್ತಾನೆ. ಆಗ ಗುರುವು ಸಹಸ್ರ ಕೋಟಿ ಚಿನ್ನದ ನಾಣ್ಯಗಳನ್ನು ಕೇಳುತ್ತಾರೆ.
ಗುರುಗಳು ಕೇಳಿದಷ್ಟು ಚಿನ್ನದ ನಾಣ್ಯಗಳನ್ನು ಎಲ್ಲಿಂದ ತರುವುದು ಎಂದು ವಿದ್ಯಾರ್ಥಿ ಯೋಚಿಸು ತ್ತಾನೆ. ನಂತರ ರಘು ರಾಜನ ಬಳಿಗೆ ಹೋಗಿ, ‘ಗುರುಗಳಿಗೆ ನೀಡಲು ಸಹಸ್ರ ಕೋಟಿ ಚಿನ್ನದ ನಾಣ್ಯ ಗಳು ಬೇಕು, ದಯವಿಟ್ಟು ಕೊಡಿ’ ಎಂದು ಕೌಸ್ತ ಮನವಿ ಮಾಡಿಕೊಳ್ಳುತ್ತಾನೆ.
ರಾಜನು ಕುಬೇರನನ್ನು ಪ್ರಾರ್ಥಿಸಿದಾಗ ಅಲ್ಲಿಯೇ ಇದ್ದ ಶಮೀ ಮರದ ಒಂದೊಂದು ಎಲೆಯೂ ಚಿನ್ನದ ನಾಣ್ಯವಾಗುತ್ತವೆ. ಇದರಿಂದ ಸಂತಸಗೊಂಡ ಕೌಸ್ತನು ನಾಣ್ಯಗಳನ್ನು ಗುರುಗಳಿಗೆ ಅರ್ಪಿಸುತ್ತಾನೆ. ಗುರುದಕ್ಷಿಣೆ ನೀಡಿ, ಉಳಿದ ನಾಣ್ಯಗಳನ್ನು ದಾನ ಮಾಡುತ್ತಾನೆ. ಆದ್ದರಿಂದ ಶಮೀ (ಬನ್ನಿ) ಮರವೆಂದರೇ ಚಿನ್ನ, ಬಂಗಾರ ಎನ್ನುವ ನಂಬಿಕೆ ಮೂಡಿಬಂದಿದೆ. ಸಾಧಾರಣವಾಗಿ ಹಿಂದೂ ಧರ್ಮದಲ್ಲಿ ಅರಳೀ ಮರಕ್ಕೆ ವಿಶೇಷ ಗೌರವ.
ಬಹುತೇಕ ಎಲ್ಲ ದೇವಾಲಯಗಳಲ್ಲೂ ಅರಳೀಮರ ಇದ್ದರೂ ನವಮಿಯಂದು ಶಮೀ (ಬನ್ನಿ) ವೃಕ್ಷಕ್ಕೆ ಈ ಎಲ್ಲ ಕಾರಣಗಳಿಗಾಗಿ ವಿಶೇಷ ಪೂಜೆ ನಡೆಯುತ್ತದೆ.