ದಕ್ಷಿಣ ಕನ್ನಡ: ಜಗತ್ತಿನಾದ್ಯಂತ ಬ್ಲಾಕ್ ಬ್ಲಾಸ್ಟರ್ ಹಿಟ್ ಕಂಡಿರುವ ಕಾಂತಾರಾ ಚಾಪ್ಟರ್ 1 (Kantara Chapter 1)ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ಅಭಿನಯಿಸಿದ ಕಾಂತಾರ ಚಾಪ್ಟರ್ 1 ಬಾಕ್ಸ್ ಆಫೀಸಲ್ಲಿ ಈಗಾಗಲೇ 500 ಕೋಟಿಗೂ ಅಧಿಕ ಬಾಚಿಕೊಂಡಿದ್ದು, 1000 ಕೋಟಿ ಗಡಿಯತ್ತ ಮುನ್ನುಗ್ಗುತ್ತಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ಸಿನಿಮಾಕ್ಕೆ ವಿವಾದದಿಂದಲೂ ಹೊರತಾಗಿಲ್ಲ. ಸಿನಿಮಾ ನೋಡಿದವರು ದೈವರ ಅನುಕರಣೆ ಮಾಡುವುದು, ದೈವದ (Daiva) ಬಗ್ಗೆ ಜೋಕ್ ಮಾಡುವುದು ಇತ್ಯಾದಿ ಮಾಡುತ್ತಿದ್ದಾರೆ. ಇದು ಕರಾವಳಿ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ, ಕಾಂತಾರ ಸಿನಿಮಾದಲ್ಲೂ ಕೂಡ ದೈವಕ್ಕೆ ಅಪಚಾರ ಮಾಡಲಾಗಿದೆ ಎಂಬ ಆರೋಪವೂ ಇದೆ. ತುಳುನಾಡಿನ ದೈವಾರಾಧನೆಯನ್ನು ಜನ ಕೇವಲ ಮನರಂಜನೆಯಂತೆ ನೋಡುತ್ತಿದ್ದಾರೆ ಎಂದು ಹಲವರ ಆಕ್ರೋಶ ಭುಗಿಲೆದ್ದಿದೆ.
ಈ ಎಲ್ಲಾ ಆರೋಪಗಳ ನಡುವೆ ಇದರ ಬಗ್ಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಪ್ರತಿಕ್ರಿಯಿಸಿದೆ. ಈ ಆರೋಪವನ್ನು ಒಕ್ಕೂಟ ಖಂಡಿಸಿದೆ. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ (Aikala Harish Shetty) ಮಾತನಾಡಿದ್ದು, ಕಾಂತಾರ ಸಿನಿಮಾದಲ್ಲಿ ದೈವಕ್ಕೆ ಅಪಚಾರವಾಗಿಲ್ಲ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್ 1! ಕಾಂತಾರ, ಕೆಜಿಎಫ್ ದಾಖಲೆ ಉಡೀಸ್
ಕಾಂತಾರ ಸಿನಿಮಾದಲ್ಲಿ ದೈವಗಳಿಗೆ ಅಪಚಾರವಾಗಿಲ್ಲ
ಸಿನಿಮಾದಲ್ಲಿ ಎಲ್ಲೂ ದೈವಗಳಿಗೆ ಅಪಚಾರ ಆಗಿಲ್ಲ. ಸಿನಿಮಾವನ್ನು ಸಿನಿಮಾದ ರೀತಿಯಲ್ಲೇ ನೋಡಿದರೆ ಚೆಂದ. ಸಿನಿಮಾದ ಉದ್ದಕ್ಕೂ ಎಲ್ಲೂ ದೈವಗಳ ನಿಂದನೆಯಾಗಿಲ್ಲ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ. ದೈವ ನಂಬಿದವರ ಸ್ವತ್ತು. ದೈವ ಒಂದು ಜಾತಿಗೆ ಸೀಮಿತವಾದ ಸ್ವತ್ತಲ್ಲ. ಜಾತಿಮತಕ್ಕೆ ಮೀರಿದ ಸ್ವತ್ತು. ಕಾಂತಾರದಿಂದ ದೈವಭಕ್ತಿ ಹೆಚ್ಚಿದೆ. ಈ ಸಿನಿಮಾವನ್ನು ನಿರ್ದೇಶಿಸಿ ಪಾತ್ರ ನಿರ್ವಹಿಸಿರುವ ರಿಷಬ್ ಶೆಟ್ಟಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ನೆಲದ ಭಾಷೆಯ ಕಂಪನ್ನು ರಾಷ್ಟ್ರದೆಲ್ಲೆಡೆ ಪಸರಿಸಿದ್ದಾರೆ. ಸಿನಿಮಾದಿಂದ ದೈವಗಳ ಅವಹೇಳನ ಆಗಿಲ್ಲ. ಸಿನಿಮಾವನ್ನು ಸಿನಿಮಾದ ರೀತಿಯಲ್ಲೇ ನೋಡಿ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.