ಬೆಂಗಳೂರು: ಕಾರಿನ ಸನ್ರೂಫ್ ತೆರೆದು ಮಕ್ಕಳನ್ನು ನಿಲ್ಲಿಸುವ ಪೋಷಕರು ಎಚ್ಚರ ವಹಿಸಬೇಕಾಗಿದೆ. ಯಾಕೆಂದರೆ, ಚಲಿಸುತ್ತಿದ್ದ ಕಾರಿನ ಸನ್ರೂಫ್ ತೆರೆದು ನಿಂತ ಬಾಲಕನ ತಲೆಗೆ ರಸ್ತೆಯಲ್ಲಿ ಹಾಕಿದ್ದ ಹೈಟ್ ರಿಸ್ಟ್ರಿಕ್ಷನ್ ಬ್ಯಾರಿಯರ್ ಬಡಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಸೆಪ್ಟೆಂಬರ್ 6ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿದ್ಯಾರಣ್ಯಪುರದ ಜಿಕೆವಿಕೆ ರಸ್ತೆಯಲ್ಲಿ ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಬಾಲಕನ ತಲೆಗೆ ಗಂಭೀರ ಗಾಯವಾಗಿದೆ. ಬಾಲಕ ಸನ್ರೂಫ್ ತೆರೆದು ನಿಂತಿದ್ದಾಗ ರಸ್ತೆಯಲ್ಲಿದ್ದ ಹೈಟ್ ರಿಸ್ಟ್ರಿಕ್ಷನ್ ಬ್ಯಾರಿಯರ್ ಬಗ್ಗೆ ಬಾಲಕನಿಗೆ ಅಂದಾಜು ಸಿಕ್ಕಿಲ್ಲ. ಕಬ್ಬಿಣದ ರಾಡ್ ಬಳಿ ಹಾಗೆಯೇ ಚಾಲಕ ಕಾರನ್ನು ಚಲಾಯಿಸಿಕೊಂಡು ಹೋಗಿದ್ದರ ಪರಿಣಾಮ ಕಬ್ಬಿಣದ ಬ್ಯಾರಿಯರ್ ಬಾಲಕನ ತಲೆಗೆ ಬಡಿದಿದೆ.
ಘಟನೆಯ ದೃಶ್ಯಗಳು ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋ ಪರಿಶೀಲನೆ ನಡೆಸಲಾಗಿದ್ದು, ಘಟನೆಯ ಕುರಿತು ಮಾಹಿತಿ ಕಲೆಹಾಕುತ್ತಿರುವುದಾಗಿ ಬೆಂಗಳೂರು ಉತ್ತರ ವಿಭಾಗದ ಸಂಚಾರ ಪೊಲೀಸರು ತಿಳಿಸಿದ್ದಾರೆ.