ಬೆಳಗಾವಿ: ಬೆಳಗಾವಿಯಲ್ಲಿ (Belagavi crime news) ಗಾಯಕನೊಬ್ಬನನ್ನು ಭೀಕರವಾಗಿ ಕೊಲೆ (Murder Case) ಮಾಡಲಾಗಿದೆ. ಕೇವಲ 5000 ರೂ. ಹಣಕಾಸು ಸಾಲದ ವಿಚಾರಕ್ಕೆ ಗಾಯಕ ಮಾರುತಿ ಅಡಿವೆಪ್ಪ ಲಟ್ಟೇ (22) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಬಳಿಕ ಕಾರು ಹತ್ತಿಸಿ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೂದಿಹಾಳ ಬಳಿ ಈ ಅಮಾನುಷ ಕೊಲೆ ನಡೆದಿದೆ.
ಈರಪ್ಪ ಅಕ್ಕಿವಾಟೆ ಸೇರಿದಂತೆ 11 ಜನ ದುಷ್ಕರ್ಮಿಗಳು ಸೇರಿಕೊಂಡು ಗಾಯಕ ಮಾರುತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಗಾಯಕ ಮಾರುತಿ ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡುತ್ತ ರಂಜಿಸುತ್ತಿದ್ದು ಸೋಶಿಯಲ್ ಮೀಡಿಯಾಗಳಲ್ಲೂ ಜನಪ್ರಿಯನಾಗಿದ್ದ. ಆರೋಪಿ ಈರಪ್ಪ ಬಳಿ ಮಾರುತಿ 50,000 ಸಾಲ ಪಡೆದಿದ್ದ. ಇದರಲ್ಲಿ 45,000 ರೂಪಾಯಿಗಳನ್ನು ಮಾರುತಿ ವಾಪಸ್ ನೀಡಿದ್ದ. ಉಳಿದ ಐದು ಸಾವಿರ ರೂಪಾಯಿಗಾಗಿ ಇವರ ನಡುವೆ ವಿವಾದವಾಗಿತ್ತು. ಇತ್ತೀಚಿಗೆ ಮಾರುತಿಗೆ ಹಾಡಿನಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ಆತ ಹಾಡುವುದರಲ್ಲಿ ಬ್ಯುಸಿಯಾಗಿದ್ದ. ಕೆಲಸಕ್ಕೂ ಹೋಗದೆ ಹಣವನ್ನೂ ವಾಪಸ್ ನೀಡದೆ ಸತಾಯಿಸಿದ್ದ ಎನ್ನಲಾಗಿದೆ.
ನಿನ್ನೆ ಮಾರುತಿ ಬೈಕ್ ಮೇಲೆ ಸ್ನೇಹಿತನ ಜೊತೆಗೆ ಬರುತ್ತಿದ್ದಾಗ ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ ಮಾರುತಿಯನ್ನು ಬೀಳಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಗಾಯಗೊಂಡ ಮಾರುತಿಯ ಮೇಲೆ ಕಾರು ಹತ್ತಿಸಿದ್ದಾರೆ. ಈ ವೇಳೆ ಕಾರು ಕೂಡ ಪಲ್ಟಿಯಾಗಿ ಆರೋಪಿಗಳು ಗಾಯಗೊಂಡಿದ್ದಾರೆ. ಪೊಲೀಸರು ಆರೋಪಿಗಳಾದ ಈರಪ್ಪ, ಸಿದ್ಧರಾಮ ಒಡೆಯರ್ ಮತ್ತು ಆಕಾಶ್ ಪೂಜಾರಿ ಎಂಬವರನ್ನು ಬಂಧಿಸಿದ್ದಾರೆ. ಗಾಯಗೊಂಡ ಆರೋಪಿಗೆ ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಯಭಾಗ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Actress Manjula: ಕಿರುತೆರೆ ನಟಿ ಮಂಜುಳಾಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಗಂಡ