ನವದೆಹಲಿ: ಚಳಿಗಾಲಕ್ಕೆಂದು ಪ್ರತ್ಯೇಕವಾಗಿ ಆಹಾರವನ್ನು ಸೇವಿಸಬೇಕೆಂದಿಲ್ಲ. ನಿತ್ಯದ ಆಹಾರ ಗಳೇ ಆಗಲೂ ಸಾಕಾಗುತ್ತವೆ. ಆದಾಗ್ಯೂ ಕೆಲವು ಆಹಾರಗಳನ್ನು ಸ್ವಲ್ಪ ಆದ್ಯತೆಯ ಮೇರೆಗೆ ಸೇವಿಸಿದಲ್ಲಿ ಋತುಮಾನದ ಸಮಸ್ಯೆಗಳನ್ನು ದೂರ ಮಾಡ ಬಹುದು. ಅಂದರೆ, ನಮ್ಮ ಆರೋಗ್ಯ ವನ್ನು ಕಾಪಾಡುವಂಥ ಅಭ್ಯಾಸಗಳು ಚಳಿಗಾಲವನ್ನು ಸುಲಲಿತವಾಗಿ ದಾಟಿಸಬಲ್ಲವು. ಹಾಗಾದರೆ ಚಳಿಗಾಲದಲ್ಲಿ ನಮ್ಮ ಆಹಾರ (Winter Foods) ಹೇಗಿರಬೇಕು? ಏನದರ ಸೇವನೆಯ ಲಾಭಗಳು?
ಊಟದ ತಟ್ಟೆಯಲ್ಲಿ ಹಸಿರು ಬಣ್ಣ ಸಾಕಷ್ಟಿರಲಿ:
ಅಂದರೆ ಹಸಿರು ಸೊಪ್ಪು, ಹಸಿರು ತರಕಾರಿಗಳು ಧಾರಾಳವಾಗಿರಲಿ. ಮೆಂತೆ, ಪಾಲಕ್ನಿಂದ ಹಿಡಿದು ದಂಟು, ಹೊನಗನ್ನೆಯವರೆಗೆ ಎಲ್ಲಾ ರೀತಿಯ ಸೊಪ್ಪುಗಳನ್ನು ತಿನ್ನಿ. ಹಿಂದೆ ಹೊಲಗಳಿಂದ ಕಿತ್ತು ತರುತ್ತಿದ್ದ ಬೆರಕೆ ಸೊಪ್ಪುಗಳ ಸೇವನೆ ಈ ಮಟ್ಟಿಗೆ ಬಹಳ ಉಪಯುಕ್ತ. ಕ್ಯಾಪ್ಸಿಕಂ, ಬೆಂಡೆಕಾಯಿ ಯಿಂದು ಹಿಡಿದು, ಎಲೆಕೋಸು, ಬ್ರೊಕೊಲಿಯವರೆಗೆ ಹಸಿರು ತರಕಾರಿಗಳನ್ನು ಭರಪೂರ ಸೇವಿಸಿ. ಚಳಿಗಾಲದಲ್ಲಿ ಏರುವ ತೂಕಕ್ಕೆ ಕಡಿವಾಣ ಹಾಕುವುದರಿಂದ ಹಿಡಿದು, ಮಧುಮೇಹ ನಿಯಂತ್ರಣ, ರಕ್ತದೊತ್ತಡ ಹತೋಟಿಯವರೆಗೆ ಹಲವು ರೀತಿಯಲ್ಲಿ ಇವು ಉಪಕಾರ ಮಾಡುತ್ತವೆ.
ಲಾಭವೇನು?
ಹಸಿರು ತರಕಾರಿಗಳಲ್ಲಿ ಬೀಟಾ ಕ್ಯಾರೊಟಿನ್ ಎಂಬ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಉದ್ದೀಪಿಸಲು ಅಗತ್ಯ. ಇದಲ್ಲದೆ ಕಬ್ಬಿಣ ಮತ್ತು ಫೋಲೇಟ್ ಅಂಶಗಳು ಹೇರಳವಾಗಿವೆ. ಇವುಗಳು ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ರಕ್ತದಲ್ಲಿ ಆಮ್ಲಜನಕದ ಪೂರೈ ಕೆಗೆ ಆವಶ್ಯಕವಾದವು. ಜೊತೆಗೆ ಈ ತರಕಾರಿಗಳಲ್ಲಿರುವ ನಾರಿನಂಶ. ಹಲವು ರೀತಿಯ ರೋಗಗಳಿಂದ ನಾರು ನಮ್ಮನ್ನು ದೂರ ಇರಿಸುತ್ತದೆ.
ಇದನ್ನೂ ಓದಿ:Ajwain For Health: ಓಂಕಾಳು ಘಾಟುಮದ್ದಿನ ಬಗ್ಗೆ ಗೊತ್ತೇ?
ಬೇರು-ಗಡ್ಡೆ-ಗೆಣಸುಗಳು
ಚಳಿಗಾಲವೆಂದರೆ ಬಹಳಷ್ಟು ಗಡ್ಡೆಗಳು ಬೆಳೆದು-ಕೀಳುವ ದಿನಗಳು. ಅದರಲ್ಲೂ ಗಿಡಗಳ ಬೇರು ಮತ್ತು ಗಡ್ಡೆಗಳು ಪೋಷ ಕಾಂಶಗಳ ಖಜಾನೆಯಂತೆ ವರ್ತಿಸುತ್ತವೆ. ಈರುಳ್ಳಿ, ಅರಿಶಿನ, ಶುಂಠಿ, ಸುವರ್ಣ ಗಡ್ಡೆ, ಗೆಣಸು, ಬೀಟ್ರೂಟ್, ಗಜ್ಜರಿ ಗಡ್ಡೆ, ಟರ್ನಿಪ್ ಮುಂತಾದವುಗಳನ್ನು ಧಾರಾಳವಾಗಿ ಬಳಸಿ. ದೇಹಕ್ಕೆ ಉತ್ತಮ ಗುಣಮಟ್ಟದ ಪೋಷಕಾಂಶಗಳನ್ನು ಈ ಗಡ್ಡೆ-ಗೆಣಸುಗಳು ಒದಗಿಸ ಬಲ್ಲವು.
ಲಾಭಗಳೇನು?: ಗೆಣಸು ತಿನ್ನುವಾಗ ಅದರ ಸಿಪ್ಪೆ ಸಮೇತ ತಿನ್ನಿ. ಇದರಿಂದ ವಿಟಮಿನ್ ಎ ಅಂಶ ಸಮೃದ್ಧವಾಗಿ ದೇಹಕ್ಕೆ ದೊರೆ ಯುತ್ತದೆ. ಬೀಟ್, ಕ್ಯಾರೆಟ್ಗಳಿಂದ ವಿಟಮಿನ್ ಎ, ಬೀಟಾ ಕ್ಯಾರೊ ಟಿನ್ ಗಳು ದೊರೆಯುತ್ತವೆ. ಉಳಿದ ತರಕಾರಿಗಳಿಗೆ ಹೋಲಿಸಿದರೆ ಗಡ್ಡೆಗಳಲ್ಲಿ ಕ್ಯಾಲರಿ ಸ್ವಲ್ಪ ಹೆಚ್ಚು. ಆದರೆ ಚಳಿ ಗಾಲಕ್ಕೆ ಕೊಂಚ ಹೆಚ್ಚಾಗಿಯೇ ದೇಹ ಬಯಸುತ್ತದೆ ಎಂಬುದನ್ನು ಗಮನಿಸಿದರೆ, ಪೌಷ್ಟಿಕಾಂಶಯುಕ್ತ ಆಹಾರವನ್ನು ಸ್ವಲ್ಪ ಹೆಚ್ಚು ನೀಡುವುದಲ್ಲಿ ಮೋಸವಿಲ್ಲ ತಾನೇ?
ಇಡೀ ಧಾನ್ಯಗಳು
ಅಂದರೆ ಹೆಚ್ಚು ಸಂಸ್ಕರಿಸದೆ ಇರುವಂಥ ಧಾನ್ಯಗಳಿವು. ಅವುಗಳ ತೌಡು, ಸಿಪ್ಪೆಗಳೆಲ್ಲಾ ಬೇರ್ಪ ಡದೆ- ಎಲ್ಲವುಗಳ ಸಮೇತ ತಿನ್ನು ವಂಥವು. ಇವುಗಳು ದೇಹಕ್ಕೆ ಅತ್ಯಗತ್ಯವಾದ ಸಂಕೀರ್ಣ ಪಿಷ್ಟವನ್ನು ನಾರಿನ ಸಮೇತ ಒದಗಿಸಬಲ್ಲವು. ಅದರಲ್ಲೂ ಜೋಳ, ಸಜ್ಜೆ, ರಾಗಿ ಮುಂತಾದ ಸಿರಿ ಧಾನ್ಯಗಳೆಲ್ಲಾ ಆಹಾರದಲ್ಲಿ ಇರಬೇಕು. ಇವು ಜೀರ್ಣವಾಗುವುದಕ್ಕೆ ಹೆಚ್ಚು ಸಮಯ ತೆಗೆದು ಕೊಂಡು, ದೀರ್ಘ ಕಾಲದವರೆಗೆ ಶರೀರಕ್ಕೆ ಅಗತ್ಯವಾದ ಶಕ್ತಿಯನ್ನು ಪೂರೈಸುತ್ತಲೇ ಇರುತ್ತವೆ.
ಲಾಭಗಳೇನು?: ಇವುಗಳಲ್ಲಿ ಹಲವು ರೀತಿಯ ಬಿ ಜೀವಸತ್ವಗಳು, ನಾರು, ಕಬ್ಬಿಣ, ಜಿಂಕ್, ತಾಮ್ರ ಮುಂತಾದ ಖನಿಜಗಳು ಸಾಂದ್ರವಾಗಿವೆ. ಇಂಥ ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಮಧು ಮೇಹ, ಹೃದಯ ರೋಗಗಳು ಮತ್ತು ಪಾರ್ಶ್ವವಾಯು ವಿನಂಥ ಸಮಸ್ಯೆಗಳನ್ನು ಪರಿಣಾಮಕಾರಿ ಯಾಗಿ ತಡೆ ಗಟ್ಟಬಹುದು ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೇಹದಲ್ಲಿ ಕೆಟ್ಟ ಕೊಬ್ಬನ್ನು ಕತ್ತರಿಸಿ, ಜೀರ್ಣಾಂಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಗಳ ವೃದ್ಧಿಗೂ ಇವು ಕಾರಣ ವಾಗುತ್ತವೆ
ಬೀಜಗಳು
ಬೀಜ ಮತ್ತು ಕಾಯಿಗಳು ನಿಜಾರ್ಥದಲ್ಲಿ ಸತ್ವಗಳ ಪುಟ್ಟ ಗುಡಾಣಗಳಿದ್ದಂತೆ. ಅವುಗಳೆಲ್ಲ ಒಂದಿಲ್ಲೊಂದು ಕಾರಣಕ್ಕೆ ಸೂಪರ್ಫುಡ್ ಎಂದು ಕರೆಸಿಕೊಳ್ಳುವಂಥವು. ಇವುಗಳನ್ನು ಸರ್ವ ಋತುಗಳಲ್ಲೂ ತಿನ್ನುವುದು ಅಗತ್ಯವಾದರೂ, ಚಳಿಗಾಲ ದಲ್ಲಿ ಇನ್ನಷ್ಟು ಆವಶ್ಯಕ. ದೇಹಕ್ಕೆ ಬೇಕಾಗುವ ಹೆಚ್ಚುವರಿ ಪೋಷಕಾಂಶಗಳು ಮತ್ತು ಕ್ಯಾಲರಿಗಳನ್ನು ಆರೋಗ್ಯಕರ ರೀತಿಯಲ್ಲಿ ಇವು ಪೂರೈಸಬಲ್ಲವು.
ಲಾಭಗಳೇನು?: ಬೀಜ-ಕಾಯಿಗಳಲ್ಲಿ ಕೊಬ್ಬು ಹೆಚ್ಚಿದ್ದರೂ ಸ್ಯಾಚುರೇಟೆಡ್ ಕೊಬ್ಬು ಅತಿ ಕಡಿಮೆ. ಹಾಗಿರುವ ಇರುವಂಥ ಕೊಬ್ಬಿನಂಶವೆಲ್ಲವೂ ದೇಹಕ್ಕೆ ಬೇಕಾದ ಉತ್ತಮ ಕೊಬ್ಬುಗಳೇ. ಉತ್ಕೃಷ್ಟ ಗುಣಮಟ್ಟದ ಪ್ರೊಟೀನ್ ಇವುಗಳಲ್ಲಿದೆ. ಅಧಿಕ ಪ್ರಮಾಣದ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ದೊರೆ ಯುತ್ತವೆ. ವಿಟಮಿನ್ ಇ, ಬಿ6, ನಿಯಾಸಿನ್, ಫೋಲೇಟ್, ಮೆಗ್ನೀಶಿಯಂ, ಸತು, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಸೆಲೆನಿಯಂ, ಫಾಸ್ಫರಸ್, ಪೊಟಾಶಿಯಂ… ಇನ್ನೆಷ್ಟು ಬೇಕು ಸತ್ವಗಳು? ಇಷ್ಟಾದರೂ ಸಾಮಾನ್ಯವಾಗಿ ಒಂದು ಮಿತಿಯಲ್ಲಿ ಇವುಗಳನ್ನು ತಿಂದರೆ ದೇಹದ ತೂಕ ಹೆಚ್ಚುವುದಿಲ್ಲ ಎಂಬುದು ಇವುಗಳ ವಿಶೇಷತೆ.
ಸಾಂಬಾರ ಪದಾರ್ಥಗಳು
ಆಡುನುಡಿಯಲ್ಲಿ ಮಸಾಲೆಗಳು ಎಂದೇ ಇವು ಕರೆಸಿಕೊಳ್ಳುತ್ತವೆ. ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಏಲಕ್ಕಿ, ಅರಿಶಿನ, ಕಾಳು ಮೆಣಸು, ಚಕ್ರಮೊಗ್ಗು ಮುಂತಾದವು ನಮ್ಮ ಆಹಾರದ ರುಚಿ, ಘಮ ಹೆಚ್ಚಿಸುವುದು ಮಾತ್ರವಲ್ಲ, ಸತ್ವಗಳನ್ನೂ ಹೆಚ್ಚಿಸುತ್ತವೆ.
ಲಾಭಗಳೇನು?: ದಾಲ್ಚಿನ್ನಿ ಚಕ್ಕೆಯಂಥವು ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತದಲ್ಲಿ ಸಕ್ಕರೆಯಂಶ ಹೆಚ್ಚದಂತೆ ಮಾಡುವಲ್ಲಿ ನೆರವಾಗ ಬಲ್ಲವು. ಅರಿಶಿನವು ಅತ್ಯಂತ ಪ್ರಬಲ ಉತ್ಕರ್ಷಣ ನಿರೋಧಕ ವಾಗಿದ್ದು, ಪ್ರತಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹಿಡಿದು ಮೆದುಳಿನ ರಕ್ಷಣೆಯವರೆಗೆ ಅದರ ಗುಣಗಳು ಹತ್ತಾರಿವೆ. ಬೆಳ್ಳುಳ್ಳಿಗೆ ಸೋಂಕು ನಿರೋಧಕ ಸಾಮರ್ಥ್ಯ, ಶುಂಠಿಗೆ ಜೀರ್ಣಾಂಗಗಳ ಕಾರ್ಯ ವೃದ್ಧಿ- ಹೀಗೆ ಪ್ರತಿಯೊಂದು ಮಸಾಲೆಗೂ ಸದ್ಗುಣಗಳು ಹಲವಾರಿವೆ.